ಬಾಹುಬಲಿ ಭಾಗ 01 ರಿಲೀಸ್ ಆಗಿ, ಬಾಹುಬಲಿ 02 ಬರೋಕೆ ಮುನ್ನ ಇಂಥಾದ್ದೊಂದು ಕಥೆ ಹುಡುಕುವ ಟ್ರೆಂಡ್ ಶುರುವಾಗಿತ್ತು. ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ ಎಂಬ ಬಗ್ಗೆಯೇ ನೂರಾರು ಕಥೆಗಳು, ಕಲ್ಪನೆಗಳನ್ನ ಪ್ರೇಕ್ಷಕರೇ ಊಹಿಸಿದ್ದರು. ಅಂತಾದ್ದೊಂದು ಟ್ರೆಂಡ್ ಹುಟ್ಟುಹಾಕಿದೆ ಕಾಂತಾರ 01. ಕಥೆ ಲೀಕ್ ಆಗಿದೆಯಂತೆ.
ಸಾವಿರ ವರ್ಷಗಳ ಹಿಂದಿನ ಕಥೆಯಂತೆ ಕಾಂತಾರ :
ಇದನ್ನು ಹೇಳಿರುವುದು ಸ್ಟಂಟ್ ಮಾಸ್ಟರ್ ಅರ್ಜುನ್. ಅವರು ತಾವು ಹೇಳಿದ ಸ್ಟಂಟ್ಸ್, ಸಾಹಸ ದೃಶ್ಯಗಳ ಬಗ್ಗೆ ಹೇಳುವಾಗ ನಡುವೆ ಬಂದಿರೋ ಒಂದು ಮಾತು ಇದು ಸಾವಿರ ವರ್ಷಗಳ ಹಿಂದಿನ ಕಥೆ ಅನ್ನೋದನ್ನ ಹೇಳಿದೆ. ಅವರು ಹೇಳಿರೋದು ಇಷ್ಟೇ. ಆರಂಭದಲ್ಲಿ ಕೇವಲ ಒಂದು ಸೀಕ್ವೆನ್ಸ್ ಕಂಪೋಸ್ ಮಾಡಲು ಕರೆದಿದ್ರು. ಬಳಿಕ ನಾಲ್ಕು ಆಕ್ಷನ್ ಸೀಕ್ವೆನ್ಸ್ ಕಂಪೋಸ್ ಮಾಡುವ ಅವಕಾಶ ಕೊಟ್ರು. ಸಾವಿರ ವರ್ಷ ಹಿಂದಿನ ಕಥೆ ಚಿತ್ರದಲ್ಲಿದೆ. ಬೇರೆ ಸಿನಿಮಾಗಳನ್ನು ನೋಡಿ ಕಾಪಿ ಪೇಸ್ಟ್ ಮಾಡೋಕೆ ಆಗಲ್ಲ. ಪ್ರತಿ ಕದಲಿಕೆಯು ನಮ್ಮದೇ ಎನ್ನುವಂತಿರಬೇಕು. ಸಾವಿರಕ್ಕೂ ಹೆಚ್ಚು ಜನರ ನಡುವೆ ರಿಷಬ್ ಶೆಟ್ಟಿ ಹೈ-ಸ್ಪೀಡ್ ಚೇಸಿಂಗ್ ದೃಶ್ಯವೂ ಇದೆ. ಅದು ನಾನು ಸಂಯೋಜಿಸಿದ ಅತ್ಯಂತ ಅಪಾಯಕಾರಿ ಸ್ಟಂಟ್” ಎಂದು ಹೇಳಿಕೊಂಡಿರೋ ಅರ್ಜುನ್, ಆ ಮಾತಿನಲ್ಲೇ ಇದು ಸಾವಿರ ವರ್ಷಗಳ ಹಿಂದಿನ ಕಥೆ ಎಂಬ ಗುಟ್ಟು ಬಿಚ್ಚಿಟ್ಟಿದ್ದಾರೆ.
ಇದು ಕದಂಬರ ಕಾಲದ ನಾಗಾಸಾಧುಗಳ ಕಥೆಯಾ..?
