ಸಿಎಂ ಸಿದ್ದರಾಮಯ್ಯ ಸದ್ಯಕ್ಕೆ ಮುಡಾ ಹಗರಣದಲ್ಲಿ ತಿರುಗುತ್ತಿದ್ದಾರೆ. ಸಿದ್ದರಾಮಯ್ಯ ಅವರ ರಾಜಕೀಯ ಜೀವನದಲ್ಲಿ ಇದೇ ಮೊದಲ ಬಾರಿಗೆ ಲೋಕಾಯುಕ್ತದವರ ಎದುರು ವಿಚಾರಣೆ ಎದುರಿಸುತ್ತಿದ್ದಾರೆ. ಸಿಎಂ ಆಗಿರುವ ವ್ಯಕ್ತಿಯೊಬ್ಬರು ಲೋಕಾಯುಕ್ತದ ಎದುರು ಭ್ರಷ್ಟಾಚಾರ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವುದು ಇತಿಹಾಸದಲ್ಲಿಯೇ ಮೊದಲು. ಆದರೆ ಸಿದ್ದರಾಮಯ್ಯ ೧೪ ಸೈಟುಗಳನ್ನೂ ವಾಪಸ್ ಕೊಟ್ಟು, 14 ಸೈಟುಗಳಿಗಾಗಿ ನಾನು ಅಪರಾಧ ಮಾಡುತ್ತೇನೆ ಎಂದರೆ ನಂಬುತ್ತೀರ.. ಸುಳ್ಳು ಕೇಸಿನ ವಿಚಾರಣೆಗೆ ಹಾಜರಾಗುತ್ತಿದ್ದೇನೆ, ನಾನು ಶುದ್ಧ, ದಾರಿ ತಪ್ಪುವವನಲ್ಲ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಇದು ಸಿದ್ದರಾಮಯ್ಯನವರ ಕಥೆಯಾಯಿತು. ಆದರೆ ಸಿದ್ಧರಾಮಯ್ಯ ಅವರು ಸಿಎಂ ಆದ ನಂತರ ಅವರಿಗೆ ಸಂಕಷ್ಟ ತಂದೊಡ್ಡಿರುವ ಸಚಿವರ ಪಟ್ಟಿ ತೆಗೆದು ನೋಡಿದರೆ.. ದೊಡ್ಡ ಪಟ್ಟಿಯೇ ಇದೆ.
ಹೇಳಿಕೆಗಳಿಂದ ತೊಂದರೆ ಸೃಷ್ಟಿಸಿದ ಸಚಿವರು : ಗೃಹ ಸಚಿವ ಪರಮೇಶ್ವರ್, ಪ್ರಿಯಾಂಕ್ ಖರ್ಗೆ, ಶಿವಾನಂದ ಪಾಟೀಲ್ ಈ ಪಟ್ಟಿಯಲ್ಲಿ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಪರಮೇಶ್ವರ್ ಅವರಂತೂ ಹಲವು ಬಾರಿ ಸಿದ್ದರಾಮಯ್ಯನವರಿಗೆ ಅತ್ತ ಸಮರ್ಥಿಸಿಕೊಳ್ಳಲೂ ಆಗದೆ, ವಿರೋಧಿಸಲೂ ಆಗದಂತಹ ಪರಿಸ್ಥಿತಿ ಸೃಷ್ಟಿಸಿದ್ದಾರೆ. ನಂ.೨ ಸ್ಥಾನದಲ್ಲಿ ಇರುವವರು ಪ್ರಿಯಾಂಕ್ ಖರ್ಗೆ. ೩ನೇ ಸ್ಥಾನದಲ್ಲಿ ಶಿವಾನಂದ ಪಾಟೀಲ್ ಪೈಪೋಟಿ ಕೊಟ್ಟಿದ್ದಾರೆ.
