ಸಿಎಂ ಬದಲಾಗ್ತಾರಾ.. ಇಲ್ವಾ.. ಗೊತ್ತಿಲ್ಲ. ಇದು ಸತೀಶ್ ಜಾರಕಿಹೊಳಿಯವರ ಉತ್ತರ. ʻಗೊತ್ತಿಲ್ಲ ಮಂತ್ರಿʼಗಳ ಸರಣಿಗೆ ಹೊಸ ಸೇರ್ಪಡೆ ಆದರಾ.. ನಮಗೆ ಗೊತ್ತಿಲ್ಲ. ಡಿಕೆ ಶಿವಕುಮಾರ್ ಡಿಸಿಎಂ ಸ್ಥಾನದಿಂದ ಸಿಎಂ ಸ್ಥಾನಕ್ಕೆ ಪ್ರಮೋಷನ್ ತಗೊಳ್ತಾರಾ.. ಸಿಎಂ ಸಿದ್ದರಾಮಯ್ಯ ಕುರ್ಚಿ ಬಿಟ್ಟು ಇಳೀತಾರಾ.. ಸಂಕ್ರಾಂತಿಗೆ ಎಲ್ಲವೂ ಇದೆ ಅಂತಾರೆ. ಆದರೆ ನಮಗೇನು ಗೊತ್ತಾಗಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಒಳಗಿನ ಅರ್ಥ ಏನು..? ಸಾಹುಕಾರ್ ನೀಡುತ್ತಿರುವ ಸಂದೇಶ ಏನು.. ಸ್ಪೆಷಲ್ ಯು ಡಾಟ್ ಕಾಂ ವಿಶ್ಲೇಷಣಾತ್ಮಕ ರಿಪೋರ್ಟ್ ಇಲ್ಲಿದೆ.
ಸಂಕ್ರಮಣ ನಂತರ ರಾಜ್ಯದಲ್ಲಿ ಸಿಎಂ ಬದಲಾವಣೆ ಆಗ್ತಾರೆ ಅಂತ ಇದೆ. ಆಗೋದಿಲ್ಲ ಅಂತಾನೂ ಇದೆ. ಎಲ್ಲವೂ ಅಂತಾರೆ, ಸಂಕ್ರಾಂತಿಗೆ ಎಲ್ಲವೂ ಇದೆ ಅಂತಾರೆ. ಆದರೆ ನಮಗೇನು ಗೊತ್ತಾಗಿಲ್ಲ. ಕುರ್ಚಿ ಕದನ ವಿಚಾರಕ್ಕೆ ಹೈಕಮಾಂಡ್ ಮೌನಕ್ಕೆ ಜಾರಿತಾ? ಎಂಬ ಮಾತಿಗೆ ಇಲ್ಲೇ ಮುಗಿಯುತ್ತೆ, ಇಲ್ಲದಿದ್ದರೆ ಅಂತಿಮವಾಗಿ ಹೈಕಮಾಂಡ್ನೇ ಹೇಳಬೇಕಾಗುತ್ತೆ.. ಎಂಬ ಮಾತು ಹೇಳಿದ್ದಾರೆ.
ಒಂದು ವಿಷಯ ನೆನಪಿಟ್ಟುಕೊಳ್ಳಬೇಕು. ಬೆಳಗಾವಿಯಲ್ಲಿ ನಡೆದ ಸದನದ ವೇಳೆ ಅಂತಿಮ ಡಿನ್ನರ್ ಆಗಿದ್ದೇ ಸತೀಶ್ ಜಾರಕಿಹೊಳಿ ಮನೆಯಲ್ಲಿ. ಅದು ಉಪಸಂಹಾರ ಎಂದು ಭಾವಿಸಿದರೆ, ಕ್ಲೈಮಾಕ್ಸ್ ಏನಾಗಲಿದೆ ಎಂಬ ನಿರ್ಧಾರವೂ ಅಲ್ಲೇ ಆಗಿದೆ ಎಂದರ್ಥ. ಸತೀಶ್ ಜಾರಕಿಹೊಳಿ ಸರಳವಾಗಿ ಯಾವುದನ್ನೂ ಬಿಟ್ಟುಕೊಡುವವರಲ್ಲ. ಈಗ ಬಿಜೆಪಿಯಲ್ಲಿರುವ ಅವರ ಅಣ್ಣ ರಮೇಶ್ ಜಾರಕಿಹೊಳಿ ಅವರಂತೆ ಅಂತೂ ಅಲ್ಲವೇ ಅಲ್ಲ.
