ಮಂಡ್ಯ. ಮಂಡ್ಯದವರು ತಮ್ಮನ್ನು ತಾವು ಬುದ್ದಿವಂತರು ಎಂದುಕೊಳ್ತಾರೆ. ತಮ್ಮನ್ನು ತಾವು ರಾಜಕೀಯವಾಗಿ ಪ್ರಜ್ಞಾವಂತರು ಎಂದು ಎದೆ ತಟ್ಟಿಕೊಳ್ತಾರೆ. ಅಂತಹ ಮಂಡ್ಯದಲ್ಲಿ ಕೋಮುಗಲಭೆಗಳು ತೀವ್ರತರ ಮಟ್ಟದಲ್ಲಿ ನಡೆದಿರಲಿಲ್ಲ ಅನ್ನೋದು ಕೂಡಾ ಹೆಮ್ಮೆಯ ವಿಷಯವಾಗಿಯೇ ಇತ್ತು. ಈಗ ಅದಕ್ಕೆ ಬೆಂಕಿ ಬಿದ್ದಿದೆ. ನಾಗಮಂಗಲ ಪಟ್ಟಣದಲ್ಲಿ ಗಣಪತಿ ಮೆರವಣಿಗೆ ವೇಳೆ ಹಿಂದೂ – ಮುಸ್ಲಿಂ ಗಲಾಟೆ ನಡೆದು, ಪೊಲೀಸರು ಲಾಠಿ ಪ್ರಹಾರ ಮಾಡಿದ್ದು, ಇಡೀ ಪಟ್ಟಣ ನೆಮ್ಮದಿ ಕಳೆದುಕೊಂಡಿದೆ.
ಬಟ್ಟೆ ಅಂಗಡಿ ಭಸ್ಮ : ಬೀದಿಗೆ ಬಿದ್ದಿರುವವರ ಸಂಖ್ಯೆ ಕಡಿಮೆಯೇನಲ್ಲ. ಭೀಮ್ ರಾಜ್ ಅನ್ನೋರ ಬಟ್ಟೆ ಶೋ ರೂಮ್ ಸುಟ್ಟು ಭಸ್ಮವಾಗಿದೆ. ಸಾಧನಾ ಟೆಕ್ಸ್ಸ್ಟೈಲ್ ಎಂಬ ಅಂಗಡಿಗೆ ಬೆಂಕಿ ಬಿದ್ದು, ಒಂದೂವರೆ ಕೋಟಿ ಮೌಲ್ಯದ ಬಟ್ಟೆ ಕಳೆದುಕೊಂಡಿರುವ ಭೀಮ್ ರಾಜ್ ಅವರಿಗೆ ಕಣ್ಣೀರು ಬಿಟ್ಟರೆ ಬೇರೇನಿಲ್ಲ. ಸುಮಾರು ೨೦೦ ಮಂದಿಯ ಗುಂಪು ಅಂಗಡಿಗೆ ನುಗ್ಗಿ ಅಂಗಡಿ ಸುಟ್ಟು ಹಾಕಿದೆ. ಇನ್ನೂ ಹಲವು ಅಂಗಡಿ, ಮನೆಗಳನ್ನು ಸುಟ್ಟು ಹಾಕಿದ್ದಾರೆ. ಬೈಕುಗಳು, ಕಾರುಗಳು, ಎತ್ತಿನ ಗಾಡಿಗಳಿಗೆ ಬೆಂಕಿ ಹಚ್ಚಿದ್ದಾರೆ.
ಅಹಿತಕರ ಘಟನೆ ಸಂಬಂದ ಒಟ್ಟು 46 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಬಂಧನ ಖಂಡಿಸಿ ನಾಗಮಂಗಲ ಟೌನ್ ಠಾಣೆ ಮುಂದೆ ಕುಟುಂಬಸ್ಥರ ಜಮಾವಣೆ ಮಾಡಿ ಹೈಡ್ರಾಮಾ ಸೃಷ್ಟಿಸಿದ್ದಾರೆ. ನಮ್ಮವರು ತಪ್ಪು ಮಾಡಿಲ್ಲ, ಬೇಕಂತಲೇ ಬಂಧಿಸಲಾಗಿದೆ, ಅವರನ್ನು ಬಿಟ್ಟುಬಿಡಿ ಅಂತ ಮಹಿಳೆಯರು ಕಣ್ಣೀರಿಟ್ಟಿದ್ದಾರೆ.
