ನಾಗಮಂಗಲ ಗಲಭೆಗೆ ಸಂಬಂಧಪಟ್ಟಂತೆ ಬಿಜೆಪಿಯಿಂದ ರಚನೆಯಾಗಿದ್ದ ಸತ್ಯ ಶೋಧನಾ ಸಮಿತಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ವರದಿ ಸಲ್ಲಿಸಿದೆ. ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ನೇತೃತ್ವದಲ್ಲಿ ರಚನೆಯಾಗಿದ್ದ ಸಮಿತಿಯಲ್ಲಿ ಮಾಜಿ ಸಚಿವರಾದ ಭೈರತಿ ಬಸವರಾಜ್, ಕೆ.ಸಿ.ನಾರಾಯಣಗೌಡ, ಬಿಜೆಪಿ ಕಾರ್ಯದರ್ಶಿ ಲಕ್ಷ್ಮಿ ಅಶ್ವಿನ್ ಗೌಡ, ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಇದ್ದರು. ಸತ್ಯಶೋಧನಾ ಸಮಿತಿಯ ಪ್ರಕಾರ ನಾಗಮಂಗಲ ಗಲಭೆ ಒಂದು ಪೂರ್ವ ನಿಯೋಜಿತ ಕೃತ್ಯ. ಬಾಂಗ್ಲಾ ದೇಶದಿಂದ ಬಂದಿರುವ ಕೆಲವು ಕಿಡಿಗೇಡಿಗಳು ಇದರಲ್ಲಿ ಶಾಮೀಲಾಗಿದ್ದಾರೆ. ಗಲಭೆ ಎಬ್ಬಿಸಲು ಮುಂಚಿತವಾಗಿಯೇ ಕತ್ತಿ, ತಲ್ವಾರ್, ಪೆಟ್ರೋಲ್ ಬಾಂಬ್, ಮಾಸ್ಕ್ಗಳನ್ನು ಖರೀದಿ ಮಾಡಿದ್ದಾರೆ.
ವರದಿಯಲ್ಲಿರುವ 15 ಆಘಾತಕಾರಿ ಅಂಶಗಳು ಮತ್ತು ಸಲಹೆಗಳು
೧. ಒಂದು ವರ್ಗದವರ ಅತಿಯಾದ ತುಷ್ಠೀಕರಣದಿಂದಾಗಿ ನಾಗಮಂಗಲ ಕೋಮು ಗಲಭೆ ನಡೆದಿದೆ.
೨. ಆರೋಪಿಗಳ, ಆಪಾದನೆ ಎದುರಿಸುತ್ತಿದ್ದ ವ್ಯಕ್ತಿಗಳ ವಿರುದ್ಧ ಕೇಸ್ ಗಳನ್ನು ವಾಪಸ್ ಪಡೆಯಲಾಗಿದೆ.
೩. ಪೊಲೀಸರ ಕೈಗಳನ್ನು ಕಟ್ಟಿ ಹಾಕಿದ್ದ ಕಾರಣ, ಪೊಲೀಸರು ಪರಿಸ್ಥಿತಿ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ
೪. ಕಳೆದ ವರ್ಷ ಕೂಡಾ ಇದೇ ರೀತಿಯ ಘಟನೆ ಆಗಿತ್ತಾದರೂ, ಯಾವುದೇ ಕ್ರಮ ಜರುಗಿಸಿಲ್ಲ. ಮುಂಜಾಗ್ರತೆ ಕ್ರಮವನ್ನೂ ತೆಗೆದುಕೊಂಡಿಲ್ಲ
೫. ಪೆಟ್ರೋಲ್ ಬಾಂಬ್, ಮಾಸ್ಕ್, ನಿರ್ದಿಷ್ಟ ಅಂಗಡಿಗಳಿಗೆ ಬೆಂಕಿ ಎಲ್ಲವೂ ಪ್ರೀಪ್ಲಾನ್ಡ್ ಕೃತ್ಯವೇ ಹೊರತು, ಆಕಸ್ಮಿಕ ಅಲ್ಲ.
೬. ತಲೆಮರೆಸಿಕೊಂಡಿರುವ ಆರೋಪಿಗಳು, ಪಿಎಫ್ಐ ಸದಸ್ಯರು, ಸಮಾಜ ವಿರೋಧಿ ಕೃತ್ಯ ಎಸಗುವ ವ್ಯಕ್ತಿಗಳನ್ನು ನಾಗಮಂಗಲದಲ್ಲಿ ರಕ್ಷಣೆ ಮಾಡಲಾಗುತ್ತಿದೆ
೭. ನಿಷೇಧಿತ ಪಿಎಫ್ಐ ಸಂಘಟನೆ, ನಾಗಮಂಗದಲ್ಲಿ ಆಕ್ಟಿವ್ ಆಗಿದೆ. ಕಾನೂನುಬಾಹಿರ ಚಟುವಟಿಕೆಗಳಲ್ಲಿ ನಾಗಮಂಗಲದಲ್ಲಿ ಜನ ಆಗಿದ್ದಾಗ್ಗೆ ಭಾಗವಹಿಸುತ್ತಿದ್ದಾರೆ.
೮. ಎಂಟು ಜನ ಪೊಲೀಸ್ ಸಿಬ್ಬಂದಿಗೂ ಗಲಾಟೆಯಲ್ಲಿ ಗಾಯವಾಗಿದೆ.
