ಬಿಜೆಪಿ ಜೆಡಿಎಸ್ (BJP JDS) ನಡುವಿನ ಮೈತ್ರಿ ಏನಾಗಲಿದೆಯೋ.. ಇಬ್ಬರಿಗೂ ಶುಭ ತರಲಿದೆಯೋ.. ದುಃಖ ತರಲಿದೆಯೋ.. ಗೊತ್ತಿಲ್ಲ. ಈಗಲೇ ಏನನ್ನೂ ಹೇಳುವುದು ಕಷ್ಟ. ರಾಜ್ಯದಲ್ಲಿ ಕಾಂಗ್ರೆಸ್ (Congress) ಗೆದ್ದಿದ್ದಲ್ಲ, ಗೆದ್ದ ರೀತಿ ಎರಡೂ ಪಕ್ಷಗಳ ನಿದ್ರೆ ಗೆಡಿಸಿದ್ದಂತೂ ನಿಜ. ಈಗಾಗಲೇ ಸಮಾವೇಶ ಮಾಡಿ ಮೈತ್ರಿಗೆ ನಾವು ಸಿದ್ಧ ಎಂದು ದೇವೇಗೌಡ (HD Devegowda) ಹಾಗೂ ಕುಮಾರಸ್ವಾಮಿ (HD Kumaraswamy) ಸಂದೇಶ ಕಳಿಸಿದ್ದಾಗಿದೆ. ಬಿಜೆಪಿಯಲ್ಲಿ ಯಡಿಯೂರಪ್ಪ (BS Yeddyurappa) ಆದಿಯಾಗಿ ಎಲ್ಲರೂ ಸಹಮತ ವ್ಯಕ್ತಪಡಿಸಿದ್ದಾರೆ. ಮಾತನಾಡದೇ ಇರುವುದು ಜೆಪಿ ನಡ್ಡಾ (JP Nadda), ಅಮಿತ್ ಶಾ (Amith Shaw) ಮತ್ತು ನರೇಂದ್ರ ಮೋದಿ (Narendra modi) ಮಾತ್ರ.
ಆದರೆ ಕುತೂಹಲ ಇರುವುದು ಮಂಡ್ಯ ಕ್ಷೇತ್ರದಲ್ಲಿ (Mandya). ಮಂಡ್ಯ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಯಾಗಿ ಸುಮಲತಾ (Actress Sumalatha Ambareesh) ಕಣಕ್ಕಿಳಿದರೆ ಜೆಡಿಎಸ್ ಅವರನ್ನು ಬೆಂಬಲಿಸುವುದೇ ಎಂಬ ಬಗ್ಗೆಯೂ ಚರ್ಚೆಗಳು ಆರಂಭಗೊಂಡಿವೆ. ಪ್ರಸ್ತುತ ಪಕ್ಷೇತರ ಸಂಸದೆಯಾಗಿರುವ ಸುಮಲತಾ (MP Sumalatha Ambareesh) ಅವರು ಬಿಜೆಪಿಗೆ ಬಾಹ್ಯ ಬೆಂಬಲವನ್ನಷ್ಟೇ ಘೋಷಿಸಿದ್ದಾರೆ. 2024ರ ಲೋಕಸಭಾ ಚುನಾವಣೆ ವೇಳೆಗೆ ಅವರು ಬಿಜೆಪಿ ಸೇರುವುದು ನಿಶ್ಚಿತವಾಗಿದೆ. ಬಿಜೆಪಿ ಹೈಕಮಾಂಡ್ ಸುಮಲತಾ ಅವರನ್ನು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ತೀರ್ಮಾನಿಸಿದೆ. ಅದಕ್ಕಾಗಿ ಬಿಜೆಪಿ ರಾಜಕೀಯ ಚಾಣಕ್ಯ ಅಮಿತ್ಶಾ ಅವರು ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಡುವಂತೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಎದುರು ದಾಳ ಉರುಳಿಸಿದ್ದಾರೆ.
