ಹೇಮಂತ್ ರಾವ್. ಮೊದಲ ಸಿನಿಮಾ ಗೋದಿ ಬಣ್ಣ ಸಾಧಾರಣ ಮೈಕಟ್ಟು. ಅನಂತನಾಗ್ ಅವರು ಎಂತಹ ಆಕ್ಟರ್ ಅನ್ನೋದನ್ನ ನೋಡೋಕೆ ಇರೋ ಕ್ಲಾಸಿಕ್ ಸಿನಿಮಾಗಳಲ್ಲಿ ಒಂದು. ಅದಾದ ನಂತರ ಕವಲುದಾರಿ. ಪುನೀತ್ ರಾಜ್ʻಕುಮಾರ್ ಅವರ ಬ್ಯಾನರಿನಲ್ಲಿ ಬಂದ ಸಿನಿಮಾ ಅದು. ಕವಲುದಾರಿ ಕಥೆ ಹೇಳುವ ಶೈಲಿಯೇ ವಿಭಿನ್ನ. ಇದರ ನಡುವೆ ಹಿಂದಿಯ ಅಂಧಾದುನ್ ಸಿನಿಮಾ ಬರಹಗಾರರೂ ಆದರು. ಅದು ನಾಲ್ಕೈದು ಭಾಷೆಗಳಿಗೆ ರೀಮೇಕ್ ಆದ ಸಿನಿಮಾ. ಇತ್ತೀಚೆಗೆ ಸಪ್ತಸಾಗರದಾಚೆ ಎಲ್ಲೋ.. ಭಗ್ನಪ್ರೇಮಿಗಳ ಹೃದಯಕ್ಕೇ ಕೈಹಾಕಿ ಕಲಕಿದ್ದರು ಹೇಮಂತ್ ರಾವ್. ಇಷ್ಟೆಲ್ಲ ಮಾಡಿರುವ ಹೇಮಂತ್ ಅವರೀಗ ಪ್ರಾಜೆಕ್ಟ್ #5ಗೆ ಕೈಹಾಕಿದ್ಧಾರೆ. ಹೀರೋ ಶಿವಣ್ಣ.
ಶಿವಣ್ಣ ಅವರ ಮೊದಲ ಡೈರೆಕ್ಟರ್ ಯಾರು ಎಂದರೆ ಅದು ಸಿಂಗೀತಂ ಶ್ರೀನಿವಾಸ್. ದಕ್ಷಿಣ ಭಾರತ ಚಿತ್ರರಂಗದಲ್ಲೇ ಆಗಿನ ಕಾಲಕ್ಕೆ ದೊಡ್ಡ ಹೆಸರು ಅವರದ್ದು. ಹಾಗಂತ ಶಿವಣ್ಣ ಕೇವಲ ಹೆಸರು ಮಾಡದವರ ಜೊತೆ ಮಾತ್ರ ಸಿನಿಮಾ ಮಾಡಲ್ಲ. ಹೊಸಬರೂ ಶಿವಣ್ಣನ ಜೊತೆ ಸಿನಿಮಾ ಮಾಡಿದ್ದಾರೆ. ಗೆದ್ದಿದ್ದಾರೆ. ಗೆಲ್ಲಿಸಿದ್ದಾರೆ. ಈಗ ಹೇಮಂತ್ ರಾವ್ ಅವರ ಸರದಿ ಬಂದಂತೆ ಕಾಣುತ್ತಿದೆ. ಹಾಗಂತ ಹೇಮಂತ್ ರಾವ್ ಅವರೇನೂ ಹೊಸಬರಲ್ಲ. ಬೆನ್ನ ಹಿಂದೆ ಸೂಪರ್ ಹಿಟ್ ಚಿತ್ರಗಳ ದಾಖಲೆ ಇದೆ. ಅವರೀಗ ಶಿವಣ್ಣ ಅವರಿಗೆ ಆಕ್ಷನ್ ಕಟ್ ಹೇಳ್ತಾರೆ ಅನ್ನೋ ಸುದ್ದಿ ಚಾಲ್ತಿಗೆ ಬಂದಿದೆ.
