ಇತ್ತೀಚೆಗೆ ನಟ ದಿಲೀಪ್ ಅವರ ಗ್ಯಾಂಗ್ ನಟಿಯೊಬ್ಬರನ್ನು ಅಪಹರಿಸಿ, ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ ಪ್ರಕರಣ ಗೊತ್ತಿದೆಯಷ್ಟೇ. ಆ ಕೇಸಿನಲ್ಲಿ ನಟ ದಿಲೀಪ್ ಖುಲಾಸೆಯಾಗಿದ್ದು, ಆತನ ಜೊತೆ ಇದ್ದ 6 ಜನಕ್ಕೆ 20 ವರ್ಷ ಶಿಕ್ಷೆಯಾಗಿದೆ. ಕೇರಳವನ್ನಷ್ಟೇ ಅಲ್ಲ, ಇಡೀ ಭಾರತವನ್ನೇ ಬೆಚ್ಚಿ ಬೀಳಿಸಿದ ಪ್ರಕರಣ ಅದು. ಹಾಗೆ ಕಿರುಕುಳ ಎದುರಿಸಿ, ಬಚಾವ್ ಆಗಿ ಬಂದು ಕಾನೂನು ಸಮರ ನಡೆಸಿದ್ದ ದಿಟ್ಟ ಹೆಣ್ಣು ಮಗಳು ಇನ್ಯಾರೋ ಅಲ್ಲ, ಜಾಕಿ ಭಾವನಾ.
ಜಾಕಿ ಭಾವನಾ ಎಂದೇ ಖ್ಯಾತರಾಗಿರುವ ನಟಿ ಭಾವನ, ಮೂಲತಃ ಮಲಯಾಳಂನವರು. ಕನ್ನಡದಲ್ಲಿ ಸ್ಟಾರ್ ಆಗಿರುವ ಭಾವನಾ, ಮಲಯಾಳಂ, ತೆಲುಗು, ತಮಿಳಿನಲ್ಲೂ ನಟಿಸಿದ್ದಾರೆ. ಪುನೀತ್ ಅವರ ಜಾಕಿ ಚಿತ್ರದಿಂದ ಕನ್ನಡಕ್ಕೆ ಪರಿಚಿತರಾದ ಭಾವನಾ, ಅದಾದ ಮೇಲೆ ಸುದೀಪ್, ಗಣೇಶ್, ಉಪೇಂದ್ರ, ಪ್ರಜ್ವಲ್.. ಮೊದಲಾದವರ ಜೊತೆ ನಟಿಸಿದರು. ಪುನೀತ್ ಜೊತೆ ನಟಿಸಿದ ಚಿತ್ರಗಳೆಲ್ಲ ಸೂಪರ್ ಹಿಟ್ ಎನ್ನುವುದು ಇನ್ನೊಂದು ಹೆಗ್ಗಳಿಕೆ.
ಮಲಯಾಳಂ ಚಿತ್ರವೊಂದರಲ್ಲಿ ನಟಿಸುತ್ತಿದ್ದಾಗ ನಟಿ ಭಾವನಾ ಕಿಡ್ನಾಪ್ ಆಗಿದ್ದರು. ಈಗ ಹೊರಬಿದ್ದಿರುವುದು ಅದೇ ಪ್ರಕರಣದ ತೀರ್ಪು. ʻʻಈ ದೇಶದಲ್ಲಿ ಕಾನೂನು ಒಬ್ಬೊಬ್ಬರಿಗೆ ಒಂದು. ಎಲ್ಲರನ್ನೂ ಕಾನೂನಿನ ಮುಂದೆ ಸಮಾನವಾಗಿ ನಡೆಸಿಕೊಳ್ಳುವುದಿಲ್ಲ. ಕಾನೂನು ಎಲ್ಲರಿಗೂ ಒಂದೇ ಅಲ್ಲʼʼ ಎಂದು ಪೋಸ್ಟ್ ಹಾಕಿದ್ದಾರೆ ಜಾಕಿ ಭಾವನಾ.
ಜಾಕಿ ಭಾವನಾ ಈ ಪೋಸ್ಟ್ ಹಾಕಿರುವುದುದು ಮಲಯಾಳಂ ನಟ ದಿಲೀಪ್ ಖುಲಾಸೆಯಾದ ಪ್ರಕರಣದ ಬಗ್ಗೆ. ನಟ ದಿಲೀಪ್ ಮತ್ತವರ ಗ್ಯಾಂಗ್ ನಟಿಯೊಬ್ಬರನ್ನು ಅಪಹರಿಸಿ ಲೈಂಗಿಕವಾಗಿ ಹಿಂಸೆ ನೀಡಿತ್ತು. ಆ ಪ್ರಕರಣದಲ್ಲಿ ದಿಲೀಪ್ ಖುಲಾಸೆಯಾಗಿ, ಆತನ ಗ್ಯಾಂಗಿನ 6 ಮಂದಿಗೆ 20 ವರ್ಷ ಜೈಲು ಶಿಕ್ಷೆಯಾಗಿದೆ.
