ರಾಜ್ಯದಲ್ಲೀಗ ಎಲ್ಲಿ ನೋಡಿದರೂ.. ಸಿಎಂ ಬದಲಾವಣೆಯದ್ದೇ ಚರ್ಚೆ. ಸಿಎಂ ಸಿದ್ಧರಾಮಯ್ಯ ದೆಹಲಿಯಲ್ಲಿ, ಮೈಸೂರು ದಸರಾದಲ್ಲಿ ಹೇಳಿದ ಹೇಳಿಕೆಗಳದ್ದೊಂದು ತೂಕವಾದರೆ.. ಯತೀಂದ್ರ ಸಿದ್ಧರಾಮಯ್ಯ ಹೇಳಿಕೆಗಳದ್ದೇ ಮತ್ತೊಂದು ತೂಕ. 5 ವರ್ಷ ಸಿದ್ಧರಾಮಯ್ಯ ಅವರೇ ಸಿಎಂ ಎಂದು ಘಂಟಾಘೋಷವಾಗಿ ಹೇಳಿಬಿಟ್ಟಿದ್ದಾರೆ ಯತೀಂದ್ರ. ಹೈಕಮಾಂಡ್ ಒಪ್ಪಿಗೆ ನಾನೇ 5 ವರ್ಷ ಸಿಎಂ ಎಂದು ಸಿದ್ಧರಾಮಯ್ಯ ಹೇಳ್ತಿದ್ದಾರೆ.
ʻಹೈಕಮಾಂಡ್ ಒಪ್ಪಿದರೆ..ʼ ಎಂಬ ಒಗ್ಗರಣೆ ಏಕೆ..?
ಸಿದ್ಧರಾಮಯ್ಯ ಆಗಲೀ.. ಡಿಕೆ ಆಗಲೀ.. ಎಲ್ಲರೂ ಹೇಳ್ತಿರೋ ಮಾತು ಒಂದೇ. ʻಹೈಕಮಾಂಡ್ ಒಪ್ಪಿದರೆ..ʼ ಎಂಬ ಮಾತು. ಆ ಮಾತಿನ ಅರ್ಥ ಇಷ್ಟೇ. ಎರಡೂವರೆ ವರ್ಷವೋ.. ಮೂರು ವರ್ಷವೋ ಗೊತ್ತಿಲ್ಲ. ಏನೋ ಒಂದು ಅಗ್ರಿಮೆಂಟ್ ಆಗಿದ. ಅದು ಏನು ಎಂದು ಸಿದ್ದು ಹೇಳ್ತಿಲ್ಲ. ಡಿಕೆನೂ ಹೇಳ್ತಿಲ್ಲ. ಅಷ್ಟೇ. ಆಸೆಯಂತೂ ಇದೆ.
ಸಿಎಂ ಕುರ್ಚಿಯನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡುವ ಬಯಕೆ ಸಿದ್ಧರಾಮಯ್ಯಗೆ ಇಲ್ಲ. ಶಾಸಕರ ಬಲ, ಬಂಡಾಯ ಎಂದು ಹೋದರೆ ಏನೂ ಆಗಲ್ಲ ಎಂದು ಗೊತ್ತಿರುವ ಡಿಕೆ, ಹೈಕಮಾಂಡ್ ಹೆಸರನ್ನು ಪದೇ ಪದೇ ಹೇಳ್ತಿದ್ದಾರೆ.
ಪರಮೇಶ್ವರ್ ಹೇಳಿದ್ದು : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಸಿದ್ದರಾಮಯ್ಯ ಅವರೇ 5 ವರ್ಷ ಮುಖ್ಯಮಂತ್ರಿ ಎಂದು ನಾವು ಆಯ್ಕೆ ಮಾಡಿದ್ದೆವು. ನಡುವೆ ಹೈಕಮಾಂಡ್ನವರು ಏನಾದರು ತೀರ್ಮಾನ ಮಾಡಿದ್ದರೆ ಅವರಿಗೆ ಬಿಟ್ಟದ್ದು, ಈ ಸಮಸ್ಯೆ ಬಗೆಹರಿಸುವಂತೆ ಸಂದರ್ಭ ಬಂದಾಗ ಹೈಕಮಾಂಡ್ಗೆ ಮನವಿ ಮಾಡುತ್ತೇನೆ. ಇದು ಪರಂ ಮಾತು. ‘ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ನಡುವೆ ತಲಾ 2.5 ವರ್ಷ ಅಧಿಕಾರದ ಹಂಚಿಕೆ ಆಗಿದೆ’ ಎಂಬ ಗಾಳಿ ಸುದ್ದಿಯ ನಡುವೆಯೇ ಪರಮೇಶ್ವರ್ ನೀಡಿದ ಈ ಹೇಳಿಕೆ ಕುತೂಹಲ ಮೂಡಿಸಿದೆ.