ಜೆಡಿಎಸ್ ಪಾಲಿಗೆ ಮಂಡ್ಯ ಪ್ರತಿಷ್ಠೆಯ ಕಣ. ಬಿಜೆಪಿಗಿಂತಲೂ ಹೆಚ್ಚು ಸಂಘಟನಾತ್ಮಕ ಶಕ್ತಿ, ಅತಿ ಹೆಚ್ಚು ಮತದಾರರನ್ನೂ ಒಳಗೊಂಡಿದೆ. ಬಿಜೆಪಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಇದುವರೆಗೂ ಗೆದ್ದಿರುವ ಉದಾಹರಣೆಯೇ ಇಲ್ಲ. ಇದೀಗ ಸುಮಲತಾ ಅವರನ್ನು ಕಣಕ್ಕಿಳಿಸಿ ಮೊದಲ ಬಾರಿಗೆ ಖಾತೆ ತೆರೆಯುವುದಕ್ಕೆ ಬಿಜೆಪಿ ತಂತ್ರಗಾರಿಕೆ ರೂಪಿಸಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲಾಗಿತ್ತು. ಅವರಿಗೆ ಪ್ರತಿಸ್ಪರ್ಧಿಯಾಗಿ ಸುಮಲತಾ ಕಣಕ್ಕಿಳಿದಿದ್ದರು. ಆ ಸಮಯದಲ್ಲಿ ಬಿಜೆಪಿ ಅಭ್ಯರ್ಥಿಯನ್ನೇ ಹಾಕದೆ ಸಂಪೂರ್ಣ ಬೆಂಬಲವನ್ನು ಸುಮಲತಾ ಅವರಿಗೆ ಘೋಷಿಸಿತ್ತು. ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾ ಜಯಶಾಲಿಯಾಗಿದ್ದರು.
ಜೆಡಿಎಸ್ ಸೋಲಿಗೆ ಕಾರಣರಾಗಿದ್ದ ಸುಮಲತಾ ಅಂಬರೀಶ್ ಅವರನ್ನು 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಒಪ್ಪಿಕೊಂಡು ಜೆಡಿಎಸ್ ವರಿಷ್ಠರು ಹಾಗೂ ಸ್ಥಳೀಯ ನಾಯಕರು ಅವರನ್ನು ಪೂರ್ಣ ಪ್ರಮಾಣದಲ್ಲಿ ಬೆಂಬಲಿಸುವರೇ ಎಂಬ ಪ್ರಶ್ನೆ ಸಹಜವಾಗಿಯೇ ಮೂಡಿದೆ. ಸಂಸದೆ ಸುಮಲತಾ ಅಂಬರೀಶ್ಗೆ ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಡುವುದಾಗಿ ಪ್ರಾಮೀಸ್ ಮಾಡಿರುವುದಾಗಿ ಬಿಜೆಪಿ ಹೈಕಮಾಂಡ್ ದೇವೇಗೌಡರಿಗೆ ತಿಳಿಸಿದ್ದು, ಇದಕ್ಕೆ ದೇವೇಗೌಡರು ಸ್ಥಳೀಯ ನಾಯಕರು ಅಂದರೆ ಮಂಡ್ಯ ಜಿಲ್ಲೆಯ ಜೆಡಿಎಸ್ನ ಮಾಜಿ ಶಾಸಕರ ಜೊತೆ ಚರ್ಚಿಸಬೇಕು ಎಂದು ಹೇಳಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಗೆದ್ದ ನಂತರದಲ್ಲೂ ಜೆಡಿಎಸ್ ಪಕ್ಷ ಅವರ ನೇರ ಟಾರ್ಗೇಟ್ ಆಗಿತ್ತು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಜೆಡಿಎಸ್ ಶಾಸಕರ ವಿರುದ್ಧವೇ ಹರಿಹಾಯ್ದಿದ್ದರು. ಈಗ ಹಿಂದೆ ನಡೆದಿದ್ದೆಲ್ಲವನ್ನೂ ಮರೆತು ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಮಾಜಿ ಶಾಸಕರೆಲ್ಲರೂ ಸುಮಲತಾರನ್ನು ಗೆಲ್ಲಿಸಲು ಶ್ರಮಿಸುವರೇ ಎನ್ನುವುದು ಎನ್ನುವುದು ಸದ್ಯದ ಕುತೂಹಲ.