ತೀರ್ಪಿನ ಕುರಿತು ಪ್ರತಿಕ್ರಿಯೆ ನೀಡಿರುವ ಜಾಕಿ ಭಾವನಾ ʻʻಈ ತೀರ್ಪು ಅನೇಕ ಜನರನ್ನು ಅಚ್ಚರಿಗೊಳಿಸಿರಬಹುದು. ಆದರೆ ನನಗೆ ಯಾವ ಅಚ್ಚರಿಯೂ ಆಗಲಿಲ್ಲ. 2020ರ ಆರಂಭದಲ್ಲಿಯೇ ಈ ಕೇಸ್ನಲ್ಲಿ ಏನೋ ಸರಿಯಿಲ್ಲ ಎಂದು ನನಗೆ ಅನಿಸಲು ಪ್ರಾರಂಭಿಸಿತು. ಪ್ರಕರಣವನ್ನು ನಿರ್ವಹಿಸುವ ರೀತಿಯಲ್ಲಿ ಬದಲಾವಣೆಗಳನ್ನು ಗಮನಿಸಿದ್ದೆ. ಹಲವು ಅರ್ಜಿಗಳು, ಸಾಕ್ಷಿಗಳ ವಿಚಾರಣೆ ಪ್ರಕ್ರಿಯೆಯಲ್ಲಿ ನಿರ್ಲಕ್ಷ್ಯ ಕಾಣುತ್ತಿತ್ತು. 8 ವರ್ಷ, 9 ತಿಂಗಳು 23 ದಿನಗಳ ನಂತರ, ಬಹಳ ದೀರ್ಘ ಮತ್ತು ನೋವಿನ ಪ್ರಯಾಣದ ಕೊನೆಯಲ್ಲಿ ನಾನು ಅಂತಿಮವಾಗಿ ಒಂದು ಸಣ್ಣ ಬೆಳಕಿನ ಕಿರಣವನ್ನು ಕಂಡೆ. ಆರು ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಲಾಗಿದೆ ಮತ್ತು ಅದಕ್ಕಾಗಿ ನಾನು ಕೃತಜ್ಞಳಾಗಿದ್ದೇನೆ. ನನ್ನ ನೋವನ್ನು ʻʻಸುಳ್ಳು ಮತ್ತು ಕಾಲ್ಪನಿಕ ಕಥೆʼʼ ಎಂದು ಕರೆದ ಎಲ್ಲರಿಗೂ ಈಗ ಆರೋಪಿಗಳಿಗೆ ಆಗಿರುವ ಶಿಕ್ಷೆಯೇ ಸೂಕ್ತವಾದ ಉತ್ತರʼʼ ಎಂದು ಬರೆದುಕೊಂಡಿದ್ದಾರೆ ಭಾವನಾ. ಆ ಮೂಲಕ ಪ್ರಕರಣದಲ್ಲಿ ದೂರುದಾರೆ ತಾವೇ ಎಂಬುದನ್ನೂ ಒಪ್ಪಿಕೊಂಡಿದ್ದಾರೆ. ಇದು ಬಹುತೇಕ ಮಾಧ್ಯಮದವರಿಗೆ ಗೊತ್ತಿತ್ತಾದರೂ, ಗೌಪ್ಯತೆ ಕಾರಣದಿಂದಾಗಿ ಹೆಸರು ಹೇಳುತ್ತಿರಲಿಲ್ಲ.
ಪ್ರಕರಣ ನಡೆದಿದ್ದು 2017ರಲ್ಲಿ. ಚಿತ್ರೀಕರಣ ಮುಗಿಸಿ ವಾಪಸ್ ಬರುತ್ತಿದ್ದಾಗ ಕಿಡ್ನಾಪ್ ಮಾಡಲಾಗಿತ್ತು. ಕಿರುಕುಳ ನೀಡಲಾಗಿತ್ತು. ಹೊರಬಿದ್ದ ಭಾವನಾ, ಪೊಲೀಸ್ ಠಾಣೆ ಮೆಟ್ಟಿಲೇರಿ ಪ್ರಕರಣ ದಾಖಲಿಸಿ ಹೋರಾಟ ನಡೆಸಿದ್ದರು.
ನಟಿ ಭಾವನಾ ಅವರ ಧೈರ್ಯವನ್ನು ಮೆಚ್ಚಬೇಕು. ಸಾಮಾನ್ಯವಾಗಿ ಇಂತಹ ಪ್ರಕರಣಗಳಲ್ಲಿ ದೂರು ಕೊಡುವುದಕ್ಕೇ ಹಿಂದೇಟು ಹಾಕುವವರೇ ಹೆಚ್ಚು. ಅಂತಹುದರಲ್ಲಿ ಕಾನೂನಿನ ಕಟಕಟೆಯಲ್ಲಿ ಆರೋಪಿಗಳನ್ನು ನಿಲ್ಲಿಸಿ, ಶಿಕ್ಷೆಯಾಗುವವರೆಗೂ ಹೋರಾಟ ನಡೆಸಿದವರು ಭಾವನಾ. ಆದರೆ, ಪ್ರಕರಣದಲ್ಲಿ ಮೂಲ ಆರೋಪಿ ದಿಲೀಪ್ ಅವರೇ ಖುಲಾಸೆಯಾಗಿರುವುದನ್ನು ಭಾವನಾ ಅವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ.
ಜಾಕಿ ಭಾವನಾ, ಈಗ ಕನ್ನಡದವರೇ ಆಗಿ ಹೋಗಿದ್ದಾರೆ. ಭಾವನಾ ಅವರು ಕನ್ನಡದ ಸಿನಿಮಾ ನಿರ್ಮಾಪಕ, ನಿರ್ದೇಶಕರೂ ಆಗಿರುವ ನವೀನ್ ಅವರನ್ನು ಮದುವೆಯಾಗಿದ್ದಾರೆ. ಕಿಡ್ನಾಪ್ ಪ್ರಕರಣ ಆದ ಮೇಲೆ ನಡೆದ ಮದುವೆ ಇದು ಎನ್ನುವುದು ವಿಶೇಷ.



