ಬಿಎಸ್ ಯಡಿಯೂರಪ್ಪರ ಒಂದು ಮಾತು ಮುಟ್ಟಬಾರದ ಜಾಗಕ್ಕೆ ಮುಟ್ಟಿದೆ. ಜೆಡಿಎಸ್ ವಿಲವಿಲನೆ ಒದ್ದಾಡುತ್ತಿದ್ದರೆ, ಕೇಂದ್ರ ಸಚಿವ ವಿ ಸೋಮಣ್ಣ ಅವರಿಗೂ ಟೆನ್ಷನ್ ಶುರುವಾಗಿದೆ. ಏಕೆಂದರೆ..ಯಡಿಯೂರಪ್ಪನವರು ಪ್ರಯೋಗಿಸಿರುವ ರುದ್ರೇಶ್ ಅಸ್ತ್ರ. ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೂ 23 ತಿಂಗಳು ಬಾಕಿ ಇದೆ. ಅಂದರೆ ಪ್ಲಸ್ ಆರ್ ಮೈನಸ್ ಎರಡು ವರ್ಷ. ಹೀಗಿರುವಾಗಲೇ.. ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯರಾದ ಬಿಎಸ್ ಯಡಿಯೂರಪ್ಪ, ಯಶವಂತಪುರ ಬಿಜೆಪಿ ಅಭ್ಯರ್ಥಿ ಎಂದು ಬಿಜೆಪಿ ರೈತ ಮೋರ್ಛಾ ರಾಜ್ಯ ಉಪಾಧ್ಯಕ್ಷ ರುದ್ರೇಶ್ ಅವರನ್ನು ಘೋಷಣೆ ಮಾಡಿದ್ದಾರೆ.
ರುದ್ರೇಶ್ ಅವರ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಯಡಿಯೂರಪ್ಪ ಈ ವೇಳೆ ʻʻರುದ್ರೇಶ್ ಅವರು ಮುಂದಿನ ವಿಧಾನಸಭಾ ಚುನಾವಣೆಗೆ ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ನಿಸ್ವಾರ್ಥ ಸೇವೆಯಿಂದ ಸಮಾಜಮುಖಿ ಕೆಲಸ ಮಾಡುವವರಿಗೆ ಯಾವಾಗಲೂ ನನ್ನ ಆಶೀರ್ವಾದ ಇದ್ದೇ ಇರುತ್ತದೆ. ರುದ್ರೇಶ್ ಅವರಿಗೆ ಜನರ ಆಶೀರ್ವಾದವೂ ಸಿಗುವಂತೆ ಶ್ರಮಿಸಲಾಗುವುದು. ಶಾಸಕರಾಗಿ ರುದ್ರೇಶ್ ಅವರ ಆಯ್ಕೆಯನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲʼʼ ಎಂದು ಹೇಳಿದ್ದಾರೆ.
ಅಂದಹಾಗೆ ಈಗ ಯಶವಂತಪುರ ಕ್ಷೇತ್ರದ ಶಾಸಕರಾಗಿರುವುದು ಎಸ್ ಟಿ ಸೋಮಶೇಖರ್. ಅವರಿಗೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗುವುದು ಸಾಧ್ಯವಿಲ್ಲದ ಮಾತು. ಅವರೀಗಾಗಲೇ ಬಿಜೆಪಿಯಿಂದ ಉಚ್ಚಾಟನೆಗೊಂಡಿದ್ದಾರೆ. ಆ ಸ್ಥಾನಕ್ಕೆ ರುದ್ರೇಶ್ ಅವರ ಹೆಸರು ಹೇಳಿದ್ದಾರೆ ಯಡ್ಯೂರಪ್ಪ.
ಜೆಡಿಎಸ್ ಆಕ್ರೋಶ :
ಇದರು ಮೈತ್ರಿ ಪಕ್ಷ ಜೆಡಿಎಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಏಕೆಂದರೆ ಈ ಮಾತು ಹೇಳಿದಾಗ ಜೆಡಿಎಸ್ನ ಜವರಾಯಿ ಗೌಡ ಜೊತೆಯಲ್ಲೇ ಇದ್ದರು. ಜವರಾಯಿ ಗೌಡ, ಈ ಹಿಂದೆ ಎಸ್ ಟಿ ಸೋಮಶೇಖರ್ ವಿರುದ್ಧವೇ ಸೋತಿರುವ ಅಭ್ಯರ್ಥಿ. ಸೋಲಿನ ಹ್ಯಾಟ್ರಿಕ್ ಸಾಧಿಸಿರುವ ಜವರಾಯಿ ಗೌಡ, ಈ ಬಾರಿ ಜೆಡಿಎಸ್-ಬಿಜೆಪಿ ಮೈತ್ರಿಯಿಂದ ಗೆಲ್ಲಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಆದರೆ, ಅದೇ ಬೂಮ್ ರಾಂಗ್ ಆದಂತೆ ಕಾಣ್ತಿದೆ.