ಮುಜುಗರ ತಂದ ಸಚಿವರಲ್ಲಿ ನಾಗೇಂದ್ರ ನಂ.1
ಹೌದು, ವಾಲ್ಮೀಕಿ ನಿಗಮದ ಹಗರಣವನ್ನು ಸಿದ್ದರಾಮಯ್ಯ ಸಮರ್ಥನೆ ಮಾಡಿಕೊಳ್ಳೋಕೆ ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ಸಚಿವರಾಗಿದ್ದ ನಾಗೇಂದ್ರ ರಾಜೀನಾಮೆ ಕೊಟ್ಟರೂ, ಹಗರಣದ ಮಸಿಯಂತೂ ಮೆತ್ತಿಕೊಂಡಿತು. ಸಿದ್ದರಾಮಯ್ಯ ಮತ್ತು ಸರ್ಕಾರದಲ್ಲಿರುವ ಸಚಿವರು ಏನೇ ಹೇಳಲಿ, ಅದು ರಾಜಕೀಯ ಹೇಳಿಕೆಗಳೇ ಹೊರತು, ವಾಸ್ತವದ ಅರಿವೂ ಅವರಿಗೂ ಇದ್ದಂತಿದೆ. ಏಕೆಂದರೆ ಒಬ್ಬ ಅಧಿಕಾರಿಯ ಆತ್ಮಹತ್ಯೆ, ಹಗರಣ ನಡೆದಿರುವುದಂತೂ ಸತ್ಯ ಎಂಬುದನ್ನು ತಿರಸ್ಕರಿಸಲು ಸಾಧ್ಯವಿಲ್ಲ.
ಭೈರತಿ ಸುರೇಶ್ ಮಾಡಿದ ಅವಾಂತರ..!
ಮುಡಾ ಹಗರಣದಲ್ಲಿ ಭೈರತಿ ಸುರೇಶ್ ಮಾಡಿರುವ ಎಡವಟ್ಟು, ಸಿದ್ದರಾಮಯ್ಯ ಅವರಿಗೆ ಮುಜುಗರ ತಂದಿದ್ದಂತೂ ನಿಜ. ಇದು ಸತ್ಯವಾ.. ಅಲ್ಲವಾ.. ಅದು ಬೇರೆ ಪ್ರಶ್ನೆ. ಏಕೆಂದರೆ ಸಾಕ್ಷಿಗಳೂ ಇಲ್ಲ. ದಾಖಲೆಗಳೂ ಇಲ್ಲ. ಒಂದು ಹಂತದಲ್ಲಿ ಸಿದ್ದರಾಮಯ್ಯ, ತಮ್ಮ ಪರಮಾಪ್ತರಲ್ಲಿ ಒಬ್ಬರಾಗಿದ್ದ ಭೈರತಿ ಅವರನ್ನು ದೂರ ಇಡುವ ಪರಿಸ್ಥಿತಿ ಬಂದಿತ್ತು.
ಅಬಕಾರಿ ಸಚಿವ ತಿಮ್ಮಾಪುರ ವಿರುದ್ಧ ಲಂಚದ ಆರೋಪ
ಯಾವುದೇ ಸರ್ಕಾರದಲ್ಲಿ ಅಬಕಾರಿ ಸಚಿವರಾಗುವುದಕ್ಕೆ ದೊಡ್ಡ ಪೈಪೋಟಿ ಇರುತ್ತದೆ. ಅಂತಹ ಖಾತೆಯಲ್ಲಿ ಕುಳಿತಿರುವ, ಸಿದ್ದರಾಮಯ್ಯ ಆಪ್ತರೂ ಆಗಿರುವ ಆರ್.ಬಿ.ತಿಮ್ಮಾಪುರ ಅವರ ಮೇಲೆ ಲಂಚಕ್ಕೆ ಡಿಮ್ಯಾಂಡ್ ಆರೋಪ ಕೇಳಿಬಂದಿದೆ. ಅದು ಯಾವ ಮಟ್ಟಿಗೆ ಎಂದರೆ ಮದ್ಯ ಮಾರಾಟಗಾರರು ಮದ್ಯ ಮಾರಾಟವನ್ನೇ ಒಂದು ದಿನ ಬಂದ್ ಮಾಡಿ ಪ್ರತಿಭಟನೆ ನಡೆಸುವುದಕ್ಕೆ ಸಿದ್ಧರಾಗಿದ್ದಾರೆ. ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲ ಎಂಬುದಂತೂ ಸತ್ಯ.
