ಬಿ ವೈ ವಿಜಯೇಂದ್ರ. ರಾಜ್ಯ ಬಿಜೆಪಿ ಅಧ್ಯಕ್ಷ. ಇವರು ಬಿಜೆಪಿಗೆ ಅನಿವಾರ್ಯವೇ.. ಇವರಿಲ್ಲದಿದ್ದರೆ ಬಿಜೆಪಿಗೆ ನೆಲೆ ಇಲ್ಲವೇ.. ಇವರೊಬ್ಬರಿಂದಲೇ ಪಕ್ಷ ಗೆಲ್ಲಬೇಕಾ.. ಗೆಲ್ಲುತ್ತಾ.. ಇವರನ್ನು ಬಿಟ್ಟು ಬೇರೆಯವರಿಂದ ಪಕ್ಷ ಕಟ್ಟುವುದಕ್ಕೆ ಸಾಧ್ಯ ಇಲ್ಲವೇ.. ಇಂತಹ ಹತ್ತು ಹಲವಾರು ಪ್ರಶ್ನೆಗಳೇನೋ ಇವೆ. ಅವುಗಳನ್ನೆಲ್ಲ ಒಂದೊಂದಾಗಿ ನೋಡುತ್ತಾ ಹೋದರೆ.. ಆಗ ವಿಜಯೇಂದ್ರರೇ ಏಕೆ ಅಧ್ಯಕ್ಷರಾಗಬೇಕು ಎಂಬುದಕ್ಕೆ ಕಾರಣಗಳೂ ಸಿಗುತ್ತಾ ಹೋಗುತ್ತವೆ. ಆಗ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಹುದ್ದೆ ಬೇಡ ಎನ್ನುವವರು ಮಾಡುತ್ತಿರುವ ತಪ್ಪು, ಪ್ರಮಾದಗಳೂ ಗೊತ್ತಾಗುತ್ತವೆ.
ವಿಜಯೇಂದ್ರಗೆ ತಂದೆ ಹೆಸರಿನ ಬಲ :
ನೆಪೋಟಿಸಂ ಎನ್ನಿ. ಬೇರೇನಾದರೂ ಅನ್ನಿ. ಯಡಿಯೂರಪ್ಪ ಅವರ ಮಗ ಎಂಬುದಂತೂ ಸತ್ಯ. ಯಡಿಯೂರಪ್ಪ ಜನಪ್ರಿಯತೆಗೆ ಟೋಟಲ್ 100% ಟ್ರಾನ್ಸ್ ಫರ್ ಆಗಿಲ್ಲ ಎನ್ನುವುದೂ ಸತ್ಯ. ಆದರೆ.. ವರ್ಗವಾಗಿರುವ ಜನಪ್ರಿಯತೆಯ ಹತ್ತಿರಕ್ಕೆ ಇರುವ ಇನ್ನೊಬ್ಬ ನಾಯಕ ಬಿಜೆಪಿಯಲ್ಲಿ ಇಲ್ಲ.
ರಾಜ್ಯದಾದ್ಯಂತ ಜನಪ್ರಿಯ ನಾಯಕ :
ರಾಜ್ಯದಲ್ಲಿ ಎಲ್ಲಿಯೇ ಹೋದರೂ ಬೆಂಬಲಿಗರು ಇರುವ, ಕಾರ್ಯಕರ್ತರನ್ನು ಸೇರಿಸುವ ಶಕ್ತಿ ಇರುವ ಜನಪ್ರಿಯ ನಾಯಕ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಬೇರೆಯವರ ಮುಖ ಪರಿಚಯ ಇರಬಹುದು. ಜನಪ್ರಿಯತೆಯಲ್ಲಂತೂ ಅಲ್ಲವೇ ಅಲ್ಲ. ವಿಜಯೇಂದ್ರ ಅವರನ್ನು ವಿರೋಧಿಸುವ ಬಹುತೇಕ ನಾಯಕರ ಶಕ್ತಿ, ಜನಪ್ರಿಯತೆ ತಮ್ಮ ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಿದೆ. ಪಕ್ಕದ ಒಂದು ಕ್ಷೇತ್ರದಲ್ಲೂ ಪ್ಯಾಪುಲಾರಿಟಿ ಇದ್ದರೆ ಅದೇ ಗ್ರೇಟ್. ಉಳಿದಂತೆ ಬಹುತೇಕರು ಕೇವಲ ಮೀಡಿಯಾ ಟೈಗರ್ಸ್.
