ಚಕ್ರವರ್ತಿ ಸೂಲಿಬೆಲೆ. ಚಿಂತಕ, ವಾಗ್ಮಿ. ಸಮಾಜ ಸೇವಕ. ಸೂಲಿಬೆಲೆಯವರ ಯುವ ಬ್ರಿಗೇಡ್ ಹಲವು ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿದೆ. ಯುವ ಬ್ರಿಗೇಡ್ʻನವರ ಸೇವೆಯಿಂದಾಗಿ ರಾಜ್ಯದ ಕೆಲವು ನದಿಗಳು ಒಂದಷ್ಟು ಮಟ್ಟಿಗೆ ಶುದ್ಧವಾಗಿವೆ. ನೂರಾರು ಪುಟ್ಟ ಪುಟ್ಟ ದೇವಸ್ಥಾನಗಳು ಜೀರ್ಣೋದ್ಧಾರವಾಗಿವೆ. ಹಲವು ಪಾಳುಬಿದ್ದ ಕಲ್ಯಾಣಿಗಳಲ್ಲಿನ ಹೂಳು, ಕಸವನ್ನೆಲ್ಲ ತೆಗೆದು, ನೀರು ತುಂಬುವಂತೆ ಮಾಡಿದ್ದಾರೆ ಯುವ ಬ್ರಿಗೇಡ್ ಕಾರ್ಯಕರ್ತರು. ಸರ್ಕಾರಿ ಶಾಲೆಗಳು ಬಣ್ಣ ಪಡೆದುಕೊಂಡಿವೆ. ಬಸ್ ಸ್ಟಾಂಡುಗಳು ಕ್ಲೀನ್ ಆಗಿವೆ. ಆದರೆ.. ಸಮಸ್ಯೆ ಇಲ್ಲಲ್ಲ. ಚಕ್ರವರ್ತಿ ಸೂಲಿಬೆಲೆ ಅವರ ರಾಜಕೀಯ ನಿಲುವು ಕಾಂಗ್ರೆಸ್ಸಿಗರಿಗೆ ಆಗಲ್ಲ.
ಹಾಗೆ ನೋಡಿದರೆ ಅಸೆಂಬ್ಲಿ ಎಲೆಕ್ಷನ್ ನಡೆದಾಗ ಚಕ್ರವರ್ತಿ ಸೂಲಿಬೆಲೆ ಹೊರಬಂದು ಪ್ರಚಾರ ಮಾಡುವುದಿಲ್ಲ. ಕೇವಲ ಲೋಕಸಭೆ ಚುನಾವಣೆ ವೇಳೆ ಪ್ರಚಾರ ಮಾಡ್ತಾರೆ. ಇದು ಮೋದಿಗಾಗಿ ಎನ್ನುವ ಸೂಲಿಬೆಲೆ, ಪ್ರವಾಹ ಪರಿಹಾರ ನೀಡಲು ವಿಳಂಬ ಮಾಡಿದಾಗ ಕೇಂದ್ರ ಸರ್ಕಾರದ ವಿರುದ್ಧವೇ ಮಾತನಾಡಿದ್ದವರು. ಇದೆಲ್ಲ ಹಳೆಯ ಕಥೆ. ಈಗೇನಾಗಿದೆ ಅಂದ್ರೆ..
ಚಿಕ್ಕಮಗಳೂರು ನಗರದ ವಿಜಯಪುರ ಬಡಾವಣೆಯಲ್ಲಿ ನಮೋ ಭಾರತ ವತಿಯಿಂದ ಆಯೋಜನೆಗೊಂಡಿದ್ದ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಿಪಡಿಸಿದ್ಧಾರೆ. ಶರ್ಟ್ ಬಿಚ್ಚಿ ಕಪ್ಪು ಬಾವುಟ ಪ್ರದರ್ಶನ ಮಾಡಿದ್ದಾರೆ. ಈ ಘಟನೆಯಿಂದ ಬಿಜೆಪಿ ಕಾರ್ಯಕರ್ತರು ಸಹ ಸಹ ತಿರುಗಿಬಿದ್ದು ಸ್ಥಳದಲ್ಲಿ ಕಲ್ಲು ತೂರಾಟ ನಡೆಸಿದ್ದಾರೆ. ಚಕ್ರವರ್ತಿ ಸೂಲಿಬೆಲೆ ವಿರುದ್ಧ ಯುವ ಕಾಂಗ್ರೆಸ್ ಕಾರ್ಯಕರ್ತರು ಪುಂಗಿದಾಸ ಚಕ್ರವರ್ತಿ ಎಂದು ಘೋಷಣೆ ಕೂಗಿದ್ದಾರೆ. ಇನ್ನು ಏಕಾಏಕಿ 2 ತಂಡವಾಗಿ ಕಾರ್ಯಕ್ರಮಕ್ಕೆ ನುಗ್ಗಲು ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ.
