ಇನ್ನೆಲ್ಲಿ ಸಿನಿಮಾ ಥಿಯೇಟರ್ಸ್. ವೈಭವವೆಲ್ಲ ಮುಗಿದು ಹೋಯ್ತು. ಇನ್ನೇನಿದ್ದರೂ ಜನ ಸಿನಿಮಾಗಳನ್ನ ಮೊಬೈಲು, ಟಿವಿಗಳಲ್ಲೇ ನೋಡಿಕೊಂಡು ಖುಷಿ ಪಡ್ತಾರೆ. ಥಿಯೇಟರ್ ಟೈಮ್ ಮುಗಿದು ಹೋಯ್ತು ಎನ್ನುತ್ತಿದ್ದವರ ಲೆಕ್ಕಾಚಾರಗಳೆಲ್ಲ ಉಲ್ಟಾಪಲ್ಟಾ ಆಗುವಂತೆ ಮಾಡಿದ್ದಾರೆ ರಜನಿಕಾಂತ್ (Rajinikanth), ಶಿವರಾಜ್`ಕುಮಾರ್ (Shiva Rajkumar) , ಚಿರಂಜೀವಿ (Chiranjeevi), ಅಕ್ಷಯ್ ಕುಮಾರ್ (Akshay Kumar), ಸನ್ನಿಡಿಯೋಲ್(Sunny Deol).. ಸಿನಿಮಾಗಳು. ಕಳೆದ ಒಂದು ತಿಂಗಳಲ್ಲಿ ಸ್ಟಾರ್ ಸಿನಿಮಾಗಳು ಮಾಡಿರುವ ಥಿಯೇಟರ್ ಕಲೆಕ್ಷನ್ ಒಂದೂವರೆ ಸಾವಿರ ಕೋಟಿಗೂ ಹೆಚ್ಚು. ಥಿಯೇಟರಿಗೆ ಬಂದ ಪ್ರೇಕ್ಷಕರು 3 ಕೋಟಿಗೂ ಹೆಚ್ಚ್ಚ. ಜನರನ್ನು ಥಿಯೇಟರಿಗೆ ಯಶಸ್ವಿಯಾಗಿರುವುದು ಕೇವಲ ಕ್ವಾಲಿಟಿ ಚಿತ್ರಗಳಲ್ಲ, ಸ್ಟಾರ್ ಚಿತ್ರಗಳು. ಒಪ್ಪುತ್ತೀರೋ.. ಬಿಡುತ್ತೀರೋ.. ಸ್ಟಾರ್ ಚಿತ್ರಗಳೇ ಇಂಡಸ್ಟ್ರಿಯನ್ನು ನಿಲ್ಲಿಸುತ್ತವೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಏಕೆಂದರೆ ಅಟ್ಟರ್ ಫ್ಲಾಪ್ ಸ್ಟಾರ್ ಸಿನಿಮಾ ಕೂಡಾ 50 ಕೋಟಿ ಬ್ಯುಸಿನೆಸ್ ಮಾಡಿದೆ.
ಸ್ಟಾರ್ ನಟರ ಚಿತ್ರಗಳು ಇಂಡಸ್ಟ್ರಿಯ ಜೀವನಾಡಿಗಳು. ಆದರೆ ಕಲಾವಿದರು ಸ್ಟಾರ್ ಆದ ನಂತರ ಮಾಡುವ ತಪ್ಪೆಂದರೆ ಒಂದೊಂದು ಸಿನಿಮಾಗೆ ಒಂದು..ಎರಡು..ಮೂರು.. ವರ್ಷಗಳಷ್ಟು ಸುದೀರ್ಘ ಸಮಯ ತೆಗೆದುಕೊಳ್ಳೋದು. ನಡುವಿನ ಅವಧಿಯಲ್ಲಿ ಇಂಡಸ್ಟ್ರಿಯನ್ನು ರನ್ ಮಾಡುವವರು ಬೇರೆಯ ಚಿತ್ರಗಳು. ಆದರೆ ಸ್ಟಾರ್ ನಟರ ಚಿತ್ರಗಳು ರಿಲೀಸ್ ಆದರೆ ಏನಾಗುತ್ತೆ ಅನ್ನೋದಕ್ಕೆ ಇದೀಗ ಸಂಭವಿಸಿದ ಬಾಕ್ಸಾಫೀಸ್ ಸುನಾಮಿಯೇ ಸಾಕ್ಷಿ.
