ರೇವಣ್ಣ ಭವಾನಿ ದಂಪತಿಯ ಇಬ್ಬರೂ ಮಕ್ಕಳು ಈಗ ಜೈಲಿನಲ್ಲಿದ್ದಾರೆ. ಸೂರಜ್ ರೇವಣ್ಣ ಸಲಿಂಗ ಕಾಮ ಕೇಸಿನಲ್ಲಿ ಜೈಲು ಸೇರಿದ್ದರೆ, ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಕೇಸಿನಲ್ಲಿ ಜೈಲು ಸೇರಿದ್ದಾರೆ. ರೇವಣ್ಣ, ಜೈಲಿಗೆ ಹೋಗಿ ವಾಪಸ್ ಬಂದಿದ್ದಾರೆ. ಭವಾನಿ ಜೈಲಿನ ಅಂಚು ತಲುಪಿ ಬಚಾವ್ ಆಗಿದ್ದಾರೆ.
ಪ್ರಜ್ವಲ್ ಕೇಸ್ : ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಜೈಲಿನಲ್ಲಿ ಹಲವು ದಿನಗಳಿಂದ ಬೆನ್ನು ನೋವು ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗಿ ಅನಾರೋಗ್ಯ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಅನುಮತಿ ನೀಡಬೇಕು ಎಂದು ಪ್ರಜ್ವಲ್ ರೇವಣ್ಣ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಸಲ್ಲಿಕೆ ಮಾಡಿದ್ದಾರೆ. ಪ್ರಜ್ವಲ್ ವಿರುದ್ಧ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಚಾರ ಸೇರಿದಂತೆ ಒಟ್ಟು ಮೂರು ಪ್ರಕರಣಗಳು ಹಾಸನ ಜಿಲ್ಲೆಯಲ್ಲಿ ದಾಖಲಾಗಿವೆ. ಈ ಕೇಸಿನಲ್ಲಿ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯ ಆಗುತ್ತಿದ್ದಂತೆ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಕರೆತರಲಾಗಿತ್ತು. ಈ ವೇಳೆ ವಿಚಾರಣೆ ಮಾಡಿದ ನ್ಯಾಯಾಲಯ ಅವರಿಗೆ ಪುನಃ ಜು.8ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಇದೇ ವೇಳೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪರ ವಕೀಲರು ತಮ್ಮ ಕಕ್ಷಿದಾರರಿಗೆ ಬೆನ್ನು ನೋವು ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಅನುಮತಿ ನೀಡುವಂತೆ ನ್ಯಾಯಾಲಯದ ಮುಂದೆ ಮನವಿ ಮಾಡಿದರು. ನೀವು ಜೈಲಿನ ಅಧಿಕಾರಿಗಳಿಗೆ ಮನವಿ ಸಲ್ಲಿಕೆ ಮಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬಹುದು. ಒಂದು ವೇಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಜೈಲು ಅಧಿಕಾರಿಗಳು ನಿಮ್ಮ ಮನವಿಯನ್ನು ನಿರಾಕರಿಸಿದರೆ ಇಲ್ಲಿ ಅರ್ಜಿ ಸಲ್ಲಿಸಿ. ಈ ಬಗ್ಗೆ ಆಮೇಲೆ ತೀರ್ಮಾನ ಮಾಡಲಾಗುತ್ತದೆ ಎಂದು ನ್ಯಾಯಾಧೀಶರು ತೀರ್ಪು ಕೊಟ್ಟಿದ್ದಾರೆ.
ಪ್ರಜ್ವಲ್ ರೇವಣ್ಣ ವಿರುದ್ಧ ಒಟ್ಟು ಮೂರು ಪ್ರಕರಣಗಳು ದಾಖಲಾಗಿದ್ದು, ಒಂದು ಕೇಸಿನಲ್ಲಿ ಮಾತ್ರವೇ ಜಾಮೀನು ಸಿಕ್ಕಿದೆ. 2ನೇ ಕೇಸ್ನಲ್ಲಿ 14 ದಿನಗಳ ನ್ಯಾಯಾಂಗ ಬಂಧನದಲ್ಲಿರುವ ಪ್ರಜ್ವಲ್, ಆ ಪ್ರಕರಣದಲ್ಲೂ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಆ ಅರ್ಜಿ ವಿಚಾರಣೆ ಮಾಡಿದ ನ್ಯಾಯಾಧೀಶರು ಆದೇಶವನ್ನು ಜೂ.26ಕ್ಕೆ ಕಾಯ್ದಿರಿಸಿದ್ದಾರೆ. ಇನ್ನು 3ನೇ ಕೇಸಿನ ಕುರಿತು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಲ್ಲಿ ವಿಚಾರಣೆ ಮಾಡಲಾಗಿದ್ದು, ಜುಲೈ 8 ರವರೆಗೆ ಪುನಃ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಸೂರಜ್ ರೇವಣ್ಣ ಕೇಸ್ : ಸೂರಜ್ ರೇವಣ್ಣ ವಿರುದ್ಧ ಹಾಸನದಲ್ಲಿ ಸಲಿಂಗಕಾಮದ ಕೇಸ್ ದಾಖಲಾಗುತ್ತಿದ್ದಂತೆ ಆತನನ್ನು ಬಂಧಿಸಿದ್ದ ಜಿಲ್ಲಾ ಪೊಲೀಸರು ತನಿಖೆ ಆರಂಭಿಸಿದ್ದಾರೆ. ರಾಜ್ಯ ಸರ್ಕಾರದಿಂದ ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿ ಆದೇಶ ನೀಡಲಾಗಿತ್ತು. ಬೆನ್ನಲ್ಲಿಯೇ ಹಾಸನದಿಂದ ಬೆಂಗಳೂರಿಗೆ ಸೂರಜ್ ರೇವಣ್ಣನನ್ನು ಕರೆತಂದಿದ್ದ ಪೊಲೀಸರು ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿ ಇಟ್ಟಿದ್ದರು. ಅದಾದ ನಂತರ ಮಂಗಳವಾರ ಸಿಐಡಿ ಪೊಲೀಸರು ಸೂರಜ್ ರೇವಣ್ಣನನ್ನು ಪರಪ್ಪನ ಅಗ್ರಹಾರದಿಂದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ 42 ನೇ ಎಸಿಎಂಎಂ ಕೋರ್ಟ್ ಮುಂದೆ ಹಾಜರುಪಡಿಸಿ, ಕಸ್ಟಡಿಗೆ ಪಡೆದಿದ್ದಾರೆ. ನ್ಯಾಯಾಧೀಶರಾದ ಶಿವಕುಮಾರ್ ಜುಲೈ 1 ರವರೆಗೆ ಒಟ್ಟು 8 ದಿನ ಸಿಐಡಿ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ನೀಡಿದ್ದಾರೆ.
