ಕರ್ನಾಟಕದಲ್ಲಿ ಯಾರ್ ಯಾರದ್ದೋ ಸಿನಿಮಾಗಳು ಬಂದಿವೆ. ದೊಡ್ಡ ದೊಡ್ಡ ಸಾಧಕರ ಚಿತ್ರಗಳು ಬಂದಿವೆ. ಮಯೂರ, ಇಮ್ಮಡಿ ಪುಲಿಕೇಶಿ, ಶ್ರೀಕೃಷ್ಣದೇವರಾಯ, ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ.. ಹೀಗೆ ಹಲವು ವೀರರ ಚಿತ್ರಗಳು ಬಂದಿವೆ. ಸರ್ವಜ್ಞ, ಕನಕದಾಸ, ಪುರಂದರದಾಸ, ಬಸವಣ್ಣ.. ರಂತಹ ಮಹನೀಯರ ಜೀವನ ಚಿತ್ರಗಳನ್ನೂ ನೋಡಿದ್ದೇವೆ. ಆದರೆ.. ಅದೇಕೋ ಏನೋ.. ಕೆಂಪೇಗೌಡರ ಜೀವನ ಚರಿತ್ರೆ ಸಿನಿಮಾ ಆಗಿಲ್ಲ.
ಕೆಂಪೇಗೌಡರು ಚಕ್ರವರ್ತಿಯಾಗಿದ್ದವರೇನಲ್ಲ. ಆದರೆ.. ಕರ್ನಾಟಕ ಇರುವವರೆಗೆ ಕೆಂಪೇಗೌಡರನ್ನು ಮರೆಯುವ ಹಾಗಿಲ್ಲ. ಬೆಂಗಳೂರು ಎಂಬ ಈ ಅದ್ಭುತವನ್ನು ಕಟ್ಟಿದ್ದು ಕೆಂಪೇಗೌಡ. ಶಿವಗಂಗೆಯ ಭಕ್ತ. ಕೆರೆಗಳನ್ನು ಕಟ್ಟಿಸಿದ್ದು ಕೆಂಪೇಗೌಡರ ಸಾಧನೆ. ಆದರೆ.. ಅಂತಹ ಮಹಾನ್ ವ್ಯಕ್ತಿಯ ಬಗ್ಗೆ ಸಿನಿಮಾ ಮಾಡುವುದಕ್ಕೆ ಯಾರೋ ಹೊರಟರೆ.. ಅಡ್ಡಗಾಲು ಹಾಕುತ್ತಿದ್ದಾರೆ.
ಧರ್ಮಭೀರು ನಾಡಪ್ರಭು ಕೆಂಪೇಗೌಡ. ಕೆಲವೇ ದಿನಗಳ ಹಿಂದೆ ಘೋಷಣೆಯಾಗಿದ್ದ ಸಿನಿಮಾ. ಕಿರಣ್ ತೋಟಂಬೈಲ್ ಸಿನಿಮಾವನ್ನು ಘೋಷಿಸಿದ್ದರು. ನಿರ್ದೇಶಕರಾಗಿ ದಿನೇಶ್ ಬಾಬು ಆಯ್ಕೆಯಾಗಿದ್ದರು. ಈ ಸಿನಿಮಾಗೀಗ ನಿರ್ದೇಶಕ ನಾಗಾಭರಣ ಬ್ರೇಕ್ ಹಾಕಿದ್ಧಾರೆ. ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಧರ್ಮಭೀರು ನಾಡಪ್ರಭು ಕೆಂಪೇಗೌಡ ಸಿನಿಮಾಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.


ಏನಿದು ನಾಗಾಭರಣರ ಕೆಂಪೇಗೌಡರ ಸಿನಿಮಾ ಕಥೆ..?
