ನಮ್ಮ ಸುತ್ತಮುತ್ತ ಜ್ಞಾನಿಗಳು ಇರಬೇಕು. ತಿಳಿದುಕೊಂಡವರು ಇರಬೇಕು. ನಿಮ್ಮ ಗೆಳೆಯರು ಯಾರು ಅನ್ನೋದನ್ನ ಹೇಳಿ, ನೀವು ಎಂಥವರು ಎಂದು ಹೇಳ್ತೇನೆ ಅನ್ನೋವ್ರು ಎಲ್ಲ ಕಡೆ ಸಿಗ್ತಾರೆ. ನಟ ದರ್ಶನ್ ಹಾಳಾಗಿದ್ದೇ ತಮ್ಮ ಸುತ್ತಮುತ್ತ ಇಟ್ಟುಕೊಂಡಿದ್ದ ಹೊಗಳುಭಟರಿಂದ ಅನ್ನೋದನ್ನ ಚಿತ್ರರಂಗದಲ್ಲಿರುವವರೇ ಒಪ್ಪಿಕೊಳ್ತಾರೆ. ದರ್ಶನ್ ತಮ್ಮ ನಡೆ ನುಡಿಯನ್ನು ವಿಮರ್ಶೆ ಮಾಡುವವರನ್ನು, ಬುದ್ದಿ ಹೇಳುವವರನ್ನು, ಟೀಕೆ ಮಾಡುವವರನ್ನು ಹತ್ತಿರಕ್ಕೂ ಬಿಟ್ಟುಕೊಳ್ತಿರಲಿಲ್ಲವಂತೆ.
ಕುಡಿಯೋದು ಜಾಸ್ತಿ ಆಗ್ತಿದೆ ಎಂದ ಗೆಳೆಯರನ್ನೂ ಹಚಾ ಎಂದು ಆಚೆಗಟ್ಟಿದ್ದ ದರ್ಶನ್, ನೀನೇ ಎಲ್ಲ.. ನಿನ್ನ ಸಮ ಯಾರಿಲ್ಲ ಎನ್ನುವವರನ್ನಷ್ಟೇ ಹತ್ತಿರಕ್ಕೆ ಬಿಟ್ಟುಕೊಂಡಿದ್ದರು. ಅದರ ಪರಿಣಾಮ, ರೇಣುಕಾಸ್ವಾಮಿ ಕೇಸಿನಲ್ಲಿಯೂ ಆಗಿದೆ.
ದರ್ಶನ್ ತಮ್ಮ ಬಳಿ ಒಂದಿಷ್ಟು ಬುದ್ದಿವಂತರು, ಉತ್ತಮರನ್ನು ಇಟ್ಟುಕೊಂಡಿದ್ದರೆ, ಅವರ ಬುದ್ದಿಮಾತು ಮಾತು ಕೇಳುವ ಮನಸ್ಥಿತಿ ಹೊಂದಿದ್ದರೆ, ಸಂಸಾರದಲ್ಲಿ ಪವಿತ್ರಾ ಗೌಡ ಎಂಬ ಮಹಿಳೆಯ ಎಂಟ್ರಿಯೂ ಆಗ್ತಾ ಇರಲಿಲ್ಲ. ಮೈಮೇಲೆ ಪ್ರಜ್ಞೆ ಇಲ್ಲದಂತೆ ಕುಡಿಯುವ, ಈ ರೀತಿ ಕೊಲೆ ಮಾಡುವ ಹಂತಕ್ಕೆ ಹೋಗುತ್ತಲೂ ಇರಲಿಲ್ಲ. ಅಷ್ಟೆಲ್ಲ ಆಗಿ, ರೇಣುಕಾಸ್ವಾಮಿ ಕೊಲೆ ಆದ ಮೇಲೆ ಕೇಳಿದ್ದು ಒಬ್ಬ ಪೆದ್ದನ ಮಾತು.
