ಮಧು ಬಂಗಾರಪ್ಪ ಒಂದು ರೀತಿಯಲ್ಲಿ ವಿವಾದಗಳನ್ನು ಹುಡುಕಿಕೊಂಡು ಹೋಗಿ ತಬ್ಬಿಕೊಳ್ಳೋ ಮನಸ್ಥಿತಿಯವರು. ಸಿದ್ದರಾಮಯ್ಯ ಸಂಪುಟದಲ್ಲಿ ಇತ್ತೀಚೆಗೆ ಮಧು ಬಂಗಾರಪ್ಪ ಟ್ರೋಲ್ʻಗಳಿಂದಲೇ ಸುದ್ದಿಯಾದವರು. ಅಂತಹ ಮಧು ಬಂಗಾರಪ್ಪ ಮತ್ತೊಮ್ಮೆ ತಮ್ಮ ಹೇರ್ ಕಟಿಂಗ್ ವಿಷಯಕ್ಕೆ ಸುದ್ದಿಯಾಗಿದ್ಧಾರೆ. ಮಧು ಬಂಗಾರಪ್ಪ ಅವರಿಗೆ ಕನ್ನಡ ಓದಲು ಬರೆಯುವುದಿಲ್ಲ. ಅದನ್ನು ಸಹಜ ಎಂಬಂತೆ ಹೇಳಿಕೊಳ್ಳೋ ಶಿಕ್ಷಣ ಸಚಿವರು, ತಮ್ಮ ಮಗ ಒಳ್ಳೆ ಮಾರ್ಕ್ಸ್ ತೆಗೆದುಕೊಳ್ಳೋಕೆ ನಾನು ಹೇಳಿಕೊಟ್ಟಿದ್ದೇ ಕಾರಣ ಎನ್ನುತ್ತಾರೆ. ಅಂತಹ ಮಧು ಬಂಗಾರಪ್ಪ ಮತ್ತು ವಿಜಯೇಂದ್ರ ನಡುವಿನ ವಾಕ್ ಸಮರ ಸಖತ್ ಸುದ್ದಿಯಾಗುತ್ತಿದೆ.
ವಿಜಯೇಂದ್ರ ಹೇಳಿದ್ದು :
ಸಾಮಾನ್ಯವಾಗಿ ಶಾಲೆಗೆ ಮಕ್ಕಳು ಉತ್ತಮ ಬಟ್ಟೆ ಧರಿಸಿ, ಕೂದಲನ್ನು ಸಣ್ಣದಾಗಿ ಕಟ್ಟಿಂಗ್ ಮಾಡಿಸಿಕೊಂಡು ತಲೆಗೆ ಎಣ್ಣೆ ಹಚ್ಚಿಕೊಂಡು ತಲೆ ಬಾಚಿಕೊಂಡು ಬರುತ್ತಾರೆ. ಆದರೆ, ಸ್ವತಃ ಶಿಕ್ಷಣ ಸಚಿವರೇ ಶಾಲೆಗೆ ಬರುತ್ತಾರೆಂದರೆ ಶಿಕ್ಷಕರು ಅವರಿಗೆ ತಲೆ ಬಾಚಿಕೊಂಡು ಬನ್ನಿ ಎನ್ನುವಂತಾಗಿದೆ. ಜೊತೆಗೆ, ಶಿಕ್ಷಣ ಸಚಿವರಿಗೆ ವಿಧಾನಸಭೆಗೆ ಬರುವಾಗಲೇ ನೀವು ತಲೆ ಬಾಚಿಕೊಂಡು ಬನ್ನಿ ಎಂದು ಹೇಳುವಂತಹ ಪರಿಸ್ಥಿತಿ ಬಂದಿದೆ. ಅವರಿಗೆ ಕಟ್ಟಿಂಗ್ ಮಾಡಿಸಿಕೊಂಡು ಬರಲು ಹೇಳಬೇಕಿದೆ. ಅವರಿನ್ನೂ ಚಿತ್ರರಂಗದಲ್ಲಿದ್ದೇವೆ ಎಂಬ ಭ್ರಮೆಯಲ್ಲಿದ್ದಾರೆ. ಅದರಿಂದ ಹೊರಬರಬೇಕು
