ಕೆಲವೇ ದಿನಗಳ ಹಿಂದೆ ಕಾಂಗ್ರೆಸ್ಸಿನ ನಾಯಕರೆಲ್ಲ ತಮಗೆ ರಾಮಮಂದಿರದ ಆಹ್ವಾನ ಪತ್ರಿಕೆ ಕೊಟ್ಟಿಲ್ಲ. ಆಮಂತ್ರಣ ಕೊಟ್ಟಿಲ್ಲ ಎಂದು ಹೇಳಿಕೆ ರಾಜಕೀಯ ಮಾಡಿದ್ದರು. ಈ ವಿಷಯದಲ್ಲಿ ಖುದ್ದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೊದಲಾದ ನಾಯಕರು ಬಹಿರಂಗ ಹೇಳಿಕೆ ಕೊಟ್ಟಿದ್ದರು. ರಾಮಮಂದಿರದ ಬಾಗಿಲು ತೆರೆಸಿದ್ದೇ ಕಾಂಗ್ರೆಸ್ಸಿನ ರಾಜೀವ್ ಗಾಂಧಿ ಎಂಬ ಮಾತನ್ನೂ ಆಡಿದ್ದರು. ಮಂತ್ರಾಕ್ಷತೆ ನಮ್ಮ ಸರ್ಕಾರದ ಅನ್ನ ಭಾಗ್ಯದ ಅಕ್ಕಿಯಿಂದಲೇ.. ಎಂದು ಹೇಳಿಕೆ ನೀಡಿದ್ದರು. ನಾನು ಶಿವ ಭಕ್ತ. ಆಂಜನೇಯ ಭಕ್ತ ಎಂದೆಲ್ಲ ಹೇಳಿಕೆ ನೀಡಿದ್ದರು ಡಿಸಿಎಂ ಡಿಕೆ ಶಿವಕುಮಾರ್. ಆದರೆ ಈಗ ಇದ್ದಕ್ಕಿದ್ದಂತೆ ವರಸೆಯೇ ಬದಲಾಗಿ ಹೋಗಿದೆ.
ಆಹ್ವಾನ ಪತ್ರಿಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಇರಲಿಲ್ಲ ನಿಜ. ಆದರೆ ಕಾಂಗ್ರೆಸ್ಸಿನ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಪ್ರತಿಪಕ್ಷ ನಾಯಕ ಅಧೀರ್ ರಂಜನ್ ಚೌಧರಿಯವರಿಗೆ ಆಹ್ವಾನ ಇತ್ತು. ಇದೀಗ ತಾವಷ್ಟೇ ಅಲ್ಲ, ಕಾಂಗ್ರೆಸ್ಸಿನ ಯಾವ ನಾಯಕರೂ ರಾಮ ಮಂದಿರ ಉದ್ಘಾಟನೆಗೆ ಹೋಗುವುದಿಲ್ಲ ಎಂಬ ನಿರ್ಧಾರ ತೆಗೆದುಕೊಳ್ಳುವುದರೊಂದಿಗೆ ರಾಜಕೀಯ ಮಾಡುತ್ತಿದೆ ಕಾಂಗ್ರೆಸ್.
ಇಷ್ಟು ದಿನ ಶ್ರೀರಾಮ ಎಲ್ಲರಿಗೂ ಆದರ್ಶ, ಶ್ರೀರಾಮನ್ನು ಬಿಜೆಪಿ ಹೈಜಾಕ್ ಮಾಡಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್ ಇದೀಗ ರಾಮ ಮಂದಿರ ಪ್ರಾಣಪ್ರತಿಷ್ಠೆ ಆಹ್ವಾನ ತಿರಸ್ಕರಿಸಿದೆ. ಇದು ಬಿಜೆಪಿ ಹಾಗೂ ಆರ್ಎಸ್ಎಸ್ ಕಾರ್ಯಕ್ರಮ ಎಂದು ಕಾರಣನೀಡಿ ಉದ್ಘಾಟನೆಯಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದೆ. ಕಾಂಗ್ರೆಸ್ ಅಧಿಕೃತ ಘೋಷಣೆ ಹೊರಬೀಳುತ್ತಿದ್ದಂತೆ ಪರ ವಿರೋಧಗಳು ವ್ಯಕ್ತವಾಗಿದೆ. ಈ ಪೈಕಿ ರಾಮ ವಿರೋಧಿಗಳಿಗೆ ರಾಮನಗರಿಯಲ್ಲಿ ಜಾಗವಿಲ್ಲ. ಉದ್ಘಾಟನೆಯಿಂದ ದೂರ ಉಳಿದಿರುವ ಕಾಂಗ್ರೆಸ್ಗೆ ಧನ್ಯವಾದ ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯ ಕಾಂಗ್ರೆಸ್ಸಿಗರು ಯಾವ ರೀತಿಯ ಸಂಕಷ್ಟಕ್ಕೆ ಸಿಲುಕಿದ್ದಾರಂದ್ರೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ನನಗೆ ಗೊತ್ತೇ ಇಲ್ಲ ಎಂದು ಉತ್ತರ ನೀಡದೆ ನುಣುಚಿಕೊಂಡಿದ್ಧಾರೆ ಸಿಎಂ ಸಿದ್ದರಾಮಯ್ಯ. ನ್ಯೂಸ್ ಚಾನೆಲ್ಲುಗಳ ಡಿಬೇಟುಗಳಿಗೆ ಕಾಂಗ್ರೆಸ್ ವಕ್ತಾರರನ್ನು ಕಳಿಸುತ್ತಿಲ್ಲ. ರಾಜ್ಯ ಕಾಂಗ್ರೆಸ್ ನಾಯಕರು ಮುಜುಗರ ಅನುಭವಿಸುವಂತಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಲೇವಡಿ : ಶ್ರೀರಾಮ ಕಾಲ್ಪನಿಕ, ಶ್ರೀರಾಮ ಇರುವಿಕೆಗೆ ಇತಿಹಾಸದಲ್ಲಿ ಯಾವುದೇ ದಾಖಲೆ ಇಲ್ಲ ಎಂದು 2007ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಸುಪ್ರೀಂ ಕೋರ್ಟ್ಗೆ ಹೇಳಿತ್ತು. ಶ್ರೀರಾಮ ಮಂದಿರ ನಿರ್ಮಾಣಕ್ಕೆ ಹಲವು ಬಾರಿ ವಿರೋಧ ವ್ಯಕ್ತಪಡಿಸಿತ್ತು. ಇದೇ ಕಾಂಗ್ರೆಸ್ ರಾಮ ಮಂದಿರ ಪ್ರಾಣಪ್ರತಿಷ್ಠೆಯಿಂದ ದೂರ ಉಳಿದಿರುವುದು ಆಶ್ಚರ್ಯವಿಲ್ಲ ಎಂದು ಹಲವರು ಸಾಮಾಜಿಕ ಮಾಧ್ಯಮದಲ್ಲಿ ಕಮೆಂಟ್ ಮಾಡಿದ್ದಾರೆ.
