ನಿಖಿಲ್ ಕುಮಾರಸ್ವಾಮಿ, ಈಗ ರಾಜ್ಯಾದ್ಯಂತ ಜೆಡಿಎಸ್ ಸದಸ್ಯತ್ವ ಅಭಿಯಾನ ನಡೆಸುತ್ತಿದ್ಧಾರೆ. ಆ ಹಾದಿಯಲ್ಲಿ ನಿಖಿಲ್, ಈಗ ಯಡಿಯೂರಪ್ಪ ಊರಿಗೂ ಬಂದಿದ್ದಾರೆ. ಅಂದರೆ.. ಶಿವಮೊಗ್ಗಕ್ಕೆ. ಶಿವಮೊಗ್ಗ, ರಾಜ್ಯ ಬಿಜೆಪಿಯ ಹಾರ್ಟು ಎಂದರೆ ತಪ್ಪಾಗಲ್ಲ. ಅದು ರಾಜ್ಯ ಬಿಜೆಪಿಯ ಬಿಗ್ ಬಾಸ್ ತವರು. ಯಡಿಯೂರಪ್ಪ, ವಿಜಯೇಂದ್ರ, ರಾಘವೇಂದ್ರ ಅವರ ಕರ್ಮಭೂಮಿ. ಅಲ್ಲಿ ನಿಂತು ಮಾತನಾಡಿರುವ ನಿಖಿಲ್ ಕುಮಾರಸ್ವಾಮಿ ಟಾಂಟ್ ಕೊಟ್ಟಿರೋದು ಸಿಎಂ ಸಿದ್ಧರಾಮಯ್ಯ ಅವರಿಗೆ.. ಅಷ್ಟೇ ಅಲ್ಲ.. ಅವರ ಇನ್ನೊಂದು ಮಾತು.. ನೇರವಾಗಿ ವಿಜಯೇಂದ್ರ ಅವರಿಗೂ ಟಚ್ ಆಗಿದೆ. ಏಕೆಂದರೆ.. ಅದು ಕೇವಲ ಹೇಳಿಕೆ ಅಲ್ಲ.. ಪ್ರತಿಜ್ಞೆ. ಕುಮಾರಸ್ವಾಮಿಯನ್ನು ಮತ್ತೆ ಸಿಎಂ ಮಾಡುವ ಪ್ರತಿಜ್ಞೆ.
ಸಿದ್ಧರಾಮಯ್ಯ ಪದೇ ಪದೇ ಹೇಳುವ ಮಾತು.. ಜೆಡಿಎಸ್ ಅತೀ ಹೆಚ್ಚು ಸ್ಥಾನ ಗೆದ್ದಿದ್ದು ತಾವು ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದಾಗ. ನಾನು ಜೆಡಿಎಸ್ ಬಿಟ್ಟ ಮೇಲೆ ಅದು ಹೀನಾಯ ಪರಿಸ್ಥಿತಿಗೆ ತಲುಪಿದೆ ಎನ್ನುವ ಮಾತು. 58 ಸ್ಥಾನಗಳನ್ನು ಪಡೆದಿದ್ದ ಜೆಡಿಎಸ್, ನಂತರದ ಚುನಾವಣೆಗಳಲ್ಲಿ ಕುಸಿತ ಕಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಲೇ ಇರುತ್ತಾರೆ. ಅದಕ್ಕೆ ನಿಖಿಲ್ ಉತ್ತರ ಕೊಟ್ಟಿದ್ದಾರೆ.
ಮೈಸೂರಿನಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಹೀಗಾಗಿ, 2028ರ ಸಾರ್ವತ್ರಿಕ ಚುನಾವಣೆಯಲ್ಲಿ ಅತಿ ಹೆಚ್ಚು ಜೆಡಿಎಸ್ ಶಾಸಕರನ್ನು ಗೆಲ್ಲಿಸುವ ಮೂಲಕ ಸಿದ್ದರಾಮಯ್ಯನವರಿಗೆ ಉತ್ತರ ನೀಡಬೇಕಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಎಂದು ಹೇಳಿದ್ದಾರೆ.
