ಜಾತಿ ಗಣತಿಯಲ್ಲಿ ಮೇಲ್ನೋಟಕ್ಕೆ ಅತೀ ಹೆಚ್ಚು ನಷ್ಟವಾಗಿರುವುದು ಲಿಂಗಾಯತ ಸಮುದಾಯಕ್ಕೆ. ಸಮೀಕ್ಷೆ ವಾಸ್ತವವಾಗಿ ನಡೆದಿದೆಯೋ.. ಯಾವುದೋ ಕಚೇರಿಯಲ್ಲಿ ಕೂತು ಸಿದ್ಧಪಡಿಸಲಾಗಿರುವ ಸಮೀಕ್ಷೆಯೋ.. ಅದು ಚರ್ಚಾರ್ಹ ವಿಷಯ. ಆದರೆ ಈ ರೀತಿಯ ಅಂಕಿ ಸಂಖ್ಯೆಗಳಿಗೆ ಇನ್ನೂ ಒಂದು ಕಾರಣ ಎಂದರೆ.. ವೀರಶೈವ ಲಿಂಗಾಯತರಲ್ಲಿ ಉದ್ಭವವಾದ ಬಿರುಕುಗಳು. ಒಂದೊಂದು ಹೋರಾಟಗಳೂ ಲಿಂಗಾಯತರಲ್ಲಿ ಬಿರುಕು ಸೃಷ್ಟಿಸುವಲ್ಲಿ ಯಶಸ್ವಿಯಾದವು. ಕೆಲವರಿಗೆ ವೈಯಕ್ತಿಕವಾಗಿ ದೊಡ್ಡ ಮಟ್ಟದಲ್ಲಿ ರಾಜಕೀಯ ಲಾಭವಾಯಿತು. ಆದರೆ ಸಮುದಾಯದ ವಿಷಯಕ್ಕೆ ಬಂದರೆ ನಷ್ಟವಾಯಿತು ಎನ್ನಲಾಗುತ್ತಿದೆ.
ಪ್ರತ್ಯೇಕ ಧರ್ಮ ಹೋರಾಟದ ಫಲ :
ಈ ಹಿಂದೆ ಜನಗಣತಿಯಲ್ಲಿ ಕೇವಲ ಲಿಂಗಾಯತ ಅಥವಾ ಹಿಂದೂ ಲಿಂಗಾಯತ ಎಂದು ಬರೆಸಲಾಗುತ್ತಿತ್ತು. ಅಂದರೆ ಧರ್ಮದ ವಿಚಾರದಲ್ಲಿ ಹಿಂದೂ ಎಂದೂ, ಜಾತಿಯ ವಿಷಯದಲ್ಲಿ ಲಿಂಗಾಯತ/ವೀರಶೈವ ಎಂದೂ ಬರೆಸಲಾಗುತ್ತಿತ್ತು. ನಂತರದ್ದು ಉಪಜಾತಿಗಳ ಲೆಕ್ಕದಲ್ಲಿ ಬರುತ್ತಿತ್ತು. ಆದರೆ ಈಗ ವೀರಶೈವರೇ ಬೇರೆ, ಲಿಂಗಾಯತರೇ ಬೇರೆ ಎಂಬ ಹೋರಾಟದಲ್ಲಿ ಎರಡು ಧರ್ಮ ಮತ್ತು ಜಾತಿಗಳು ವಿಭಾಗವಾದವು. ಈ ಗಣತಿಯಲ್ಲೂ ಅಷ್ಟೇ, ಎರಡನ್ನೂ ಪ್ರತ್ಯೇಕವಾಗಿ ಗುರುತಿಸಲಾಗಿದೆ. ಪ್ರತ್ಯೇಕ ಧರ್ಮದ ಹೋರಾಟ, ಸಮುದಾಯದ ಸಂಖ್ಯೆಯನ್ನೇ ಕುಸಿಯುವಂತೆ ಮಾಡಿದೆ.
ಪಂಚಮಸಾಲಿಗಳೇ ಪ್ರತ್ಯೇಕ :
ಇನ್ನೊಂದು ವಿಷಯ ಎಂದರೆ ಆ ಲಿಂಗಾಯತರಲ್ಲಿ ಪಂಚಮಸಾಲಿಗಳೇ ಬೇರೆ.. ಬೇರೆ ಲಿಂಗಾಯತರೇ ಬೇರೆ.. ಎಂಬ ಹೋರಾಟ. ಅಂದ್ರೆ ಪಂಚಮಸಾಲಿಗಳು ಹೆಚ್ಚಿದ್ದಾರೆ. ಅವರಿಗೆ ಪ್ರತ್ಯೇಕ ಮೀಸಲಾತಿ ಸಿಗಬೇಕು ಎಂದು ಹೋರಾಟ ಮಾಡಿದ್ದರ ಫಲ, ಜಾತಿ ಗಣತಿಯಲ್ಲಿ ಲಿಂಗಾಯತ ಪಂಚಮಸಾಲಿ, ಪಂಚಮಸಾಲಿ ಲಿಂಗಾಯತ (ಪದಗಳು ಹಿಂದು ಮುಂದಷ್ಟೇ, ಜಾತಿ ಗಣತಿಯಲ್ಲಿ ಹೀಗೆಯೇ ಇದೆ.) ವೀರಶೈವ ಪಂಚಮಸಾಲಿ, ಪಂಚಮಸಾಲಿ ವೀರೈಶೈವ, ಹಿಂದೂ ಪಂಚಮಸಾಲಿ ಹಾಗೂ ಕೇವಲ ಪಂಚಮಸಾಲಿ. ಒಟ್ಟು 6 ಭಾಗಗಳಾಗಿವೆ.