ಎರಡು ವಾರದ ಹಿಂದೆ ರಜನಿಕಾಂತ್ ಅವರ ಜೈಲರ್ (jailor) ರಿಲೀಸ್ ಆಗಿತ್ತು. ಇದೇ ಜೈಲರ್`ನಲ್ಲಿ ಶಿವಣ್ಣ, ಮೋಹನ್ ಲಾಲ್ (Mohan lal), ಜಾಕಿ ಶ್ರಾಫ್ (Jackie Shraff) ಕೂಡಾ ನಟಿಸಿದ್ದರು. ಹಿಂದಿಯಲ್ಲಿ ಸನ್ನಿಡಿಯೋಲ್ ಅಭಿನಯದ ಗದ್ದರ್ 2 (Gaddar 2) ಬಂತು. ಜೊತೆಗೆ ಅಕ್ಷಯ್ ಕುಮಾರ್ ಅಭಿನಯದ ಓ ಮೈ ಗಾಡ್ 2 (Oh my God 2) ಕೂಡಾ ರಿಲೀಸ್ ಆಯ್ತು. ತೆಲುಗಿನಲ್ಲಿ ಚಿರಂಜೀವಿ ಅಭಿನಯದ ಬೋಳಾ ಶಂಕರ್ (Bola Shankar)ಬಂತು. ಹೀಗೆ ಈ ಎಲ್ಲ ಸ್ಟಾರ್ ನಟರ ಚಿತ್ರಗಳ ಬಿಡುಗಡೆಯಿಂದ ಲಾಭ ಗಳಿಸಿದ್ದು ಚಿತ್ರರಂಗ. ಜನ ಥಿಯೇಟರಿಗೇ ಬರ್ತಿಲ್ಲ. ಪ್ರೇಕ್ಷಕರು ಒಟಿಟಿಯಲ್ಲಿಯೇ ಕಳೆದು ಹೋಗಿದ್ದಾರೆ ಎನ್ನುವ ಮಾತುಗಳೆಲ್ಲ ಸುಳ್ಳಾಗಿ ಕಳೆದ ಎರಡು ವಾರದಲ್ಲಿ ಹೆಚ್ಚೂ ಕಡಿಮೆ 1500 ಕೋಟಿ ಕಲೆಕ್ಷನ್ ಆಗಿದೆ.
ಗದ್ದರ್ 2 ಚಿತ್ರ ಪಂಜಾಬ್, ಉತ್ತರ ಪ್ರದೇಶ ಸುತ್ತಮುತ್ತ ಹಿಂದಿ ಬೆಲ್ಟ್ಗಳಲ್ಲಿ ಭರ್ಜರಿಯಾಗಿ ಓಡುತ್ತಿದೆ. ಪ್ರೇಕ್ಷಕರು ಟ್ರ್ಯಾಕ್ಟರುಗಳಲ್ಲಿ ಚಿತ್ರಮಂದಿರಕ್ಕೆ ಬರುತ್ತಿರುವುದು ಹೊಸ ಬೆಳವಣಿಗೆ. 400 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.
ಓ ಮೈ ಗಾಡ್ 2 ಚಿತ್ರಗೂ ಅಷ್ಟೆ. ಅಕ್ಷಯ್ ಕುಮಾರ್ ಜೊತೆ ಒಟಿಟಿ ಸ್ಟಾರ್ ನಟ ಪಂಕಜ್ ತ್ರಿಪಾಠಿ ನಟಿಸಿದ್ದ ಸಿನಿಮಾ. ಅಕ್ಷಯ್ ಕುಮಾರ್ ಚಿತ್ರಗಳು ಎಂದಿನಂತೆ ಕಲೆಕ್ಷನ್ ಹೆಚ್ಚಿಸುತ್ತಾ ಹೋಗಿ, 100 ಕೋಟಿ ಕ್ಲಬ್ ದಾಟಿದೆ ಓ ಮೈ ಗಾಡ್ 2.
ಇದು ಹಿಂದಿಯ ಲೆಕ್ಕಾಚಾರವಾದರೆ ತೆಲುಗಿನಲ್ಲಿ ಬೋಳಾ ಶಂಕರ್ ಸಿನಿಮಾ ಕಥೆಯೇ ಬೇರೆ. ಚಿರಂಜೀವಿ ಸಿನಿಮಾ ಅಟ್ಟರ್ ಫ್ಲಾಪ್. ಆದರೆ ಚಿತ್ರ 45 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.
ಇನ್ನು ಜೈಲರ್ ಚಿತ್ರ ಹಿಂದಿ ಬೆಲ್ಟ್`ನಲ್ಲಿ ವರ್ಕ್ ಆಗದಿದ್ದರೂ, ದಕ್ಷಿಣದ ರಾಜ್ಯಗಳಲ್ಲಿ ಭರ್ಜರಿ ದುಡ್ಡು ಮಾಡುತ್ತಿದೆ. ಕಲೆಕ್ಷನ್ ಆಗಲೇ 500 ಕೋಟಿ ದಾಟಿದೆ. ರಜನಿಕಾಂತ್ ಹವಾ ಕಮ್ಮಿ ಆಗಿಲ್ಲ.
