ಇದು ಈ ಹಿಂದೆ ಆಗಿರಲಿಲ್ಲ. ರಾಜಕೀಯ ಪಕ್ಷಗಳ ಮಾತು ಬಿಡಿ.. ಇದೇ ಮೊದಲ ಬಾರಿಗೆ ಕನ್ನಡ ಪರ ಸಂಘಟನೆಗಳು ಇಬ್ಭಾಗವಾಗಿವೆ. ಅವರ ಪ್ರತಿಭಟನೆಗೆ ಇವರು ಹೋಗಲ್ಲ. ಇವರ ಪ್ರತಿಭಟನೆಗೆ ಅವರು ಬರಲ್ಲ. ಹೀಗಾಗಿ ಒಂದೇ ವಾರದಲ್ಲಿ ಎರಡೆರಡು ಬಂದ್ ಕಂಡರೂ ಫಲ ಸಿಕ್ಕಿಲ್ಲ.
ಮಂಗಳವಾರದ ಬಂದ್ನಲ್ಲೂ (Tuesday bundh) ಶುಕ್ರವಾರದ ಬಂದ್ನಲ್ಲೂ (Friday bundh) ವ್ಯತ್ಯಾಸ ಏನೂ ಇರಲಿಲ್ಲ. ಶುಕ್ರವಾರದ ಬಂದ್ ದಿನ ಈದ್ ಮಿಲಾದ್ (Eid milad) ಶುಭಾಶಯ ಕೋರುವುದಕ್ಕೆ ಕಾಂಗ್ರೆಸ್ ಕಚೇರಿಗೆ ಹೋಗಿದ್ದರು ಕರವೇ ನಾರಾಯಣ ಗೌಡ (ka.ra.ve. Narayanagowda). ಇನ್ನೂ ಕೆಲವು ಸೋಷಿಯಲ್ ಮೀಡಿಯಾ ಹೋರಾಟಗಾರರು, ನಮ್ಮನ್ನು ಅರೆಸ್ಟ್ ಮಾಡಿ ಕರೆದುಕೊಂಡು ಹೋಗಿದ್ದಾರೆ ಎಂದು ಟ್ವೀಟ್ ಮಾಡಿದರು. ವಾಟಾಳ್ ನಾಗರಾಜ್ (Vatal nagaraj) ಬುರುಕಾ ಹಾಕಿಕೊಂಡು ಪ್ರತಿಭಟನೆ ಮಾಡಿದ್ರು. ಚಿತ್ರ ನಟ ನಟಿಯರೆಲ್ಲ ಒಗ್ಗಟ್ಟಾಗಿ ನಿಂತರು. ಆದರೆ ಸರ್ಕಾರಕ್ಕೆ ತಾಕಲೇ ಇಲ್ಲ. ಇವರು ಕೂಗಿದಂತೆ ಮಾಡಿದ್ರ. ಅವರು ಕೇಳಿಸಿಕೊಂಡವ್ರಂತೆ ಇದ್ದರು.
ಇಲ್ಲಿ ಬಂದ್ ತಾರಕಕ್ಕೇರುವ ಹೊತ್ತಿಗೆ ಸಿದ್ದರಾಮಯ್ಯ (Cm siddaramaiah) ಒಂದು ಟ್ವೀಟ್ ಮಾಡಿದ್ರು. ನನ್ನ ನಡೆ ಕಾವೇರಿ ಕಡೆಗೆ. ಅದು ನಮ್ಮ ಬದ್ಧತೆ ಎಂದು ಮೋದಿ ಫೋಟೋ ಟ್ವೀಟ್ ಮಾಡಿದ್ರು. ಮೋದಿ (PM Narendra modi) ಚುನಾವಣೆಯತ್ತ ಹೋಗ್ತಾರೆ. ನಾವು ಕಾವೇರಿಯತ್ತ ನೋಡುತ್ತೇವೆ ಎಂದರು.
