ರೈತ ಚಳವಳಿಯ ಭೂಮಿ ಮಂಡ್ಯದಲ್ಲೇ ಕಾಟೇರ ರೈತ ಗೀತೆ ಗೀತೆ ಬಿಡುಗಡೆಯಾಗಿದೆ. ಇದು ಕಾಟೇರ ಚಿತ್ರದ ಆತ್ಮ. ಅರ್ಥವಾಗುವುದು ರೈತರಿಗೆ ಮಾತ್ರ. ಹಾಡಿನ ಸಂಪೂರ್ಣ ಸಾಹಿತ್ಯ ಇಲ್ಲಿದೆ.
ಬೆವರ ಹನಿಲಿ ಬೆಳೆದ ಬಂಡೆಗಲ್ಲು
ಇವನು ನಡೆವ ದಾರಿ ಮೈಲಿಗಲ್ಲು
ಇವನ ಎದುರು ಯಾರು ಹೋಗಬ್ಯಾಡಿ
ಹಿಂದೆ ಐತೆ ಸೈನ್ಯವು
ಹಸಿದ ಜನಕೆ ಇವನು ಅನ್ನದಾತ
ಹಸಿರೇ ಉಸಿರು ಎಂದು ಹೇಳಿದಾತ
ಮಣ್ಣ ಮಗನೆ ಕೇಳೋ ನೀನೇ ಇನ್ನು
ನಮ್ಮ ಹೆಮ್ಮೆ ಬಾವುಟ
ಬಿತ್ತೋದು ಕಲಿತ ವಿಜ್ಞಾನಿ
ಬೆಳೆದಿದ್ದು ಹಂಚುವ ಈ ದಾನಿ
ಸಿಡಿದೆದ್ದ ಸ್ವಾಭಿಮಾನಿ
ಸಾಲು ಸಾಲುಗಟ್ಟಿ ಹೊಂಟ ಭೂಮಿ ಬಿತ್ತಲು
ಊರಿಗೆ ಊರೆ ಎದ್ದು
ಒಟ್ಟಾಗಿ ಕೈಯ್ಯ ಹಿಡಿದು
ಹಸಿರಿನ ಬಣ್ಣ ಬಳಿದು
ಅರೆ ನೋಡು ನೋಡು ಹೊಂಟೈತೆ ಸವ್ವಾರಿ
ಧರೆಗೆ ಇಳಿದ ಮೊದಲ ದೈವ ನೀನೂ
ಕೈಯ್ಯ ತುತ್ತು ಬೆಳೆದ ಅವ್ವ ನೀನೂ
ದುಡಿದು ಬಲವ ನೀಡೋ ಅಪ್ಪ ನೀನೂ
ಹೆಗಲು ನೀನೆ ದೇಶಕೆ
ದಿನವು ಜಗವ ಬೆಳಗೋ ಸೂರ್ಯ ನೀನೂ
ಕೋಟಿ ಕೋಟಿ ಜನರ ಧೈರ್ಯ ನೀನು
ನೀನೂ ಇರುವ ದೆಸೆಯೇ ಧರಣಿ ನೋಡು
ನಗುವಿನಿಂದ ಕೂಡಿದೆ
ಕೆಸರಾದರೇನೆ ನಿನ ಕೈಯಿ
ಉಸಿರಾಡೋದು ನಾವಿಲ್ಲಿ
ನಿನಗಿಲ್ಲ ಭೇದ ಭಾವ
ನೀನೂ ನಮ್ಮಜೀವ ನೀನೆ ವಿಶ್ವಮಾನವ
ನೇಗಿಲ ಹೊತ್ತಯೋಗಿ
ನಿಂತರೆ ನ್ಯಾಯಕ್ಕಾಗಿ ಹೇಳುವ
ಎಲ್ಲಾ ಕೂಗಿ ಉಸಿರಿರುವ ವರೆಗೂ ಇರ್ತೀವಿ ನಿನ್ ಹಿಂದೆ..