ಲಕ್ಷ್ಮೀ ಹೆಬ್ಬಾಳ್ಕರ್ ಕೂಡಾ ನಾಗೇಂದ್ರ ಹಾದಿಯಲ್ಲಿ..!?
ಸಿದ್ದರಾಮಯ್ಯ ಸರ್ಕಾರದ ಅತೀ ಜನಪ್ರಿಯ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯೂ ಒಂದು. ಅಂತಾದ್ದೊಂದು ಮಹತ್ವದ ಜವಾಬ್ದಾರಿ ನಿರ್ವಹಿಸುತ್ತಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮೇಲೆ ಕೇಳಿ ಬರುತ್ತಿರೋ ಗಂಭೀರ ಆರೋಪವಿದು. ತಹಸೀಲ್ದಾರ್ ಆಗಿದ್ದ ರುದ್ರಣ್ಣ ಎಂಬುವವರು ಲಕ್ಷ್ಮೀ ಅವರ ಪಿಎ ಸೇರಿದಂತೆ ಮೂವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿಂದೆ ಇಂತಹುದೇ ಪ್ರಕರಣಗಳಲ್ಲಿ ಸಚಿವರಾಗಿದ್ದ ಜಾರ್ಜ್ (ಮೊದಲ ಬಾರಿ ಸಿಎಂ ಆಗಿದ್ದಾಗ) ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ, ಬಿಜೆಪಿಯಲ್ಲಿದ್ದ ಈಶ್ವರಪ್ಪ ಕಾಂಟ್ರಾಕ್ಟರ್ ಆತ್ಮಹತ್ಯೆ ಪ್ರಕರಣದಲ್ಲಿ, ಇತ್ತೀಚೆಗೆ ನಾಗೇಂದ್ರ ಅಧಿಕಾರಿಯೊಬ್ಬರ ಆತ್ಮಹತ್ಯೆ ಪ್ರಕರಣದಲ್ಲಿ ರಾಜೀನಾಮೆ ಕೊಟ್ಟಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಕೂಡಾ ರಾಜೀನಾಮೆ ಕೊಡಬೇಕಾಗುತ್ತಾ..?
ಜಮೀರ್ ಅಹ್ಮದ್ ವಕ್ಫ್ ವಿವಾದ
ಇನ್ನು ವಕ್ಫ್ ಖಾತೆ ಸಚಿವ ಜಮೀರ್ ಅಹ್ಮದ್ ಅವರಿಗೆ ವಕ್ಫ್ ಆಸ್ತಿಗಳನ್ನೆಲ್ಲ ದಾಖಲೆ ಮಾಡಿಕೊಳ್ಳುವ ಅತ್ಯುತ್ಸಾಹ, ಸರ್ಕಾರವನ್ನೇ ಇಕ್ಕಟ್ಟಿಗೆ ಸಿಲುಕಿಸಿದೆ. ಜಮೀರ್ ಮಾಡಿದ್ದು, ಮಾಡುತ್ತಿರುವುದು ತಪ್ಪು, ಸರಿ ಅಲ್ಲ ಎಂದರೆ ಮುಸ್ಲಿಮರ ಮತ ದೂರವಾಗುವ ಭಯ ಕಾಡುತ್ತಿದೆ. ಹಾಗಂತ ಸುಮ್ಮನಿದ್ದರೆ ಕಾಂಗ್ರೆಸ್ಸಿನ ಬಹುತೇಕ ಹಿಂದೂ ಮತದಾರರು ದೂರ ಸರಿಯುವ ಭಯ. ಅಡಕತ್ತರಿಯಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದೆ ಸಿದ್ದರಾಮಯ್ಯ ಮತ್ತು ಸಿದ್ದರಾಮಯ್ಯ ನೇತೃತ್ವದ ಸರ್ಕಾರ.



