ಮಲಯಾಳಂ ಸೆಕ್ಸ್ ಸ್ಕ್ಯಾಂಡಲ್ ದೇಶಾದ್ಯಂತ ಸದ್ದು ಮಾಡ್ತಾ ಇದೆ. ಸ್ವತಃ ಮಲಯಾಳಂ ಸರ್ಕಾರ ಎಸ್ಐಟಿ ರಚಿಸಿದೆ. ಕರ್ನಾಟಕದಲ್ಲಿಯೂ ತನಿಖೆ ಶುರುವಾಗುವ ಸ್ಥಿತಿ ಇದೆ. ಫೈರ್ ಸಂಸ್ಥೆಯ ಮೂಲಕ ಸಿಎಂ ಸಿದ್ಧರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗಿದೆ. ಮೋಹನ್ ಲಾಲ್, ಮಮ್ಮೂಟಿಯಂತಹ ಕಲಾವಿದರು ಕೂಡಾ ಸತ್ಯ ಆಚೆ ಬರಲಿ ಎಂದಿದ್ದಾರೆ. ಅಮ್ಮಾ ಸಂಸ್ಥೆ ಛಿದ್ರಛಿದ್ರವಾಗಿದೆ. ಈ ನಡುವೆಯೇ ಮಲಯಾಳಂ ಚಿತ್ರರಂಗದಲ್ಲಿನ ತಮ್ಮ ಅನುಭವ ಹೇಳಿಕೊಂಡಿದ್ದಾರೆ ಸುಮಲತಾ ಅಂಬರೀಷ್.
ಸುಮಲತಾ ಕೂಡಾ ಮಲಯಾಳಂ ಚಿತ್ರರಂಗದಲ್ಲಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಒಟ್ಟು 42 ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ಸುಮಲತಾ, ಮೋಹನ್ ಲಾಲ್, ಸುರೇಶ್ ಗೋಪಿ, ಜಯರಾಂ, ಪ್ರೇಮ್ ನಜೀರ್, ಮಮ್ಮೂಟಿ ಸೇರಿದಂತೆ ಮಲಯಾಳಂನ ಆಗಿನ ಕಾಲದ ಸ್ಟಾರ್ ನಟರ ಜೊತೆ ನಟಿಸಿದ್ಧಾರೆ. ರಾಜ್ಯ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ. ರಾಜಕೀಯಕ್ಕೆ ಪ್ರವೇಶಿಸಿದ ಬಳಿಕ ಸಿನಿಮಾಗಳಿಂದ ಬಹುತೇಕ ದೂರ ಉಳಿದಿರುವ ನಟಿ ಸುಮಲತಾ, ಇತ್ತೀಚೆಗಷ್ಟೆ ರಾಷ್ಟ್ರೀಯ ಮಾಧ್ಯಮವೊಂದರೊಟ್ಟಿಗೆ ಮಾತನಾಡುತ್ತಾ, ಮಲಯಾಳಂ ಚಿತ್ರರಂಗದ ಭಯಾನಕ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
‘ಮಲಯಾಳಂ ಚಿತ್ರರಂಗದಲ್ಲಿ ನಾನು ನಟಿಸುತ್ತಿದ್ದ ದಿನಗಳಲ್ಲಿ ನನಗೆ ಯಾವುದೇ ಕೆಟ್ಟ ಅನುಭವಗಳು ಆಗಿರಲಿಲ್ಲ. ಆದರೆ ಬೇರೆ ನಟಿಯರಿಗೆ ಆದ ಕೆಟ್ಟ ಅನುಭವದ ಬಗ್ಗೆ ಕತೆಗಳನ್ನು ಕೇಳಿದ್ದೇನೆ ಎಂದಿದ್ದಾರೆ. ಕೆಲವು ನಟಿಯರು ಅವರ ಕೆಟ್ಟ ಅನುಭವವನ್ನು ತಮ್ಮ ಬಳಿ ಹಂಚಿಕೊಂಡಿದ್ದರು. ಚಿತ್ರರಂಗದಲ್ಲಿ ‘ಪವರ್ ಗ್ರೂಪ್’ಗಳು, ಗುಂಪುಗಾರಿಕೆ ಇದ್ದೇ ಇರುತ್ತವೆ. ಚಿತ್ರರಂಗದಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕ್ರಮ ಕೈಗೊಳ್ಳಬೇಕು’ ಎಂದು ಅಭಿಪ್ರಾಯ ಪಟ್ಟಿದ್ದಾರೆ ಸುಮಲತಾ.
