ಭಕ್ತ ಪ್ರಹ್ಲಾದ ಸಿನಿಮಾ ನೋಡಿದ್ದೀರಲ್ಲ, ಆ ಸಿನಿಮಾದಲ್ಲಿ ಹಿರಣ್ಯಕಶಿಪುವಿನ ತಮ್ಮ ಹಿರಣ್ಯಾಕ್ಷ, ಭೂದೇವಿಯನ್ನು ಅಟ್ಟಿಸಿಕೊಂಡು ಹೋಗುತ್ತಾನೆ. ಭೂದೇವಿ, ಶ್ರೀಮಹಾವಿಷ್ಣುವಿನ ಇನ್ನೊಬ್ಬ ಪತ್ನಿ. ಹೀಗಾಗಿ ಪತ್ನಿಯ ಪ್ರಾಣ ರಕ್ಷಣೆಗೆ ಹಂದಿಯ ರೂಪದಲ್ಲಿ ಬರುತ್ತಾನೆ ಮಹಾವಿಷ್ಣು. ಭೂಮಿಯನ್ನು ತನ್ನ ಕೊಂಬಿನ ಮೇಲೆ ಎತ್ತಿಕೊಂಡು ಹೋಗಿ ಸ್ವಸ್ಥಾನಕ್ಕೆ ಸೇರಿಸುತ್ತಾನೆ, ಆನಂತರ ಹಿರಣ್ಯಾಕ್ಷನನ್ನು ಕೊಲ್ಲುತ್ತಾನೆ. ಇದು ಪುರಾಣ. ವಿಷ್ಣುವಿನ ದಶಾವತಾರಗಳಲ್ಲಿ ವರಾಹ ಅವತಾರವೂ ಒಂದು. ಆದರೆ, ಆ ವರಾಹ ರೂಪಿ ವಿಷ್ಣುವಿಗೂ ಒಂದು ವ್ರತ ಇದೆ. ಆಚರಣೆ, ಪದ್ಧತಿಗಳಿವೆ ಎನ್ನುವುದು ಹೊಸ ವಿಷಯ.
ಅಯ್ಯಪ್ಪ ಮಾಲಾಧಾರಿಗಳ ವ್ರತ ಗೊತ್ತು, ಹನುಮಧಾರಿ, ಸುಬ್ರಹ್ಮಣ್ಯ ವ್ರತ, ಓಂಶಾಂತಿ ವ್ರತ.. ಹೀಗೆ ಹಲವು ವ್ರತಾಚರಣೆಗಳಿವೆ. ಆದರೆ, ವಾರಾಹಿ ದೀಕ್ಷೆ ಎಂಬ ವ್ರತ ಇದೆ ಮತ್ತು ಇದು ಮೇಲೆ ಹೇಳಿದ ಎಲ್ಲ ವ್ರತಗಳಿಗಿಂತಲೂ ಹೆಚ್ಚು ಶಿಸ್ತುಬದ್ಧವಾಗಿದೆ. ಅವುಗಳಂತೆಯೇ ಕಠಿಣವಾಗಿದೆ ಎಂದು ತಿಳಿದುಬಂದಿದೆ. ವಿಶೇಷವಾಗಿ ಜನ ಈ ವ್ರತದ ಬಗ್ಗೆ ಕೇಳುವುದಕ್ಕೆ ಶುರು ಮಾಡಿರುವುದು ಪವನ್ ಕಲ್ಯಾಣ್ ವಾರಾಹಿ ದೀಕ್ಷೆ ತೆಗೆದುಕೊಂಡ ಮೇಲೆ. ಹಾಗಂತ ಇದು ಜನರಿಗೆ ಗೊತ್ತೇ ಇರಲಿಲ್ಲ ಎಂದೂ ಅರ್ಥವಲ್ಲ. ವ್ರತ ಆಚರಿಸುವವರಿಗೆ, ಸಂಪ್ರದಾಯ ಗೊತ್ತಿದ್ದವರಿಗೆ ಗೊತ್ತಿತ್ತು. ಪವನ್ ಕಲ್ಯಾಣ್ ದೀಕ್ಷೆ ಪಡೆದುಕೊಂಡ ಮೇಲೆ, ಜನಸಾಮಾನ್ಯರಿಗೂ ಗೊತ್ತಾಗಿದೆ.
