ಕೇಂದ್ರ ಸಂಪುಟದಲ್ಲಿ ಉಕ್ಕು ಮತ್ತು ಕೈಗಾರಿಕಾ ಸಚಿವರಾಗಿರುವ ಎಚ್.ಡಿ.ಕುಮಾರಸ್ವಾಮಿ ಬಗ್ಗೆ, ಅವರ ಕೆಲಸಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಖುಷಿಯಾಗಿದ್ದಾರೆ. ಕಾರಣ ಇಷ್ಟೇ.. ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತ್ ಎರಡೂ ಕೂಡಾ ಮೋದಿ ಕನಸಿನ ಯೋಜನೆಗಳು. ಅವುಗಳ ಅಡಿ ತಾವು ಕೊಟ್ಟ ಟಾರ್ಗೆಟ್ ಮುಟ್ಟಲು ಕುಮಾರಸ್ವಾಮಿ ಹಾರ್ಡ್ ವರ್ಕ್ ಮಾಡುತ್ತಿದ್ದಾರೆ ಎಂಬುದು ಮೋದಿ ಸಂತಸಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಹೆಚ್ಎಂಟಿ ಕಾರ್ಖಾನೆಗೆ ಮರುಜೀವ ನೀಡುವ ವಿಷಯದಲ್ಲಿ ಕುಮಾರಸ್ವಾಮಿ ಅಸ್ಥೆ ವಹಿಸಿದ್ದಾರೆ. ಹೆಚ್ಎಂಟಿ ಪುನರುತ್ಥಾನದ ಬಗ್ಗೆ ಕ್ರಮ ಕೈಗೊಂಡ ಬೆನ್ನಲ್ಲೇ ಹೆಚ್ಎಂಟಿ ಷೇರುಗಳ ಮೌಲ್ಯ ಡಬಲ್ ಆಗಿದೆ. ಸರ್ಕಾರಿ ಸ್ವಾಮ್ಯದ ಕಂಪೆನಿಗಳನ್ನು ಪುನರುಜ್ಜೀವನ ಮಾಡುವ ನಿಟ್ಟಿನಲ್ಲಿ ಕುಮಾರಸ್ವಾಮಿ ಎಚ್ಚರಿಕೆಯಿಂದ ಆದರೆ ವೇಗವಾಗಿ ಹೆಜ್ಜೆ ಹಾಕುತ್ತಿದ್ದಾರೆ.
ಇನ್ನು 2020-30ರ ಅವಧಿಯಲ್ಲಿ ದೇಶದಲ್ಲಿ 300 ದಶಲಕ್ಷ ಟನ್ʻಗಳಷ್ಟು ಉಕ್ಕು ಉತ್ಪಾದಿಸಬೇಕು ಅಂತ ಈ ಹಿಂದೆ ಮೋದಿ ಟಾರ್ಗೆಟ್ ಫಿಕ್ಸ್ ಮಾಡಿದ್ದರು. ಇದಕ್ಕೆ ಪೂರಕವಾಗಿ ಉಕ್ಕು ಉತ್ಪಾದನೆ ನಡೆಯುತ್ತಿತ್ತು. ಆದರೆ ಕುಮಾರಸ್ವಾಮಿ ಉಕ್ಕು ಸಚಿವರಾದ ನಂತರ ಅದಕ್ಕೆ ಇನ್ನಷ್ಟು ವೇಗ ಬಂದಿದೆ ಎನ್ನಲಾಗಿದೆ.
ಆಂಧ್ರದ ವೈಜಾಗ್ ಕಾರ್ಖಾನೆ ವಿಷಯಕ್ಕೆ ಬಂದರೆ, ಸಂಕಷ್ಟದಲ್ಲಿದ್ದ ಈ ಕಾರ್ಖಾನೆ ಕುಮಾರಸ್ವಾಮಿ ಅವರು ಮಂತ್ರಿಯಾದ ನಂತರ ಮರುಜೀವ ಪಡೆದಿದೆ. ಈ ಕಾರ್ಖಾನೆಯ ಪುನರು ಜ್ಜೀವನಕ್ಕಾಗಿ ಸತತ ಪ್ರಯತ್ನ ನಡೆಸಿದ ಕುಮಾರಸ್ವಾಮಿ ಕೇಂದ್ರದಿಂದ ಸುಮಾರು 11500 ಕೋಟಿ ರು.ಗಳ ಪ್ಯಾಕೇಜ್ ಕೊಡಿಸಿದ್ದಲ್ಲದೆ, ಉಕ್ಕು ಉತ್ಪಾದನೆಗೆ ದೊಡ್ಡ ಮಟ್ಟದಲ್ಲಿ ಚಾಲನೆ ಕೊಡಿಸಿದ್ದಾರೆ. ಇದಕ್ಕೆ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಕೂಡಾ ಆಸಕ್ತಿ ವಹಿಸಿದ ಕಾರಣ ಅದು ಪುನರುಜ್ಜೀವನ ಪಡೆಯುತ್ತಿದ.
