ಇದು ಚನ್ನಪಟ್ಟಣ ರಣರಂಗ. ಇಲ್ಲಿ ಇಬ್ಬರು ಅಭ್ಯರ್ಥಿಗಳಿದ್ದಾರೆ. ಇಬ್ಬರದ್ದೂ ಸೋಲಿನ ಸರಪಳಿ ಕಳಚಬೇಕಿದೆ. ಯಾರು ಸೋತರೂ ಹ್ಯಾಟ್ರಿಕ್ ಸೋಲು. ಗೆದ್ದವರಿಗೆ ಸೋಲಿನ ಸರಪಳಿ ಕಳಚುತ್ತೆ. ಅಷ್ಟೆ. ಆದರೆ ನಿಖಿಲ್ ಕುಮಾರಸ್ವಾಮಿ ಮತ್ತು ಸಿಪಿ ಯೋಗೇಶ್ವರ್ ವಿಷಯದಲ್ಲಿ ಎದ್ದು ಕಾಣುತ್ತಿರುವುದು ಕುಟುಂಬಗಳು.
ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ತಂದೆ ಕುಮಾರಸ್ವಾಮಿ, ತಾಯಿ ಅನಿತಾ, ತಾತ ಮಾಜಿ ಪ್ರಧಾನಿ ದೇವೇಗೌಡರ ಜೊತೆಗೆ ಈ ಬಾರಿ ಪತ್ನಿ ರೇವತಿ ಅವರೂ ಪ್ರಚಾರ ಮಾಡುತ್ತಿದ್ದಾರೆ. ಅಂದರೆ ನಿಖಿಲ್ ಅವರ ಕುಟುಂಬದಲ್ಲಿ ಒಗ್ಗಟ್ಟು ಕಾಣಿಸುತ್ತಿದೆ. ದೊಡ್ಡಪ್ಪ ರೇವಣ್ಣ, ದೊಡ್ಡಪ್ಪ ಭವಾನಿ, ಅಣ್ಣಂದಿರಾದ ಪ್ರಜ್ವಲ್ (ಜೈಲಿನಲ್ಲಿದ್ದಾರೆ), ಸೂರಜ್ ಬರುತ್ತಿಲ್ಲ. ಆದರೆ ಅದು ಅಷ್ಟೇನೂ ವ್ಯತ್ಯಾಸ ಮಾಡುವುದಿಲ್ಲ. ಏಕೆಂದರೆ ಈ ಹಿಂದೆಯೂ ನಿಖಿಲ್ ಪರ ಅವರು ಪ್ರಚಾರ ಮಾಡಿರಲಿಲ್ಲ ಎನ್ನುತ್ತಾರೆ ಜೆಡಿಎಸ್ ಕಾರ್ಯಕರ್ತರು.
ಆದರೆ ಸಿಪಿ ಯೋಗೇಶ್ವರ್ ಅವರ ಪರಿಸ್ಥಿತಿ ಹಾಗಲ್ಲ. ಸಿಪಿ ಯೋಗೇಶ್ವರ್ ಅವರ ಪರವಾಗಿ ಈ ಹಿಂದಿನ ಚುನಾವಣೆಗಳಲ್ಲಿ ಅವರ ಇಬ್ಬರು ಪತ್ನಿಯರೂ, ಮೂವರು ಮಕ್ಕಳೂ ಪ್ರಚಾರ ಮಾಡಿದ್ದರು. ಆದರೆ ಈ ಬಾರಿ ಮಗಳು ನಿಶಾ ಯೋಗೇಶ್ವರ್ ಅವರು ತಂದೆಯ ವಿರುದ್ಧವೇ ಸಿಡಿದೆದ್ದದ್ದಾರೆ. ಯಾವ ಹಂತಕ್ಕೆ ಹೋಗಿದೆ ಎಂದರೆ, ಸಿಪಿ ಯೋಗೇಶ್ವರ್ ಅವರು ಮಗಳ ವಿರುದ್ಧ ಯಾವುದೇ ಅಪಪ್ರಚಾರ ಮಾಡದಂತೆ ಕೋರ್ಟಿಗೆ ಹೋಗಿ ತಡೆಯಾಜ್ಞೆ ತಂದಿದ್ದಾರೆ.
ಹೇಗೆ ನಡೆಯುತ್ತಿದೆ ರೇವತಿ ನಿಖಿಲ್ ಪ್ರಚಾರ..!
