ಕಿಚ್ಚ ಸುದೀಪ್ 51ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈಗಿನ್ನೂ 28 ತುಂಬಿ 29ಕ್ಕೆ ಕಾಲಲಿಟ್ಟಿದ್ದೇನೆ ಎಂದಿದ್ದಾರೆ. ಮನೆಯ ಬಳಿ ಮೀಟ್ ಮಾಡೋದು ಎಂದು ಅಭಿಮಾನಿಗಳಿಗೆ ಮೊದಲೇ ಕರೆ ಕೊಟ್ಟಿದ್ದರು ಸುದೀಪ್. ಆದರೇನಂತೆ.. ಮಧ್ಯರಾತ್ರಿಯೇ ಮನೆಯ ಬಳಿ ಅಭಿಮಾನಿಗಳು ಕೇಕ್ ಕಟ್ ಮಾಡಿಸಿ ಸಂಭ್ರಮಿಸಿದ್ದರು. ಅದಾದ ಮೇಲೆ ಗ್ರೌಂಡಿಗೆ ಬಂತು ಖುಷಿ ಪಟ್ಟಿದ್ದರು. ಅಭಿಮಾನಿಗಳಿಗಾಗಿ ಸುದೀಪ್ ತಮ್ಮ ಬಿಲ್ಲ ರಂಗ ಭಾಷ ಚಿತ್ರದ ಝಲಕ್ ಕೂಡಾ ತೋರಿಸಿದ್ದರು. ಆದರೆ ಈ ಮಧ್ಯೆ ತಮ್ಮ ಅಭಿಮಾನಿಗಳನ್ನು ಹೊಗಳಿದ್ದರು ಸುದೀಪ್. ಅರೆ.. ಅವರವರ ಅಭಿಮಾನಿಗಳನ್ನು ಹೊಗಳೋದೂ ತಪ್ಪಾ ಎನ್ನಬೇಡಿ. ಆದರೆ ಆ ಹೊಗಳಿಕೆಯೇ ಅವರ ಹುಟ್ಟುಹಬ್ಬದ ಸಂಭ್ರಮಕ್ಕೆ ಕಲ್ಲು ಬೀಳುವಂತೆ ಮಾಡಿದೆ. ಸುದೀಪ್ ತಮ್ಮ ಅಭಿಮಾನಿಗಳನ್ನು ಹೊಗಳಿದ್ದಕ್ಕೆ ರೊಚ್ಚಿಗೆದ್ದಿರುವುದು ದರ್ಶನ್ ಫ್ಯಾನ್ಸ್ ಎನ್ನುವುದು ವಿಶೇಷ.
ಇಷ್ಟಕ್ಕೂ ಸುದೀಪ್ ಹೊಗಳಿಕೆಯ ಮಾತುಗಳೇನಿದ್ದವು.. ಅಂತಾ ನೋಡೋದಾದ್ರೆ..
ನಾನು ಮೇಕಪ್ ಹಾಕೋದು ಅಭಿಮಾನಿಗಳಿಗೋಸ್ಕರ. ಎಲ್ಲಿಯವರೆಗೆ ನೋಡೋಕೆ ಇಷ್ಟಪಡುತ್ತಿರೋ ಅಲ್ಲಿಯವರೆಗೆ ನಿಮಗೋಸ್ಕರ ದುಡಿಯುತ್ತೇನೆ.
ನಾವು ಬೆಳೆಯುತ್ತೇವೆ ಅನ್ನೋದು ತಪ್ಪಲ್ಲ. ಯಾವ ವಾತಾವರಣದಲ್ಲಿ ಬೆಳೆಯುತ್ತೇವೆ ಅನ್ನೋದು ಮುಖ್ಯ. ಅವರು ಒಳ್ಳೆಯ ಕೆಲಸ ಮಾಡ್ತಿರೋದು ನಾನು ಹೇಳಿದೆ ಅಂತಲ್ಲ, ಅವರಲ್ಲಿ ಒಳ್ಳೆತನ ಇದೆ. ಅದಕ್ಕಾಗಿ ನಾವಿಷ್ಟು ಒಳ್ಳೆಯವರು.
ನನ್ನ ಫ್ಯಾನ್ಸ್ ಒಳ್ಳೆಯವ್ರು, ಅದಕ್ಕೆ ನಾನು ಒಳ್ಳೆಯವನಾಗಿದ್ದೇನೆ. ನನ್ನಿಂದ ಅವರು ಒಳ್ಳೆಯ ಕೆಲಸ ಮಾಡಿಸುತ್ತಾರೆ. ಅವರೂ ಮಾಡುತ್ತಾರೆ. ನನ್ನ ಅಭಿಮಾನಿಗಳು ಮಾಡಿರೋ ಕೆಲಸದ ಶ್ರೇಯಸ್ಸು ಅವರ ತಂದೆ ತಾಯಿಗೆ, ಊರಿನವರಿಗೆ ಸಲ್ಲುತ್ತದೆ.
