ಸಿದ್ದರಾಮಯ್ಯ ಬದುಕು ಬದಲಾಗಿದ್ದು ಎಲ್ಲಿಂದ.. ಯಾವಾಗಿಂದ.. ಹೀಗೆ ನೋಡುತ್ತಾ ಹೋದರೆ ಹಲವರ ಹೆಸರು ಹೇಳಬೇಕಾದೀತು. ಆದರೆ (Sept 5th Teachers day) ಸೆಪ್ಟೆಂಬರ್ 5ರ ಶಿಕ್ಷಕರ ದಿನಾಚರಣೆಯಂದು ಸಿಎಂ ಸಿದ್ದರಾಮಯ್ಯ (CM Siddaramaiah) ತಮ್ಮ ಮೇಷ್ಟ್ರ ಬಗ್ಗೆ ಹೇಳಿಕೊಂಡಿದ್ದಾರೆ. ಯಾರು ಬೇಕಾದರೂ ಸಿಎಂ ಆಗಬಹುದು. ಹಣೆಬರಹದಲ್ಲಿ ಅದೃಷ್ಟ ಇರಬೇಕು. ಆದರೆ ಅಕ್ಷರವೇ ಇಲ್ಲದಿದ್ದರೆ.. ಆ ಅಕ್ಷರ ನೀಡಿದ ಮೇಷ್ಟ್ರುಗಳ ಬಗ್ಗೆ ಹೇಳಿಕೊಂಡಿದ್ದಾರೆ ಸಿಎಂ ಸಿದ್ದರಾಮಯ್ಯ.
ತಂದೆ ಹಾಗೂ ತಾಯಿಯ ನಂತರದ ಸ್ಥಾನ ಗುರುವಿಗೇ ಮೀಸಲು. ಒಬ್ಬ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಕರ ಪಾತ್ರ ಮುಖ್ಯ. ಒಬ್ಬ ಶಿಕ್ಷಕ ತನ್ನ ಮೂರು ದಶಕಗಳ ವೃತ್ತಿ ಜೀವನದಲ್ಲಿ ಸಾವಿರಾರು ಮಕ್ಕಳಿಗೆ ವಿದ್ಯೆಯನ್ನು ಧಾರೆ ಎರೆಯುತ್ತಾನೆ. ಆದರೆ, ತಾನು ಪಾಠ ಮಾಡಿದ ಎಲ್ಲಾ ಮಕ್ಕಳನ್ನೂ ಆತ ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಆದರೆ ಯಾವುದೇ ವ್ಯಕ್ತಿ ಎಷ್ಟೇ ಎತ್ತರಕ್ಕೆ ಬೆಳೆದರೂ, ತನಗೆ ಅಕ್ಷರ ಕಲಿಸಿದ ಶಿಕ್ಷಕರನ್ನು ಮರೆಯಲು ಸಾಧ್ಯವಿಲ್ಲ. ಮರೆಯಬಾರದೂ ಕೂಡಾ ಎಂದಿರುವ ಸಿದ್ದರಾಮಯ್ಯ ತಮಗೆ ಪಾಠ ಕಲಿಸಿದ ಅಕ್ಷರ ಕಲಿಸಿದ ಮೇಷ್ಟ್ರನ್ನು (Teachers day) ನೆನಪಿಸಿಕೊಂಡಿದ್ದಾರೆ.