ಕದಂಬರ ಕಥೆ ಎಂದರೆ, ತಕ್ಷಣ ನೆನಪಾಗುವುದು ಡಾ.ರಾಜ್ ಕುಮಾರ್ ಅಭಿನಯದ ಮಯೂರ. ಕನ್ನಡದ ಕ್ಲಾಸಿಕ್ ಐತಿಹಾಸಿಕ ಚಿತ್ರಗಳಲ್ಲೊಂದು. ಆದರೆ, ಇದು ರಾಜರ ಕಥೆ ಅಲ್ಲ. ನಾಗಾಸಾಧುಗಳ ಕಥೆಯಂತೆ. 2022ರ ಸಂಚಲನ ಘಟನೆಗಳಿಗೂ ಬಹಳ ಹಿಂದೆಯೇ, ಒಂದು ದಂತಕಥೆ ಹುಟ್ಟಿಕೊಂಡಿತು. ಕದಂಬ ರಾಜವಂಶದ ಆಳ್ವಿಕೆ ಅವಧಿಯಲ್ಲಿ ಅಂದರೆ 300CEಯಲ್ಲಿ ನಡೆಯುವ ಕಾಂತಾರ: ಅಧ್ಯಾಯ-1 ಕಥೆ ಬನವಾಸಿಯ ಅತೀಂದ್ರಿಯ ಕಾಡುಗಳಿಗೆ ಪ್ರೇಕ್ಷಕರನ್ನು ಕರೆದುಕೊಂಡು ಹೋಗುತ್ತದೆ. ಅಲ್ಲಿ ದೈವಿಕ ಶಕ್ತಿಗಳು ಜಾಗೃತಗೊಳ್ಳುತ್ತವೆ. ರಿಷಬ್ ಶೆಟ್ಟಿ ಉಗ್ರ ನಾಗಸಾಧುವಾಗಿ ರೂಪಾಂತರಗೊಳ್ಳುತ್ತಾರೆ. ಪ್ರಾಚೀನ ಆಚರಣೆಗಳು, ಅಲೌಕಿಕ ಶಕ್ತಿಗಳು ಮತ್ತು ಬುಡಕಟ್ಟು ಜನರ ಹೋರಾಟದ ಕಥೆ ಇದಾಗಿದೆ ಎಂದು ಹೇಳಲಾಗ್ತಿದೆ.
ಇದು ಹೊಸ ಕಾಲದ ಕಥೆ ಅಲ್ಲ ಎನ್ನುವುದಂತೂ ಗೊತ್ತಿರುವ ವಿಷಯ. ಕಾಸ್ಟ್ಯೂಮ್ ನೋಡಿದರೆ, ಹಾಗೆಯೇ ಅನಿಸುತ್ತದೆ. ರುಕ್ಮಿಣಿ ವಸಂತ್ ರಾಜಕುಮಾರಿಯಾಗಿ ನಟಿಸಿದ್ದಾರೆ. ಇದೆಲ್ಲವೂ ಈಗ ಹೊರಬಿದ್ದಿರುವ ಕಥೆಗಳಿಗೆ ತಕ್ಕಂತೆಯೇ ಇದೆ. ಕಾಂತಾರ ಅಧ್ಯಾಯ 1ರ ರನ್ಟೈಮ್ ಜಸ್ಟ್ 2 ಗಂಟೆ 28 ನಿಮಿಷ ಇರುವ ಚಿತ್ರದಲ್ಲಿ ಒಂದು ಊಹಿಸಲಾಗದ ಕಥೆಯಂತೂ ಇದೆ. ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗಿದ್ದರೂ, ಟ್ರೇಲರ್ ರಿಲೀಸ್ ಆಗಿಲ್ಲ. ಪ್ರಮೋಷನ್ ಶುರು ಆಗಿಲ್ಲ. ಸೆಪ್ಟೆಂಬರ್ 20ರಂದು ಕಾಂತಾರ: ಚಾಪ್ಟರ್ 1 ಸಿನಿಮಾದ ಟ್ರೇಲರ್ ರಿಲೀಸ್ ಆಗಲಿದೆ ಎಂದು ಹೇಳಲಾಗಿದೆ. ಆನಂತರ ಕಥೆಯ ಬಗ್ಗೆ ಒಂದು ಸ್ಪಷ್ಟ ಸುಳಿವು ಸಿಗಬಹುದು.