ಪೊಲೀಸ್ ತನಿಖೆಯ ಎಬಿಸಿಡಿ ಕೂಡಾ ಗೊತ್ತಿಲ್ಲದ ಪ್ರದೋಷ್ʻನನ್ನೇ ಅತೀ ಬುದ್ದಿವಂತ ಎಂದು ಪರಿಗಣಿಸಿದ್ದ ದರ್ಶನ್, ಆ ತಪ್ಪಿನಿಂದಾಗಿಯೇ ಸಾಕ್ಷಿಗಳ ಮೇಲೆ ಸಾಕ್ಷಿಗಳನ್ನು ಸ್ವತಃ ಕೊಟ್ಟು ಜೈಲು ಸೇರಿದ್ದಾಗಿದೆ. ಇಷ್ಟಕ್ಕೂ ಪ್ರದೋಷ್ ಮಾಡಿದ ಪ್ಲಾನ್ ಎಲ್ಲೆಲ್ಲಿ ಕೈಕೊಟ್ಟಿತು ಅಂತಾ ನೋಡಿದ್ರೆ..
ಮೊದಲಿಗೆ ಸರೆಂಡರ್ ಮಾಡಿಸಿ ಸಿಕ್ಕಿಬಿದ್ದ : ಅಂದ್ರೆ ರೇಣುಕಾಸ್ವಾಮಿ ಮೃತದೇಹ ರಾಜಾಕಾಲುವೆ ಬಳಿ ಸಿಕ್ಕ ನಂತರ, ನಾಲ್ವರನ್ನು ಶರಣಾಗತರನ್ನಾಗಿ ಮಾಡಿಸಿದ. ಆದರೆ ಅವರಿಗೆ ದುಡ್ಡು ಕೊಟ್ಟು ಶರಣಾಗತಿ ಮಾಡಿಸಿದ್ರೆ ಸಾಕು, ಪೊಲೀಸರು ಅವರನ್ನೇ ಜೈಲಿಗೆ ಹಾಕಿ ಕೈ ತೊಳ್ಕೋತಾರೆ ಎಂದುಕೊಂಡಿದ್ದ. ನೋಡಿದ್ದ ಮಸಾಲಾ ಸಿನಿಮಾಗಳ ಕಥೆಯನ್ನೇ ನಂಬಿಕೊಂಡಿದ್ದವನಿಗೆ ಪೊಲೀಸ್ ತನಿಖೆಯ ಎಬಿಸಿಡಿಯೂ ಗೊತ್ತಿರಲಿಲ್ಲ.
ನಿಮಗೆ ಕಾಲೇಜು ಹುಡುಗರು ಮತ್ತು ಕಾರಿನ ಟೈರ್ ಕಥೆ ಕೇಳಿರಬಹುದು. ಒಂದ್ಸಲ ಕಾಲೇಜಿನಲ್ಲಿ ನಾಲ್ವರು ಹುಡುಗರು ಪರೀಕ್ಷೆಗೆ ಬರದೆ ತಪ್ಪಿಸಿಕೊಳ್ತಾರೆ. ಯಾಕೆ ಬರಲಿಲ್ಲ ಎಂದು ಪ್ರಿನ್ಸಿಪಾಲರು ಪ್ರಶ್ನೆ ಮಾಡಿದಾಗ.. ರಾತ್ರಿ ಬರುವಾಗ ಕಾರ್ ಟೈರ್ ಪಂಕ್ಚರ್ ಆಯ್ತು. ರಾತ್ರಿ ವೇಳೆ. ಮೆಕಾನಿಕ್ ಸಿಗಲಿಲ್ಲ. ಹೇಗೋ ಕಷ್ಟ ಪಟ್ಟು ಕಾರು ಪಂಕ್ಚರ್ ಹಾಕಿಕೊಂಡು ಬಂದೆವು ಎಂದೆಲ್ಲ ಕಥೆ ಹೇಳ್ತಾರೆ. ಕೊನೆಗೆ ಪ್ರಿನ್ಸಿಪಾಲ್, ಪರೀಕ್ಷೆ ಬರೆಯುವುದಕ್ಕೆ ಹೇಳಿ, ಒಬ್ಬೊಬ್ಬರನ್ನೂ ಒಂದೊಂದು ಕೊಠಡಿಯಲ್ಲಿ ಕೂರಿಸಿ ಪ್ರಶ್ನೆ ಪತ್ರಿಕೆ ಕೊಡ್ತಾರೆ. ಅದರಲ್ಲಿ ಒಂದೇ ಒಂದು ಪ್ರಶ್ನೆ ಇರುತ್ತದೆ.