ಸವಲತ್ತಿಗೆ ಬೇರೆ..
ಜಾತಿ ಗಣತಿ ಸಂದರ್ಭದಲ್ಲಿ’ಲಿಂಗಾಯತ/ ವೀರಶೈವ ಲಿಂಗಾಯತ’ ಎಂದು ಬರೆಸಿದರೆ ಮೀಸಲು ಸೌಲಭ್ಯ ಸಿಗುವುದಿಲ್ಲ ಎಂಬ ಕಾರಣಕ್ಕೆ ಲಕ್ಷಾಂತರ ಮಂದಿ ಹಿಂದೂ ಸಾದರ, ಹಿಂದೂ ಬಣಜಿಗ, ಹಿಂದೂ ರಡ್ಡಿ, ಹಿಂದೂ ನೊಳಂಬ ಎಂದು ಬರೆಸಿದ್ದಾರೆ. ಲಿಂಗಾಯತ ಸಾದರ, ಲಿಂಗಾಯತ ಬಣಜಿಗ, ಲಿಂಗಾಯತ ರಡ್ಡಿ ಬದಲಿಗೆ ‘ಹಿಂದೂ’ ಎಂದು ನೋಂದಣಿ ಮಾಡಿಸಿದ್ದಾರೆ.
ಇನ್ನೂ ಕೆಲವು ಲಿಂಗಾಯತರು ಉತ್ತಮ ಮೀಸಲು ಸೌಲಭ್ಯದ ಅವಕಾಶದ ಮೇಲೆ ಕಣ್ಣಿಟ್ಟು ಪರಿಶಿಷ್ಟ ಜಾತಿಗಳ ಅಡಿಯಲ್ಲಿಬರುವ ‘ಬೇಡ ಜಂಗಮ’ ಪ್ರಮಾಣಪತ್ರ ಪಡೆದುಕೊಂಡಿದ್ದಾರೆ. ಸಹಜವಾಗಿಯೇ ಸಮೀಕ್ಷೆ ಸಂದರ್ಭದಲ್ಲಿ ಲಿಂಗಾಯತ ಮತ್ತು ಒಳಜಾತಿ ಲೆಕ್ಕದಿಂದ ಬಹಳಷ್ಟು ಜನಸಂಖ್ಯೆ ಹೊರಗುಳಿದಿದ್ದಾರೆ. ಪರಿಣಾಮವಾಗಿ ರಾಜ್ಯದಲ್ಲಿ ಲಿಂಗಾಯತರ ಜನಸಂಖ್ಯೆ ನಿರೀಕ್ಷಿತ ಲೆಕ್ಕದ ಶೇ.16ರಿಂದ 17ರ ಬದಲಿಗೆ ಶೇ.11 ಎಂಬುದು ಅಧಿಕೃತವಾಗಿ ದಾಖಲಾಗಿದೆ.
ಗಾಣಿಗ & ಸಾದರ ಲೆಕ್ಕ :
ಇನ್ನೂ ಬಿಡಿಸಿ ಹೇಳಬೇಕು ಎಂದರೆ 1972ರ ಹಾವನೂರು ವರದಿಯಲ್ಲಿ ಉತ್ತರ ಕರ್ನಾಟಕದ ʻಗಾಣಿಗʼರನ್ನು ಹಿಂದೂ ಗಾಣಿಗ ಎಂದು ಗುರುತಿಸಲಾಗಿದೆ. ಸಾದರ ಲಿಂಗಾಯತರನ್ನು ಹಿಂದೂ ಸಾದರ ಎಂದು ಗುರುತಿಸಲಾಗಿದೆ. ಹೀಗಾಗಿ ಈ ಎರಡೂ ಲಿಂಗಾಯತರು 2ಎ ಅಡಿಯಲ್ಲಿ ಮೀಸಲಾತಿ ಪಡೆಯುತ್ತಾರೆ. ಈ ಎರಡೂ ಸಮುದಾಯಗಳ ಲೆಕ್ಕ ನೋಡಿದರೆ 7 ಲಕ್ಷ ಗಾಣಿಗರಲ್ಲಿ ಈಗ ಗಣತಿಯಲ್ಲಿ ದಾಖಲಾಗಿರುವುದು ಕೇವಲ 24 ಸಾವಿರ ಎನ್ನಲಾಗುತ್ತಿದೆ. ಇದು ಸಮುದಾಯದ ಲೆಕ್ಕ.
