ಜೆಡಿಎಸ್ ಪಕ್ಷದ ಮುಂದಿನ ರಾಜ್ಯ ನಾಯಕ ಯಾರು ಎಂಬ ಪ್ರಶ್ನೆಗೆ ನಿಖಿಲ್ ಕುಮಾರಸ್ವಾಮಿ ತಾವೇ ಎಂಬಂತೆ ಉತ್ತರ ಕೊಟ್ಟಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಜೆಡಿಎಸ್ ಸಂಕಷ್ಟದಲ್ಲಿದೆ. ಗೆದ್ದಿದ್ದ 19 ಶಾಸಕರ ಪೈಕಿ, ಕುಮಾರಸ್ವಾಮಿ ದೆಹಲಿಗೆ ಹೋಗಿ ಮಂತ್ರಿಯಾಗಿದ್ದಾರೆ. ಶಾಸಕರ ಬಲ 18ಕ್ಕೆ ಇಳಿದಿದೆ. ಚನ್ನಪಟ್ಟಣವನ್ನು ಮತ್ತೆ ಗೆದ್ದರೆ ಆಗ 19 ಆಗಲಿದೆ. ಜೆಡಿಎಸ್ ಪಕ್ಷದ ಶಾಸಕಾಂಗ ಪಕ್ಷದ ನಾಯಕರ ಆಯ್ಕೆ ಆಗಬೇಕಿದೆ. ಸದ್ಯಕ್ಕೇನೋ ಆ ಸ್ಥಾನಕ್ಕೆ ಜಿಟಿ ದೇವೇಗೌಡರ ಹೆಸರು ಕೇಳಿ ಬರುತ್ತಿದೆ. ಅದಿನ್ನೂ ಅಧಿಕೃತವಾಗಿಲ್ಲ. ಈ ನಡುವೆ ರಾಜ್ಯಾದ್ಯಂತ ಪಕ್ಷ ಸಂಘಟನೆ ಜವಾಬ್ದಾರಿ ಹೊರಲು ಸಿದ್ಧ ಎಂದು ಘೋಷಿಸಿದ್ದಾರೆ ನಿಖಿಲ್ ಕುಮಾರಸ್ವಾಮಿ.
ಜೆಡಿಎಸ್ ಸಂಘಟನೆ ಮಾಡುವ ಜವಾಬ್ದಾರಿ ನನ್ನ ಹೆಗಲಿಗೆ ಬಂದಿದೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡುವುದಾಗಿ ಹೇಳಿದ್ದಾರೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರೂ ಆಗಿರುವ ನಿಖಿಲ್ ಕುಮಾರಸ್ವಾಮಿ.
ಜೆಡಿಎಸ್ ಹೇಳಿಕೇಳಿ ಪ್ರಾದೇಶಿಕ ಪಕ್ಷ. ಅದರಲ್ಲೂ ಮೈಸೂರು ಭಾಗದಲ್ಲಿ ಬಿಟ್ಟರೆ, ಕರ್ನಾಟಕದ ಇತರೆ ಕಡೆಗಳಲ್ಲಿ ಹುಡುಕುವ ಪರಿಸ್ಥಿತಿ ಇದೆ. ಒಪ್ಪುತ್ತೀರೋ.. ಬಿಡುತ್ತೀರೋ.. ದೇವೇಗೌಡರ ಕುಟುಂಬದವರನ್ನು ಬಿಟ್ಟರೆ, ಉಳಿದವರನ್ನು ಒಪ್ಪಿಕೊಳ್ಳೋ ಸ್ಥಿತಿಯಲ್ಲಿ ಕಾರ್ಯಕರ್ತರೂ ಇಲ್ಲ. ಅಲ್ಲದೆ ಭವಿಷ್ಯದ ನಾಯಕರಾಗಬಹುದು ಎಂದುಕೊಂಡಿದ್ದ ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ ಇಬ್ಬರೂ ಈಗ ಕಂಬಿಯ ಹಿಂದಿದ್ದಾರೆ.
ಪ್ರಜ್ವಲ್ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ಕೊಟ್ಟ ಆರೋಪ ಹೊತ್ತಿದ್ದರೆ, ಸೂರಜ್ ಗಂಡಸರಿಗೆ ಕಿರುಕುಳ ಕೊಟ್ಟ ಆರೋಪ ಹೊತ್ತಿದ್ದಾರೆ. ಹೆಚ್.ಡಿ.ರೇವಣ್ಣ ಅವರೂ ಜೈಲಿಗೆ ಹೋಗಿ ಬಂದಿದ್ದಾರೆ. ಭವಾನಿ ರೇವಣ್ಣ ಜೈಲಿನ ಬಾಗಿಲಿಗೆ ಹೋಗಿ ನಿಂತು ಬಚಾವ್ ಆಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಿಖಿಲ್ ಬಿಟ್ಟರೆ ಉಳಿದವರು ಕಾಣುತ್ತಿಲ್ಲ.