ಪ್ರಶ್ನೆ : ಯಾವ ಕಾರು ಪಂಕ್ಚರ್ ಆಯ್ತು..?
ಉತ್ತರ : ಒಬ್ಬೊಬ್ಬರೂ ಒಂದೊಂದು ಉತ್ತರ ಕೊಡ್ತಾರೆ.
ಪ್ರಿನ್ಸಿಪಾಲರಿಗೆ ವಿದ್ಯಾರ್ಥಿಗಳು ಹೇಳಿದ್ದು ಸುಳ್ಳು ಎಂದು ಗೊತ್ತಾಗುತ್ತೆ. ದರ್ಶನ್ ಕೇಸಿನಲ್ಲಿ ಪೊಲೀಸರು ಮಾಡಿದ್ದೂ ಅದನ್ನೇ.
ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ನಾಲ್ವರು ಪೊಲೀಸರ ಬಳಿ ಬಂದು ಶರಣಾಗತರಾದರಲ್ಲ, ಅವರ ಮಾತುಕತೆ ವರ್ತನೆ ಮೇಲೆ ಪೊಲೀಸರಿಗೆ ಅನುಮಾನ ಬಂದಿತ್ತು. ರಾಘವೇಂದ್ರ, ನಿಖಿಲ್, ಕೇಶವ್ ಹಾಗೂ ಕಾರ್ತಿಕ್ ಶರಣಾಗತರೇನೋ ಆಗಿದ್ದರು. ಶರಣಾಗತರಾಗಿದ್ದು ಜೂನ್ 10ನೇ ತಾರೀಕಿನಂದು.
ದುಡ್ಡಿನ ವಿಚಾರಕ್ಕೆ ಜಗಳ ಆಯ್ತು ಸರ್, ಹೊಡೆದಾಡಿಕೊಳ್ಳೋವಾಗ ಮಿಸ್ ಆಗಿ ಸತ್ತೇ ಹೋದ ಎಂಬ ಕಥೆಯನ್ನೇನೋ ಹೇಳಿದ್ರು. ಆದರೆ, ಪೊಲೀಸರಿಗೆ ಅವರ ವರ್ತನೆ, ನಡವಳಿಕೆ ಮೇಲೆ ಅನುಮಾನ ಬಂದಿತ್ತು. ಮುಂದೆ ನಡೆದ ಕಥೆಯೇ ಬೇರೆ.
ನಾಲ್ವರನ್ನೂ ಒಂದೊಂದು ಕೋಣೆಗೆ ಕರೆದುಕೊಂಡು ಹೋದ್ರು. ಅವರು ಹೇಳಿದ್ದನ್ನು ಇವರಿಗೆ ಹೇಳಲಿಲಲ್ಲ. ಇವರದ್ದನ್ನು ಅವರಿಗೆ ಹೇಳಲಿಲ್ಲ. ಅವರು ಹಂಗಂದ್ರು.. ಇವರು ಹೀಗೆ ಹೇಳಿದ್ರಲ್ಲ ಅನ್ನೋ ಗೊಂದಲ ಮೂಡಿಸಿದ್ರು.. ಅಷ್ಟೇ.
ಇಷ್ಟಕ್ಕೂ ಪೊಲೀಸರು ಕೇಳಿದ್ದ ಪ್ರಶ್ನೆಗಳೇನು ಗೊತ್ತಾ..
ರೇಣುಕಾಸ್ವಾಮಿಗೆ ದುಡ್ಡು ಕೊಟ್ಟವರ ಯಾರು? ಎಷ್ಟು ಕೊಟ್ಟಿದ್ರಿ..? (ಒಬ್ಬರು ಒಂದು ಲಕ್ಷ ಅಂದರೆ, ಇನ್ನೊಬ್ಬರು 5 ಲಕ್ಷ ಅಂದ್ರು.)
ಯಾವಾಗ ಬೆಂಗಳೂರಿಗೆ ಕರೆದುಕೊಂಡು ಬಂದ್ರಿ..? (ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಹೇಗೆ ಕರ್ಕೊಂಡ್ ಬಂದ್ರು ಅನ್ನೋ ಮಾಹಿತಿ ಒಬ್ಬೊಬ್ಬರದ್ದೂ ಒಂದೊಂದು ರೀತಿ ಇತ್ತು.)