ಶಿವಮೊಗ್ಗದ ದೈವಜ್ಞ ಕಲ್ಯಾಣ ಮಂದಿರದಲ್ಲಿ ಜೆಡಿಎಸ್ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಿಖಿಲ್, ʻʻಹೆಚ್.ಡಿ.ಕುಮಾರಸ್ವಾಮಿಯವರು ಕೇಂದ್ರಕ್ಕೆ ಹೋಗಬೇಕೆಂಬುದು ಅವರ ಮನಸ್ಸಿನಲ್ಲಿ ಇರಲಿಲ್ಲ, ಕಾರ್ಯಕರ್ತರ ಮನಸ್ಸಿನಲ್ಲೂ ಇರಲಿಲ್ಲ. ವಿಧಾನಸಭಾ ಕಲಾಪದಲ್ಲಿ ಕುಮಾರಸ್ವಾಮಿಯವರು ಇದ್ದಿದ್ದರೆ ಯಾವ ರೀತಿ ತೊಡೆ ತಟ್ಟಿ ಮಾತನಾಡುತ್ತಿದ್ದರು ಎಂಬುದನ್ನು ನೋಡಿದ್ದೇವೆ. ಸದನದಲ್ಲಿ ಬಹಳಷ್ಟು ಜನ ಕುಮಾರಣ್ಣರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಮುಂದೆ ಕುಮಾರಸ್ವಾಮಿ ಅವರನ್ನು ರಾಜ್ಯದ ಮುಖ್ಯಮಂತ್ರಿ ಮಾಡಬೇಕಿದೆ ಎಂದರು.
ಇದೆಲ್ಲವೂ ನಡೆದಿರುವುದು ಶಿವಮೊಗ್ಗದಲ್ಲಿ ಎನ್ನುವುದು ಗಮನಾರ್ಹ. ಕುಮಾರಸ್ವಾಮಿ ಅವರನ್ನು ಮತ್ತೆ ಸಿಎಂ ಮಾಡುವ ಗುರಿ ಇಟ್ಟುಕೊಳ್ಳುವುದು ಜೆಡಿಎಸ್ ಪಕ್ಷಕ್ಕೆ ತಪ್ಪೇನಲ್ಲ. ಅದರೆ.. ರಾಜ್ಯದಲ್ಲಿ ಜೆಡಿಎಸ್, ಬಿಜೆಪಿ ಜೊತೆ ಮೈತ್ರಿಯಲ್ಲಿದೆ. ಏನೇ ಲೆಕ್ಕಾಚಾರ ಹಾಕಿದರೂ.. ಜೆಡಿಎಸ್, ಬಿಜೆಪಿಯೊಂದಿಗೆ 2ನೇ ಪಕ್ಷವೇ ಹೊರತು, ದೊಡ್ಡಣ್ಣನಾಗಲು ಸಾಧ್ಯವಿಲ್ಲ. ಹೀಗಿರುವಾಗ.. ಹಾಲಿ ಬಿಜೆಪಿ ಅಧ್ಯಕ್ಷರ ತವರು ಭೂಮಿಯಲ್ಲಿ ನಿಂತು.. ಇಂಥಾದ್ದೊಂದು ಮಾತು ಹೇಳಿರುವುದು ಹಲವು ಪ್ರಶ್ನೆ ಹುಟ್ಟುಹಾಕಿರುವುದು ಸುಳ್ಳಲ್ಲ.
ಅಂದಹಾಗೆ ದೆಹಲಿ ಮಟ್ಟದಲ್ಲಿ ವಿಜಯೇಂದ್ರ ಅವರ ಬದಲಿಗೆ ಬೇರೊಬ್ಬರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡುವ ಪ್ರಕ್ರಿಯೆಗೆ ಕುಮಾರಸ್ವಾಮಿ ಒಳಗೊಳಗೇ ಬೆಂಬಲ ನೀಡುತ್ತಿದ್ದಾರೆ. ವಿ ಸೋಮಣ್ಣ ಅವರ ಹೆಸರು ತೇಲಿ ಬರುತ್ತಿರುವುದಕ್ಕೆ ಕಾರಣವೇ ಕುಮಾರಸ್ವಾಮಿ ಎಂಬ ಮಾತುಗಳೂ ದೆಹಲಿ ಮಟ್ಟದಲ್ಲಿ ಜೋರಾಗಿವೆ. ಆರಂಭದಲ್ಲಿ ಅಧ್ಯಕ್ಷ ಪಟ್ಟಕ್ಕೆ ಒಲ್ಲೆ ಎನ್ನುತ್ತಿದ್ದ ಸೋಮಣ್ಣ ಅವರ ಮಾತು, ಈಗ ಮೊದಲಿನಂತೆ ಗಟ್ಟಿಯಾಗಿಲ್ಲ. ಅದಕ್ಕೂ ಕೂಡಾ ಕಾರಣ ಕುಮಾರಸ್ವಾಮಿ ಎನ್ನಲಾಗುತ್ತಿದೆ. ಜೊತೆಗೆ ಯಡಿಯೂರಪ್ಪ ಊರಿನಲ್ಲಿ ನಿಂತೇ.. ಕುಮಾರಸ್ವಾಮಿ ಅವರನ್ನು ಮತ್ತೆ ಸಿಎಂ ಮಾಡುವ ಪ್ರತಿಜ್ಞೆ ಮಾಡಿದ್ದಾರೆ ನಿಖಿಲ್.