ಇವುಗಳ ಮಧ್ಯೆ ಕನ್ನಡದಲ್ಲಿ ಕೌಸಲ್ಯ ಸುಪ್ರಜಾ ರಾಮ ಗೆದ್ದಿದೆ. ಹಾಸ್ಟೆಲ್ ಹುಡುಗರು ಹಾಗೂ ಆಚಾರ್ & ಕೋ ಚಿತ್ರಗಳು ಗೆದ್ದವಾದರೂ, ಅವು ಹೊಸಬರ ಚಿತ್ರಗಳು. ಕೌಸಲ್ಯ ಸುಪ್ರಜಾ ರಾಮ ಚಿತ್ರದಲ್ಲಷ್ಟೇ ಸ್ಟಾರ್ ನಟ ನಟಯರಿದ್ದರು. ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ನಿರ್ದೇಶಕ ಶಶಾಂಕ್ ಅವರಿಗೆ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆದು ತರುವ ಶಕ್ತಿಯಿತ್ತು. ಆಚಾರ್ & ಕೋ ಚಿತ್ರಕ್ಕೆ ಪುನೀತ್ ರಾಜ್`ಕುಮಾರ್ ಸಂಸ್ಥೆಯ ನಿರ್ಮಾಣ ಎನ್ನುವುದು ಬಿಟ್ಟರೆ ಚಿತ್ರವನ್ನು ಗೆಲ್ಲಿಸಿದ್ದು ಚಿತ್ರದ ಕ್ವಾಲಿಟಿ ಅಷ್ಟೆ. ಇನ್ನು ಹಾಸ್ಟೆಲ್ ಹುಡುಗರು ಚಿತ್ರ ಹೊಸಬರ ಹೊಸತನ ಗೆದ್ದಿತೆಂದು ಹೇಳಬೇಕು. ಸ್ಟಾರ್ ಕಲಾವಿದರನ್ನು ಹಾಸ್ಟೆಲ್ ಹುಡುಗರು ಸಿನಿಮಾದವರು ಯಶಸ್ವಿಯಾಗಿ ಬಳಸಿಕೊಂಡು ಚಿತ್ರವನ್ನು ಪ್ರಚಾರ ಮಾಡಿದರು. ಮರಾಠಿಯಲ್ಲೊಂದು ಸಿನಿಮಾ ಕೂಡಾ ಹೊಸತನದಿಂದಲೇ ಗೆದ್ದಿದೆ. ತೆಲುಗಿನಲ್ಲಿ ಬೇಬಿ ಎಂಬ ಸಿನಿಮಾ ಸಕ್ಸಸ್ ಆಗಿದೆ.
ಅಲ್ಲಿಗೆ ಒಂದಂತೂ ಸ್ಪಷ್ಟ. ಕ್ವಾಲಿಟಿ ಇದ್ದ ಚಿತ್ರಗಳು ಗೆಲ್ಲುವುದು ನಿಧಾನ. ಆದರೆ ಸ್ಟಾರ್ ನಟರಿದ್ದ ಚಿತ್ರಗಳು ಪ್ರೇಕ್ಷಕರ ನಾಡಿಮಿಡಿತಕ್ಕೆ ತಕ್ಕಂತೆ ಕ್ವಾಲಿಟಿಯೂ ಇದ್ದರೆ ಬಂಪರ್ ಸಿಗುತ್ತೆ ಎನ್ನುವುದು. ಈ ಅವಧಿಯಲ್ಲಿ ಚಿತ್ರಮಂದಿರಕ್ಕೆ ಬಂದ ಪ್ರೇಕ್ಷಕರ ಸಂಖ್ಯೆ ಸುಮಾರು 3 ಕೋಟಿ. ಹೌದು… 3 ಕೋಟಿಗೂ ಹೆಚ್ಚು ಜನ ಚಿತ್ರಮಂದಿರಕ್ಕೆ ಬಂದಿದ್ದಾರೆ. ಒಂದು ತಿಂಗಳ ಅವಧಿಯಲ್ಲಿ 3 ಕೋಟಿ ಜನ ಚಿತ್ರಮಂದಿರಕ್ಕೆ ಬರುವುದು ಸಣ್ಣ ಮಾತಲ್ಲ. ಅಲ್ಲಿಗೆ ಸ್ಟಾರ್ ನಟರ ಸೋಮಾರಿತನ, ಒಮ್ಮೆಗೆ ಒಂದೇ ಸಿನಿಮಾ ಎಂಬ ಮಾತುಗಳಿಂದ ಚಿತ್ರರಂಗಕ್ಕೆ ಲಾಭ ಇಲ್ಲ. ನಾವು ಒಳ್ಳೆಯ ಸಿನಿಮಾ ಮಾಡ್ತೇವೆ, ಇಂಡಸ್ಟ್ರಿಯನ್ನು ಎಲ್ಲಿಗೋ ಕೊಂಡೊಯ್ಯುತ್ತೇವೆ ಎಂಬ ಭ್ರಮೆಗಳಿಂದ ಹೀರೋಗಳು ಹೊರಬಂದು ರೆಗ್ಯುಲರ್ ಆಗಿ ಸಿನಿಮಾ ಮಾಡ್ತಾ ಇದ್ದರೆ, ಚಿತ್ರಮಂದಿರವೂ ಉಳಿಯುತ್ತೆ. ಚಿತ್ರರಂಗವೂ ಉಳಿಯುತ್ತೆ. ಚಿತ್ರರಂಗ..ಚಿತ್ರಮಂದಿರ ಇದ್ದರೆ ತಾನೇ.. ಸ್ಟಾರ್ ಪಟ್ಟ ಎಲ್ಲ ಸಿಗೋದು.