೯. ಅಮಾಯಕರ ಮೇಲೆ ಕೂಡಾ ಕೇಸ್ ದಾಖಲಾಗಿದೆ.ಆದರೆ ಆರೋಪಿಗಳು ಹೊರಗಡೆ ಇದ್ದಾರೆ
೧೦. ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷನ ಮಕ್ಕಳು ಗಲಾಟೆ ಶುರು ಮಾಡಿದ್ದಾರೆ, ಅವರ ಮೇಲೆ ಕ್ರಮ ಯಾವುದೇ ರೀತಿಯ ಕ್ರಮ ಜರುಗಿಸಿಲ್ಲ
೧೧. ಗಲಾಟೆ ಕುರಿತು ಎನ್ಐಎ ತನಿಖೆ ಆಗಬೇಕು. ಇಲ್ಲದಿದ್ದರೆ ದುಷ್ಟ ಕಾಟದ ಜಾಲ ಹೊರಬರುವುದಿಲ್ಲ
೧೨. ಸಮಾಜ ವಿರೋಧಿ ವ್ಯಕ್ತಿಗಳು ನಾಗಮಂಗಲದಲ್ಲಿ ನೆಲೆ ಕಂಡುಕೊಂಡಿದ್ದಾರೆ.
೧೩. ಘಟನೆಯಲ್ಲಿ ನೊಂದವರಿಗೆ, ಸಂತ್ರಸ್ತರಿಗೆ ಪರಿಹಾರ ಕೊಡುವ ಬಗ್ಗೆ ಸರ್ಕಾರ ಏನೂ ಕ್ರಮ ವಹಿಸಿಲ್ಲ.
೧೪. ಹಿಂದು ಸಮಾಜದ ವಿರೋಧಿಸುತ್ತಿರುವ ವ್ಯಕ್ತಿಗಳನ್ನು ಹುರಿದುಂಬಿಸುವ ಕೆಲಸ ಆಗುತ್ತಿದೆ
೧೫. ಬೆಂಕಿ ಹಾಕಿದವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು.
ಇದು ವರದಿಯಲ್ಲಿ ಪ್ರಸ್ತಾಪವಾಗಿರುವ ಪ್ರಮುಖ ಅಂಶಗಳು. ಪಕ್ಷಕ್ಕೆ ಸಲ್ಲಿಕೆಯಾಗಿರುವ ವರದಿಯನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಗೃಹ ಇಲಾಖೆಗೆ ಕೂಡಾ ಸಲ್ಲಿಕೆ ಮಾಡಲು ಬಿಜೆಪಿ ಮುಂದಾಗಿದೆ.
‘ ಹಿರಿಯರ ತಂಡ ನಾಗಮಂಗಲಕ್ಕೆ ಭೇಟಿ ನೀಡಿ ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸಿದೆ. ಇದರ ಹಿಂದೆ ಯಾರಿದ್ದರು, ಯಾವ ರೀತಿಯಲ್ಲಿ ವ್ಯವಸ್ಥಿತ ಪಿತೂರಿ ನಡೆಸಲಾಗಿದೆ ಎಂಬ ಸತ್ಯಶೋಧನಾ ವರದಿ ನೀಡಿದ್ದಾರೆ. ನಾಗಮಂಗಲ ಘಟನೆ ಬಳಿಕ ಪಾಂಡವಪುರಲ್ಲಿ, ದಾವಣಗೆರೆಯಲ್ಲಿ ಇಂತಹ ಘಟನೆ ನಡೆದಿದೆ. ರಾಜ್ಯದಲ್ಲಿ ನಡೆಯುತ್ತಿರುವ ಘಟನೆ ಅವಲೋಕನ ಮಾಡಿದರೆ, ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ, ಸರ್ಕಾರ ಇದೆ ಎಂಬುದೇ ಮರೆತು ಹೋಗಿದೆ ಎಂದು ಕಿಡಿಕಾರಿದ್ದಾರೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ.
ಪೊಲೀಸರ ಕಣ್ಮುಂದೆಯೇ ವಿಧ್ವಂಸಕ ಕೃತ್ಯಗಳು ನೆಡೆಯುತ್ತಿದ್ದರೂ ತಡೆಯುವ ಕೆಲಸ ಆಗುತ್ತಿಲ್ಲ. ಹಿಂದೂಗಳ ಮೇಲೆ ದಾಳಿ ಆದರೆ ಸರ್ಕಾರ ಕೂಡಾ ಏನೂ ಮಾಡುವುದಿಲ್ಲ ಎಂಬ ಭಾವನೆ ದೇಶದ್ರೋಹಿಗಳಿಗೆ ಬಂದಿದೆ. ಸತ್ಯಶೋಧನಾ ವರದಿ ಸಿಕ್ಕಿದೆ. ಸಮಿತಿ ಜೊತೆಗೆ ಚರ್ಚೆ ಮಾಡಿ ಮುಂದಿನ ಹೋರಾಟದ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ ವಿಜಯೇಂದ್ರ.
ನಾಗಮಂಗಲ ಸೂಕ್ಷ್ಮ ಪ್ರದೇಶ ಎಂದು ಗೊತ್ತಿದ್ದರೂ ಸ್ಥಳದಲ್ಲಿ ಹೆಚ್ಚಿನ ಪೊಲೀಸ್ ಏಕೆ ನಿಯೋಜಿಸಲಿಲ್ಲ. ಗಣಪತಿ ವಿಸರ್ಜನೆ ಇಂತಹ ದಿನವೇ ನಡೆಯುತ್ತವೆ ಎಂದು ಗೊತ್ತಿದ್ದರೂ ಗುಪ್ತಚರ ವಿಭಾಗದ ಎಡಿಜಿಪಿ ಒಂದೇ ಒಂದು ಬಾರಿ ಸ್ಥಳಕ್ಕೆ ಭೇಟಿ ಕೊಟ್ಟಿಲ್ಲ. ಇವೆಲ್ಲವೂ ಗೃಹ ಇಲಾಖೆಯ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ ಎಂದು ಸತ್ಯಶೋಧನ ಸಮಿತಿ ಹೇಳಿದೆ.



