2025ರಲ್ಲಿ ಗೃಹಲಕ್ಷ್ಮಿ ಹಣವನ್ನು ನೀಡಿದ್ದ ರಾಜ್ಯ ಸರ್ಕಾರ, ಎರಡು ತಿಂಗಳುಗಳನ್ನು ಲೆಕ್ಕದಲ್ಲಿ ಎಗರಿಸಿತ್ತು. ಅಂದರೆ ಒಟ್ಟಾರೆ ಲೆಕ್ಕದಲ್ಲಿ ತೋರಿಸಿದ್ದ ಹಣವನ್ನು ಫಲಾನುಭವಿಗಳಿಗೆ ಮಾತ್ರ ಕೊಟ್ಟಿರಲಿಲ್ಲ. ಅದು ಕೇವಲ ಗೃಹಲಕ್ಷ್ಮಿ ಅಷ್ಟೇ ಅಲ್ಲ, ಅನ್ನಭಾಗ್ಯಕ್ಕೂ ಹಾಗೆಯೇ ಆಗಿದೆ. ಒಂದು ತಿಂಗಳು ಎಗರಿ ಹೋಗಿದೆ. ನಾಪತ್ತೆಯಾಗಿದೆ. ಮಿಸ್ ಆಗಿರುವುದು 657 ಕೋಟಿ.
ಬಿಜೆಪಿ ಸದಸ್ಯ ಮಹೇಶ್ ಟೆಂಗಿನಕಾಯಿ ವಿಧಾನಸಭೆಯಲ್ಲಿ ಈ ವಿಷಯ ಬಹಿರಂಗಪಡಿಸಿದ್ದಾರೆ. ಈ ಹಿಂದೆ ಗೃಹಲಕ್ಷ್ಮೀ ಫಲಾನುಭವಿಗಳಿಗೆ ಎರಡು ತಿಂಗಳ ಕಂತು ಪಾವತಿಸಿರಲಿಲ್ಲ. ಈಗ ಅನ್ನಭಾಗ್ಯದಡಿ ಒಂದು ತಿಂಗಳ ಅಕ್ಕಿ ನೀಡಿಲ್ಲ. ಬದಲಾಗಿ ಹಣವನ್ನೂ ಕೊಟ್ಟಿಲ್ಲ ಎಂದ ಅವರ ಒಂಬತ್ತು ಜಿಲ್ಲೆಗಳ ಆಹಾರ ಇಲಾಖೆ ಉಪನಿರ್ದೇಶಕರ ಮಾಹಿತಿಯನ್ನು ಸರ್ಕಾರದ ಮುಂದಿಟಿಟದ್ಧಾರೆ. ಏಕೆ ಆ ತಿಂಗಳ ಅಕ್ಕಿ ಅಥವಾ ಹಣ ಕೊಟ್ಟಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ವಿಚಿತ್ರ ಎಂದರೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಂತೆ ಹಣ ಅಥವಾ ಅಕ್ಕಿ ಕೊಟ್ಟಿದ್ದೇವೆ ಎಂದು ನಾಗರಿಕ ಪೂರೈಕೆ ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ ಹೇಳಿಲ್ಲ. ಬದಲಿಗೆ ಒಪ್ಪಿಕೊಂಡಿದ್ದಾರೆ.2025ರ ಜನವರಿ ತಿಂಗಳಲ್ಲಿ ಅನ್ನಭಾಗ್ಯದ 1.27 ಕೋಟಿ ಫಲಾನುಭವಿಗಳಿಗೆ ತಲಾ 5 ಕೆ.ಜಿ. ಅಕ್ಕಿ ಕೊಟ್ಟಿಲ್ಲ. ಅಕ್ಕಿ ಬದಲಾಗಿ ನೀಡುತ್ತಿದ್ದ ತಲಾ 170 ರು.ನಂತೆ 657 ಕೋಟಿ ರು. ಪಾವತಿ ಮಾಡಿಲ್ಲ ಎಂದು ಒಪ್ಪಿಕೊಂಡಿದ್ದಾರೆ.
ಹಣ ಅಥವಾ ಅಕ್ಕಿ ಕೊಡದೆ ಇರುವುದಕ್ಕೆ ಕಾರಣ ಏನು..?