2023ರಲ್ಲಿ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಸಿಎಲ್ಪಿ ನಾಯಕರನ್ನು ಆಯ್ಕೆ ಮಾಡುವಾಗ ಸಿದ್ದರಾಮಯ್ಯ ಎರಡೂವರೆ ವರ್ಷ ಅವಧಿಗೆ ಮಾತ್ರ ಮುಖ್ಯಮಂತ್ರಿ ಎಂದು ಯಾರೂ ಹೇಳಿರಲಿಲ್ಲ. ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿ ಎಂದು ನಾವು ಆಯ್ಕೆ ಮಾಡಿದ್ದೇವೆ. ಮಧ್ಯದಲ್ಲಿ ಹೈಕಮಾಂಡ್ ಏನಾದರು ತೀರ್ಮಾನ ಮಾಡಿದ್ದರೆ ಅವರಿಗೆ ಬಿಟ್ಟದ್ದು. ಅದಕ್ಕೆ ನಾವು ಏನಾದರೂ ಹೇಳಲು ಅಗುತ್ತಾ? ದಿನನಿತ್ಯ ನಾವು ಹೇಳಿಕೆಗಳನ್ನು ಕೊಟ್ಟುಕೊಂಡು ಕೂರುವುದು ಸರಿಯಲ್ಲ ಎನ್ನುವುದು ಪರಮೇಶ್ವರ್ ಮಾತು.
2028ಕ್ಕೂ ರೆಡಿ : ಸಿದ್ಧರಾಮಯ್ಯ
ಸಿದ್ಧರಾಮಯ್ಯ ಅವರ ಆರೋಗ್ಯದ ಕಾರಣ ಹೇಳಿ ಸತೀಶ್ ಜಾರಕಿಹೊಳಿ ಹೆಸರನ್ನು ತೇಲಿಬಿಟ್ಟಿದ್ದವರು ಯತೀಂದ್ರ. ಈಗ ಸಿದ್ಧರಾಮಯ್ಯ ಅವರೇ.. ‘2028ರ ಚುನಾವಣೆಯಲ್ಲೂ ಸ್ಪರ್ಧಿಸುವಂತೆ ನನಗೆ ಒತ್ತಡವಿದೆ’ ಎಂದು ಹೇಳಿದ್ದಾರೆ. ಇದು ಹೊಸದೇನಲ್ಲ. ಈ ಹಿಂದೆ 2018ರಲ್ಲಿಯೂ ಸಿದ್ಧರಾಮಯ್ಯ ಇದೇ ರೀತಿ 2023ರ ವೇಳೆಗೆ ಸ್ಪರ್ಧೆಯನ್ನೇ ಮಾಡಲ್ಲ ಎಂದಿದ್ದರು. ಅದಾದ ಮೇಲೆ ಸ್ಪರ್ಧೆ ಮಾಡಿ, ಗೆದ್ದು 2023ರಲ್ಲಿ ಮತ್ತೆ ಸಿಎಂ ಆದರು. 2023ರಲ್ಲಿ ಇದೇ ನನ್ನ ಕೊನೆಯ ಚುನಾವಣೆ ಎಂದು ಘೋಷಿಸಿದ್ದ ಸಿದ್ಧರಾಮಯ್ಯ, ಈಗ ಮತ್ತೆ 2028ಕ್ಕೂ ಸ್ಪರ್ಧೆಯ ಸುಳಿವು ಕೊಡ್ತಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿರುವ ಸಚಿವ ಬೈರತಿ ಸುರೇಶ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ಚುನಾವಣೆಯಲ್ಲೂ ಸ್ಪರ್ಧಿಸುವುದು ಖಚಿತ. ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯದಾಗಬೇಕಾದರೆ ಸಿದ್ದರಾಮಯ್ಯ ಅವರ ಸ್ಪರ್ಧೆ ಆಗಲೇಬೇಕು. ಇದು ನಮ್ಮೆಲ್ಲರ ಹಕ್ಕೊತ್ತಾಯ ಎಂದು ಹೇಳಿದ್ದಾರೆ.