ಇನ್ನೂ ಎಷ್ಟು ದುಡ್ಡು ರೇಣುಕಾಸ್ವಾಮಿ, ನಿಮಗೆ ಕೊಡಬೇಕು..? ( ಶರಣಾಗತಿ ಆದವರಲ್ಲಿ ದುಡ್ಡು ಕೊಟ್ಟವರು ಯಾರು ಎಂಬ ಬಗ್ಗೆಯೂ ಗೊತ್ತಿರಲಿಲ್ಲ )
ಯಾವ ಉದ್ದೇಶಕ್ಕೆ ಸಾಲ ಕೊಟ್ಟಿದ್ರಿ..? ಸಾಲ ಕೊಟ್ಟಿರೋದಕ್ಕೆ ದಾಖಲೆಗಳು ಇವೆಯಾ..? (ಸಾಲ ಯಾವಾಗ ಕೊಟ್ಟಿದ್ವಿ ಅನ್ನೋದೂ ಗೊತ್ತಿರಲಿಲ್ಲ. ದಾಖಲೆಗಳಂತೂ ಇಲ್ಲವೇ ಇರಲಿಲ್ಲ)
ಯಾವ ಸ್ಥಳದಲ್ಲಿ ಹಲ್ಲೆ ಮಾಡಿದ್ರಿ..? ಎಷ್ಟು ಹೊತ್ತಿಗೆ ಪ್ರಾಣ ಹೋಯ್ತು..? (ಒಬ್ಬೊಬ್ಬರ ಟೈಮಿಂಗ್ ಬೇರೆ ಬೇರೆ ಇತ್ತು)
ಹೀಗೆ ಒಂದೇ ಪ್ರಶ್ನೆಗಳನ್ನ ಮೇಲಿಂದ ಮೇಲೆ ಕೇಳಿದ್ದಾರೆ. ಆದರೆ, ಇದನ್ನು ನಿರೀಕ್ಷೆ ಮಾಡದೇ ಇದ್ದ ಆರೋಪಿಗಳು, ಒಬೊಬ್ಬರು ಒಂದೊಂದು ಕಥೆ ಹೇಳಿದ್ದಾರೆ. ಅದಾದ ಮೇಲೆ ಇದೊಂದು ಕಾಗಕ್ಕ ಗೂಬಕ್ಕನ ಕಥೆ ಅಂಥಾ ಪೊಲೀಸರಿಗೆ ಗೊತ್ತಾಗಿದೆ. ಸ್ವಲ್ಪ ರಿಪೇರಿ ಕೆಲಸ ಮಾಡಿದಾಗ ರಿಯಲ್ ಹೆಸರು ದರ್ಶನ್ ಮತ್ತು ಪವಿತ್ರಾ ಗೌಡ ಹೆಸರು ಹೊರಬಂದಿದೆ.