ಮಧು ಬಂಗಾರಪ್ಪ ಕೊಟ್ಟ ತಿರುಗೇಟು :
ನನಗೆ ಕಟಿಂಗ್ ಮಾಡುವವರು ಫ್ರೀ ಇಲ್ಲ. ವಿಜಯೇಂದ್ರ ಫ್ರೀಯಿದ್ದರೆ ಬಂದು ಕಟಿಂಗ್ ಮಾಡಲಿ. ಬಿಜೆಪಿ ನಾಯಕರು ಡಿಸಿಎಂ ಡಿ.ಕೆ. ಶಿವಕುಮಾರ್ ಗಡ್ಡದ ಬಗ್ಗೆ ಮಾತಾಡಿ 130 ರಿಂದ 67ಕ್ಕೆ ಬಂದರು. ಈಗ ಲೋಕಸಭಾ ಚುನಾವಣೆಯಲ್ಲಿ ನನ್ನ ಕೂದಲಿನ ಬಗ್ಗೆ ಮಾತಾಡಿ 26 ಸಂಸದ ಸ್ಥಾನದಿಂದ 6 ಸ್ಥಾಕಕ್ಕೆ ಕುಸಿಯುತ್ತಾರೆ ನೋಡಿ. ಅಬ್ದುಲ್ ಕಲಾಂ ಹೇರ್ ಸ್ಟೈಲ್ ಬಗ್ಗೆ ಬಿಜೆಪಿ ಅವರು ಮಾತಾಡಿದ್ರಾ? ಮೋದಿ ಅವರು ಕೋವಿಡ್ ಟೈಂ ನಲ್ಲಿ ಗಡ್ಡ ಬಿಟ್ಟಿದ್ರು ಅದನ್ನು ಯಾಕೆ ಪ್ರಶ್ನಿಸಲಿಲ್ಲ? ನನ್ನ ಹೇರ್ ಸ್ಟೈಲ್ ಬಗ್ಗೆ ಮಾತಾಡೋದು ಒಂದು ವಿಷಯವಾ? ಅದು ಯಾಕೆ ಅವರಿಗೆ?
ಕೆಲ ಮಕ್ಕಳು ನಮ್ಮ ಶಿಕ್ಷಣ ಸಚಿವರು ಒಳ್ಳೇ ಸ್ಟೈಲ್ ಹೇರ್ ಸ್ಟೈಲ್ ನಲ್ಲಿದ್ದಾರೆ ನಮಗ್ಯಾಕೆ ಆ ಥರ ಸ್ಟೈಲ್ ನಲ್ಲಿ ಬಿಡೋಕೆ ಅವಕಾಶ ಇಲ್ಲ ಅಂತಾ ಕೇಳುತ್ತಾರೆ ಏನೂ ಮಾಡಲಿ ಹೇಳಿ? ರಾಜ್ಯದಲ್ಲಿ ಶೇ.40% ಕಮಿಷನ್ ಪಡೆದಿರುವ ಅವರಿಗೆ ಹೇರ್ ಕಟ್ ಮಾಡುವ ಸ್ಥಿತಿ ಏನೂ ಬಂದಿಲ್ಲ. ಹೇರ್ ಕಟ್ ಮಾಡಲು ಅದು ಯಾರು ಬರುತ್ತಾರೋ ಅವರು ನಾನು ಟೈಂ ಕೊಟ್ಟಾಗ ಬರಲಿ. ಅವರ ಕೆಪಾಸಿಟಿ ನೋಡಿ ಆ ಕೆಲಸ ಕೊಡುತ್ತೇನೆ. ನನ್ನ ಕೂದಲು ಚೆನ್ನಾಗಿದೆ. ತಲೆ ಒಳಗಿನ ಮೆದುಳು ಚೆನ್ನಾಗಿದೆ. ಅವರಂತೆ ನನಗೆ ಯಾವ ದುರ್ಬುದ್ಧಿ ಇಲ್ಲ.