ಸಮುದಾಯಗಳ ಬಲ :
ಇನ್ನು ಲಿಂಗಾಯತ ಸಮುದಾಯದ ಪ್ರಬಲ ನಾಯಕ. ಅಷ್ಟೇ ಅಲ್ಲ, ಯಡಿಯೂರಪ್ಪ ಅವರಿಂದಾಗಿ ಇತರೆ ಸಮುದಾಯಗಳ ಬೆಂಬಲವೂ ಸಿಕ್ಕಿದೆ. ಏಕೆಂದರೆ ರಾಜ್ಯ ಬಿಜೆಪಿಯಲ್ಲಿ ಎಲ್ಲ ಸಮುದಾಯಗಳಲ್ಲೂ ಜನಪ್ರಿಯತೆ ಹೊಂದಿದ್ದ ಏಕೈಕ ನಾಯಕ ಯಡಿಯೂರಪ್ಪ. ಅದು ವಿಜಯೇಂದ್ರ ಅವರಿಗೆ ಟ್ರಾನ್ಸ್ಫರ್ ಆಗಿರುವುದು ನಿಜ. ದಲಿತ ಸಮುದಾಯಗಳು, ನೇಕಾರ, ಗಾಣಿಗ, ಬೆಸ್ತ, ಈಡಿಗ.. ಹೀಗೆ ಹಲವು ಹಿಂದುಳಿದ ವರ್ಗಗಳು, ಕ್ರೈಸ್ತರು ಅಷ್ಟೇ ಏಕೆ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿರುವ ಮುಸ್ಲಿಂ ಸಮುದಾಯದಲ್ಲೂ ಯಡಿಯೂರಪ್ಪ ಅವರನ್ನು, ಅವರ ಮೂಲಕ ವಿಜಯೇಂದ್ರ ಅವರನ್ನು ಪ್ರೀತಿಸುವ ವರ್ಗ ಇದೆ. ಇದೇ ರೀತಿಯ ಸಮುದಾಯ ಶಕ್ತಿ, ವಿಜಯೇಂದ್ರ ಅವರನ್ನ ವಿರೋಧಿಸುವ ಒಬ್ಬ ನಾಯಕರಿಗೂ ಇಲ್ಲ.
ಹಣಬಲ ಕ್ರೋಢೀಕರಣದ ಶಕ್ತಿ :
ಇನ್ನು ವಿಜಯೇಂದ್ರ ಅವರಿಗೆ ಹಣ ಕ್ರೋಢೀಕರಿಸುವ ಶಕ್ತಿಯೂ ಇದೆ. ರಾಜ್ಯ ಬಿಜೆಪಿಯ ಬಹುತೇಕ ನಾಯಕರು.. ಅದರಲ್ಲೂ ವಿರೋಧಿಗಳಿಗೆ ವೇದಿಕೆ, ಪ್ರಚಾರ, ಜನ.. ಎಲ್ಲವನ್ನೂ ರೆಡಿ ಮಾಡಿ ಹೋರಾಟಕ್ಕೆ ಕರೆಯಬೇಕು. ಖರ್ಚು ಮಾಡುವವರಲ್ಲ. ನಾವು ಪ್ರಾಮಾಣಿಕರು ಎಂದು ಹಣೆಗೆ ಬೋರ್ಡ್ ಹಾಕಿಕೊಂಡು ಓಡಾಡ್ತಾರೆ (ಆದರೆ ವಾಸ್ತವ ಬೇರೆಯೇ ಇರುತ್ತದೆ). ಆದರೆ ವಿಜಯೇಂದ್ರ ಅವರಿಗೆ ಖರ್ಚು ಮಾಡುವುದೂ ಗೊತ್ತು. ಹಣ ಹೊಂದಿಸುವುದೂ ಗೊತ್ತು. ಕಾಂಗ್ರೆಸ್ಸಿನಲ್ಲಿ ಡಿಕೆ ಶಿವಕುಮಾರ್ ಹೇಗೆಯೋ.. ಹಾಗೆ ಬಿಜೆಪಿಯಲ್ಲಿ ವಿಜಯೇಂದ್ರ.
