ರಾಜ್ಯದಲ್ಲೀಗ 3 ಕ್ಷೇತ್ರಗಳಲ್ಲಿ ಬೈ ಎಲೆಕ್ಷನ್. ಆದರೆ ಮೂರೂ ಕ್ಷೇತ್ರಗಳಲ್ಲಿ ಯಾರ್ ಯಾರು ಗೆಲ್ಲುತ್ತಾರೆ.. ಅಥವಾ ಗೆಲ್ಲಬಹುದು ಎಂಬ ಲೆಕ್ಕಾಚಾರ ನಡುವೆ ಭಾರೀ ಕುತೂಹಲ ಕೆರಳಿಸಿರೋದು ಚನ್ನಪಟ್ಟಣ ಬೈ ಎಲೆಕ್ಷನ್. ಏಕೆಂದರೆ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರೋದು ನಿನ್ನೆ ಮೊನ್ನೆಯವರೆಗೆ ಕಾಂಗ್ರೆಸ್ ವಿರುದ್ಧ ತೊಡೆತಟ್ಟುತ್ತಿದ್ದ ಬಿಜೆಪಿಯಲ್ಲಿದ್ದ ಸಿಪಿ ಯೋಗೇಶ್ವರ್. ಹೀಗಾಗಿ ಜೆಡಿಎಸ್ʻನಿಂದ ನಿಖಿಲ್ ಕಣಕ್ಕಿಳಿದ್ದಾರೆ. ನಿಖಿಲ್ ಅವರಿಗೆ ಇದು 3ನೇ ಚುನಾವಣೆ. ಈಗಾಗಲೇ ಒಮ್ಮೆ ಲೋಕಸಭೆಯಲ್ಲಿ ಮಂಡ್ಯದಲ್ಲಿ, ವಿಧಾಸನಭೆಯಲ್ಲಿ ಚನ್ನಪಟ್ಟಣದ ಪಕ್ಕದ ಕ್ಷೇತ್ರ ರಾಮನಗರದಲ್ಲಿ ಸೋತಿರುವ ನಿಖಿಲ್ ಅವರಿಗೆ ಚನ್ನಪಟ್ಟಣ ಗೆಲ್ಲುವುದು ಅಳಿವು ಉಳಿವಿನ ಪ್ರಶ್ನೆ. ಹೀಗೆ ನಿಖಿಲ್ ಗೆಲುವಿನ ಹೋರಾಟ ನಡೆಸುತ್ತಿರುವಾಗಲೇ ಕುಮಾರಸ್ವಾಮಿ ಅವರಿಗೆ ಸಿದ್ದೇಶ್ವರ ಸ್ವಾಮಿ ಬಲಗಡೆ ಪ್ರಸಾದ ಕೊಟ್ಟಾಗಿದೆ.
ಎಚ್.ಡಿ.ಕುಮಾರಸ್ವಾಮಿ ಪೂಜೆ ಸಲ್ಲಿಸುತ್ತಿದ್ದ ವೇಳೆ ಸಿದ್ದೇಶ್ವರ ಸ್ವಾಮಿ ಬಲಗಡೆಯಿಂದ ಹೂವು ನೀಡಿದ್ದು, ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲ್ಲಲಿದ್ದಾರೆ ಎಂಬ ಶುಭ ಸೂಚನೆ ಎನ್ನುವುದು ಜೆಡಿಎಸ್ ಪಾಳೆಯದಲ್ಲಿ ಕೇಳಿ ಬರುತ್ತಿರುವ ಮಾತು. ಪತ್ನಿ, ಸೊಸೆ , ಮೊಮ್ಮಗನ ಜೊತೆಗೆ ಕುಮಾರಸ್ವಾಮಿ ಹಾಸನಾಂಬೆ ದರ್ಶನ ನಂತರ ಸಿದ್ದೇಶ್ವರ ಸ್ವಾಮಿ ದರ್ಶನ ಮಾಡಿದಾಗ ಬಲಗಡೆಯಿಂದ ಹೂ ಬಿದ್ದಿದೆ.ದೇವರ ಮೇಲಿಂದ ಹೂವು ಬಿದ್ದಾಗ ಪತ್ನಿ ಅನಿತಾ ಅವರು ಕುಮಾರಸ್ವಾಮಿ ಅವರಿಗೆ ಕೈ ಸನ್ನೆ ಮಾಡಿ ತಿಳಿಸಿದ್ದಾರೆ. ಶುಭ ಸಮಾರಂಭ ಆಯೋಜಿಸುವ ಮುನ್ನ ಭಕ್ತರು ಸಿದ್ದೇಶ್ವರ ಸ್ವಾಮಿಗೆ ವಿಶೇಷ ಪೂಜೆ, ಅಭಿಷೇಕದ ನಂತರ ಪ್ರಸಾದ ಕೇಳುವುದು ವಾಡಿಕೆ. ಅದರಂತೆ ಪ್ರಸಾದ ಸಿಕ್ಕ ನಂತರ ಶುಭ ಕಾರ್ಯ ನೆರವೇರಿರುವ ನಂಬಿಕೆಯಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇದಾದ ನಂತರ ಕುಮಾರಸ್ವಾಮಿ ಏನೇ ಕುತಂತ್ರ ಮಾಡಿದರೂ ಜನರು ನಿಖಿಲ್ನನ್ನು ಗೆಲ್ಲಿಸುತ್ತಾರೆ. ಚನ್ನಪಟ್ಟಣ ಜನರು ಅಭಿಮನ್ಯು ಮಾಡುವುದಿಲ್ಲ, ಅರ್ಜುನನ ಪಾತ್ರ ಕೊಡುತ್ತಾರೆ. ಚನ್ನಪಟ್ಟಣದಲ್ಲಿ ವಿರೋಧಿಗಳು ಕೊಡ್ತಿರುವ ಹೇಳಿಕೆ ಗಮನಿಸಿದ್ದೇನೆ. ಅವರಿಗೆ ಜನರೇ ಉತ್ತರ ಕೊಡುತ್ತಾರೆ. ನನ್ನ ಪುತ್ರನನ್ನು ಮುಗಿಸಲು ಕಾಂಗ್ರೆಸ್ ನಾಯಕರಿಂದ ಕುತಂತ್ರ ನಡೆದಿದ್ದು, ಅದು ಸಾಧ್ಯವಿಲ್ಲ ಎಂದು ಜನ ತೋರಿಸುತ್ತಾರೆ. ಚನ್ನಪಟ್ಟಣ ಕ್ಷೇತ್ರದಿಂದಲೇ ಅವರ ಅವನತಿ ಆರಂಭವಾಗುತ್ತದೆ ಎಂದಿದ್ದಾರೆ.
ಈ ನಡುವೆ ವಿಜಯೇಂದ್ರ ಅವರು ಲೆಮನ್ ಟೆಕ್ನಿಕ್ ಮೊರೆ ಹೋಗಿದ್ದಾರೆ. ಸಿಪಿ ಯೋಗೇಶ್ವರ್ ಇಲ್ಲದೆಯೂ ಪಕ್ಷಕ್ಕೆ ಅಸ್ಥಿತ್ವ ಇದೆ ಎಂದು ಸಾಬೀತು ಮಾಡುವ ಹೊಣೆಗಾರಿಕೆ ವಿಜಯೇಂದ್ರ ಅವರಿಗೂ ಇದೆ. ಇಷ್ಟಕ್ಕೂ ಲೆಮನ್ ಟೆಕ್ನಿಕ್ ಎಂದರೆ ಇಷ್ಟೇ. ಸಣ್ಣ ಸಣ್ಣ ಜಾತಿ ಸಮೂಹಗಳನ್ನು ಒಗ್ಗೂಡಿಸುವುದು. ವಿಜಯೇಂದ್ರ ಅವರು ಇದರಲ್ಲಿ ಚಾಣಾಕ್ಷರು. ದೊಡ್ಡ ದೊಡ್ಡ ಜಾತಿಗಳ ಜೊತೆ ಜೊತೆಯಲ್ಲೇ ಸಣ್ಣ ಸಣ್ಣ 2 ಸಾವಿರ, ಮೂರು ಸಾವಿರ ಮತಗಳು ಇರುವ ಸಮೂಹದಲ್ಲಿ ಒಗ್ಗಟ್ಟು ಮಾಡಿಸಿ, ಸಂಘಟಿಸುತ್ತಾರೆ. ಆ ಸಣ್ಣ ಸಣ್ಣ ಜಾತಿಗಳ ಮತಗಳನ್ನು ಒಗ್ಗೂಡಿಸಿದರೆ ಅದು ಹತ್ತಿರತ್ತಿರ ದೊಡ್ಡ ಜಾತಿಗಳ ಒಟ್ಟು ಮತಗಳ ಸಂಖ್ಯೆಗೆ ಸಮನಾಗುತ್ತವೆ.
ಚನ್ನಪಟ್ಟಣದಲ್ಲಿ ಒಟ್ಟು 2,32,375 ಮತದಾರರು ಇದ್ದಾರೆ. ಇನ್ನು 1.5 ಲಕ್ಷದಷ್ಟು ಒಕ್ಕಲಿಗ ಸಮುದಾಯದ ಮತಗಳು ಇದೆ. ಶೇ 48ರಷ್ಟು ಒಕ್ಕಲಿಗರ ಮತಗಳ ಪ್ರಾಬಲ್ಯ ಇದೆ. ಇನ್ನು ಪರಿಶಿಷ್ಟ ಪಂಗಡದಲ್ಲಿ 40 ಸಾವಿರ ಮತದಾರರು ಇದ್ದಾರೆ. 2ನೇ ಅತಿ ಹೆಚ್ಚು ಸ್ಥಾನದಲ್ಲಿ ಪರಿಶಿಷ್ಟ ಪಂಗಡ ಮತ ಇದೆ. ಇನ್ನು ಮುಸ್ಲಿಂ ಸಮುದಾಯದ ಮತಗಳು 32 ಸಾವಿರ ಇವೆ. ತಿಗಳರು 10 ಸಾವಿರ, ಬೆಸ್ತರು 10 ಸಾವಿರ, ಬ್ರಾಹ್ಮಣರು 2 ಸಾವಿರ, ಲಿಂಗಾಯತ 3 ಸಾವಿರ, ಕುರುಬ ಸಮುದಾಯದಿಂದ 8 ಸಾವಿರ ಮತಗಳು ಇದೆ. ಇನ್ನು ಇತರೆ ಹಿಂದುಳಿದ ವರ್ಗ 20 ಸಾವಿರ ಮತಗಳು ಇವೆ.