ನಾನು ಸಂಪಾದನೆ ಮಾಡಿರುವ ಹೆಸರಿಗೆ ಕಳಂಕ ತರುವ ಕೆಲಸವನ್ನು ನನ್ನ ಫ್ಯಾನ್ಸ್ ಮಾಡಿಲ್ಲ. ನನ್ನ ಅಭಿಮಾನಿಗಳು ತಲೆತಗ್ಗಿಸುವ ಕೆಲಸವನ್ನು ನಾನೂ ಮಾಡುವುದಿಲ್ಲ.
ಅಭಿಮಾನಿಗಳು ನಮ್ಮ ಪ್ರತಿಬಿಂಬ. ನಾನು ಹೋದಲೆಲ್ಲಾ ತಲೆ ಎತ್ಕೊಂಡು ಓಡಾಡ್ತೀನಿ ಅಂದ್ರೆ ಅದಕ್ಕೆ ಅಭಿಮಾನಿಗಳೇ ಕಾರಣ. ಅಭಿಮಾನಿಗಳಿಗೆ ಕಳಂಕ ತರೋ ಕೆಲಸ ಮಾಡಲ್ಲ.
ಸಿನಿಮಾ ಎಲ್ಲರೂ ಮಾಡುತ್ತಾರೆ. ವ್ಯಕ್ತಿತ್ವದಲ್ಲಿ ದೊಡ್ಡವರಾಗಬೇಕಾದರೆ ಸಿನಿಮಾ ಮಾತ್ರ ಸಾಕಾಗಲ್ಲ. ನನ್ನ ಕುಟುಂಬ, ಗೆಳೆಯರು ಎಲ್ಲರೂ ಮುಖ್ಯವಾಗುತ್ತಾರೆ.
ನನ್ನ ಫ್ಯಾನ್ಸ್ ಒಳ್ಳೆಯವ್ರು. ಅದಕ್ಕೆ ನಾನು ಒಳ್ಳೆಯವನಾಗಿದ್ದೇನೆ.
ಕಿಚ್ಚ ಸುದೀಪ್ ಈ ಮಾತು ಹೇಳಿದ್ದ ತಮ್ಮ ಅಭಿಮಾನಿಗಳಿಗೆ. ಸುದೀಪ್ ತಮ್ಮ ಮಾತಿನಲ್ಲಿ ಎಲ್ಲಿಯೂ ದರ್ಶನ್ ಹೆಸರು ಹೇಳೋದಿಲ್ಲ. ದರ್ಶನ್ ಅಭಿಮಾನಿಗಳ ವಿಷಯವನ್ನಂತೂ ಹೇಳೋದೇ ಇಲ್ಲ. 51ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ಸುದೀಪ್ ಅವರಿಗೆ ಶುಭಕೋರಲು ರಾಜ್ಯದ ನಾನಾ ಕಡೆಗಳಿಂದ ಸಾವಿರಾರು ಮಂದಿ ಆಗಮಿಸಿದ್ದರು. ಈ ವೇಳೆ ಮಾತನಾಡಿದ ಸುದೀಪ್ ತಮ್ಮ ಅಭಿಮಾನಿಗಳ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಾ.. ತನ್ನ ಅಭಿಮಾನಿಗಳಿಗೆ ತಾನು ಕಳಂಕ ತರುವ ಕೆಲಸ ಮಾಡಲ್ಲ. ನನ್ನ ಅಭಿಮಾನಿಗಳೂ ಕೂಡಾ ತಲೆ ಎತ್ತಿಕೊಂಡು ಓಡಾಡುವಂತೆ ಇದ್ದಾರೆ ಎಂದು ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸ್ತಾರೆ.
ದರ್ಶನ್ ಅಭಿಮಾನಿಗಳು ರೊಚ್ಚಿಗೆದ್ದಿದ್ದು ಯಾಕೆ..?
ಸೋಷಿಯಲ್ ಮೀಡಿಯಾದಲ್ಲಿ ಸುದೀಪ್ ಅವರ ಈ ಮಾತಿಗೆ ರೊಚ್ಚಿಗೆದ್ದವರು ದರ್ಶನ್ ಫ್ಯಾನ್ಸ್. ಸುದೀಪ್ ಈ ಮಾತು ಹೇಳುತ್ತಿರುವುದೆಲ್ಲ ತಮ್ಮ ʻಡಿ ಬಾಸ್ʼ ವಿರುದ್ಧವೇ ಎಂದು ರೊಚ್ಚಿಗೆದ್ದರು. ಅದಾದ ಮೇಲೆ ಸುದೀಪ್ ಅವರ ಫೋಟೋ, ವಿಡಿಯೋಗಳನ್ನು ಕೆಟ್ಟದಾಗಿ ಫೋಟೋಶಾಪ್ ಮಾಡಿ ಹಾಕಿ ಆಕ್ರೋಶ ತೋರಿಸಿದರು. ಸುದೀಪ್ ಅವರನ್ನ ಕನ್ನಡ ಚಿತ್ರರಂಗದ ಐರನ್ ಲೆಗ್ ಎಂದೆಲ್ಲ ಬಿಂಬಿಸಿದರು. ಜೊತೆಗೆ ಸುದೀಪ್, ಸ್ಟಾರ್ ನಟನಾಗಿದ್ದೇ ದರ್ಶನ್ ಅವರಿಂದ ಎಂದು ಬಿಂಬಿಸಿ ಹಳೆಯ ವಿಡಿಯೋಗಳಿಗೆಲ್ಲ ಹೊಸ ಹೊಸ ಕ್ಯಾಪ್ಷನ್ ಬರೆದು ಪೋಸ್ಟ್ ಮಾಡಿದರು.