ಇನ್ನು ಸಾದರಲ್ಲಿ ಸುಮಾರು 2 ಲಕ್ಷ ಸಂಖ್ಯೆಯಲ್ಲಿ 68 ಸಾವಿರ ಮಾತ್ರ ಗಣತಿಯಲ್ಲಿ ದಾಖಲಾಗಿದೆ ಎನ್ನಲಾಗುತ್ತಿದೆ.
ರೆಡ್ಡಿ ಲಿಂಗಾಯತರ ಲೆಕ್ಕ :
ವಿಜಯಪುರ, ಬಳ್ಳಾರಿ, ವಿಜಯನಗರ, ರಾಯಚೂರು, ಯಾದಗಿರಿ, ಬೀದರ್, ಕಲಬುರಗಿ ಮತ್ತಿತರ ಜಿಲ್ಲೆಗಳಲ್ಲಿದೊಡ್ಡ ಸಂಖ್ಯೆಯಲ್ಲಿರುವ ಲಿಂಗಾಯತ ಒಳಪಂಗಡವಾದ ‘ರಡ್ಡಿ ಲಿಂಗಾಯತರು’ ಜಾತಿ ಸಮೀಕ್ಷೆಯಲ್ಲಿ’ಹಿಂದೂ ರಡ್ಡಿ’ ಎಂದು ಗುರುತಿಸಿಕೊಂಡಿದ್ದಾರೆ. ರಡ್ಡಿ ಲಿಂಗಾಯತರಾಗಿ ದಾಖಲಾಗಿರುವುದು 40 ಸಾವಿರ ಜನ ಮಾತ್ರ. ಲಿಂಗಾಯತ ರೀತಿ-ನೀತಿ ಮತ್ತು ಸಂಪ್ರದಾಯ ಪಾಲಿಸುವ ಅಂದಾಜು 4 ಲಕ್ಷದಷ್ಟು ಬಣಜಿಗರು ಸಮೀಕ್ಷೆಯಲ್ಲಿಹಿಂದೂ ಬಣಜಿಗ, ಹಿಂದೂ ಬಣಜಿಗ ಶೆಟ್ಟಿ, ಹಿಂದೂ ಬಲಜಿಗ ಎಂದು ದಾಖಲಿಸಿದ್ದಾರೆ. ಜತೆಗೆ, ಲಿಂಗಾಯತರಲ್ಲೇ ಕುಲಕಸುಬಿನ ಆಧಾರದ ಅನೇಕ ಸಣ್ಣಪುಟ್ಟ ಪಂಗಡಗಳಾದ ಬಣಗಾರ, ಬಳಗಾರ ನೀಲಗಾರ, ಹಟಗಾರ, ಕುರುಹಿನ ಶೆಟ್ಟಿ, ಸಿಂಪಿ, ಹೂಗಾರ, ಹಂಡೇವಜೀರ ಮತ್ತಿತರರೂ ‘ಹಿಂದೂ’ ಆಗಿ ಗುರುತಿಸಿಕೊಂಡಿದ್ದಾರೆ. ಸುಮಾರು 30ರಿಂದ 35 ಲಕ್ಷ ಜನರು ಲಿಂಗಾಯತ ಬದಲು ಹಿಂದೂ ಆಗಿ ದಾಖಲಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಜ್ಯದಲ್ಲಿ ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ.. ಸೇರಿದಂತೆ ಕೆಲವು ಜಿಲ್ಲೆಗಳನ್ನು ಬಿಟ್ಟರೆ ಬಹುತೇಕ ಜಿಲ್ಲೆಗಳಲ್ಲಿ ಲಿಂಗಾಯತರು ಬಹುಸಂಖ್ಯೆಯಲ್ಲಿದ್ಧಾರೆ. ಸುಮಾರು 15 ಜಿಲ್ಲೆಗಳಲ್ಲಿ ರಾಜಕೀಯವಾಗಿ ಲಿಂಗಾಯತರೇ ನಿರ್ಣಾಯಕರು. ಆದರೆ ಈ ಗಣತಿ ಲೆಕ್ಕದಲ್ಲಿ ಲಿಂಗಾಯತರು ಏನೇನೂ ಅಲ್ಲ ಎಂಬ ಪರಿಸ್ಥಿತಿ ಇದೆ. ಸಾಮಾಜಿಕವಾಗಿ ಒಟ್ಟಾಗಿರುವ ಸಮುದಾಯ, ಮೀಸಲು ಉದ್ದೇಶದಿಂದ ವಿಘಟನೆ ಆಗಿರುವುದು ಪ್ರಾಬಲ್ಯವನ್ನು ತಗ್ಗಿಸಿದ್ದು, ಜಾತಿಗಣತಿ ವಿಚಾರದಲ್ಲಿ ಲಿಂಗಾಯತ ಸಚಿವ, ಶಾಸಕ ಮತ್ತು ನಾಯಕರನ್ನು ಇಕ್ಕಟ್ಟಿಗೆ ದೂಡಿದೆ.