ನನ್ನ ಬದುಕಿನಲ್ಲಿ ರಾಜಪ್ಪ ಮೇಷ್ಟ್ರು ಬರದೆ ಹೋಗಿದ್ದರೆ ಬಹುಶಃ ನಾನು ಈ ರಾಜ್ಯದ ಮುಖ್ಯಮಂತ್ರಿಯಾಗುತ್ತಿರಲಿಲ್ಲ. ನನ್ನ ಮೊದಲ ಶಿಕ್ಷಕ ನಂಜೇಗೌಡರು. ಅವರು ನನಗೆ ವೀರಮಕ್ಕಳ ಕುಣಿತ ಕಲಿಸುತ್ತಿದ್ದರು. ಆಗ ನಾನು ಮರಳಲ್ಲಿ ಅಕ್ಷರಾಭ್ಯಾಸ ಮಾಡುತ್ತಿದ್ದೆ. ಲೆಕ್ಕ, ಮಗ್ಗಿ ಎಲ್ಲವನ್ನೂ ಕಲಿಯುತ್ತಿದ್ದೆ. ಒಂದು ದಿನ ನಮ್ಮೂರಿನ ರಾಜಪ್ಪ ಮೇಷ್ಟ್ರ ಕಣ್ಣಿಗೆ ನಾನು ಬಿದ್ದೆ. ಅವರು ನನ್ನನ್ನು ಶಾಲೆಗೆ ಕರೆದುಕೊಂಡು ಹೋದರು, ಅಲ್ಲಿ ಹಲವಾರು ವಿಷಯಗಳ ಬಗ್ಗೆ ಉಕ್ತಲೇಖನ ಕೊಟ್ಟರು. ನಾನು ಸರಿಯಾಗಿ ಉತ್ತರಿಸಿ ಪಾಸಾದೆ. ಅವರು ಖುಷಿಪಟ್ಟು ನೇರವಾಗಿ ನನ್ನನ್ನು ಐದನೇ ತರಗತಿಗೆ ಸೇರಿಸಿದರು. ಅವರಿಂದಾಗಿ ನಾನು ಈಗಿನ ಸ್ಥಾನದಲ್ಲಿದ್ದೇನೆ, ಆ ಪುಣ್ಯಾತ್ಮನನ್ನು ನಾನು ಸದಾ ಗೌರವದಿಂದ ಸ್ಮರಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ ಸಿಎಂ ಸಿದ್ದರಾಮಯ್ಯ.
ಇದೇ ವೇಳೆ (Teachers day) ರಾಜ್ಯದಲ್ಲಿ ಕೆಲವು ಶಾಲೆಗಳನ್ನು ಅದರಲ್ಲೂ ಶೂನ್ಯ ಸಂಪಾದನೆ ಶಾಲೆಗಳನ್ನು ನೆನಪಿಸಿಕೊಂಡಿದ್ದಾರೆ. 11 ಅನುದಾನಿತ ಶಾಲೆಗಳಲ್ಲಿ ಎಸ್ಎಸ್ಎಲ್ಸಿ ಫಲಿತಾಂಶ ಶೂನ್ಯವಾಗಿದೆ. 78 ಖಾಸಗಿ ಮತ್ತು ಸರ್ಕಾರಿ ಕಾಲೇಜುಗಳ ಪಿಯುಸಿ ತರಗತಿಗಳ ಫಲಿತಾಂಶವೂ ಶೂನ್ಯವಾಗಿದೆ. ಈ ಎಲ್ಲಾ ಶಾಲೆಗಳು ಹಾಗೂ ಈ ಎಲ್ಲಾ ಕಾಲೇಜುಗಳಲ್ಲಿ ದಾಖಲಾದ ಎಲ್ಲಾ ಮಕ್ಕಳೂ ದಡ್ಡರೇ? ಅಂತೆಯೇ, ಈ ಎಲ್ಲಾ ಶಾಲಾ- ಕಾಲೇಜುಗಳಲ್ಲಿರುವ ಎಲ್ಲಾ ಶಿಕ್ಷಕರೂ ಅಪ್ರಯೋಜಕರೇ? ಇದಕ್ಕೆ ಯಾರನ್ನು ದೂಷಿಸುವುದು? ಇದೇ ರೀತಿ ಪ್ರತಿ ಬಾರಿ ಫಲಿತಾಂಶವನ್ನು ನೋಡಿದರೆ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳು ಅತ್ಯಂತ ಹಿಂದಿನ ಸ್ಥಾನದಲ್ಲಿ ಮತ್ತು ಕರಾವಳಿಯ ಜಿಲ್ಲೆಗಳು ಮೊದಲ ಸ್ಥಾನದಲ್ಲಿರುತ್ತವೆ. ಎಲ್ಲ ಶಿಕ್ಷಕರಿಗೆ ಒಂದೇ ರೀತಿಯ ತರಬೇತಿ ನೀಡಿದರೂ ಏಕೆ ಹೀಗೆ? ಇದು ಸಿದ್ದರಮಯ್ಯ ಪ್ರಶ್ನೆ. ಉತ್ತರ ಹುಡುಕಬೇಕಾದವರೂ ಅವರೇ. ಪರಿಹಾರ ಕೊಡಬೇಕಾದವರೂ ಅವರೇ.



