ಇದು ಹತ್ತಿ ಬೆಳೆಗಾರರ ವಿಚಾರ. ಭಾರತದಲ್ಲಿ ಹತ್ತಿ ಬೆಳೆಯುವ ದೊಡ್ಡ ಪ್ರದೇಶ ಇದೆ. ಹತ್ತಿಗೆ ದೊಡ್ಡ ಮಾರುಕಟ್ಟೆಯೂ ಇದೆ. ಆದರೆ, ಯಾವ ಹತ್ತಿ ಬೆಳೆಯಬೇಕು.. ಈ ವಿಷಯದಲ್ಲಿ ದೊಡ್ಡ ಚರ್ಚೆಯಂತೂ ನಡೆಯುತ್ತಿದೆ. ಹತ್ತಿ ಬೆಳೆಯಲ್ಲಿ ದೊಡ್ಡ ಸಮಸ್ಯೆ ಎಂದರೆ ಕಳೆ. ಆದರೆ ಆ ಕಳೆಯನ್ನು ನಾಶ ಮಾಡುವುದಕ್ಕೆ ಬಳಸುವ ಕೀಟನಾಶಕ ಅಥವಾ ಕಳೆ ನಾಶಕ ಗ್ಲೈಪೋಸೆಟ್ ಆರೋಗ್ಯಕ್ಕೆ ಹಾನಿಕಾರಕ. ಅದಕ್ಕೆ ಪರಿಹಾರ ಎಂದು ಸದ್ಯಕ್ಕೆ ಕಾಣುತ್ತಿರುವುದು ಬಿಟಿ ಹತ್ತಿ. ಹೋಗಲಿ ಈ ಬಿಟಿ ಹತ್ತಿ ಬಂದರೆ, ಕಳೆನಾಶಕದ ಸಮಸ್ಯೆ ಪರಿಹಾರವಾಗುತ್ತಾ ಎಂದರೆ, ಹೌದು. ಆದರೆ ಅದು ಇನ್ನೊಂದು ಹೊಸ ಸಮಸ್ಯೆಗೆ ಮೂಲವಾಗುತ್ತೆ ಎನ್ನುವುದೂ ಅಷ್ಟೇ ನಿಜ.
ನವದೆಹಲಿಯಲ್ಲಿ ಈ ಬಗ್ಗೆ ಇತ್ತೀಚೆಗೆ ಸಭೆ ನಡೆದಿದೆ. ಕೃಷಿ ಆಯುಕ್ತ ಪಿಕೆ ಸಿಂಗ್ ಪರಿಸ್ಥಿತಿಯ ಸಂದಿಗ್ಧತೆಯನ್ನು ವಿವರವಾಗಿ ತಿಳಿಸಿದ್ದಾರೆ. ಒಂದು ಕಡೆ ಬೆಳೆಗಳಲ್ಲಿ ಗ್ಲೈಪೋಸೈಟ್ ಬಳಕೆಗೆ ಅನುಮತಿ ಎಂಬ ಒತ್ತಡ ಉದ್ಯಮಗಳದ್ದು. ಆದರೆ ಇದು ಪರಿಸರಕ್ಕೆ ಹಾನಿಕಾರಕ. ಇದರ ಬಳಕೆ ತಡೆಯುವುದಕ್ಕೆ ಕಳೆನಾಶಕ ಸಹಿಷ್ಣು ಬಿಸಿ (ಹೆಚ್ʻಟಿಬಿಟಿ) ಹತ್ತಿಗೆ ಅನುಮತಿ ನೀಡಬೇಕೇ ಬೇಡವೇ ಅನ್ನೋ ಚರ್ಚೆ ನಡೆಯುತ್ತಿದೆ. ಇದಕ್ಕೆ ಸಾಕಷ್ಟು ಆಕ್ಷೇಪಗಳೂ ಬಂದಿವೆ. ಅಧ್ಯಯನ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಗ್ಲೈಪೋಸೈಟ್ ಕಳೆನಾಶಕ್ಕೆ ಮಾತ್ರ ಬಳಸಬೇಕು. ಆದರೆ ಇದನ್ನು ಬೆಳೆಗಳಲ್ಲಿಯೂ ಕಳೆನಾಶಕ್ಕೆ ಬಳಸಲಾಗ್ತಾ ಇದೆ. ಹತ್ತಿ ಬೆಳೆಯಲ್ಲಿನ ಕಳೆ ನಾಶಕ್ಕೆ ಬಳಸುತ್ತಿರುವುದು ಕಾನೂನು ಬಾಹಿರ. ಆದರೆ ಕಳೆ ತೆಗೆಯುವುದಕ್ಕೆ ಆಳುಗಳು ಸಿಗುತ್ತಿಲ್ಲ. ಹೀಗಾಗಿ ಈ ಕೆಮಿಕಲ್ ಬಳಸಿದರೆ ಕಳೆನಾಶ ಆಗುತ್ತದೆ ಎಂಬ ಕಾರಣಕ್ಕೆ ರೈತರು ಹೆಚ್ಚು ಹೆಚ್ಚು ಈ ಗ್ಲೈಪೋಸೈಟ್ ಮೊರೆ ಹೋಗುತ್ತಿದ್ದಾರೆ. ಮಾಹಿತಿಯ ಪ್ರಕಾರ ಈ ಕೆಮಿಕಲ್ ಬಳಕೆ ಹೆಚ್ಚಿರುವುದು ಮಹಾರಾಷ್ಟ್ರದಲ್ಲಿ.ಸಹಜವಾಗಿಯೇ ನಮ್ಮ ಉತ್ತರ ಕರ್ನಾಟಕ ಭಾಗದಲ್ಲಿಯೂ ಈ ಕಳೆನಾಶಕವನ್ನು ಬಳಸಲಾಗ್ತಾ ಇದೆ.