ತಂದೆ ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವರಾದ ನಂತರ ದೇಶಾದ್ಯಂತ ಕೆಲಸ ಮಾಡಬೇಕಾದ ಜವಾಬ್ದಾರಿ ಹೆಚ್ಚಾಗಿದೆ. ಹೀಗಾಗಿ ಪಕ್ಕ ಸಂಘಟಿಸಲು ಅವರಿಗೆ ಸಮಯಾವಕಾಶ ಸಿಗುವುದು ಕಷ್ಟವಾಗಿದೆ ಎಂದರು. ಈಗ ಜೆಡಿಎಸ್ ಪಕ್ಷದ ಸಂಘಟನೆ ನನ್ನ ಹೆಗಲಿಗೆ ಬಂದಿದೆ. ಅದನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ವಿಶೇಷವಾಗಿ ಮಂಡ್ಯ, ಹಾಸನ ಸೇರಿದಂತೆ ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತೇನೆ. ಈ ಸಂಬಂಧ ನಾನು ಈಗಾಗಲೇ ಪಟ್ಟಿ ಸಿದ್ಧಪಡಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ ನಿಖಿಲ್.
ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಅಳಿವು ಉಳಿವಿನ ಬಗ್ಗೆ ಕಾಂಗ್ರೆಸ್ ನಾಯಕರು ಲಘುವಾಗಿ ಮಾತನಾಡಿದ್ದರು. ಜಿಲ್ಲೆಯ ಜನರು ಹಾಗೂ ಮದ್ದೂರು ಕ್ಷೇತ್ರದ ಮತದಾರರು ಚುನಾವಣೆಯಲ್ಲಿ ಕುಮಾರಸ್ವಾಮಿ ಅವರಿಗೆ ಅತಿ ಹೆಚ್ಚು ಮತ ನೀಡಿ ಬೆಂಬಲಿಸುವ ಮೂಲಕ ಕಾಂಗ್ರೆಸ್ ನಾಯಕರ ಟೀಕೆ ಟಿಪ್ಪಣಿಗಳಿಗೆ ತಕ್ಕ ಉತ್ತರ ನೀಡುವುದರೊಂದಿಗೆ ಜೆಡಿಎಸ್ ಪಕ್ಷಕ್ಕೆ ಮತ್ತಷ್ಟು ಬಲ ನೀಡಿದ್ದಾರೆ. ಇದಕ್ಕೆ ದೇವೇಗೌಡರ ಇಡೀ ಕುಟುಂಬ ಚಿರಋಣಿಯಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಸಂಘಟನೆಯಲ್ಲಿ ಇನ್ನೂ ಮೊದಲ ಹೆಜ್ಜೆಯನ್ನೂ ಇಟ್ಟಿಲ್ಲ. ಸವಾಲು ದೊಡ್ಡದಿದೆ. ಹಾಗೆ ನೋಡಿದರೆ ಜೆಡಿಎಸ್ ಪಕ್ಷ ಸಂಘಟನೆ, ದೇವೇಗೌಡರು ಆಕ್ಟಿವ್ ಆಗಿದ್ದ ದಿನಗಳಲ್ಲಿ ಏರುಗತಿಯಲ್ಲಿತ್ತು. ದೇವೇಗೌಡರು ವಯೋಸಹಜ ಸಮಸ್ಯೆಗೆ ಗುರಿಯಾಗುತ್ತಿದ್ದಂತೆ, ಅವರ ಓಡಾಟವೂ ಕಡಿಮೆಯಾಯ್ತು. ದೇವೇಗೌಡರಿಗೆ ಹೋಲಿಸಿದರೆ ಕುಮಾರಸ್ವಾಮಿಯವರೂ ಕೂಡಾ ಸಂಘಟನೆ ವಿಷಯದಲ್ಲಿ ದೊಡ್ಡ ಯಶಸ್ಸು ಗಳಿಸಿಲ್ಲ. ಅದನ್ನು ಮೀರುವ ದೊಡ್ಡ ಗುರಿ ನಿಖಿಲ್ ಅವರ ಮೇಲಿದೆ. ಆದರೆ..