ಇದರಿಂದ ರೊಚ್ಚಿಗೆದ್ದ ಬಿಜೆಪಿ ಕಾರ್ಯಕರ್ತರು, ಕಾಂಗ್ರೆಸ್ ಕಾರ್ಯಕರ್ತರಿದ್ದ ಕಟ್ಟಡದ ಮೇಲೆ ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೋಡ ನೋಡುತ್ತಿದ್ದಂತೆ ನಮೋ ಭಾರತ್ ಕಾರ್ಯಕ್ರಮ ಉದ್ವಿಗ್ನತೆ ಸ್ವರೂಪ ಪಡೆದುಕೊಂಡಿದೆ.
ನಮೋ ಭಾರತ್ ಕಾರ್ಯಕ್ರಮದಲ್ಲಿ ಕಪ್ಪು ಬಾವುಟ ಪ್ರದರ್ಶನದ ಬಳಿಕ ಪ್ರತಿಕ್ರಿಯಿಸಿದ ಯೂತ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ‘ನಮೋ ಭಾರತ್ ಕಾರ್ಯಕ್ರಮಕ್ಕೆ ನಮ್ಮ ವಿರೋಧವಿಲ್ಲ. ಚಕ್ರವರ್ತಿ ಬರೀ ಸುಳ್ಳು ಹೇಳುತ್ತಾರೆ, ಅದಕ್ಕೆ ಬುಕಾಳಿ ರಾಜ ಚಕ್ರವರ್ತಿಗೆ ಅಷ್ಟೆ ನಮ್ಮ ವಿರೋಧ. ನಾಲಿಗೆಗೆ ಹಾಗೂ ತಲೆಗೆ ಬುದ್ದಿನೇ ಇಲ್ಲ. ಇನ್ನಾದರೂ ಸುಳ್ಳು ಹೇಳುವುದನ್ನು ಬಿಡಲಿ, ಅವರು ಸುಳ್ಳು ಹೇಳುವುದನ್ನ ಮೊದಲು ಬಿಡಬೇಕು ಎಂದಿದ್ದಾರೆ.
ಪರಿಸ್ಥಿತಿಯನ್ನು ಪೊಲೀಸರು ಕಂಟ್ರೋಲಿಗೆ ತೆಗೆದುಕೊಂಡ ಮೇಲೆ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ ನನ್ನನ್ನು ಕಂಡರೆ ಇವರಿಗ್ಯಾಕೆ ಇಷ್ಟೊಂದು ಹೆದರಿಕೆಯೋ ಗೊತ್ತಿಲ್ಲ. ಈಗಾಗಲೇ ನನ್ನ ಬಗ್ಗೆ ಪ್ರಿಯಾಂಕ್ ಖರ್ಗೆ, ಮಧು ಬಂಗಾರಪ್ಪ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಮಾತನಾಡಿದ್ಧಾರೆ. ಹೀಗೆಲ್ಲ ಆಗುತ್ತಿರುವಾಗ ನನಗೆ ಬಹಳ ಖುಷಿಯಾಗುತ್ತೆ. ನನ್ನ ಬಗ್ಗೆ ಹೆದರಿಕೆ ಇದ್ದರೆ ಮಾತ್ರ ಹೀಗೆಲ್ಲ ಪ್ರತಿಭಟನೆ ನಡೆಯೋಕೆ ಸಾಧ್ಯ. ನನಗೆ ಇದೆಲ್ಲ ಹೊಸದೂ ಅಲ್ಲ. ಇದು ಕೊನೆಯದ್ದೂಆಗುವುದಿಲ್ಲ ಎಂದಿದ್ದಾರೆ ಚಕ್ರವರ್ತಿ ಸೂಲಿಬೆಲೆ.