ಟ್ರಬಲ್ ಶೂಟರ್ :
ಇನ್ನು ರಾಜ್ಯ ಬಿಜೆಪಿಯಲ್ಲಿ ಟ್ರಬಲ್ ಶೂಟರ್ ಎಂದು ಕರೆಸಿಕೊಳ್ಳುವ ವ್ಯಕ್ತಿ ಯಾರಾದರೂ ಇದ್ದರೆ ಅದು ವಿಜಯೇಂದ್ರ ಮಾತ್ರ. 2018ರಲ್ಲಿ 104 ಸೀಟು ಗೆದ್ದರೂ ಅಧಿಕಾರ ಸಿಕ್ಕದೇ ಹೋದಾಗ ವಿಜಯೇಂದ್ರ ಸುಮ್ಮನೆ ಕೂರಲಿಲ್ಲ. ಅಂತಹ ರಾಜಕೀಯ ನಾವು ಮಾಡಲ್ಲ ಎಂದ ನಾಯಕರೇ (ಈಗ ಅವರು ವಿಜಯೇಂದ್ರ ವಿರೋಧಿ ಪಾಳಯದಲ್ಲಿದ್ದಾರೆ), ಸರ್ಕಾರ ರಚನೆ ಆದಾಗ ಅಧಿಕಾರಕ್ಕಾಗಿ ಓಡೋಡಿ ಬಂದಿದ್ದರು, ಇಂಥದ್ದೇ ಪೋಸ್ಟು ಬೇಕು ಎಂದು ಹಠ ಹಿಡಿದು ಕೂತಿದ್ದರು ಎನ್ನುವುದನ್ನು ಮರೆಯುವುದುಂಟೇ.
ಒಟ್ಟಿನಲ್ಲಿ ಹಣಬಲ, ಜನ ಬಲ, ಸಮುದಾಯ ಬಲಗಳ ಜೊತೆಗೆ ಯಡಿಯೂರಪ್ಪ ನಾಮಬಲವೂ ವಿಜಯೇಂದ್ರ ಜೊತೆಗೆ ಇದೆ. ವಿಜಯೇಂದ್ರ ಅವರಿಗೆ 50 ವರ್ಷ ಆಗಿದೆ. ಹೀಗಾಗಿ ವಿಜಯೇಂದ್ರ ಅವರ ಪ್ಲಸ್ ಪಾಯಿಂಟುಗಳ ಬಗ್ಗೆ ಇಷ್ಟೆಲ್ಲ ಬರೆಯಬೇಕಾಯಿತು.
ನೆಗೆಟಿವ್ ಅಂಶಗಳೂ ಇವೆ. ವಿಜಯೇಂದ್ರ ಯಡಿಯೂರಪ್ಪ ಅವರ ಮಗನೇ ಹೊರತು, ಯಡಿಯೂರಪ್ಪ ಅಲ್ಲ. ತಮ್ಮ ಸುತ್ತಲೂ ಒಂದಿಷ್ಟು ವಂದಿ ಮಾಗಧರನ್ನು ಇಟ್ಟುಕೊಂಡಿದ್ದಾರೆ. ಅವರ ಮಾತನ್ನಷ್ಟೇ ಕೇಳುವ ಚಟದಿಂದ ಹೊರಬಂದು, ಎಲ್ಲರನ್ನೂ ಒಂದುಗೂಡಿಸಿಕೊಂಡು ಹೋಗಬೇಕು. ಯಡಿಯೂರಪ್ಪ ಅವರಿಗೆ ಅನಂತ್ ಕುಮಾರ್ ಜೊತೆ ಜಗಳಗಳಿದ್ದವು. ಆದರೆ.. ಹೊಂದಿಕೊಂಡು ಹೋಗುತ್ತಿದ್ದರು. ಅನಂತ್ ಅಷ್ಟೇ ಅಲ್ಲ.. ಹಲವು ನಾಯಕರ ಜತೆ ಇದ್ದ ಸಮಸ್ಯೆ ಮತ್ತು ಹೊಂದಾಣಿಕೆ. ಅಷ್ಟು ತಿದ್ದಿಕೊಂಡರೆ ಗೆಲ್ಲಬಹುದು. ಇಲ್ಲದೇ ಹೋದರೆ ಕಷ್ಟ ಕಷ್ಟ.