ಸೂರಜ್ ರೇವಣ್ಣ ವಿರುದ್ಧ ದಾಖಲಾಗಿರುವ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಲವು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಲು ಮುಂದಾಗಿದ್ದಾರೆ. ಹೀಗಾಗಿ, ಇವರನ್ನು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ಮಾಡಿಸಲಿದ್ದಾರೆ. ಆಸ್ಪತ್ರೆಯಲ್ಲಿ ಯೂರಾಲಜಿಸ್ಟ್, ಫಾರೆನ್ಸಿಕ್ ತಜ್ಞರು ಮತ್ತು ಪಿಜಿಷಿಯನ್ ವೈದ್ಯರಿಂದ ಮೆಡಿಕಲ್ ಟೆಸ್ಟ್ ಮಾಡಿಸಲಾಗುತ್ತದೆ. ಜೊತೆಗೆ, ಮನೋ ವೈದ್ಯರಿಂದ ಕೂಡ ಸಂತ್ರಸ್ತನನ್ನ ಎಗ್ಸಾಮಿನೇಷನ್ ಮಾಡಿಸಲಿದ್ದಾರೆ.
ಸೂರಜ್ ರೇವಣ್ಣಗೆ ಯಾವ ರೀತಿ ಮೆಡಿಕಲ್ ಟೆಸ್ಟ್ ಆಗಲಿದೆ ?
1. ಕೂದಲುಗಳನ್ನ ಪರೀಕ್ಷೆಗೆ ಒಳಪಡಿಸಲು ಕೂದಲನ್ನ ಸಂಗ್ರಹ ಮಾಡಿಕೊಳ್ಳಲಿದ್ದಾರೆ.
2. ಸಂತ್ರಸ್ತ ಯುವಕನ ದೇಹದ ಮೇಲೆ ಕಚ್ಚಿದ ಗುರುತುಗಳು ಇದ್ದರೆ ಹಲ್ಲಿನ ಮಾರ್ಕ್ ಅನ್ನು ಮಾಡಿ ಲೈಂಗಿಕ ದೌರ್ಜನ್ಯ ನಡೆಸಿರುವ ಸೂರಜ್ ರೇವಣ್ಣ ಹಲ್ಲಿಗೆ ಹೋಲಿಕೆ ಮಾಡಿ ಪರೀಕ್ಷಿಸಲಿದ್ದಾರೆ.
3. ಸೂರಜ್ ರೇವಣ್ಣಗೆ ಲಿಂಗತ್ವ ಪರೀಕ್ಷೆ.
4. ಅಸಹಜ ಲೈಂಗಿಕ ಕ್ರಿಯೆಗೆ ಸಮರ್ಥನ ಅಥವಾ ಈ ರೀತಿಯ ಅ ಸಹಜ ಲೈಂಗಿಕ ಕ್ರಿಯೆ ಇದೇ ಮೊದಲ ಅಂತಾ ಪರೀಕ್ಷೆ ಮಾಡ್ತಾರೆ.
5. ಕಿಡ್ನಿ ಮತ್ತು ವೃಷಣಗಳ ಪರೀಕ್ಷೆಗಳನ್ನ ಕೂಡ ನಡೆಸಲಿದ್ದಾರೆ.
6. ಲೈಂಗಿಕವಾಗಿ ಸಮರ್ಥತೆ ಬಗ್ಗೆ ಪರೀಕ್ಷೆ.
7. ಫಾರೆನ್ಸಿಕ್ ತಙ್ಞರಿಂದ ಕೂದಲು, ಬಟ್ಟೆ ಮತ್ತು ಕೆಲವೊಂದು ವಸ್ತುಗಳನ್ನ ಪರೀಕ್ಷೆಗೆ ಒಳಪಡಿಸ್ತಾರೆ.
8. ಡಿಎನ್ ಎ ಟೆಸ್ಟ್ ಕೂಡ ಮಾಡಲಿದ್ದಾರೆ.