ಸುದೀಪ್ ಫ್ಯಾನ್ಸ್ ರಿಯಾಕ್ಷನ್ ಹೇಗಿತ್ತು..?
ಪ್ರತಿಯಾಗಿ ಸುದೀಪ್ ಫ್ಯಾನ್ಸ್ ಕೂಡಾ ಸುಮ್ಮನೆ ಕೂರಲಿಲ್ಲ. ಸುದೀಪ್ ಅವರಿಂದಲೇ ಮೆಜೆಸ್ಟಿಕ್ ಹೀರೋ ಚಾನ್ಸ್ ಸಿಕ್ಕಿದ್ದು ಹಾಗೂ ಆಗ ಪುನೀತ್ ಅವರೂ ಕೂಡಾ ತಮ್ಮ ಬ್ಯಾನರ್ʻನಿಂದ ಚಿತ್ರೀಕರಣದ ಹಣ ತೆಗೆದುಕೊಳ್ಳದೆ ಸಹಾಯ ಮಾಡಿದ್ರು ಎಂದು ಮೆಜೆಸ್ಟಿಕ್ ನಿರ್ಮಾಪಕರು ಹೇಳಿದ್ದ ವಿಡಿಯೋ ಹಾಕಿ.. ತಿರುಗೇಟು ಕೊಟ್ಟರು.
ದರ್ಶನ್ ಫ್ಯಾನ್ಸ್ ಯಾಕೆ ಹೀಗೆ..
ದರ್ಶನ್ ಕೊಲೆ ಕೇಸಿನಲ್ಲಿ ಜೈಲಿಗೆ ಹೋದಾಗಿನಿಂದ ದರ್ಶನ್ ಅಭಿಮಾನಿಗಳು ತಾಳ್ಮೆ ಕಳೆದುಕೊಂಡಿರೋದು ಸತ್ಯ. ಯಾರದ್ದೇ ಸಿನಿಮಾ ಆಗಲಿ, ನಾವು ನೋಡಲ್ಲ. (ಭೀಮ ಮತ್ತು ಕೃಷ್ಣಂ ಪ್ರಣಯ ಸಖಿ ಗೆದ್ದವು)
ದರ್ಶನ್ ಮಾಡಿದ್ದು ತಪ್ಪೇ ಅಲ್ಲ, ಕೊಲೆಯೂ ತಪ್ಪಲ್ಲ. ದರ್ಶನ್ ಅವರಿಗೆ ಇಬ್ಬರು ಹೆಂಡ್ತೀರು ಏನಿವಾಗ.. ಅನ್ನೋ ಮಾತಿನಿಂದ ಹಿಡಿದು, ಮೌನವಾಗಿರುವ ಚಿತ್ರರಂಗದ ಎಲ್ಲ ನಟ ನಟಿಯರ ಕುಟುಂಬದ ಮಾನ ಮರ್ಯಾದೆ ಹರಾಜು ಹಾಕುವಲ್ಲಿಗೆ ಹೋಗುತ್ತಿದ್ದಾರೆ. ದರ್ಶನ್ ಜೈಲಿನಲ್ಲಿ ಸಿಗರೇಟು ಸೇದಿ, ಸಿಕ್ಕಿಬಿದ್ದರೆ, ನಮ್ ಅಣ್ಣ ಎಲ್ಲಿದ್ರೂ ರಾಜನೇ ಎಂಬ ಪೋಸ್ಟ್ ಹಾಕುತ್ತಿದ್ದಾರೆ. ಆ ಪ್ರಕರಣದ ಗಂಭೀರತೆಯೂ ಅರ್ಥವಾಗುತಿಲ್ಲ.
ದರ್ಶನ್ ಅಭಿಮಾನಿಗಳ ಈ ರೀತಿಯ ವರ್ತನೆಯೂ ಕೂಡಾ ದರ್ಶನ್ ಜೈಲಿಂದ ಬಿಡುಗಡೆಯಾಗುವುದಕ್ಕೆ, ಚಾರ್ಜ್ಶೀಟ್ ನಂತರವೂ ಜಾಮೀನು ಸಿಗದಿರುವುದಕ್ಕೆ ಕಾರಣವಾಗುತ್ತಿದೆ ಎಂಬ ಗಂಭೀರ ವಿಷಯವೂ ದರ್ಶನ್ ಅಭಿಮಾನಿಗಳಿಗೆ ಅರ್ಥವಾಗುತ್ತಿಲ್ಲ.