ಸಿದ್ದರಾಮಯ್ಯ ಇದ್ಯಾಕೆ ಹೀಗಾದ್ರು ಅನ್ನೋ ಪ್ರಶ್ನೆ ಕಾಡದೇ ಇರದು. ಏಕೆಂದರೆ ಕಾವೇರಿ ವಿಷಯದಲ್ಲಿ ಸಿಎಂ ಆಗಿದ್ದರೂ, ರಾಜ್ಯ ವಕೀಲರೊಡನೆ ಸಭೆ ನಡೆಸಿದ್ದು ಒಮ್ಮೆ ಮಾತ್ರ. ಅದೂ ಶುಕ್ರವಾರದ ಬಂದ್ ದಿನ. ನ್ಯಾಯಮಂಡಳಿ ಕೂಡಾ ಪ್ರಾಧಿಕಾರದ ತೀರ್ಪನ್ನೇ ಎತ್ತಿ ಹಿಡಿದ ಮೇಲೆ. ಈ ಸಭೆಯನ್ನು ಜೂನ್-ಜುಲೈ ತಿಂಗಳಲ್ಲಿ ಮಾಡಿ, ಆ ದಿನವೇ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದರೆ ಈ ಪರಿಸ್ಥಿತಿ ಉದ್ಭವವಾಗುತ್ತಿರಲಿಲ್ಲ ಎನ್ನುವುದು ತಜ್ಞರ ವಾದ. ಸುಪ್ರೀಂಕೋರ್ಟ್ ವಕೀಲರೂ ಆಗಿರುವ ಧನಂಜಯ್, ಕಾತರಕಿಯವರು ಹೇಳುತ್ತಿರುವುದೂ ಇದನ್ನೇ.
ಅಂದಹಾಗೆ ಈ ಕ್ಷಣದವರೆಗೆ ಸಿದ್ದರಾಮಯ್ಯ ತಮಿಳುನಾಡು ಸಿಎಂ ಸ್ಟಾಲಿನ್ (CM Stalin) ವಿರುದ್ಧ ಒಂದು ಟೀಕೆಯನ್ನೂ ಮಾಡಿಲ್ಲ. ನಮಗೆ ಈ ಪರಿಸ್ಥಿತಿ ಇರುವಾಗ ನೀರು ಕೇಳ್ತಿರೋದು ತಪ್ಪಲ್ವಾ ಎಂದು ಕೂಡಾ ಪ್ರಶ್ನೆ ಮಾಡಿಲ್ಲ. ಆದರೆ ಪ್ರಧಾನಿ ಮೋದಿಯನ್ನು ಟೀಕಿಸುವ ಯಾವ ಅವಕಾಶವನ್ನೂ ಬಿಟ್ಟಿಲ್ಲ.ನಮ್ಮ ಬದ್ಧತೆ ಎನ್ನುವ ಈ ಟ್ವೀಟ್ ಕೂಡಾ ಅಷ್ಟೆ.
ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶ ಮಾಡಬೇಕು ಎನ್ನುತ್ತಿರುವ ಸಿದ್ದರಾಮಯ್ಯ, ಒಟ್ಟಿಗೇ ಸಭೆ ನಡೆಸೋಣ, ಮಾತುಕತೆ ಮಾಡೋಣ ಎಂದು ತಮಿಳುನಾಡಿ ಸಿಎಂ ಸ್ಟಾಲಿನ್ ಅವರಿಗೆ ಪತ್ರ ಬರೆದಿದ್ದಾರೆಯೇ.. ಫೋನ್ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರೆ ಉತ್ತರ ಸಿಗುವುದಿಲ್ಲ. ಮಾತುಕತೆಯ ಪ್ರಯತ್ನವನ್ನು ಮೊದಲು ನಡೆಸಬೇಕಾದ್ದು ರಾಜ್ಯ ಸರ್ಕಾರ. ವಕೀಲರ ಸಭೆ, ಸುಪ್ರೀಂಕೋರ್ಟಿಗೆ ಮೇಲ್ಮನವಿ ವಿಷಯದಲ್ಲೂ ಕೇಂದ್ರವನ್ನೇ ದೂರಿದ ರಾಜ್ಯ ಸರ್ಕಾರ, ಈ ಸಿಎಂ ಸಭೆಗೂ ಪ್ರಧಾನಿಯನ್ನೇ ಬೊಟ್ಟು ಮಾಡುತ್ತಿದೆ.
