ಒಂದಾನೊಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ದೊಡ್ಮನೆ (Dodmane) ಇಡೀ ಇಂಡಸ್ಟ್ರಿಯ ಸಮಸ್ಯೆಗಳನ್ನು ಬಗೆಹರಿಸುತ್ತಿತ್ತು. ಚಲನಚಿತ್ರ ವಾಣಿಜ್ಯ ಮಂಡಳಿ (Film chamber) ಇದ್ದರೂ, ನಿರ್ಮಾಪಕರ, ನಿರ್ದೇಶಕರ, ಕಲಾವಿದರ ಸಂಘಗಳಿದ್ದರೂ.. ಸಮಸ್ಯೆಗಳು ಉದ್ಭವವಾದಾಗ ಪರಿಹಾರ ಸಿಗುತ್ತಿದ್ದುದು ಪಾರ್ವತಮ್ಮ ರಾಜಕುಮಾರ್ ಅವರಿಂದ. ಡಾ.ರಾಜ್ ಕುಮಾರ್ (Dr.Raj kumar) ಅವರ ಹೆಸರಲ್ಲಿ ಇಡೀ ಚಿತ್ರರಂಗ ಒಗ್ಗಟ್ಟಾಗಿ ಹೋಗುತ್ತಿತ್ತು. ದೊಡ್ಮನೆಯವರೂ ಅಷ್ಟೆ, ತಮ್ಮ ಮೇಲಿಟ್ಟಿದ್ದ ನಂಬಿಕೆಗೆ ಚ್ಯುತಿ ಬರುವಂತೆ ಯಾವತ್ತೂ ನಡೆದುಕೊಂಡ ಉದಾಹರಣೆಗಳಿಲ್ಲ. ಆದರೆ, ಪಾರ್ವತಮ್ಮ (Dr.Parvathamma Rajkumar) ನಿಧನದ ನಂತರ ಚಿತ್ರರಂಗ ನಾಯಕತ್ವವಿಲ್ಲದೆ ಸೊರಗುತ್ತಿದೆ.
ಶಿವರಾಜ್ ಕುಮಾರ್, ರವಿಚಂದ್ರನ್ (Shiva Rajkumar) (Ravichandran) ಇದ್ದರೂ ಅತ್ತ ಅವರೂ ಉತ್ಸಾಹ ತೋರಿಸುತ್ತಿಲ್ಲ. ಇತ್ತ ಚಿತ್ರರಂಗದ ವಿವಾದ ಪುರುಷರೂ ನಾವೇ ಇಲ್ವಾ.. ಅವರ್ಯಾಕೆ ಎಂಬ ಮನಸ್ಥಿತಿ ಬೆಳೆಸಿಕೊಂಡಿದ್ದಾರೆ. ಫಲಿತಾಂಶ.. ನಾಲ್ಕು ಗೋಡೆಗಳ ಮಧ್ಯೆ ಮುಗಿದು ಹೋಗಬೇಕಿದ್ದ ವಿಷಯ, ವಿವಾದಗಳೆಲ್ಲ ಹಾದಿ ಬೀದಿ ರಂಪವಾಗುತ್ತಿವೆ. ಕೋರ್ಟ್ ಮೆಟ್ಟಿಲೇರುತ್ತಿವೆ. ನಿರ್ಮಾಪಕ ಎನ್.ಕುಮಾರ್ ಮತ್ತು ಕಿಚ್ಚ ಸುದೀಪ್ ನಡುವಣ ಹೋರಾಟ ಇದಕ್ಕೊಂದು ಉದಾಹರಣೆ. ಸರಿಯಾದ ಲೀಡರ್ ಇದ್ದಿದ್ದರೆ, ಇಡೀ ವಿವಾದ ಮಾತುಕತೆಯಲ್ಲೇ ಮುಗಿದು ಹೋಗುತ್ತಿತ್ತು. ಈಗ ಅದೇ ವಿವಾದ ಮತ್ತೊಂದು ಮಜಲು ತಲುಪಿದೆ.
ಸುದೀಪ್ (Kichcha Sudeep) ವಿರುದ್ಧ ಅನೇಕ ಆರೋಪ ಮಾಡಿರುವ ನಿರ್ಮಾಪಕ ಎಂ ಎನ್ ಕುಮಾರ್ (N kumar) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಧರಣಿ ಕುಳಿತಿದ್ದಾರೆ. ಅತ್ತ ಸುದೀಪ್, ಎನ್.ಕುಮಾರ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಮಧ್ಯೆ ಧರಣಿ ಕುಳಿತಿರುವ ಎನ್.ಕುಮಾರ್ ಶಿವಣ್ಣ ಅವರ ಮಧ್ಯಪ್ರವೇಶಕ್ಕೆ ಒತ್ತಾಯಿಸಿದ್ದಾರೆ.
ನಮ್ಮ ಕಮಿಟ್ಮೆಂಟ್ ಏನಿದೆ ಅದಕ್ಕೆ ಗೌರವಿಸಿದರೆ ಸಾಕು. ಈವರೆಗೂ ನಾನು ಯಾವ ಕಲಾವಿದರ ಬಳಿಯೂ ನೂರು ರೂಪಾಯಿ ಸಾಲ ಕೇಳಿಲ್ಲ. ನನ್ನ ಬಳಿ ಮೂರ್ನಾಲ್ಕು ದಾಖಲೆಗಳು ಇವೆ. ಒಂದೊಂದಾಗಿಯೇ ನೀಡುತ್ತೇನೆ. ನಾಳೆ (ಬುಧವಾರ, ಜುಲೈ 19) ಒಂದು ದಾಖಲೆಯನ್ನು ನೀಡುತ್ತೇನೆ. ನಾನು ಸುಳ್ಳು ಹೇಳುವುದಿಲ್ಲ, ಸುಳ್ಳು ಹೇಳಿ ಬದುಕುವ ಅವಶ್ಯಕತೆ ನನಗೆ ಇಲ್ಲ ಎಂದಿದ್ದಾರೆ ಎನ್.ಕುಮಾರ್.