ವಿಜಯೇಂದ್ರ ಕಣ್ಣಿಟ್ಟಿರೋದು ಇದೇ ಮತಗಳ ಮೇಲೆ. ಅಂದರೆ ಹೇಗಿದ್ದರೂ ಒಕ್ಕಲಿಗ ಮತಗಳು ಅತ್ತ ಅರ್ಧ, ಇತ್ತ ಅರ್ಧ ಎಂಬ ಲೆಕ್ಕದಲ್ಲಿ ವಿಭಜನೆಯಾಗುತ್ತವೆ. ಪರಿಶಿಷ್ಟ ಪಂಗಡದ ಮತಗಳೂ ಅಷ್ಟೇ. ಮುಸ್ಲಿಂ ಸಮುದಾಯದ ಮತಗಳು ಮೈತ್ರಿ ಅಭ್ಯರ್ಥಿಗೆ ಬರೋದಿಲ್ಲ, 8 ಸಾವಿರದಷ್ಟಿರುವ ಕುರುಬ ಮತದಾರರು ಸಿದ್ದರಾಮಯ್ಯ ಅವರಿಗೆ ನಿಷ್ಠರು ಎಂಬ ಲೆಕ್ಕಾಚಾರದಲ್ಲಿ ಅಖಾಡಕ್ಕೆ ಇಳಿದಿರುವ ವಿಜಯೇಂದ್ರ, 10 ಸಾವಿರ ಬೆಸ್ತರು, 10 ಸಾವಿರದಷ್ಟು ತಿಗಳರು, 2 ಸಾವಿರ ಬ್ರಾಹ್ಮಣರು, 3 ಸಾವಿರ ಲಿಂಗಾಯತರು ಹಾಗೂ 20 ಸಾವಿರಕ್ಕೂ ಹೆಚ್ಚು ಇರುವ ಸಣ್ಣ ಸಣ್ಣ ಸಮುದಾಯದ ಮತಗಳನ್ನು ಕ್ರೋಢೀಕರಿಸುತ್ತಿದ್ದಾರೆ. ಇದೇ ರೀತಿ ಹಲವು ಉಪಚುನಾವಣೆ ಗೆದ್ದಿರುವ ವಿಜಯೇಂದ್ರ ಅವರಿಗೆ ಈ ವಿಷಯ ಚೆನ್ನಾಗಿ ಗೊತ್ತಿದೆ.
ಅತ್ತ ಕುಮಾರಸ್ವಾಮಿ ಪಕ್ಷದ ಶಾಸಕರಿಗೆ ಹೋಬಳಿವಾರು ಮತಗಟ್ಟೆಗಳನ್ನು ಹಂಚಿದ್ದರೆ, ಇತ್ತ ವಿಜಯೇಂದ್ರ ಸಣ್ಣ ಸಣ್ಣ ಸಮೂಹ ಸೆಳೆಯೋ ಪ್ರಯತ್ನದಲ್ಲಿದ್ದಾರೆ. ಒಂದು ಸಮಸ್ಯೆ ಏನೆಂದರೆ ಆರಂಭದಲ್ಲಿಯೆ ವಿಘ್ನ ಎದುರಾಗಿದೆ. ನೂರಾರು ಸ್ಥಳೀಯ ಬಿಜೆಪಿ ಕಾರ್ಯಕರ್ತರು ಸಿಪಿ ಯೋಗೇಶ್ವರ್ ಅವರನ್ನು ಬೆಂಬಲಿಸಿ, ಕಾಂಗ್ರೆಸ್ಸಿಗೆ ಶಿಫ್ಟ್ ಆಗಿದ್ದಾರೆ. ಆದರೆ ಅವರು ಯೋಗೇಶ್ವರ್ ಅವರ ಹಿಂದೆ ಬಂದವರು, ಅವರ ಜೊತೆಯಲ್ಲೇ ಹೋಗಿದ್ದಾರೆ. ಸ್ಥಳೀಯ ಮೂಲ ಬಿಜೆಪಿ ಕಾರ್ಯಕರ್ತರು ಒಂದಿಂದೂ ಕದಲಿಲ್ಲ ಎನ್ನುವುದು ವಿಜಯೇಂದ್ರ ವಾದ.