2019 ರಲ್ಲಿ ನಡೆದ ಲೋಕಸಭಾ ಚುನಾವಣೆ ವೇಳೆಯಲ್ಲಿ ನಿಖಿಲ್ ಕುಮಾರಸ್ವಾಮಿ ಇನ್ನೂ ಮದುವೆಯಾಗಿರಲಿಲ್ಲ. 2023 ರಲ್ಲಿ ನಡೆದ ವಿಧಾನಸಭೆ ಚುನಾವಣೆ ಹೊತ್ತಿಗೆ ಅವರು ರೇವತಿ ಅವರನ್ನು ವಿವಾಹವಾಗಿದ್ದರು. ಆದರೆ, ಆ ಚುನಾವಣೆ ಸಂದರ್ಭದಲ್ಲಿ ಪತಿ ಜೊತೆ ಯಾವುದೇ ಚುನಾವಣಾ ಪ್ರಚಾರದಲ್ಲಿ ರೇವತಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಆದರೆ, ಈ ಬಾರಿಯ ಉಪಚುನಾವಣೆ ಪ್ರಚಾರದಲ್ಲಿ ಮೊದಲ ಬಾರಿಗೆ ಪತಿ ನಿಖಿಲ್ ಅವರಿಗೆ ಪತ್ನಿ ರೇವತಿ ಸಾಥ್ ನೀಡುತ್ತಿದ್ದಾರೆ. ಚನ್ನಪಟ್ಟಣದ ಬಸ್ ನಿಲ್ದಾಣ ಹಾಗೂ ಪದವಿ ಕಾಲೇಜಿನ ಸಮೀಪ ನಿಖಿಲ್ ಪರವಾಗಿ ರೇವತಿ ಮತಯಾಚನೆ ಮಾಡಿದ್ದಾರೆ. ಯಾಣಿಕರು, ವಿದ್ಯಾರ್ಥಿಗಳು, ಪಟ್ಟಣದ ಸಾರ್ವಜನಿಕರನ್ನು ಭೇಟಿಯಾದ ರೇವತಿ ಕರಪತ್ರಗಳನ್ನು ನೀಡಿ ಎನ್ಡಿಎ ಅಭ್ಯರ್ಥಿಗೆ ಮತ ಹಾಕುವಂತೆ ಮನವಿ ಮಾಡಿದ್ದಾರೆ. ರೇವತಿ, ಯುವ ಮತದಾರರನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಈ ವೇಳೆ ವಿದ್ಯಾರ್ಥಿಗಳ ಕುಶಲೋಪರಿ ವಿಚಾರಿಸಿದ ರೇವತಿ ಜೊತೆಗೆ ವಿದ್ಯಾರ್ಥಿಗಳು ಸೆಲ್ಫಿ ತೆಗೆದುಕೊಂಡು ಸಂತಸಪಟ್ಟಿದ್ದಾರೆ.
ಆದರೆ ಯೋಗೇಶ್ವರ್ ಪರಿಸ್ಥಿತಿ ಹಾಗಿಲ್ಲ. ಯೋಗೇಶ್ವರ್ ಅವರ ಪರವಾಗಿ ಹೋರಾಟ ನಡೆಸುತ್ತಿರುವು ಕಾಂಗ್ರೆಸ್ ನಾಯಕರು ಮಾತ್ರ. ಉಳಿದಂತೆ ಯೋಗೇಶ್ವರ್ ಅವರ ಕುಟುಂಬ ದೂರವೇ ಇದೆ. ಆದರೆ ನಿಶಾ ಮೊದಲ ಪತ್ನಿಯ ಮಗಳು. ಎರಡನೇ ಪತ್ನಿ ಶೀಲಾ ಯೋಗೇಶ್ವರ್ ಜೊತೆ ನಿಂತಿದ್ದಾರೆ. ನಿಶಾ ಅವರ ವಿಡಿಯೋ ಯೋಗೇಶ್ವರ್ ಅವರ ಮೇಲೆ ನೆಗೆಟಿವ್ ಎಫೆಕ್ಟ್ ಮಾಡುತ್ತೆ ಎನ್ನುವುದು ಗೊತ್ತಾಗುತ್ತಿದ್ದಂತೆಯೇ 2ನೇ ಹೆಂಡತಿ ಪಿ.ವಿ. ಶೀಲಾ ಹೈಕೋರ್ಟ್ ಮೆಟ್ಟಿಲೇರಿದ್ದು, ಗಂಡ ಯೋಗೇಶ್ವರ್ ವಿರುದ್ಧ ಅವರ ಮೊದಲ ಪತ್ನಿಯ ಮಗಳು ಯಾವುದೇ ಹೇಳಿಕೆ ನೀಡದಂತೆ ತಡೆಯಾಜ್ಞೆ ತಂದಿದ್ದಾರೆ.
ನನ್ನ ಪತಿ ಸಿ.ಪಿ.ಯೋಗೇಶ್ವರ್ ಚುನಾವಣೆಗೆ ಸ್ಪರ್ಧಿಸಿರುವ ಬೆನ್ನಲ್ಲೇ ನಮ್ಮ ಮಲಮಗಳಾದ ನಿಶಾ ಯೋಗೇಶ್ವರ್ ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಕುಟುಂಬದ ವಿರುದ್ಧ ಅವಹೇಳನಕಾರಿ, ಮಾನಹಾನಿಕಾರಕ, ಆಧಾರರಹಿತ ಮತ್ತು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಸಂಬಂಧ ಬೆಂಗಳೂರಿನ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕೋರ್ಟ್ ಗಮನಕ್ಕೆ ತಂದು, ತಡೆಯಾಜ್ಞೆ ತಂದಿದ್ದಾರೆ.