ಪ್ರದೋಷ್ ಹಾಕಿಕೊಟ್ಟ ಅಡ್ನಾಡಿ ಪ್ಲಾನ್ : ಅಕ್ಕಪಕ್ಕದಲ್ಲಿದ್ದವರು ಬಟ್ಟಂಗಿಗಳಾದ್ರೆ ಯಾವ ಗತಿ ಬರುತ್ತೆ ಅನ್ನೋಕೆ ದರ್ಶನ್ ಪ್ರಕರಣವೇ ಸಾಕ್ಷಿ. ಯಾಕಂದ್ರೆ, ಚಾರ್ಜ್ಶೀಟ್ನಲ್ಲಿ ಉಲ್ಲೇಖವಾಗಿರೋ ಬಗ್ಗೆ ನಮಗೆ ಲಭ್ಯವಾಗಿರೋ ಮಾಹಿತಿಯ ಪ್ರಕಾರ ಕೊಲೆಯಾದ ಬಳಿಕ ದರ್ಶನ್ ದಾರಿ ತಪ್ಪಿಸಿದ್ದವನೇ ಪ್ರದೋಷ್. ಜೂನ್ 8 ರ ಸಂಜೆ 6.30ಕ್ಕೆ ಮೀಟಿಂಗ್ ಮಾಡಿದ್ದ ಡಿಗ್ಯಾಂಗ್ಗೆ ಸಾಕ್ಷಿನಾಶದ ಬ್ಲೂ ಪ್ರಿಂಟ್ ಹಾಕ್ಕೊಟ್ಟ ಪ್ರದೋಷ್, ಶವ ಪೊಲೀಸರಿಗೆ ಸಿಕ್ಕರೂ ಕೂಡ ನಾವೆಲ್ಲ ಸೇಫ್ ಬಾಸ್ ಅಂತಾನೂ ದರ್ಶನ್ಗೆ ಭರವಸೆ ಕೊಡ್ತಾನೆ. ಅದು ಹೇಗೆ ಪ್ರದೂಶ ಅಂತ ದರ್ಶನ್ ಕೇಳಿದಾಗ ಸಿನಿಮಾ ಡೈರೆಕ್ಟರ್ ರೀತಿ ಸೀನ್ ಬೈ ಸೀನ್ ವಿವರಿಸ್ತಾನೆ. ‘ಮೃತದೇಹ ಪೊಲೀಸರಿಗೆ ಸಿಕ್ಕರೆ ತಕ್ಷಣ ತನಿಖೆಗೆ ಮುಂದಾಗ್ತಾರೆ. ಅಷ್ಟೊತ್ತಿಗೆ ನಾವು ಕೆಲವರನ್ನು ಸರಂಡರ್ ಮಾಡಿಸೋಣ. ಅವರು ಅರೆಸ್ಟ್ ಆಗ್ತಾರೆ, ಕೇಸ್ ಕ್ಲೋಸ್ ಆಗುತ್ತೆ ಅಂಥಾನೇ ಪ್ರದೋಶ್. ಪೊಲೀಸ್ ತನಿಖೆ ಹೇಗಿರುತ್ತೆ ಅನ್ನೋ ಕಾಮನ್ʻಸೆನ್ಸ್ ಕೂಡಾ ಇಲ್ಲದೆ, ಬರೀ ಮಸಾಲಾ ಸಿನಿಮಾಗಳನ್ನೇ ನೋಡಿ.. ಅದೇ ಪೊಲೀಸ್ ತನಿಖೆ ಅಂದ್ಕೊಂಡಿರೋದ್ರ ಪರಿಣಾಮ ಇದು.
ವಿಚಿತ್ರ ಅಂದ್ರೆ, ಶರಣಾಗತರಾಗಿದ್ದ ಆರೋಪಿಗಳಲ್ಲಿ ರೇಣುಕಾಸ್ವಾಮಿಯ ನಂಬರ್ ಕೂಡಾ ಇರಲಿಲ್ಲ. ಫೋನ್ ತೆಗೆದು ಪರಿಶೀಲಿಸಿದಾಗ, ರೇಣುಕಾಸ್ವಾಮಿ ಮತ್ತು ಇವರ ನಂಬರ್ ಮಧ್ಯೆ ಒಮ್ಮೆಯೂ ಸಂಪರ್ಕ ಇರಲಿಲ್ಲ. ಕಾಂಟ್ಯಾಕ್ಟ್ ಕೂಡಾ ಇಲ್ಲದವನನ್ನು ಕೊಂದೆವು ಎಂದು ಹೇಳ್ತಿರೋದೇಕೆ ಎಂದು ಸ್ವಲ್ಪ ವರ್ಕ್ ಮಾಡಿದ ಕೂಡ್ಲೇ ಪವಿತ್ರಾ ಗೌಡ ಮತ್ತು ದರ್ಶನ್ ಹೆಸರು ಬಾಯಿಬಿಟ್ಟಿದ್ದಾರೆ. ಕಾಲ್ ಲಿಸ್ಟಿನಲ್ಲಿ ಅವರ ಹೆಸರೂ ಇದ್ದ ಕಾರಣ ಪೊಲೀಸರು ಲೈಟಾಗಿ ಇನ್ನೊಂಚೂರು ಬೆಂಡೆತ್ತಿದ್ದಾರೆ. ಇಡೀ ಕೇಸ್ ಆಚೆ ಬಂದಿದೆ.