ಕಾಟೇರ ಚಿತ್ರದ ಆತ್ಮ ಎಂದೇ ಕರೆಯುತ್ತಿರುವ ರೈತ ಗೀತೆ ಮಂಡ್ಯದಲ್ಲಿ ಬಿಡುಗಡೆಯಾಗಿದೆ. ಸಾವಿರಾರು ಅಭಿಮಾನಿಗಳು, ರೈತರ ಸಮ್ಮುಖದಲ್ಲಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ರೈತ ಗೀತೆ ಬಿಡುಗಡೆ ಮಾಡಿ ಪ್ರಚಾರಕ್ಕೆ ದೊಡ್ಡ ಶಕ್ತಿ ತುಂಬಿಸಿದ್ದಾರೆ. ರೈತ ಚಳವಳಿಗಳು ಹುಟ್ಟಿದ್ದೇ ಮಂಡ್ಯದಲ್ಲಿ. ಪ್ರೊ.ನಂಜುಂಡಸ್ವಾಮಿ, ಪುಟ್ಟಣ್ಣಯ್ಯ, ಕುರುಬೂರು ಶಾಂತಕುಮಾರ್, ಕೋಡಿಹಳ್ಳಿ ಚಂದ್ರಶೇಖರ್, ಜಯರಾಂ, ಸುನಂದಾ ಜಯರಾಂ ಸೇರಿದಂತೆ ಹಲವರು ಮಂಡ್ಯದಿಂದಲೇ ಪ್ರತಿಭಟನೆಯ ಕಹಳೆ ಮೊಳಗಿಸಿದವರು. ಬೇರೆ ಜಿಲ್ಲೆಗಳಲ್ಲಿ ಹೇಗಿದೆಯೋ ಗೊತ್ತಿಲ್ಲ, ಆದರೆ ಮಂಡ್ಯದಲ್ಲಿ ರೈತರ ವಿಷಯ ಮಾತನಾಡುವುದಕ್ಕೆ ಎಂತಹವರೂ ಹೆದರುತ್ತಾರೆ. ಇಂತಹ ಮಂಡ್ಯದಲ್ಲಿ ರಿಲೀಸ್ ಆಗಿದ್ದು ಕಾಟೇರ ಚಿತ್ರದ ಆತ್ಮ ರೈತ ಗೀತೆ.
ಈ ರೈತ ಗೀತೆಗೆ ಸಾಹಿತ್ಯ ನೀಡಿರುವುದು ಪುನೀತ್ ಆರ್ಯ. ಅನಿರುದ್ಧ ಶಾಸ್ತ್ರಿ, ಅಭಿಷೇಕ್, ಮಾಧ್ವೇಷ್ ಭರಾದ್ವಜ್, ವಿಶಾಕ್ ನಾಗಲಪುರ ಹಾಡಿದ್ದಾರೆ. ಅಂದಹಾಗೆ ಇದು ದರ್ಶನ್ ಅವರಿಗೆ ಹರಿಕೃಷ್ಣ ಸಂಗೀತ ನೀಡಿರುವ 29ನೇ ಸಿನಿಮಾ.
ಹಸಿರು ಶಾಲು ತೊಟ್ಟುಕೊಂಡೇ ವೇದಿಕೆಗೆ ಬಂದ ನಟ ದರ್ಶನ್, ಕಾರ್ಯಕ್ರಮಕ್ಕೆ ಬಂದು ಹಾಡು ಬಿಡುಗಡೆ ಮಾಡಿಕೊಟ್ಟ ಸಂಸದೆ ಸುಮಲತಾ ಹಾಗೂ ಇತರೆ ಕೆಲವು ಗಣ್ಯರಿಗೆ ಧನ್ಯವಾದಗಳನ್ನು ಅರ್ಪಿಸಿ್ ದರ್ಶನ್ ‘ಕಾಟೇರ’ ಸಿನಿಮಾ ಆಡಂಬರದ ಸಿನಿಮಾ ಅಲ್ಲ, ಸಂದೇಶ ಇರುವ ಸಿನಿಮಾ ಎಂದರು.
ಜೊತೆಗೆ ತಾವು ಪ್ಯಾನ್ ಇಂಡಿಯಾ ಸಿನಿಮಾ ಮಾಡುವುದಿಲ್ಲ. ಕನ್ನಡ ಸಿನಿಮಾ ಮಾಡ್ಕೊಂಡು ಚೆನ್ನಾಗಿದ್ದೇನೆ. ವಯಸ್ಸು 47 ಆಯ್ತು, ಎಷ್ಟು ದಿನ ಆಗುತ್ತೋ.. ಅಷ್ಟು ದಿನ ಸಿನಿಮಾ ಮಾಡ್ತೀನಿ ಎಂದರು.