ಜೈ ಶ್ರೀರಾಮ ಘೋಷಣೆ ಕಾಂಗ್ರೆಸ್ಗೆ ಅಲರ್ಜಿ, ಮೋದಿ..ಮೋದಿ ಘೋಷಣೆ ಕೇಳಿದರೆ ಕಾಂಗ್ರೆಸ್ ಉರಿದು ಬೀಳುತ್ತದೆ. ಜನವರಿ 22ರ ರಾಮ ಮಂದಿರ ಪ್ರಾಣಪ್ರತಿಷ್ಛೆಯಲ್ಲಿ ಈ ಎರಡು ಘೋಷಣೆಗಳು ಇದ್ದೇ ಇರುತ್ತೆ. ರಾಮ ಮಂದಿರದೊಳಗೆ ಹಾಗೂ ರಾಮ ಮಂದಿರ ಆವರಣದೊಳಗೆ ಜೈಶ್ರೀರಾಮ ಘೋಷಣೆ ಇದ್ದರೆ, ಆಯೋಧ್ಯೆಯಲ್ಲಿ ಜೈಶ್ರೀರಾಮ್ ಜೊತೆಗೆ ಮೋದಿ ಮೋದಿ ಘೋಷಣೆಗಳು ಇರಲಿದೆ. ಇವೆರಡನ್ನು ಕಾಂಗ್ರಸ್ಗೆ ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಕಾಂಗ್ರೆಸ್ ಬರದೇ ಇರುವುದು ಒಳ್ಳೆಯದು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ನಿರ್ಧಾರ ಸರಿಯಾಗಿ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಬಿಜೆಪಿ ರಾಮ ಮಂದಿರವನ್ನು ರಾಜಕೀಯವಾಗಿ ಬಳಸಿಕೊಂಡಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಕಾಂಗ್ರೆಸ್ ತಾನು ಭಾಗವಹಿಸದೇ ಇರುವುದಕ್ಕೆ ರಾಮ ಮಂದಿರ ಇನ್ನೂ ಪೂರ್ಣಗೊಂಡಿಲ್ಲ ಹಾಗೂ ಇದು ಆರ್.ಎಸ್.ಎಸ್. ಕಾರ್ಯಕ್ರಮ ಎನ್ನುವ ಸಬೂಬು ಕೊಟ್ಟಿದೆ.
ಇಂಡಿಯಾ ಒಕ್ಕೂಟದ ನಿಲುವು ಏನು?
ಈಗಾಗಲೇ ಇಂಡಿಯಾ ಒಕ್ಕೂಟದ ಹಲವು ಪಕ್ಷಗಳು ರಾಮ ಮಂದಿರ ಉದ್ಘಾಟನೆಗೆ ಹೋಗುವುದೋ.. ಬಿಡುವುದೋ.. ಎಂಬ ಗೊಂದಲದಲ್ಲಿವೆ. ಎಡಪಕ್ಷಗಳಷ್ಟೇ ಹೋಗಲ್ಲ ಎಂದಿದ್ದವು. ಈಗ ಕಾಂಗ್ರೆಸ್ ಕೂಡಾ ಅದೇ ನಿಲುವು ತಗೊಂಡಿರೋದ್ರಿಂದ ಈ ಸಂಖ್ಯೆ ಇನ್ನಷ್ಟು ಹೆಚ್ಚಬಹುದು. ಆದರೆ ಉತ್ತರ ಪ್ರದೇಶದ ಸಮಾಜವಾದಿ ಪಕ್ಷಕ್ಕೆ ನೆಲೆಯೇ ಉತ್ತರ ಪ್ರದೇಶ. ಅಲ್ಲಿನ ಪಕ್ಷವೇ ಹೋಗುವುದಿಲ್ಲ ಎನ್ನುವುದಕ್ಕೆ ಆಗುವುದಿಲ್ಲ.