ನಗು ಬರಬಹುದು, ಉಕ್ಕಿ ಉಕ್ಕಿ ನಗು ತಡೆದುಕೊಳ್ಳಲಾಗದೆ ಹೋಗಬಹುದು. ಸರ್ಕಾರ ನೀಡಿರುವ ಕಾರಣ ಗೊಂದಲ. ಅನ್ನಭಾಗ್ಯ ಯೋಜನೆ ಅಡಿ ಈ ಮೊದಲು ಸರ್ಕಾರ ಅಕ್ಕಿ ನೀಡುತ್ತಿತ್ತು. ಅಕ್ಕಿ ಕೊರತೆಯಾದಾಗ ತಲಾ 170 ರು. ಹಣವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾಯಿಸುತ್ತಿತ್ತು. 2025ರ ಜನವರಿ ಮಧ್ಯೆ ಕೇಂದ್ರ ಸರ್ಕಾರದ ಅಕ್ಕಿ ಕೊಡುವುದಾಗಿ ಹೇಳಿದಾಗ, ರಾಜ್ಯ ಸರಕಾರ ಕೇಂದ್ರ ಸರ್ಕಾರದ ಆದೇಶ ಪಾಲಿಸಿತು. ಫೆಬ್ರವರಿ ತಿಂಗಳಿಂದ ಬಿಪಿಎಲ್ ಕುಟುಂಬಗಳಿಗೆ ಹಣದ ಬದಲು ತಲಾ 5 ಕೆ.ಜಿ.ಅಕ್ಕಿ ವಿತರಿಸಲಾಗುತ್ತಿದೆ. ಈ ನಡುವೆ ಜನವರಿ ತಿಂಗಳದ್ದು ಗ್ಯಾಪ್ ಆಗಿದೆ. ಇದು ಮುನಿಯಪ್ಪ ಅವರು ಕೊಟ್ಟಿರುವ ಉತ್ತರ. ವಿಚಿತ್ರ ಎಂದರೆ ಜನವರಿ ತಿಂಗಳಲ್ಲಿ ಅಕ್ಕಿ ಅಥವಾ ಹಣ ಎರಡನ್ನೂ ಕೊಟ್ಟಿಲ್ಲ ಏಕೆ ಎಂಬ ಪ್ರಶ್ನೆಗೆ ಸುದೀರ್ಘ ಉತ್ತರ ಕೊಟ್ಟಿರುವ ಮುನಿಯಪ್ಪ ಕೊನೆಗೆ ಗೊಂದಲದಿಂದಾಗಿ ಕೊಟ್ಟಿಲ್ಲ ಎಂದು ಸ್ಪಷ್ಟೀಕರಣ ಕೊಟ್ಟಿದ್ದಾರೆ.
ಆ ಒಂದು ತಿಂಗಳ 657 ಕೋಟಿ ರು. ಹಣ ಎಲ್ಲಿಗೆ ಹೋಯಿತು ಎಂಬ ಪ್ರಶ್ನೆಗೆ ಸಚಿವ ಕೆ.ಎಚ್.ಮುನಿಯಪ್ಪ ಅವರು ಆ ಹಣವನ್ನು ಖರ್ಚು ಮಾಡಿಲ್ಲ. ಆರ್ಥಿಕ ಇಲಾಖೆ ಬಳಿಯೇ ಇದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ಜನವರಿ ತಿಂಗಳು ಬಿಟ್ಟರೆ ನಂತರದ ತಿಂಗಳಲ್ಲಿ ಅಕ್ಕಿ ಅಥವಾ ಹಣ ಕೊಟ್ಟಿದ್ದಾರಂತೆ.