ಕೆಲವು ನಟಿಯರು ಖುದ್ದಾಗಿ ನನ್ನ ಬಳಿಯೇ ತಾವು ಅನುಭವಿಸಿದ ಲೈಂಗಿಕ ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದರು. ಚಿತ್ರರಂಗದ ಪುರುಷರು ಅವಕಾಶ ನೀಡಲು ಇನ್ನಿತರೆ ಕಾರಣಗಳಿಗೆ ಅವರೊಟ್ಟಿಗೆ ಸಹಕಾರ ನೀಡುವಂತೆ ಕೇಳುತ್ತಿದ್ದರಂತೆ. ಒಂದೊಮ್ಮೆ ನಟಿಯರು ನಿರಾಕರಿಸಿದರೆ ಅವರಿಗೆ ಅವಕಾಶ ಸಿಗುತ್ತಿರಲಿಲ್ಲ, ನಿರಾಕರಿಸುವ ನಟಿಯರ ವೃತ್ತಿಯನ್ನು ಮುಗಿಸುವ ಪ್ರಯತ್ನವೂ ಆಗುತ್ತಿತ್ತು. ಈ ವಿಷಯಗಳನ್ನು ಬಹಿರಂಗಪಡಿಸಿದ್ದರೆ ನಟಿಯರು ಹಲವು ಸಮಸ್ಯೆಗಳನ್ನು ಎದುರಿಸಬೇಕಿತ್ತು ಹಾಗಾಗಿ ಯಾರೂ ಸಹ ಇಂಥಹಾ ವಿಷಯಗಳ ಬಗ್ಗೆ ಮಾತನಾಡುತ್ತಿರಲಿಲ್ಲ ಎನ್ನುವ ಸುಮಲತಾ ಅಂಬರೀಷ್ ತಮಗೆ ಅಂತಹ ಅನುಭವಗಳಾಗಿಲ್ಲ. ನಾನು ಕೆಲಸ ಮಾಡಿದ ಸಿನಿಮಾ ಸೆಟ್ಗಳಲ್ಲಿ ಕುಟುಂಬದ ರೀತಿಯ ವಾತಾವರಣ ಇರುತ್ತಿತ್ತು ಎಂದಿದ್ದಾರೆ.
ನಾನು ಅಂಥಹಾ ಕೆಟ್ಟ ಅನುಭವ ಎದಿರಸಲಿಲ್ಲ, ಆದರೆ ದೌರ್ಜನ್ಯ ಪ್ರಕರಣಗಳು ನಡೆದೇ ಇಲ್ಲ ಎಂದು ಹೇಳಲಾಗುವುದಿಲ್ಲ. ನಟಿಯರು ಉಳಿದುಕೊಂಡಿರುವ ಹೋಟೆಲ್ ರೂಂನ ಬಾಗಿಲುಗಳನ್ನು ಪುರುಷರು ಬಡಿದಿರುವ ಭಯಾನಕ ಸಂಗತಿಗಳನ್ನು ಸಹ ನಾನು ಕೇಳಿದ್ದೀನಿ ಎಂದಿದ್ದಾರೆ ಸುಮಲತಾ. ಹೇಮಾ ಕಮಿಟಿ ಕೊಟ್ಟಿರುವ ರಿಪೋರ್ಟಿನಲ್ಲೂ ಕೂಡಾ ಈ ರೀತಿಯ ಅನುಭವ ಎದುರಿಸಿದ್ದರ ಬಗ್ಗೆ ಹಲವು ನಟಿಯರು ಹೇಳಿಕೊಂಡಿದ್ದಾರೆ. ಆದರೆ, ವರದಿಯಲ್ಲಿ ಯಾರೊಬ್ಬರ ಹೆಸರನ್ನೂ ಬಹಿರಂಗಪಡಿಸಿಲ್ಲ. ಕೆಲವು ಹಿರಿಯ ನಟ, ನಿರ್ದೇಶಕರ ಮೇಲೆ ದೂರುಗಳು ಸಹ ದಾಖಲಾಗಿವೆ. ಜಯಸೂರ್ಯ, ಮುಕೇಶ್ ಅಂತಹ ದೊಡ್ಡ ದೊಡ್ಡ ಕಲಾವಿದರ ಮೇಲೆಯೇ ಈ ರೀತಿಯ ಆರೋಪಗಳು ಕೇಳಿ ಬಂದಿವೆ.