ಅಣ್ಣ ಜಾರಕಿಹೊಳಿಯವರದ್ದು ಆರ್ಭಟ ಜಾಸ್ತಿ. ತಮ್ಮ ಜಾರಕಿಹೊಳಿಯದ್ದು ಮೌನ ಜಾಸ್ತಿ. ಆದರೆ, ಮೌನದ ಮರ್ಮವನ್ನು ಅರಿಯುವುದು ಕಷ್ಟ. ಅದು ಡಿಕೆ ಶಿವಕುಮಾರ್ ಅವರಿಗೆ ಚೆನ್ನಾಗಿ ಗೊತ್ತು. ತಂತ್ರಗಾರಿಕೆಯಲ್ಲೂ ನಿಪುಣ ಎನ್ನುವುದು ಬಸವರಾಜ ಬೊಮ್ಮಾಯಿ ಅವರಿಗೆ ಅರ್ಥವಾಗುವ ವೇಳೆಗೆ, ಅವರ ಮಗನೇ ಅವರೇ ಬಿಟ್ಟುಕೊಟ್ಟಿದ್ದ ಕ್ಷೇತ್ರದಲ್ಲಿ ಮಣ್ಣು ಮುಕ್ಕಿದ್ದ. ಬಿಜೆಪಿಯ ಭದ್ರಕೋಟೆಯನ್ನು ಮಾತೇ ಆಡದೆ ಕಾಂಗ್ರೆಸ್ಸಿಗೆ ಬರೆಸಿಕೊಂಡಿದ್ದರು ಸತೀಶ್ ಜಾರಕಿಹೊಳಿ. ಅದರ ಅರಿವು ಡಿಕೆ ಶಿವಕುಮಾರ್ ಅವರಿಗೂ ಇದೆ.
ಡಿಕೆಶಿ ದೆಹಲಿ ಪ್ರಯಾಣ, ವ್ಯರ್ಥ ಪ್ರಯತ್ನವಾ? ಎಂಬ ಪ್ರಶ್ನೆಗೆ ನಾವೇನು ಹೇಳಲ್ಲ, ಪರವಾಗಿಯೂ ಹೇಳಲ್ಲ, ವಿರೋಧವಾಗಿಯೂ ಇಲ್ಲ. ನಾವು ತಟಸ್ಥವಾಗಿದ್ದೇವೆ ಎಂದು ಹೇಳುವ ಸತೀಶ್ ಜಾರಕಿಹೊಳಿ, ಅಂತರಂಗದಲ್ಲಿ ಸಿದ್ದರಾಮಯ್ಯ ನಿಷ್ಠರು. ಸಿದ್ದರಾಮಯ್ಯ ಅವರ ಜೊತೆಯಲ್ಲಿಯೇ ಕಾಂಗ್ರೆಸ್ಸಿಗೆ ಬಂದವರು. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಲೆಲ್ಲ ಜೊತೆಯಲ್ಲಿ ನಿಂತವರು. ಸೋತಾಗ ಹೆಗಲು ಕೊಟ್ಟವರು. ಕಾಂಗ್ರೆಸ್ಸಿನಲ್ಲಿದ್ದರೂ ಸಿದ್ದರಾಮಯ್ಯ ಜೊತೆ ಕಾಂಗ್ರೆಸ್ಸಿಗೆ ಬಂದವರೆಲ್ಲ ಈಗಲೂ ಸಿದ್ದರಾಮಯ್ಯ ಕಾಂಗ್ರೆಸ್ಸಿನಲ್ಲಿ ಪ್ರತ್ಯೇಕವಾಗಿದ್ದಾರೆ ಎನ್ನಬಹುದು. ಇದ್ಯಾವುದು ಸಿದ್ದರಾಮಯ್ಯ ಕಾಂಗೆಸ್ ಎನ್ನಬೇಡಿ. ಅದು ಕಾಂಗ್ರೆಸ್ನ ಮೂಲ ಕಾಂಗ್ರೆಸ್ಸಿಗರು ಹೇಳುವ ಮಾತು. ಅಷ್ಟೇ. ಎಲ್ಲರೂ ಕಾಂಗ್ರೆಸ್ಸಿಗರೇ. ಆದರೆ, ಸತೀಶ್ ಜಾರಕಿಹೊಳಿ ಅವರ ಮೊದಲ ನಿಷ್ಠೆ ಸಿದ್ದರಾಮಯ್ಯ ಅವರಿಗೆ ಅಂತೆ. ಆದರೆ, ಸಿದ್ದರಾಮಯ್ಯ ಅವರು ಈ ಬಾರಿ ಅಧಿಕಾರ ವಂಚಿತರಾದರೆ, ಭವಿಷ್ಯದಲ್ಲಿ ಅಧಿಕಾರಕ್ಕೆ ಬರಲ್ಲ. ಇದೆಲ್ಲ ಗೊತ್ತಿದ್ದೂ ಸತೀಶ್ ಜಾರಕಿಹೊಳಿ, ಪಕ್ಷವನ್ನು ಮೀರಿ ಮುಂದೆ ಹೆಜ್ಜೆ ಇಡ್ತಾರಾ.. ಗೊತ್ತಿಲ್ಲ. ಆಗಬಹುದು.. ಆಗದೆಯೂ ಇರಬಹುದು.