ಗೃಹಲಕ್ಷ್ಮಿ ಹಣದ್ದೂ ಇದೇ ರೀತಿಯ ಗೊಂದಲವಾಗಿತ್ತು. ಎರಡು ತಿಂಗಳ ಹಣವನ್ನು ಫಲಾನುಭವಿಗಳಿಗೆ ನೀಡದೆಯೇ ಹಣ ನೀಡಿದ್ದೇವೆ ಎಂದು ದಾಖಲೆ ತೋರಿಸಲಾಗಿತ್ತು. ಕೊನೆಗೆ ಅದನ್ನು ಮಹೇಶ್ ಟೆಂಗಿನಕಾಯಿ ಅವರೇ ಬಯಲಿಗೆಳೆದಿದ್ದರು. ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ಬೆವರಿಳಿಸಿದ್ದರು. ಕೊನೆಗೆ ಸರಕಾರ ತಮ್ಮ ಕಡೆಯಿಂದ ತಪ್ಪಾಗಿದೆ ಎಂದು ಒಪ್ಪಿಕೊಂಡಿತ್ತು. ಈಗ ಅನ್ನಭಾಗ್ಯದ ಅಕ್ಕಿ/ದುಡ್ಡಿನ ಸರದಿ.
ಹಿಂದಿನ ದಿನವಷ್ಟೇ ಹೊಗಳಿಕೊಂಡಿದ್ದ ಮುನಿಯಪ್ಪ : ಕೇವಲ 2 ದಿನಗಳ ಹಿಂದೆ ದೇವನಹಳ್ಳಿಯಲ್ಲಿ ಅನ್ನಭಾಗ್ಯ ಯೋಜನೆಯನ್ನು ಹೊಗಳಿಕೊಂಡಿದ್ದರು. ಆಹಾರ ಭದ್ರತಾ ವಿಷಯದಲ್ಲಿ ಒಂದು ಮೈಲಿಗಲ್ಲು ಸಾಧಿಸಿದೆ ಎಂದು ಹೇಳಿದ್ದರು. ಹಾಗೆ ಹೇಳಿದ ಎರಡೇ ದಿನಕ್ಕೆ ಅನ್ನಭಾಗ್ಯದ ಅಕ್ಕಿಯಲ್ಲಿ ಆಗಿರುವ ಲೋಪ ಅಥವಾ ಮೋಸ ಬೆಳಕಿಗೆ ಬಂದಿದೆ.
ಶಕ್ತಿ ಯೋಜನೆ ಹಣವೂ ಬಾಕಿ : ಶಕ್ತಿ ಯೋಜನೆಯ ಸಾವಿರಾರು ಕೋಟಿ ಹಣವನ್ನೂ ಬಾಕಿ ಉಳಿಸಿಕೊಂಡಿರುವ ರಾಜ್ಯ ಸರ್ಕಾರ ಕಳೆದ ಎರಡೂವರೆ ವರ್ಷಗಳಲ್ಲಿ 4 ಸಾರಿಗೆ ನಿಗಮಗಳಿಂದ ಬರೋಬ್ಬರಿ 4,000 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ. ಈ ಬಗ್ಗೆ ವಿಧಾನ ಪರಿಷತ್ನಲ್ಲಿ ಜೆಡಿಎಸ್ ಸದಸ್ಯ ಗೋವಿಂದರಾಜ್ ಅವರ ಪ್ರಶ್ನೆಗೆ ಖುದ್ದು ಸಾರಿಗೆ ಸಚಿವರೇ ಉತ್ತರ ನೀಡಿದ್ದಾರೆ.
ಶಕ್ತಿ ಯೋಜನೆಗೆ ಸರ್ಕಾರ ಉಳಿಸಿಕೊಂಡಿರುವ ಬಾಕಿ ಎಷ್ಟು?
2.5 ವರ್ಷಗಳಲ್ಲಿ 4 ನಿಗಮಗಳಿಂದ ಸರ್ಕಾರ ಉಳಿಸಿಕೊಂಡ ಒಟ್ಟು ಬಾಕಿ ಹಣ
ಕೆಎಸ್ಆರ್ಟಿಸಿ – 1580.15 ಕೋಟಿ ರೂ.
ಬಿಎಂಟಿಸಿ – 710.81 ಕೋಟಿ ರೂ.
ವಾಯುವ್ಯ ಕರ್ನಾಟಕ ಸಾರಿಗೆ ನಿಗಮ – 988.1 ಕೋಟಿ ರೂ.
ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ – 727.41 ಕೋಟಿ ರೂ.
ಒಟ್ಟು ಬಾಕಿ – 4006.47 ಕೋಟಿ ರೂ.