ಕೆಲ ದಿನಗಳ ಹಿಂದಷ್ಟೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಹೇಮಂತ್ ರಾವ್, ‘ರೊಮ್ಯಾಂಟಿಕ್ ಅಥವಾ ಲವ್ ಸ್ಟೋರಿ ಸಿನಿಮಾಗಳಿಂದ ತುಸು ದೂರ ಹೋಗಲಿದ್ದೇನೆ’ ಎಂಬರ್ಥದ ಮಾತುಗಳನ್ನಾಡಿದ್ದರು. ಅದರ ಬೆನ್ನಲ್ಲೆ ಈಗ ಹೇಮಂತ್ ರಾವ್, ಕನ್ನಡದ ಸ್ಟಾರ್ ನಟ ಶಿವರಾಜ್ ಕುಮಾರ್ ಅವರೊಟ್ಟಿಗೆ ಸಿನಿಮಾ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೇಮಂತ್ ರಾವ್, ಶಿವಣ್ಣನಿಗೆ ಈಗಾಗಲೇ ಕತೆ ಹೇಳಿದ್ದು, ಸಿನಿಮಾ ಮಾಡಲು ಒಪ್ಪಿಗೆ ಸಹ ಸೂಚಿಸಲಾಗಿದೆ. ಆದಷ್ಟು ಶೀಘ್ರವೇ ಹೇಮಂತ್ ರಾವ್ ಹಾಗೂ ಶಿವರಾಜ್ ಕುಮಾರ್ ಸಿನಿಮಾ ಸೆಟ್ಟೇರಲಿದೆ.
ಅಂದಹಾಗೆ ಸಪ್ತಸಾಗರದಾಚೆ ಎಲ್ಲೋ ಸಿನಿಮಾ ಮುಗಿಸಿರುವ ಹೇಮಂತ್ ರಾವ್, ವಿಭಿನ್ನ ಚಿತ್ರಗಳಿಗೆ ಫೇಮಸ್ ಆಗಿರುವ ನಿರ್ದೇಶಕ. ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕವಲುದಾರಿ, ಸಪ್ತಸಾಗರದಾಚೆ ಎಲ್ಲೋ ಪಾರ್ಟ್ 3 & ಬಿ ಮೊದಲಾದ ಚಿತ್ರಗಳ ಮೂಲಕ ಸೆನ್ಸೇಷನ್ ಸೃಷ್ಟಿಸಿರುವವರು. ಶಿವಣ್ಣನ ಜೊತೆ ಡಿಫರೆಂಟ್ ಸಿನಿಮಾ ಮಾಡೋದು ಪಕ್ಕಾ ಎನ್ನುವುದು ಅಬಿಮಾನಿಗಳ ನಿರೀಕ್ಷೆ.
ಹೇಮಂತ್ ಅವರೊಂದಿಗೆ ಸಿನಿಮಾ ಮಾಡುತ್ತಿರುವ ಬಗ್ಗೆ ನಟ ಶಿವರಾಜ್ ಕುಮಾರ್ ಮಾಹಿತಿ ನೀಡಿದ್ದು, ಹೇಮಂತ್ ಎಂ ರಾವ್ ಮತ್ತು ನಾನು ಇಂಟ್ರೆಸ್ಟಿಂಗ್ ಯೋಜನೆಗೆ ಕೈಜೋಡಿಸುತ್ತಿದ್ದೇವೆ, ಸ್ವಲ್ಪ ಸಮಯದ ಹಿಂದೆ ಗ್ರೀನ್ ಸಿಗ್ನಲ್ ಕೊಟ್ಟಿರೋದಾಗಿ ಹೇಳಿರುವ ಶಿವಣ್ಣ, ಹೇಮಂತ್ ಅವರ ಆಲೋಚನಾ ಕ್ರಮವೇ ವಿಭಿನ್ನವಾಗಿದೆ. ಅವರ ಜೊತೆ ಕೆಲಸ ಮಾಡೋಕೆ ಎಕ್ಸೈಟ್ ಆಗಿದ್ದೇನೆ ಎಂದಿದ್ದಾರೆ.
ಶಿವಣ್ಣ ಸಿನಿಮಾ ಜರ್ನಿಯ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದಾದ ಜೋಗಿ, ಪ್ರೇಮ್ ಅವರಿಗೆ ಜಸ್ಟ್ 3ನೇ ಸಿನಿಮಾ ಆಗಿತ್ತು. ಓಂ ಚಿತ್ರವೂ ಉಪೇಂದ್ರ ಅವರಿಗೆ 3ನೇ ಸಿನಿಮಾ ಆಗಿತ್ತು. ಹರ್ಷ ಅವರ ಜೊತೆ ಭಜರಂಗಿ ಮಾಡಿದಾಗಲೂ.. ಅಷ್ಟೆ. ಹರ್ಷ ಅವರು ಡೈರೆಕ್ಟರ್ ಆಗಿ ಆಗಿನ್ನೂ ಹೊಸಬರೇ ಆಗಿದ್ದರು. ಹಾಗಂತ ಹೇಮಂತ್ ರಾವ್ ಹೊಸಬರೇನಲ್ಲ. ಆದರೆ ಶಿವಣ್ಣನ ಅನುಭವಕ್ಕೆ ಹೋಲಿಸಿದರೆ.. ಹೊಸಬರೇ ಅನ್ನಬಹುದು.



