ರಾಜ್ಯ ಸರ್ಕಾರ ಕೈಗೆತ್ತಿಕೊಂಡಿರುವ ಜಾತಿ ಸಮೀಕ್ಷೆ ಹಲವು ಸಮುದಾಯಗಳನ್ನು ಒಡೆಯುತ್ತಿದೆ. ವೀರಶೈವ ಲಿಂಗಾಯತರಂತೂ ತಾವು ಏನು ಬರೆಸಬೇಕು ಎಂದೇ ಅರ್ಥವಾಗದೆ ಗೊಂದಲದಲ್ಲಿದ್ದಾರೆ. ಒಬ್ಬೊಬ್ಬರು ಒಂದೊಂದು ಮಾತು ಹೇಳುತ್ತಿದ್ದಾರೆ. ತಾವು ಹಿಂದೂಗಳೋ.. ಲಿಂಗಾಯತರೋ.. ಕೇವಲ ಲಿಂಗಾಯತರೋ…ವೀರಶೈವರು ಹೌದೋ.. ಅಲ್ಲವೋ.. ಅಥವಾ ವೀರಶೈವರು ಹೌದು, ಲಿಂಗಾಯತರಲ್ಲ.. ಈ ಪ್ರಶ್ನೆಗಳಿಗೆ ಉತ್ತರ ಸಿಗುವ ಮುಂಚೆ ಸಮೀಕ್ಷೆ ಮುಗಿದರೂ ಅಚ್ಚರಿ ಇಲ್ಲ. ಈ ನಡುವೆ ವೀರಶೈವ ಲಿಂಗಾಯತ ಮಹಾಸಭಾ, ಜಾಗತಿಕ ಲಿಂಗಾಯತ ಮಹಾಸಭಾ ಡಿವೈಡ್ ಆಗಿ ಆಗಿದೆ. ಈಗ ಸ್ವಾಮೀಜಿಗಳ ಸರದಿ.
ವಚನಾನಂದ ಶ್ರೀ. ಹರಿಹರ ಪಂಚಮಸಾಲಿ ಪೀಠ :
ವೀರಶೈವ ಲಿಂಗಾಯತರು ಹಿಂದೂಗಳೇ. ಧರ್ಮದ ಕಾಲಂನಲ್ಲಿ ಹಿಂದೂ ಎಂದು ಬರೆಸಿ. ಜಾತಿ ಕಾಲಂನಲ್ಲಿ ತಮ್ಮ ತಮ್ಮ ಉಪಜಾತಿ ಬರೆಸಿ. ಪಂಚಮಸಾಲಿಗಳು ಲಿಂಗಾಯತ ಪಂಚಮಸಾಲಿ ಎಂದು ಬರೆಸಿ ಎಂದು ಹೇಳಿದ್ದಾರೆ.
ಲಿಂಗಾಯತ ಮಠಾಧೀಶರ ಒಕ್ಕೂಟ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ :
ಡಾ.ಬಸವಲಿಂಗ ಪಟ್ಟದೇವರು, ಭಾಲ್ಕಿ
ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಲಿಂಗಾಯತ ಆಯ್ಕೆ ಇಲ್ಲ. ಹೀಗಾಗಿ ಜಾತಿ ಕಾಲಂನಲ್ಲಿ ಲಿಂಗಾಯತ ಎಂದು ಬರೆಸಿ. ಇತರೆ ಕಾಲಂನಲ್ಲಿ ಹಾಗೂ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಬರೆಸಿ ಎಂದು ಕರೆಕೊಟ್ಟಿದ್ದಾರೆ. ಲಿಂಗಾಯತ ಧರ್ಮದಲ್ಲಿ ವೀರಶೈವರೂ ಒಂದು ಉಪಜಾತಿ ಅಷ್ಟೇ ಎನ್ನುವುದು ಇವರ ವಾದ.
ಪಂಡಿತಾರಾಧ್ಯ ಶ್ರೀಗಳು, ಸಾಣೇಹಳ್ಳಿ ಮಠ
ಜಾತಿ ಕಾಲಂನಲ್ಲಿ ಲಿಂಗಾಯತ ಉಪಜಾತಿ ಬರೆಸಿ, ಇತರೆ ಹಾಗೂ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಬರೆಸಿ ಎಂದಿದ್ದಾರೆ.
ಈಗ ಗೊಂದಲ ಮೂಡಿರುವುದು ಯಾವ ಸ್ವಾಮೀಜಿಗಳ ಮಾತು ಕೇಳಬೇಕು ಎನ್ನುವುದು. ಏನೆಂದರೆ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸ್ವಾಮೀಜಿಗಳು ಹೇಳಿದಂತೆ ಕೇಳಿ ಎಂದಿದ್ದರು. ಈಗ ನೋಡಿದರೆ ಒಬ್ಬೊಬ್ಬ ಸ್ವಾಮೀಜಿಗಳದ್ದೂ ಒಂದೊಂದು ರಾಗ.