ನನ್ನ ತಂದೆ ನನಗೆ ಒಳ್ಳೆ ಬುದ್ದಿ ಕಲಿಸಿದ್ದಾರೆ. ನನ್ನ ಹೇರ್ ಸ್ಟೈಲ್ ಬಗ್ಗೆ ನನ್ನ ತಂದೆಗೆ ಬಹಳ ಪ್ರೀತಿ ಇತ್ತು. ನನಗೆ ಅವರೇ ಸ್ಪೂರ್ತಿ. ಇವರು ಯಾರೋ ಮಾತು ನಾನು ಕೇಳಲ್ಲ ನನ್ನ ತಂದೆ ನಾನು ಹೇರ್ ಕಟ್ ಮಾಡಿಸಿದಾಗ ಎರೆಡು ವಾರ ನನ್ನ ಜೊತೆ ಮಾತನಾಡರಿಲಿಲ್ಲ
ಮಧು ಬಂಗಾರಪ್ಪ ಕೊಟ್ಟ ಟಾಂಗ್ಗೆ ವಿಜಯೇಂದ್ರ ಸ್ಪಷ್ಟನೆ :
ಇದು ನಾನು ಹೇಳಿದ್ದಲ್ಲ. ಶಿಕ್ಷಕರ ಜೊತೆ ಮಾತನಾಡುತ್ತಿದ್ಧಾಗ ಶಿಕ್ಷಕರೇ ಹೇಳಿಕೊಂಡಿದ್ದು. ಶಿಕ್ಷಕರಿಗೆ ಅವರ ವಿದ್ಯಾರ್ಥಿಗಳು ಕೇಳ್ತಾರಂತೆ. ಶಿಕ್ಷಣ ಸಚಿವರೇ ಹೇರ್ ಕಟ್ ಮಾಡಿಸಲ್ಲ. ಅವರಿಗೇ ಕನ್ನಡ ಬರಲ್ಲ ಅಂತಾರಂತೆ. ಶಿಕ್ಷಣ ಸಚಿವರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಅವರಿನ್ನೂ ಸಿನಿಮಾ ರಂಗದಲ್ಲಿ ಇಲ್ಲ.
ಕೊನೆಯ ಮಾತು : ಪ್ರತಿ ಹುದ್ದೆಗೂ ಒಂದೊಂದು ರೀತಿಯ ಘನತೆ, ಗಾಂಭೀರ್ಯ, ಶಿಸ್ತು ಇರುತ್ತದೆ. ಶಿಕ್ಷಣ ಇಲಾಖೆಯ ಉಸ್ತುವಾರಿ ಹೊತ್ತಿರುವವರಿಗೆ ಸ್ವಲ್ಪ ಹೆಚ್ಚೇ ಘನತೆ ಇರುತ್ತದೆ. ಅಂತಹ ಶಿಕ್ಷಣ ಸಚಿವರೇ ನನಗೆ ಕನ್ನಡ ಬರಲ್ಲ ಎನ್ನುವುದು, ತಲೆ ಬಾಚಿಕೊಳ್ಳದೆ, ಉದ್ದನೆಯ ಕೂದಲು ಬಿಟ್ಟುಕೊಂಡು ತಿರುಗುವುದು ಶೋಭೆಯಂತೂ ಅಲ್ಲ. ಅಬ್ದುಲ್ ಕಲಾಂ ಅವರಿಗೆ ಹೋಲಿಸಿಕೊಂಡು ಮಾತನಾಡುವುದು ಮತ್ತೊಮ್ಮೆ ಅವರ ಶಿಕ್ಷಣದ ಬಗ್ಗೆ ಇರುವ ಅಜ್ಞಾನವನ್ನಷ್ಟೇ ಸೂಚಿಸುತ್ತದೆ.