ಈಗ ಗ್ಲೈಪೋಸೈಟ್ ಕಳೆನಾಶ ಬಳಕೆ ಕಂಟ್ರೋಲ್ ಮಾಡುವುದು ಮೊದಲ ಗುರಿ. ಏಕೆಂದರೆ ಗ್ಲೈಪೋಸೈಟ್ ಕಳೆನಾಶಕ ಭೂಮಿಗೆ ಸೇರಿ, ಅಂತರ್ಜಲವನ್ನೂ ಸೇರಿ ಮನುಷ್ಯರು ಮತ್ತು ಪ್ರಾಣಿಗಳ ದೈಹಿಕ ಆರೋಗ್ಯದ ಮೇಲೆ ದುಷ್ಟ್ಪರಿಣಾಮ ಬೀರುತ್ತಿವೆ. ಅದು ಗಂಭೀರ ಮಟ್ಟದ ಪರಿಣಾಮವನ್ನೇ ಬೀರುತ್ತಿದೆ. ಆದರೆ ಹೆಚ್ಟಿಬಿಟಿ ಹತ್ತಿ ಬಂದರೆ ಗ್ಲೈಪೋಸೈಟ್ ಕಳೆನಾಶದ ಬಳಕೆ ಅಗತ್ಯ ಇಲ್ಲ. ಎಷ್ಟೇ ಕಳೆ ಇದ್ದರೂ, ಹತ್ತಿ ಬೆಳೆ ಸೊಂಪಾಗಿರುತ್ತದೆ. ಹೀಗಾಗಿ ಈ ಹೆಚ್ಟಿಬಿಟಿ ಹತ್ತಿಗೆ ಅನುಮತಿ ಕೊಡಿ ಎಂಬ ಡಿಮ್ಯಾಂಡ್ ಸೃಷ್ಟಿಯಾಗಿದೆ.
ಆದರೆ ಈ ಹೆಚ್ಟಿಬಿಟಿ ಹತ್ತಿಯೂ ಅಷ್ಟೇ, ಪರಿಸರಕ್ಕೆ ಮತ್ತು ಆರೋಗ್ಯಕ್ಕೆ ಡೇಂಜರ್. ಗ್ಲೈಪೋಸೈಟ್ ಕಳೆನಾಶಕದಷ್ಟೇ ಅಥವಾ ಅದಕ್ಕಿಂತಲೂ ಅಪಾಯಕಾರಿ. ಈ ಹೆಚ್ಟಿಬಿಟಿ ಹತ್ತಿಗೆ ಅನುಮತಿ ಕೊಟ್ಟರೆ ದೇಶದ ಬಹುಪಾಲು ಹತ್ತಿ ಬಿತ್ತನೆ ಬೀಜದ ಕಂಪೆನಿಗಳು ದಿವಾಳಿ ಆಗುತ್ತವೆ ಎಂಬ ವಾದಗಳೂ ಇವೆ. ಹೀಗಾಗಿಯೇ ಭಾರತದಲ್ಲಿ ಈ ಹತ್ತಿಗೆ ಅನುಮತಿ ಕೊಟ್ಟಿಲ್ಲ.
ಆದರೆ ಗ್ಲೈಪೋಸೈಟ್ ಕಳೆನಾಶ ನಿಯಂತ್ರಣ ಮಾಡಬೇಕು ಎಂದರೆ ಹೆಚ್ಟಿಬಿಟಿ ಹತ್ತಿಯೇ ಆಗಬೇಕು ಎಂಬುದು ಮತ್ತೊಂದು ವಾದ. ಇದಕ್ಕಾಗಿ ಜರ್ಮನಿಯ ಬೇಯರ್ಸ್ ಕಂಪೆನಿ ಅನುಮತಿ ಕೋರಿ ಅರ್ಜಿ ಸಲ್ಲಿಸಿದೆ. ಹಾಗಂತ ಹೆಚ್ಟಿಬಿಟಿ ಹತ್ತಿ ಸಿಗುತ್ತಲೇ ಇಲ್ಲ ಎಂದೂ ಅಲ್ಲ. ಕಳ್ಳಮಾರ್ಗದಲ್ಲಿ ಬಂದೂ ಆಗಿದೆ. ವಿಶೇಷವಾಗಿ ಗುಜರಾತ್ ಹಾಗೂ ಮಹಾರಾಷ್ಟ್ರದ ರೈತರು ಅಕ್ರಮವಾಗಿ ಹೆಚ್ಟಿಬಿಟಿ ಹತ್ತಿ ಬಳಸ್ತಾ ಇದ್ದಾರೆ. ಅದನ್ನ ಆ ರೈತರು ಚೋರ್ ಬಿಟಿ ಹತ್ತಿ ಅಂಥಾ ಕರೀತಿದ್ದಾರೆ.
ಸದ್ಯಕ್ಕೆ ಗ್ಲೈಪೋಸೈಟ್ ಕಳೆನಾಶಕ ತಡೆಗೆ ಹೆಚ್ಟಿಬಿಟಿ ಹತ್ತಿಗೆ ಅನುಮತಿ ನೀಡಬೇಕೋ.. ಬೇಡವೋ ಎಂಬ ಚರ್ಚೆಗಳು ನಡೆಯುತ್ತಿವೆ.