2023ರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ೬ ವಿಧಾನಸಭಾ ಕ್ಷೇತ್ರಗಳನ್ನು ಕಳೆದುಕೊಂಡು ಜೆಡಿಎಸ್ ದುರ್ಬಲವಾಗಿದೆ. ಮಂಡ್ಯ ನೆಲದಲ್ಲಿ 5 ವರ್ಷಗಳಲ್ಲಿ ನಡೆದ ಒಂದು ಲೋಕಸಭೆ, ಎರಡು ವಿಧಾನಪರಿಷತ್ ಚುನಾವಣೆ, 7 ಕ್ಷೇತ್ರಗಳಿಗೆ ನಡೆದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಒಂದು ಕ್ಷೇತ್ರದಲ್ಲಷ್ಟೇ ಜಯ ಸಾಧಿಸಿದೆ. ಈಗ ಮಂಡ್ಯ ಜಿಲ್ಲೆಯಲ್ಲಿ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವುದನ್ನೇ ಎದುರುನೋಡುತ್ತಿದೆ. ಇದೀಗ ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಡಬೇಕೆಂಬ ಬಿಜೆಪಿ ಷರತ್ತು ಮಂಡ್ಯ ಜಿಲ್ಲೆಯೊಳಗೆ ಅಸ್ತಿತ್ವದ ಉಳಿವಿಗೆ ಹೋರಾಟ ನಡೆಸಿರುವ ಜೆಡಿಎಸ್ ಕನಸಿಗೆ ತಣ್ಣೀರೆರಚಿದೆ.
ಸುಮಲತಾ ಅಂಬರೀಶ್ಗೆ 2019ರಲ್ಲಿ ಮಂಡ್ಯದಲ್ಲಿದ್ದ ರಾಜಕೀಯ ಪರಿಸ್ಥಿತಿ ಈಗಿಲ್ಲ. ಹಾಗಾಗಿ ೨೦೨೪ರ ಚುನಾವಣೆ ಅವರಿಗೆ ಸುಲಭವಾಗಿಯೂ ಇಲ್ಲ. ಮತ್ತೆ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸುವುದಕ್ಕೆ ಪೂರಕವಾದ ರಾಜಕೀಯ ವಾತಾವರಣವಿಲ್ಲ. ಅಂದು ಕಾಂಗ್ರೆಸ್, ಬಿಜೆಪಿ, ರೈತಸಂಘ ಹಾಗೂ ಜೆಡಿಎಸ್ನ ಕೆಲವರು ಸುಮಲತಾ ಗೆಲುವಿಗೆ ಬೆಂಬಲವಾಗಿ ನಿಂತಿದ್ದರು. ಈಗ ಅಂತಹ ಸನ್ನಿವೇಶಗಳು ಇಲ್ಲವಾಗಿದೆ. ಪಕ್ಷೇತರ ಸಂಸದೆಯಾಗಿರುವ ಸುಮಲತಾ ಮುಂದಿನ ಚುನಾವಣೆ ವೇಳೆಗೆ ಬಿಜೆಪಿಯಲ್ಲಿ ರಾಜಕೀಯ ನೆಲೆ ಕಂಡುಕೊಳ್ಳಲು ಬಯಸಿದ್ದಾರೆ.
ಸುಮಲತಾ ಬೆಂಬಲಿಸುವುದಕ್ಕೆ ಜೆಡಿಎಸ್ ಒಪ್ಪಿದರೆ ಆ ಪಕ್ಷದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆದಿಯಾಗಿ ಮಾಜಿ ಶಾಸಕರೆಲ್ಲರನ್ನೂ ಸುಮಲತಾ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗುವುದು ಅನಿವಾರ್ಯವಾಗಲಿದೆ. ಇತ್ತೀಚೆಗೆ ಸಂಸದೆ ಸುಮಲತಾ ಅವರು ಜೆಡಿಎಸ್ ಕುರಿತಂತೆ ಮೃದು ಧೋರಣೆ ಅನುಸರಿಸುತ್ತಿದ್ದಾರೆ. ಕಾವೇರಿ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧವಾದ ನಿಲುವನ್ನು ಅವರು ಪ್ರದರ್ಶಿಸುತ್ತಿದ್ದಾರೆ. ಇದುವರೆಗೂ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದವರು ಮುಂದೆ ಕಾಂಗ್ರೆಸ್ ಪಕ್ಷದ ವಿರುದ್ಧ ದಾಳಿ ನಡೆಸಬೇಕಿದೆ.