ವಿ ಸೋಮಣ್ಣ ಟೆನ್ಷನ್ ಯಾಕೆ..?
ಎಂ.ರುದ್ರೇಶ್ ಟಿಕೆಟ್ ಘೋಷಣೆ ಮಾಡಿದ್ದಕ್ಕೆ ಬಿಜೆಪಿಯಲ್ಲಿಯೇ ಚರ್ಚೆ ಆರಂಭವಾಗಿದೆ. ತಮ್ಮ ಆಪ್ತನಿಗೆ ಈಗಲೇ ಟಿಕೆಟ್ ಘೋಷಣೆ ಮಾಡಿರುವುದು ಸರಿಯಲ್ಲ. ಜೆಡಿಎಸ್ ಜತೆಗೆ ಮೈತ್ರಿ ಇರುವಾಗ ಏಕಪಕ್ಷೀಯವಾಗಿ ಟಿಕೆಟ್ ಘೋಷಣೆ ಸರಿಯಲ್ಲ ಎಂದು ಪಕ್ಷದಲ್ಲೇ ಚರ್ಚೆಗಳು ಆರಂಭಗೊಂಡಿವೆ. ಅದಕ್ಕೆ ಕಾರಣವಾಗಿರುವುದು ವಿ ಸೋಮಣ್ಣ.
ಏಕೆಂದರೆ 2023ರಲ್ಲಿ ಎಂ ರುದ್ರೇಶ್ ಅವರು ಚಾಮರಾಜನಗರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ವಿ ಸೋಮಣ್ಣ ಅವರಿಗೆ ಟಿಕೆಟ್ ಸಿಕ್ಕಿತ್ತು. ಬಹಿರಂಗವಾಗಿಯೇ ಬಿಜೆಪಿ ಟಿಕೆಟ್ ಘೋಷಣೆ ವಿರುದ್ಧ ಆಕ್ರೋಶ ತೋರಿಸಿದ್ದ ರುದ್ರೇಶ್, ಚುನಾವಣೆಯಲ್ಲಿ ತಟಸ್ಥವಾಗಿ ಉಳಿದು ಬಿಟ್ಟರು. ರುದ್ರೇಶ್ ಕೆಲಸ ಮಾಡಿದ್ದರೆ, ತಾವು ಸೋಲುವ ಸಂದರ್ಭವೇ ಬರುತ್ತಿರಲಿಲ್ಲ ಎಂದು ವಿ ಸೋಮಣ್ಣ ಹೈಕಮಾಂಡಿಗೆ ಹೇಳಿಕೊಂಡಿದ್ದರು. ಹೈಕಮಾಂಡ್ ಏನೇ ಗುರ್ರ್ ಎಂದರೂ, ಯಡಿಯೂರಪ್ಪ ಇದ್ದ ಕಾರಣ, ರುದ್ರೇಶ್ ಸೇಫ್ ಆಗಿದ್ದರು. ಈಗ ಮತ್ತೊಮ್ಮೆ ಯಡಿಯೂರಪ್ಪ ರುದ್ರೇಶ್ ಅಸ್ತ್ರ ಪ್ರಯೋಗ ಮಾಡಿದ್ದಾರೆ. ಜೆಡಿಎಸ್ ಜೊತೆ.. ಸೋಮಣ್ಣ ಕೂಡಾ ಟೆನ್ಷನ್ ಆಗಿರುವುದು ಆ ಕಾರಣಕ್ಕೆ.
ಕಾರಣ.. ಇಷ್ಟೇ. ವಿ ಸೋಮಣ್ಣ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಲಿದ್ದಾರೆ ಎಂಬ ಮಾತುಗಳು ಚರ್ಚೆಗೆ ಬರುತ್ತಿರುವಾಗಲೇ ಯಡಿಯೂರಪ್ಪ ಈ ಅಸ್ತ್ರ ಪ್ರಯೋಗ ಮಾಡಿರುವುದು. ರುದ್ರೇಶ್ ಅಸ್ತ್ರ, ಬಿಜೆಪಿಯ ಸೋಮಣ್ಣ ಪರ ನಿಂತಿರುವ ನಾಯಕರಿಗೂ ಒಂದು ಎಚ್ಚರಿಕೆ. ತಟ್ಟಬೇಕಾದ ಸ್ಥಳವನ್ನು ಈಗಾಗಲೇ ಅದು ತಟ್ಟಿದೆ.