ಈ ವಾರಾಹಿ ದೀಕ್ಷೆ ಎಂದರೆ, ವಾರಾಹಿ ದೇವಿಯ ವ್ರತ. ವಾರಾಹಿ ದೇವಿ ಸಪ್ತಮಾತೃಕೆಯರಲ್ಲಿ ಒಬ್ಬಳು. ಈಕೆ ವರಾಹ ಅಂದರೆ ಹಂದಿಯ ಮುಖವನ್ನು ಹೊಂದಿರುವವಳು. ಎಮ್ಮೆ ಮತ್ತು ಹಂದಿ ವಾರಾಹಿ ದೇವಿಯ ವಾಹನ. ವರಾಹ ಈಕೆಯ ಪತಿ. ಹಿರಣ್ಯಕಶಿಪುವಿನ ತಮ್ಮ ಹಿರಣ್ಯಾಕ್ಷನನ್ನು ಸಂಹಾಯ ಮಾಡಿದವನು. ಭೂದೇವಿಯನ್ನು ರಕ್ಷಿಸಿದವನು. ಈತನ ಪತ್ನಿಯೇ ವಾರಾಹಿ. ಅರ್ಥ ಸರಳ ವರಾಹ, ವಿಷ್ಣುವಿನ ಅವತಾರವಾದರೆ, ವಾರಾಹಿ ಲಕ್ಷ್ಮಿದೇವಿಯ ಅವತಾರ. ಈಕೆಯನ್ನು ಪೂಜಿಸಿದರೆ, ವ್ರತ ಆಚರಿಸಿದರೆ ಪೂಜಿಸುವ ವ್ಯಕ್ತಿಗಳಿಗೆ ಅಂಟಿಕೊಂಡಿದ್ದ ದುಷ್ಟಶಕ್ತಿಗಳು ದೂರವಾಗುತ್ತವೆ. ಗುರಿಗೆ ಇದ್ದ ಅಡೆತಡೆಗಳೆಲ್ಲ ನಿವಾರಣೆಯಾಗುತ್ತವೆ ಎನ್ನುವುದು ನಂಬಿಕೆ.
ಸಾಮಾನ್ಯವಾಗಿ ಈ ವ್ರತಾಚರಣೆ ಮಾಡುವವರು ಅಮಾವಾಸ್ಯೆ ಆದ 8 ದಿನಗಳ ನಂತರ ಅಥವಾ ಪೌರ್ಣಮಿಯಾದ 8 ದಿನಗಳ ನಂತರ ವ್ರತ ಆಚರಣೆ ಮಾಡ್ತಾರೆ. ವಾರಾಹಿ ದೇವಿಯ ವ್ರತ 11 ದಿನಗಳ ಆಚರಣೆಯಾಗಿದ್ದು, 11 ದಿನಗಳ ಕಾಲ ವ್ರತಧಾರಿಗಳು ಘನ ಆಹಾರ ತಿನ್ನುವಂತಿಲ್ಲ. ಕೇವಲ ಹಾಲು, ನೀರು, ಹಣ್ಣುಗಳ ದ್ರವಾಹಾರದಲ್ಲಿರಬೇಕು. ಮದ್ಯ, ಮಾಂಸ ಮುಟ್ಟುವಂತಿಲ್ಲ. ಕಠಿಣ ಬ್ರಹ್ಮಚರ್ಯ ಪಾಲಿಸಬೇಕು. ದುಶ್ಚಟಗಳಿಂದ ದೂರ ಇರಲೇಬೇಕು. ಕೆಟ್ಟದ್ದು ಮಾಡುವುದು ಬಿಡಿ, ಕೆಟ್ಟ ಆಲೋಚನೆಗಳನ್ನೂ ಮಾಡುವ ಹಾಗಿಲ್ಲ. ಅಷ್ಟು ಕಠಿಣ ವ್ರತ ಇದು.