ನಾಗಾಭರಣ ಅವರು ಕೆಂಪೇಗೌಡರ ಸಿನಿಮಾ ಘೋಷಿಸಿ 12 ವರ್ಷಗಳಾಗಿವೆ. ಕೆಂಪೇಗೌಡರ ಪಾತ್ರಕ್ಕೆ ಡಾಲಿ ಧನಂಜಯ ಅವರ ಆಯ್ಕೆ ಇತ್ತೀಚೆಗೆ ಆಗಿದೆ. ಆದರೆ.. 12 ವರ್ಷಗಳಿಂದ ಟೈಟಲ್ ನವೀಕರಣವಾಗುತ್ತಿದೆಯೇ ಹೊರತು, ಬೇರೆ ಬೆಳವಣಿಗೆಗಳಾಗಿಲ್ಲ. ಸದ್ಯಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿದ್ದರೂ, ಇದು ಶಾಶ್ವತ ಎಂದು ಹೇಳುವುದಕ್ಕೆ ಬರುವುದಿಲ್ಲ.
ಐತಿಹಾಸಿಕ, ಪೌರಾಣಿಕ ಚಿತ್ರಗಳ ಕಾಪಿರೈಟ್ ಯಾವ ಸ್ವತ್ತೂ ಅಲ್ಲ..!
ಇದು ಈ ಹಿಂದೆ ಹಲವು ಬಾರಿ ಸಾಬೀತಾಗಿರುವ ವಿಷಯ. ಐತಿಹಾಸಿಕ ಹಾಗೂ ಪೌರಾಣಿಕ ಕಥೆಗಳು ಯಾರ ಸ್ವತ್ತೂ ಅಲ್ಲ. ರಾಮಾಯಣ, ಮಹಾಭಾರತದ ಕಥೆಗಳು ನೂರಾರು ಸಿನಿಮಾಗಳಾಗಿ ಬಂದಿವೆ. ಇನ್ನು ಇತಿಹಾಸದ ವಿಷಯಕ್ಕೆ ಬಂದರೆ.. ಕನ್ನಡದಲ್ಲಿಯೇ
ಕವಿರತ್ನ ಕಾಳಿದಾಸ (ಡಾ.ರಾಜ್) ಮಹಾಕವಿ ಕಾಳಿದಾಸ (ಹೊನ್ನಪ್ಪ ಭಾಗವತರ್)
ಬಸವಣ್ಣನವ ಕುರಿತಂತೆ.. ಜಗಜ್ಯೋತಿ ಬಸವೇಶ್ವರ (ಹೊನ್ನಪ್ಪ ಭಾಗವತರ್) ಹಾಗೂ ಕ್ರಾಂತಿಯೋಗಿ ಬಸವಣ್ಣ (ಅಶೋಕ್) ಸೇರಿದಂತೆ ಹಲವು ಚಿತ್ರಗಳು ಬಂದಿವೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕೂಡ ಎರಡು ಬಾರಿ ಸಿನಿಮಾ ಆಗಿದೆ. ಸಿಂಧೂರ ಲಕ್ಷ್ಮಣ ಚಿತ್ರವೂ ಅಷ್ಟೆ, 2ನೇ ಬಾರಿ ಸಿನಿಮಾ ಆಗುತ್ತಿದೆ.
ಇನ್ನು ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲೂ ಈ ರೀತಿಯ ಒಬ್ಬರೇ ವ್ಯಕ್ತಿ, ಜೀವನ ಚರಿತ್ರೆಗಳ ಕುರಿತಂತೆ ಹಲವು ಸಿನಿಮಾಗಳು ಬಂದಿವೆ. ಭಗತ್ ಸಿಂಗ್ ಜೀವನದ ಸಿನಿಮಾದಲ್ಲಂತೂ ಒಂದೇ ವಾರದಲ್ಲಿ ಎರಡು ಮೂರು ಸಿನಿಮಾಗಳು ರಿಲೀಸ್ ಆದ ದಾಖಲೆ ಇದೆ. ಗಾಂಧೀಜಿ, ಅಂಬೇಡ್ಕರ್, ಶಿವಾಜಿ, ಸುಭಾಷ್ ಚಂದ್ರ ಭೋಸ್.. ಸೇರಿದಂತೆ ಹಲವು ಐತಿಹಾಸಿಕ ವ್ಯಕ್ತಿಗಳ ಬಗ್ಗೆ ಹಲವು ಚಿತ್ರಗಳು ಬಂದಿವೆ. ಕಾಪಿರೈಟ್ ಹಕ್ಕು ಅಲ್ಲಿ ಕೆಲಸ ಮಾಡಿಲ್ಲ.