ಈ ನಡುವೆ ವೀರಶೈವ ಲಿಂಗಾಯತ ಜಾತಿ/ಉಪಜಾತಿಗಳ ಪಟ್ಟಿಯಲ್ಲಿ ಹಲವಾರು ಗೊಂದಲ ಇರುವುದರಿಂದ ಅವುಗಳನ್ನ ಸರಿಪಡಿಸುವಂತೆ ಅಖಿಲ ಭಾರತ ವೀರಶೈವ ಮಹಾಸಭಾ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಿಗೆ ಪತ್ರದ ಮೂಲಕ ಮನವಿ ಮಾಡಿದೆ.
ಕಾಂತರಾಜ್ ಆಯೋಗವು ವೀರಶೈವ ಲಿಂಗಾಯತಕ್ಕೆ ಸಂಬಂಧಿಸಿದಂತೆ 79 ಜಾತಿ/ಉಪಜಾತಿಗಳನ್ನ ಪ್ರಕಟಣೆ ಮಾಡಿದ್ದರು. ಆದರೆ ಸಮೀಕ್ಷೆ ನಂತರ ನೀಡಿದ ವರದಿಯಲ್ಲಿ 95 ದಾಖಲಾಗಿದ್ದವು. ಈಗ ಮತ್ತೆ ಆಯೋಗವು 84 ಜಾತಿ/ಉಪಜಾತಿಗಳನ್ನ ಪ್ರಕಟಣೆ ಮಾಡಿದೆ. ವೀರಶೈವ ಲಿಂಗಾಯತ ಮಹಾಸಭಾ ಕೇವಲ 32 ಜಾತಿ/ಉಪಜಾತಿಗಳನ್ನ ಸೇರಿಸುವಂತೆ ಹೇಳಿದ ಮೇಲೆ 135 ಜಾತಿ/ಉಪಜಾತಿಗಳನ್ನ ಪ್ರಕಟ ಮಾಡಲಾಗಿದೆ.
ಆದರೆ ಈಗ 40 ಜಾತಿ/ಉಪಜಾತಿಗಳನ್ನ ಸೇರಿಸಲಾಗಿದ್ದು ಇವುಗಳನ್ನ ಎರಡು ಅಥವಾ ಅದಕ್ಕಿಂತ ಹೆಚ್ಚು ಬಾರಿ ಪುನರವರ್ತಿತ ಮಾಡಲಾಗಿದೆ. ಇದಕ್ಕೆ ಆಯೋಗ ಯಾವ ಮಾನದಂಡ ಅನುಸರಿಸಿದೆ ಎನ್ನುವುದು ಸ್ಪಷ್ಟವಾಗಿಲ್ಲ. ನಮ್ಮ ಸಮಾಜಕ್ಕೆ ಸೇರಿದ ಎಲ್ಲ ಜಾತಿ/ಉಪಜಾತಿಗಳನ್ನ ಒಂದೇ ಕಡೆ ಸೇರಿಸುವಂತೆ ಮನವಿ ಮಾಡಿದ್ದರೂ ಈವರೆಗೂ ಯಾವುದೇ ಪ್ರಯೋಜನಾವಾಗಿಲ್ಲ ಎಂದು ಮಹಾಸಭಾ ಹೇಳಿದೆ.
ಇನ್ನು ಕರಡು ಕೈಪಿಡಿ ತಯಾರಿಸಿ ಸಾರ್ವಜನಿಕರಿಗೆ ನೀಡುವಂತೆ ಕೋರಲಾಗಿತ್ತು. ಗಣತಿ ಮಾಡುವಾಗ ಪಡೆದ ಮಾಹಿತಿ ಗೌಪ್ಯವಾಗಿ ಇಡುತ್ತಾರಾ?, ಜಾತಿ ಪ್ರಮಾಣಪತ್ರವನ್ನು ಸರ್ಕಾರದಿಂದ ನೀಡ್ತಾರಾ, ಇಲ್ಲವೇ? ಎನ್ನುವುದನ್ನ ಈವರೆಗೂ ಸ್ಪಷ್ಟಪಡಿಸಿಲ್ಲ. ಹೀಗಾಗಿ ಆಯೋಗದ ಕೆಲಸದ ಮೇಲೆ ಅನುಮಾನ ಮೂಡುತ್ತದೆ. ಇದರ ಜೊತೆಗೆ ಕೈಪಿಡಿಯಲ್ಲಿ ಸಾಕಷ್ಟು ತಪ್ಪುಗಳಿದ್ದರೂ ಸಮೀಕ್ಷೆಗೆ ಮುಂದಾಗಿರುವುದು ಎಷ್ಟು ಸರಿ? ಇಂತಹ ಗೊಂದಲ, ಅನುಮಾನಗಳಿಗೆ ಅವಕಾಶ ನೀಡದೇ ಪಾರದರ್ಶಕವಾಗಿ ನಡೆದುಕೊಳ್ಳುವಂತೆ ವೀರಶೈವ ಲಿಂಗಾಯತ ಮಹಾಸಭಾ, ಆಯೋಗವನ್ನು ಕೋರಿದೆ.