ಚುನಾವಣೆಗೂ ಮುನ್ನ ಕಟ್ಟುನಿಟ್ಟಾಗಿ ಚಾತುರ್ಮಾಸ ಆಚರಣೆ ಮಾಡಿದ್ದ ಪವನ್ ಕಲ್ಯಾಣ್, ನಾಲ್ಕು ತಿಂಗಳ ಕಾಲ ಈ ದೀಕ್ಷೆಯನ್ನು ಅನೂಚವಾಗಿ ಆಚರಿಸಿದ್ದರು.ಸಾತ್ವಿಕ ಆಹಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದರು. ದೀಕ್ಷಾ ಸಮಯದಲ್ಲಿ ಹೋಮವನ್ನೂ ನೆರವೇರಿಸಲಾಯಿತು.
ಈ ಆಚರಣೆಯಲ್ಲಿ ವಾರಾಹಿಯನ್ನು ಪೂಜಿಸಿದರೆ ಮನಸಿನ ಇಷ್ಟಾರ್ಥಗಳನ್ನು ಪೂರೈಸುವ ವಾರಾಹಿ ಅಮ್ಮ ಅತ್ಯಂತ ಶುಭ ಫಲವನ್ನು ನೀಡುತ್ತಾಳೆ.ಅಮ್ಮನವರಿಗೆ ಜೂನ್ ಅಂತ್ಯದಿಂದ ಪ್ರಾರಂಭವಾಗಿ ಜುಲೈ 9 ರಂದು ಕೊನೆಗೊಳ್ಳುವಂತೆ ಗುಪ್ತ ನವರಾತ್ರಿಗಳನ್ನು ಕೈಗೊಳ್ಳಲಾಗುತ್ತದೆ. ನಾಲ್ಕು ನವರಾತ್ರಿಗಳಲ್ಲಿ ಈ ಮಾಸದ ಗುಪ್ತ ನವರಾತ್ರಿಗಳು ಅತ್ಯಂತ ವೈಭವಯುತ ಮತ್ತು ಶಕ್ತಿಯುತವಾಗಿವೆ. ಈ ನವರಾತ್ರಿಗಳಲ್ಲಿ ಯಾರು ಅತ್ಯಂತ ಶ್ರದ್ದಾ ಭಕ್ತಿಯಿಂದ ದೀಕ್ಷೆಯನ್ನು ಆಚರಿಸುತ್ತಾರೋ ಅವರ ಎಲ್ಲಾ ಸಮಸ್ಯೆಗಳು ದೇವಿಯ ಕೃಪೆಯಿಂದ ಪರಿಹಾರವಾಗುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ.
ಪವನ್ ಕಲ್ಯಾಣ್ ಅವರು ಈ ವ್ರತಾಚರಣೆ ಮಾಡುವ ಜೊತೆಗೆ ಈ ವ್ರತಕ್ಕೂ ಒಂದು ಸೆಲಬ್ರಿಟಿ ಸ್ಟೇಟಸ್ ಕೊಟ್ಟಿದ್ದಾರೆ. ಈ ವ್ರತಾಚರಣೆಯಿಂದ ಇದ್ದಬದ್ದ ದುಷ್ಟಶಕ್ತಿಗಳೆಲ್ಲ ನಾಶವಾಗಿ, ಮನಸ್ಸಿನಲ್ಲಿ ಕಲ್ಪಿಸಿಕೊಂಡಿದ್ದ ಒಳ್ಳೆಯ ಉದ್ದೇಶದ ಎಲ್ಲ ಕಾರ್ಯಗಳೂ ಕೈಗೂಡುತ್ತವಂತೆ.