ಇಷ್ಟಕ್ಕೂ ಗಣೇಶ ಮೆರವಣಿಗೆ ನಡೆಯುತ್ತಾ ಬರುತ್ತಿದ್ದಾಗ ದರ್ಗಾ ಎದುರು ಮೆರವಣಿಗೆ ಬಂದ ತಕ್ಷಣ ದರ್ಗಾ ಮುಂದೆ ತಮಟೆ, ಡೊಳ್ಳು ಬಾರಿಸದಂತೆ ಕ್ಯಾತೆ ತೆಗೆದಿದ್ದಾರೆ. ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಮಾರಕಾಸ್ತ್ರಗಳನ್ನು ಝಳಪಿಸಿವೆ. ಪೆಟ್ರೋಲ್ ಬಾಂಬ್ ಕೂಡ ಎಸೆದಿದ್ದಾರೆ. ಮಂಡ್ಯ ವೃತ್ತದಲ್ಲಿ ನಾಲ್ಕೈದು ಬೈಕ್ಗಳಿಗೆ ಬೆಂಕಿ ಇಟ್ಟು ರಸ್ತೆ ಬದಿಯ 2-3 ಅಂಗಡಿಗಳನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ. ಮುಸ್ಲಿಂ ಮತ್ತು ಹಿಂದೂ ಹುಡುಗರು ಇಬ್ಬರೂ ಆಕ್ರೋಶಗೊಂಡು ಬೀದಿಗಿಳಿದಾಗ ಪೊಲೀಸರು ಅಸಹಾಯಕರಾಗಿದ್ದಾರೆ. ಕೊನೆಗೆ ಲಾಠಿ ಚಾರ್ಜ್ ಮಾಡಿ ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದೆ.
ನಾಗಮಂಗಲ ಗಲಭೆ ಕೋಮು ಗಲಭೆ ಅಲ್ಲ : ಪರಮೇಶ್ವರ್
ಅದು ಕೋಮು ಗಲಭೆ ಅಲ್ಲ, ಆಕಸ್ಮಿಕವಾಗಿ ನಡೆದಿರುವ ಘಟನೆ. ಒಬ್ಬರಿಗೊಬ್ಬರು ಘರ್ಷಣೆ ಮಾಡಿಕೊಂಡಿದ್ದಾರೆ. ಗಣೇಶ ಮೂರ್ತಿ ಮೆರವಣಿಗೆ ವೇಳೆ ಕಲ್ಲು ತೂರಾಟ ಆಗಿದೆ. ಯಾರೋ ಕಲ್ಲು ತೂರಾಟ ಮಾಡಿದ್ದಾರೆ. ಅದಕ್ಕೆ ಈ ಕಡೆಯಿಂದಲೂ ಕಲ್ಲು ತೂರಾಟ ಮಾಡಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಆಗಿಲ್ಲ ಎನ್ನುವುದು ಗೃಹ ಸಚಿವ ಪರಮೇಶ್ವರ್ ವಾದ.
ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಇದು ಒಂದು ಕೋಮಿನ ವಿಪರೀತ ತುಷ್ಠಿಕರಣದ ಪರಿಣಾಮ. ರಾಜ್ಯ ಸರ್ಕಾರ ಕಾನೂನು ವ್ಯವಸ್ಥೆಯನ್ನು ಕಾಪಾಡುವಲ್ಲಿ ವಿಫಲವಾಗಿದೆ. ಒಂದು ಸಮುದಾಯದವರು ಬೇಕೆಂತಲೇ ಗಲಭೆ ಮಾಡಿದ್ದಾರೆ ಎನ್ನುವುದು ಕೇಂದ್ರ ಸಚಿವ ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಮೊದಲಾದವರ ಹೇಳಿಕೆ.
ಮಂಡ್ಯದವರೇ ಆದ ಸಚಿವ ಚೆಲುವರಾಯಸ್ವಾಮಿ ಮೊದಲಾದವರ ಪ್ರಕಾರ ಇದು ಆಕಸ್ಮಿಕವಾಗಿ ಆದ ಘಟನೆ. ರಾಜಕೀಯ ಮಾಡಬಾರದು.
ಒಟ್ಟಿನಲ್ಲಿ ಮಂಡ್ಯದಲ್ಲಿ ಕೋಮುಗಲಭೆ ಹೊತ್ತಿಕೊಳ್ಳೋದ್ರ ಮೊದಲ ಕಿಡಿ ಸಿಡಿಯುತ್ತಲೇ ಇತ್ತು. ಟಿಪ್ಪು ಸುಲ್ತಾನ್ ವಿರೋಧಿ ಹೋರಾಟ, ಮಂಡ್ಯದ ದೇವಸ್ಥಾನಗಳನ್ನು ಕೆಡವಿ ಮಸೀದಿ ಕಟ್ಟಿದ್ದಾರೆ ಎನ್ನುವ ಆರೋಪ, ಮಂಡ್ಯದ ಕೆರೆಗೋಡಿನಲ್ಲಿ ಕೇಸರಿ ಧ್ವಜ ಕೆಳಗಿಳಿಸಿದ್ದ ಪ್ರಕರಣ.. ಹೀಗೆ ಹಲವು ಘಟನೆಗಳು ನಡೆದಿದ್ದವು. ಆದರೆ ಹೇಗೋ ಕೊನೆಯ ಹಂತರದಲ್ಲಿ ಬಿರುಗಾಳಿ ತಣ್ಣಗಾಗುತ್ತಿತ್ತು. ಈಗ ಧಗಧಗನೆ ಹೊತ್ತಿ ಉರಿದಿದೆ.