ನಾನು ಯಶವಂತಪುರ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ. 2008ರಲ್ಲೇ ಯಶವಂತಪುರಕ್ಕೆ ಅಭ್ಯರ್ಥಿಯಾಗಬೇಕಿತ್ತು. ಆದರೆ, ಪಕ್ಷದ ಸೂಚನೆ ಮೇರೆಗೆ ರಾಮನಗರಕ್ಕೆ ಹೋಗಿದ್ದೆ. ಟಿಕೆಟ್ ಸಂಬಂಧ ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡಲಿದೆ. ಯಡಿಯೂರಪ್ಪ ಅವರು ನನ್ನ ಹೆಸರು ಘೋಷಣೆ ಮಾಡುವಾಗ ಜೆಡಿಎಸ್ನ ಜವರಾಯಿಗೌಡ ಸಹ ಇದ್ದು, ಖುಷಿಪಟ್ಟಿದ್ದಾರೆ. ನನ್ನ ಮೇಲಿನ ಪ್ರೀತಿಯಿಂದ ಹೆಚ್ಚು ಉತ್ಸಾಹದಿಂದ ಕೆಲಸ ಮಾಡಲಿ ಎಂದು ತೇಪೆ ಹೆಚ್ಚುವ ಪ್ರಯತ್ನ ಮಾಡಿದ್ದಾರೆ ರುದ್ರೇಶ್.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕೂಡಾ ಬಿ.ಎಸ್.ಯಡಿಯೂರಪ್ಪ ಅವರು ಹಿರಿಯರು. ಪಕ್ಷದ ಅಧ್ಯಕ್ಷರಾಗಿದ್ದವರು. ಪ್ರಸ್ತುತ ಸೆಂಟ್ರಲ್ ಎಲೆಕ್ಷನ್ ಕಮಿಟಿ ಸದಸ್ಯರು. ಎಂ.ರುದ್ರೇಶ್ ಅವರ ಮೇಲಿನ ಪ್ರೀತಿಯಿಂದ ಈ ಹೇಳಿಕೆ ನೀಡಿದ್ದಾರೆ. ಆದರೆ, ಅಂತಿಮ ತೀರ್ಮಾನ ಹೈಕಮಾಂಡ್ ಮಾಡಲಿದೆ. ಟಿಕೆಟ್ ಕುರಿತು ನಮ್ಮ ಕೋರ್ ಕಮಿಟಿ ಚರ್ಚಿಸಲಿದೆ. ಸದ್ಯಕ್ಕೆ ಚುನಾವಣೆ ಇಲ್ಲ. ಯಾವುದೇ ಕ್ಷೇತ್ರದ ಟಿಕೆಟ್ ಅಂತಿಮ ಮಾಡುವುದು ಹೈಕಮಾಂಡ್. ಶಿಕಾರಿಪುರ ಸೇರಿ ಎಲ್ಲವನ್ನೂ ಹೈಕಮಾಂಡ್ ತೀರ್ಮಾನ ಮಾಡಲಿದೆ. ಈ ವಿಷಯವನ್ನು ನಾನು ಹೆಚ್ಚು ಬೆಳೆಸಲು ಹೋಗುವುದಿಲ್ಲ ಎಂದು ಹೇಳಿದ್ದಾರೆ.
ಅಂದಹಾಗೆ ರುದ್ರೇಶ್, ಯಡಿಯೂರಪ್ಪನವರ ಕಟ್ಟಾ ಬೆಂಬಲಿಗ. ಕೆಜೆಪಿ ಕಟ್ಟಿದಾಗಲೂ ಯಡಿಯೂರಪ್ಪ ಬೆನ್ನಿಗೆ ನಿಂತಿದ್ದವರು. ಒಮ್ಮೆ ಎಲೆಕ್ಷನ್ ಸೋತಿದ್ದಾರೆ. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ರುದ್ರೇಶ್ ಅವರಿಗೆ ಸ್ಥಾನಮಾನ ಗೌರವ ಕೊಟ್ಟಿದ್ದಾರೆ ಯಡಿಯೂರಪ್ಪ.