ಒಟ್ಟಿನಲ್ಲಿ ನಾಗಾಭರಣ ಅವರೇನೋ ತಡೆ ತಂದಿದ್ದಾರೆ. ಆದರೆ.. ಇತಿಹಾಸದಲ್ಲಿದ್ದ ವ್ಯಕ್ತಿಯ ಜೀವನ ಸಿನಿಮಾ ಆಗುವ ನಿರ್ಧಾರಕ್ಕೆ ಹಕ್ಕು ಸ್ವಾಮ್ಯ ಉಲ್ಲಂಘನೆ ಪ್ರಸ್ತುತವಾಗುತ್ತದೆಯೇ.. ಇಲ್ಲವೇ.. ಎಂಬುದನ್ನು ಕೋರ್ಟು ನಿರ್ಧಾರ ಮಾಡಲಿದೆ.
ಕಾನೂನು ತೊಡಕು ಆಗುವುದಿಲ್ಲ : ಕಿರಣ್ ತೋಟಂಬೈಲ್
ನಮಗೆ ಕೋರ್ಟ್ ಕಾನೂನು ತೊಡಕು ಆಗುವುದಿಲ್ಲ. ಏಕೆಂದರೆ ನಾವು ಮಾಡ್ತಿರೋದು ಸ್ಟ್ರೈಟ್ ಇಂಗ್ಲಿಷ್ ಸಿನಿಮಾ. ಕನ್ನಡದದಲ್ಲೂ ತಯಾರಾಗಲಿದೆ. ನಾವು ಮಾಡುತ್ತಿರುವುದು ಇಂಗ್ಲೀಷ್ ಸಿನಿಮಾ. ಇದು ಬ್ರಿಟೀಷ್ ಕೌನ್ಸಿಲ್, ಐಎಂಡಿಬಿ ಎಲ್ಲರದಲ್ಲೂ ನಮ್ಮ ಸಿನಿಮಾ ರಿಜಿಸ್ಟರ್ ಆಗಿದೆ. ಇಂಗ್ಲೀಷ್ ಸಿನಿಮಾ ಆಗಿರುವುದರಿಂದ ಇಲ್ಲಿನ ಕಾನೂನು ಅದಕ್ಕೆ ತೊಡಕಾಗುವುದಿಲ್ಲ ಎನ್ನುವ ಕಿರಣ್ ತೋಟಂಬೈಲ್ ಜೂನ್ 27ರಂದು ಕೆಂಪೇಗೌಡರ ಜಯಂತಿ ದಿನವೇ ಸಿನಿಮಾ ಸೆಟ್ಟೇರಲಿದೆ ಎಂದು ಹೇಳಿದ್ದಾರೆ ನಿರ್ಮಾಪಕ ಕಿರಣ್ ತೋಟಂಬೈಲ್. 100 ಕೋಟಿ ಬಜೆಟ್ಟಿನಲ್ಲಿ ಸಿನಿಮಾ ಸಿದ್ಧವಾಗುತ್ತಿದ್ದು, ಹೀರೋ ಯಾರು ಎನ್ನುವುದನ್ನ ಜೂನ್ 27ರಂದೇ ಹೇಳಲಿದ್ಧಾರಂತೆ. ನಮ್ಮ ಹೀರೋ ಹೈಟ್ ಇದ್ಧಾರೆ. ಪಾತ್ರಕ್ಕೆ ಸರಿಯಾಗಿ ಸೂಟ್ ಆಗಬಲ್ಲ ಕಲಾವಿದ ಎನ್ನುವ ಕಿರಣ್ ತೋಟಂಬೈಲ್ ನಾಗಾಭರಣ ಅವರ ಕೋರ್ಟ್ ಅರ್ಜಿಯನ್ನು ನಮ್ಮ ಲೀಗಲ್ ಟೀಂ ನೋಡಿಕೊಳ್ಳಲಿದೆ ಎಂದಿದ್ದಾರೆ.