ಕನ್ನಡದಲ್ಲಿ ಶಿವರಾಜ್`ಕುಮಾರ್, ಹಿಂದಿಯಲ್ಲಿ ಅಕ್ಷಯ್ ಕುಮಾರ್ ಹಾಗೂ ಮಲಯಾಳಂನಲ್ಲಿ ಮೋಹನ್ ಲಾಲ್, ಮಮ್ಮೂಟಿ ಮಾತ್ರ ನಿರಂತರವಾಗಿ ಸಿನಿಮಾ ಮಾಡ್ತಾನೇ ಇರ್ತಾರೆ. ವರ್ಷಕ್ಕೆ ಕನಿಷ್ಠ 2ರಿಂದ 4 ಸಿನಿಮಾಗಳು ಬರುತ್ತಿರುತ್ತವೆ. ಉಳಿದಂತೆ ಎಲ್ಲವೂ.. ಎಲ್ಲರೂ ಸೇಮ್ ಟು ಸೇಮ್.
ಕನ್ನಡದ್ದೇ ಲೆಕ್ಕಾಚಾರ ತೆಗೆದುಕೊಂಡರೆ ಯಶ್ ಸಿನಿಮಾ ಈ ವರ್ಷವೂ ಬರಲ್ಲ. ಮುಂದಿನ ವರ್ಷವೂ ಡೌಟು. ಸುದೀಪ್ ಸಿನಿಮಾ ಇಲ್ಲ. ಉಪೇಂದ್ರ ಸಿನಿಮಾನೂ ರಿಲೀಸ್ ಆಗುವುದು ಅನುಮಾನ. ದುನಿಯಾ ವಿಜಯ್ ಸಿನಿಮಾ ಬಂದು ಆಗಲೇ ಎರಡು ವರ್ಷವಾಗುತ್ತಾ ಬಂತು. ಧ್ರುವ ಸರ್ಜಾ ಚಿತ್ರ ಅಭಿಮಾನಿಗಳಿಗೆ ಮರೆತೇ ಹೋಗುವಷ್ಟು ಸಮಯವಾಗಿದೆ. ಈ ವರ್ಷವೂ ಇರಲ್ಲ. ಬರಲ್ಲ ಅನ್ನೋದು ಪಕ್ಕಾ. ಧ್ರುವ ಸರ್ಜಾ ಸಿನಿಮಾಗಳು ಪಂಚವಾರ್ಷಿಕ ಯೋಜನೆಗಳಾಗುತ್ತಿವೆ. ಗಣೇಶ್ ಚಿತ್ರಗಳೂ ಸುದೀರ್ಘ ಕಾಲ ತೆಗೆದುಕೊಳ್ಳುತ್ತಿವೆ. ರಿಷಬ್ ಶೆಟ್ಟಿ ಸಿನಿಮಾ ಈ ವರ್ಷ ಇಲ್ಲ. ರಕ್ಷಿತ್ ಶೆಟ್ಟಿ ಒಂದೇ ಸಿನಿಮಾ, ಎರಡು ಭಾಗಗಳಲ್ಲಿ ಬರ್ತಾರೆ. ರಾಜ್ ಬಿ.ಶೆಟ್ಟಿ ಸಿನಿಮಾ ಇನ್ನೇನು ರಿಲೀಸ್ ಆದರೆ ಮುಂದಿನ ಸಿನಿಮಾ ಯಾವಾಗಲೋ ಏನೋ.. ಹೀಗಾದರೆ ಜನ ಚಿತ್ರಮಂದಿರಗಳಿಗೆ ಬರೋದು ಹೇಗೆ? ಸಿನಿಮಾವನ್ನೇ ಮಾಡದೆ ನಾವು ಸಿನಿಮಾ ರಂಗ ಉದ್ಧಾರ ಮಾಡ್ತೇವೆ ಅನ್ನೋದು ಜಸ್ಟ್ ಫಾರ್ ಬೊಗಳೆ..ಅಷ್ಟೆ.