ಇದೇ ರೀತಿ ಬೊಕಾರೋ, ಭಿಲಾಯ, ನಗರ್ನಾರ್, ಸೇಲಂ ಸೇರಿದಂತೆ ದೇಶದ ಪ್ರಮುಖ ಘಟಕಗಳು ಹಿಂದೆಂದಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ನೋಡಿಕೊಂಡಿದ್ದಾರೆ. ಈ ಮಧ್ಯೆ ಕರ್ನಾಟಕದ ಭದ್ರಾವತಿಯಲ್ಲಿರುವ ವಿಐಎಸ್ಎಲ್ ಕಾರ್ಖಾನೆಗೆ ಬಂಪರ್ ಪ್ಯಾಕೇಜ್ ಕೊಡಿಸಲು ಹೊರಟಿರುವ ಕುಮಾರಸ್ವಾಮಿ, ಈ ಕಾರ್ಖಾನೆಗೆ ಶಕ್ತಿ ತುಂಬುವ ಕ್ರಿಯಾಯೋಜನೆಗೆ ಸೂಚಿಸಿದ್ದಾರೆ. ಮೂಲಗಳ ಪ್ರಕಾರ ವಿಐಎಸ್ಎಲ್ ಫ್ಯಾಕ್ಟರಿಗೆ ಹದಿನೈದರಿಂದ ಹದಿನೆಂಟು ಸಾವಿರ ಕೋಟಿ ರು. ಗಳ ಪ್ಯಾಕೇಜ್ ಕೊಡಿಸುವುದು ಕುಮಾರಸ್ವಾಮಿ ಯೋಚನೆ. ಆದರೆ, ಈ ವರದಿ ತಯಾರಾಗಿ ಹಣ ಬಿಡುಗಡೆ ಮಾಡುವ ಹಂತದಲ್ಲಿ ರಾಜ್ಯ ಸರ್ಕಾರದ ಪಾತ್ರವೂ ಮುಖ್ಯ. ಆದರೆ, ರಾಜಕೀಯ ಮೇಲಾಟದಲ್ಲೇ ಮುಳುಗಿರುವ ಸರ್ಕಾರದಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲವಂತೆ.
ಹೀಗೆ ದೇಶಾದ್ಯಂತ ಸಂಕಷ್ಟದಲ್ಲಿರುವ ಕಾರ್ಖಾನೆಗಳಿಗೆ ಶಕ್ತಿ ತುಂಬಿ ಉತ್ಪಾದನೆಯ ಕಾರ್ಯವನ್ನು ಚುರುಕುಗೊಳಿಸಿದರೆ ಉಕ್ಕು ಉತ್ಪಾದನೆಯ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಿಗದಿ ಮಾಡಿದ ಟಾರ್ಗೆಟ್ ಏನಿದೆ, ಅದನ್ನು ಮೂರು ವರ್ಷ ಮುಂಚಿತವಾಗಿಯೇ ತಲುಪಬಹುದು ಎಂಬುದು ಕುಮಾರಸ್ವಾಮಿಯವರ ಯೋಚನೆ. ಅವರ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಖುಷಿಯಾಗಿರುವುದು ಇದೇ ಕಾರಣಕ್ಕಾಗಿ.
ಮೋದಿಯವರ ಬಳಿ ಶಹಬ್ಬಾಸ್ ಗಿರಿ ತೆಗೆದುಕೊಳ್ಳೋದು ಸುಲಭ ಅಲ್ಲ. ಅವರಿಗೆ ಸಮಾಧಾನ ಎನ್ನುವುದೇ ಇಲ್ಲ ಎನ್ನುವವರು ಮೋದಿ ಸಂಪುಟದಲ್ಲಿ ಹೆಚ್ಚಾಗಿ ಸಿಗುತ್ತಾರೆ. ಆದರೆ, ಕುಮಾರಸ್ವಾಮಿ ಕೆಲಸಕ್ಕೆ ಮೋದಿ ಹ್ಯಾಪಿಯಾಗಿದ್ದಾರೆ ಎನ್ನುವುದೇ ಖುಷಿಯ ವಿಷಯ ಎನ್ನಬಹುದು.