ನನ್ನ ಸಮಸ್ಯೆ ಬಗೆಹರಿಯುವವರೆಗೂ ನಾನು ವಾಣಿಜ್ಯ ಮಂಡಳಿ ಬಳಿ ಧರಣಿ ಕೂರುತ್ತಿದ್ದೇನೆ. ರಾಜೀ ಸಂಧಾನಕ್ಕೆ ನಾವು ತಯಾರಿದ್ದೇವೆ. ಆದರೆ ಅವರು ಬರಲ್ಲ ಅಂದಾಗ ನಾವೇನು ಮಾಡಬೇಕು? ಇಂಥದ್ದನ್ನೆಲ್ಲ ಬಗೆಹರಿಸಲು ವಾಣಿಜ್ಯ ಮಂಡಳಿ ಇದೆ. ನನಗೆ ಸರಿಯಾದ ಸ್ಪಂದನೆ ಸಿಕ್ಕಿಲ್ಲ ಅನ್ನೋ ಮಾತನ್ನು ಮಾತ್ರ ನಾನು ಹೇಳಿದ್ದೇನೆ ಎಂದಿರುವ ಕುಮಾರ್ `ಶಿವಣ್ಣ ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು. ಮುಂದಾಳತ್ವ ವಹಿಸಿ ಸಮಸ್ಯೆ ಬಗೆಹರಿಸಬೇಕು’ ಎಂದು ಒತ್ತಾಯ ಮಾಡಿದ್ದಾರೆ.
ವಿವಾದ ಬಗೆಹರಿಸುವುದಕ್ಕೆ ಶಿವಣ್ಣ ಬರ್ತಾರಾ..? ಮುಂದಾಳತ್ವ ವಹಿಸಿಕೊಳ್ತಾರಾ.. ಪ್ರಶ್ನೆ ಎಲ್ಲರದ್ದು ಕೂಡಾ.. ಅಥವಾ ಸುದೀಪ್ ವಿರುದ್ಧದ ದಾಖಲೆಗಳನ್ನು ಒಂದೊಂದಾಗಿಯೇ ಬಿಡುತ್ತೇನೆ ಎನ್ನುತ್ತಿರುವ ಕುಮಾರ್, ದಾಖಲೆಗಳ ಬಹಿರಂಗ ಮಾಡಿಯೇ ಬಿಡ್ತಾರಾ..? ಸದ್ಯದ ಕುತೂಹಲ ಇಷ್ಟೆ.
ಸುದೀಪ್ ವಿರುದ್ಧ ಪ್ರತಿಭಟನೆಗೆ ಕುಮಾರ್ ಅವರ ಜೊತೆ ನಿರ್ಮಾಪಕರ ಸಂಘದ ಕಾರ್ಯದರ್ಶಿ ಪ್ರವೀಣ್ ಕುಮಾರ್, ನಿರ್ಮಾಪಕ ಎನ್.ಎಂ.ಸುರೇಶ್ ಕೂಡಾ ಸಾಥ್ ಕೊಟ್ಟಿದ್ದಾರೆ.
ವಿಷಯವೇನೆಂದರೆ ಚಲನಚಿತ್ರ ವಾಣಿಜ್ಯ ಮಂಡಳಿಯವರಾಗಲೀ, ನಿರ್ಮಾಪಕರು, ನಿರ್ದೇಶಕರು, ಕಲಾವಿದರ ಸಂಘದವರಾಗಲೀ.. ಯಾರೊಬ್ಬರಿಗೂ ತಮ್ಮ ತಮ್ಮ ಸಂಘಟನೆಗಳ ಮೇಲೇ ಹಿಡಿತವಿಲ್ಲ. ಸಂಘದ ನೇತೃತ್ವ ವಹಿಸಿರುವವರ ಬಗ್ಗೆ ಸಂಘದ ಸದಸ್ಯರಿಗೇ ವಿಶ್ವಾಸ ಇಲ್ಲ. ಅದು ನಿರುದ್ಯೋಗಿಗಳ ಟೈಂ ಪಾಸ್ ಅಡ್ಡಾ ಆಗಿ ಹೋಗಿದೆ. ಹೀಗಿರುವಾಗ ಚಿತ್ರರಂಗದ ಹಿರಿಯರು ನೇತೃತ್ವ ವಹಿಸಿಕೊಳ್ಳಬೇಕು ಅನ್ನೋದು ಎಲ್ಲರ ಮಾತು.
ಆದರೆ, ಹಿರಿಯರೆಂದು ಅನಿಸಿಕೊಂಡು ಬರುವವರ ಸಮಸ್ಯೆಯೇ ಬೇರೆ. ವಿವಾದ ಬಗೆಹರಿಯುವುದಿರಲಿ.. ಈಗ ಇರುವ ಗೌರವಕ್ಕೂ ಚ್ಯುತಿ ಬಂದರೇನು ಅನ್ನೋ ಆತಂಕ ಅವರಿಗೂ ಇರುತ್ತೆ.