ಕನಿಷ್ಠ ಪಕ್ಷ ಮಾತುಕತೆಯ ಪ್ರಸ್ತಾಪ ಇಟ್ಟು, ಅವರು ಯೆಸ್ ಅಂತಾರೋ.. ನೋ ಅಂತಾರೋ.. ಆದ ಮೇಲೆ ತಾನೇ ಪ್ರಧಾನಿಯನ್ನು ಕೇಳೋದು. ಕಾವೇರಿ ನೀರು ಕಿತ್ತುಕೊಳ್ತಿರೋ ಸ್ಟಾಲಿನ್ ಮೇಲಿರುವ ಪ್ರೀತಿ, ಪ್ರಧಾನಿಯ ಮೇಲಿಲ್ಲ. ಇರಲಿ ರಾಜಕೀಯ ಅನ್ನೋಣ ಅಂದ್ರೆ, ಇದು ರಾಜ್ಯದ ಕುಡಿಯುವ ನೀರಿನ ವಿಷಯ.
ಇತ್ತ ಬಿಜೆಪಿ ಮಾಡ್ತಿರೋದು ಅಷ್ಟರಲ್ಲೇ ಇದೆ. ಯಾರೋ ಕರೆಯುವ ಪ್ರತಿಭಟನೆಗೆ ಬಂದು ಕೂರೋದು, ಸರ್ವಪಕ್ಷಗಳ ಸಭೆಯಲ್ಲಿ ನೀವು ಮಾಡಿದ್ದಕ್ಕೆಲ್ಲ ಓಕೆ ಅನ್ನೋದು, ಹೊರಬಂದ ಮೇಲೆ ಟೀಕೆ ಮಾಡೋದು.. ಬಿಜೆಪಿ ಇಷ್ಟೇ ಮಾಡ್ತಿರೋದು. ಅದರ ಮೇಲೆ ಪ್ರಯತ್ನವನ್ನೂ ಮಾಡಿಲ್ಲ.
ಕಾರಣ ಏನೆಂದು ನೋಡಿದರೆ, ತಮಿಳುನಾಡಿನಲ್ಲಿ ಶತಾಯಗತಾಯ ಗೆಲ್ಲಬೇಕು ಅನ್ನೋದು ಕಾಂಗ್ರೆಸ್ ಗುರಿ. ಈಗತಾನೇ ಅಧಿಕಾರಕ್ಕೆ ಬಂದು ಅನ್ನ, ದುಡ್ಡು, ಟಿಕೆಟ್ ಕೊಟ್ಟಿರುವ ಕಾಂಗ್ರೆಸ್ಸಿಗೆ ಗೆಲ್ತೀವಿ ಬಿಡ್ರಿ ಅನ್ನೋ ಆತ್ಮವಿಶ್ವಾಸ ಇದ್ದರೆ, ಅತ್ತ ತಮಿಳುನಾಡಿನಲ್ಲಿ ಈಗ ಕೇಳಿಬರುತ್ತಿರುವ ಬಿಜೆಪಿ ಪರ ಧ್ವನಿಯನ್ನು ಯಾಕೆ ಕಳ್ಕೋಬೇಕು ಅನ್ನೋ ಲೆಕ್ಕಾಚಾರ ಬಿಜೆಪಿಯದ್ದು. ಒಟ್ಟಿನಲ್ಲಿ ಇವರನ್ನು ನಂಬಿ ಕೆಡುತ್ತಿರುವುದು ಮಾತ್ರ ರಾಜ್ಯದ ಮತದಾರ.
ಅಂದಹಾಗೆ ಕಾವೇರಿ ವಿಷಯದಲ್ಲಿ ಮಾತ್ರ ಕನ್ನಡ ಸಂಘಟನೆಗಳು ಧ್ವನಿ ಎತ್ತುತ್ತವೆ ಅನ್ನೋ ಪ್ರಶ್ನೆಗೆ ರಾಜ್ಯದ ಅರ್ಧಕ್ಕರ್ಧ ಜನ ಬದುಕುತ್ತಿರೋದು ಕಾವೇರಿ ಕೊಳ್ಳದಲ್ಲಿ. ಹಾಗಂತ ಮಹದಾಯಿ, ಕೃಷ್ಣೆ ಜನರಿಗೆ ತೊಂದರೆಯಾದಾಗ ಇಲ್ಲಿನವರು ಧ್ವನಿ ಎತ್ತುವುದು ಉತ್ತರ ಅಲ್ಲ. ಉತ್ತರ ಕರ್ನಾಟಕದ ಬಹುತೇಕ ಜನ ಕಾವೇರಿ ಕೊಳ್ಳಲ್ಲಿ ಬದುಕು ಕಟ್ಟಿಕೊಂಡು ಕುಡಿಯುತ್ತಿರುವುದು ಈಗ ಕಾವೇರಿ ನೀರನ್ನೇ.



