ಚನ್ನಪಟ್ಟಣಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ರಮ್ಯಾ ಬರ್ತಾರಂತೆ ಅನ್ನೋ ಸುದ್ದಿ ಹೊರಬಿದ್ದಿದ್ದೇ ತಡ. ಒಂದು ಸಂಚಲನ ಸೃಷ್ಟಿಯಾಯ್ತು. ಅದರ ಪರಿಣಾಮ ಚನ್ನಪಟ್ಟಣದಲ್ಲಿ ಜೋರಾಗಿಯೇ ಆಗಿದೆ. ರಮ್ಯಾ ಬಗ್ಗೆ ಕಾಂಗ್ರೆಸ್ಸಿಗರಲ್ಲಿ ಒಂದು ರೀತಿಯ ವಿಚಿತ್ರ ಪ್ರೀತಿ ಮತ್ತು ಭಯ ಎರಡೂ ಇದೆ. ಅದಕ್ಕೆ ರಮ್ಯಾ ಇಮೇಜ್ ಕೂಡಾ ಕಾರಣ ಎನ್ನುವುದು ಹೌದು. ಏಕೆಂದರೆ ರಮ್ಯಾ ರಾಹುಲ್ ಗಾಂಧಿಗೆ ಆತ್ಮೀಯರಾಗಿದ್ದವರು. ಭಾರತ್ ಜೋಡೋ ಯಾತ್ರೆಯಲ್ಲಿ ಮಾತ್ರವೇ ಹೊರಬಂದು ಕಾಂಗ್ರೆಸ್ ಜೊತೆ ಹೆಜ್ಜೆ ಹಾಕಿದವರು. ಡಿಕೆ ಶಿವಕುಮಾರ್ ಅವರಿಗೂ ಆತ್ಮೀಯರು. ಈಗ ಬಿಜೆಪಿಯಲ್ಲಿರುವ ಎಸ್.ಎಂ.ಕೃಷ್ಣ ಅವರಿಗೂ ಆತ್ಮೀಯರು. ಕೃಷ್ಣ ಬಿಜೆಪಿಯಲ್ಲಿದ್ದರೂ, ಇವತ್ತಿಗೂ ಕಾಂಗ್ರೆಸ್ಸಿನಲ್ಲಿ ಕೃಷ್ಣ ಅವರಿಗೆ ಅಭಿಮಾನಿಗಳು ಹಾಗೂ ಬೆಂಬಲಿಗರಿದ್ದಾರೆ. ಇದೆಲ್ಲದರ ನಡುವೆ ಚನ್ನಪಟ್ಟಣ ಸ್ಥಿತಿಯೂ ಬೇರೆಯದೇ ಆಗಿತ್ತು.

ಹೀಗಿತ್ತು ಚನ್ನಪಟ್ಟಣ ಕಾಂಗ್ರೆಸ್ :
ಚನ್ನಪಟ್ಟಣ, ಡಿಕೆ ಶಿವಕುಮಾರ್ ಅವರ ಕನಕಪುರಕ್ಕೆ ದೂರದ ಕ್ಷೇತ್ರವೇನಲ್ಲ. ಆದರೆ ಚನ್ನಪಟ್ಟಣದಲ್ಲಿ ಹಲವು ಬಣಗಳಿದ್ದವು. ಡಿಕೆಶಿ ಅವರ ಬಾವ ಶರತ್ ಚಂದ್ರ ಅವರು ಟಿಕೆಟ್`ಗೆ ಅರ್ಜಿ ಹಾಕಿದ್ದೇ ಭಿನ್ನಮತ ಭುಗಿಲೆದ್ದಿತ್ತು. ಅತ್ತ ಶರತ್ ಅವರದ್ದು ಒಂದು ಬಣ, ಮತ್ತೊಂದು ಕಡೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್ ಅವರದ್ದೊಂದು ಬಣ, ಪ್ರಸನ್ನ ಗೋಪಿ ಅವರದ್ದೇ ಒಂದು ಬಣ.. ಹೀಗೆ ಹಲವು ಬಣಗಳಿದ್ದವು. ಪರಸ್ಪರ ಕಚ್ಚಾಡಿಕೊಳ್ಳುತ್ತಿದ್ದವರೆಲ್ಲ ಬಹಿರಂಗವಾಗಿಯಾದರೂ ಅಸಮಾಧಾನ ಅದುಮಿಟ್ಟುಕೊಂಡು ಒಟ್ಟಿಗೇ ಬಂದಿದ್ದು ರಮ್ಯಾ ಎಫೆಕ್ಟ್. ಒಟ್ಟು 8 ಜನ ಅರ್ಜಿ ಹಾಕಿದ್ದರು. ಅವರೆಲ್ಲರೂ ಒಟ್ಟಾಗಿ ಈಗ ಪ್ರಸನ್ನ ಅವರ ಹೆಸರನ್ನೇ ಅಂತಿಮವಾಗಿ ಶಿಫಾರಸು ಮಾಡಿದ್ದಾರೆ. ಒಟ್ಟಿಗೇ ಸುದ್ದಿಗೋಷ್ಠಿ ನಡೆಸಿದ್ದಾರೆ. ಅಸಮಾಧಾನ ಸಂಪೂರ್ಣ ತೊಡೆದು ಹಾಕಲು ಆಗಿಲ್ಲವಾದರೂ ಮೇಲ್ನೋಟಕ್ಕೆ ಶಾಂತವಾಗಿದೆ. ಮುನಿಸಿಕೊಂಡಿರುವ ಕೆಲವರನ್ನು ಮತ್ತೆ ವಾಪಸ್ ತರುವ ಪ್ರಯತ್ನ ನಡೆಯುತ್ತಿದೆ.

ರಮ್ಯಾ ಸ್ಪರ್ಧೆ ಊಹಾಪೋಹ : ರಮ್ಯ ಅವರ ಹೆಸರು ಎಲ್ಲಿಯೂ ಚರ್ಚೆಯಾಗಿಲ್ಲ. ರಮ್ಯ ಟಿಕೆಟ್`ಗಾಗಿ ಅರ್ಜಿ ಕೂಡಾ ಹಾಕಿಲ್ಲ. ರಮ್ಯ ಹೆಸರು ಕೇವಲ ಮಾಧ್ಯಮಗಳ ಸೃಷ್ಟಿ. ಊಹಾಪೋಹ ಎಂದು ಸುದ್ದಿಗೋಷ್ಠಿಯಲ್ಲಿದ್ದ ಕಾಂಗ್ರೆಸ್ ನಾಯಕರು. ಆದರೆ ಅರ್ಜಿ ಹಾಕದೆ, ಯಾರೂ ಕಾಂಟ್ಯಾಕ್ಟ್ ಕೂಡಾ ಮಾಡದೆ, ರಮ್ಯ ಕೂಡಾ ಎಲ್ಲಿಯು ಹೇಳಿಕೊಳ್ಳದೆ ಇರುವಾಗ ಇದ್ದಕ್ಕಿದ್ದಂತೆ ರಮ್ಯ ಹೆಸರು ಕೇಳಿಬಂತಾದರೂ ಏಕೆ? ಸುದ್ದಿಯನ್ನು ಎರಡು ದಿನ ಜೀವಂತವಾಗಿಟ್ಟು ಸುಮ್ಮನಾಗಿದ್ದೇಕೆ ಕಾಂಗ್ರೆಸ್ ನಾಯಕರು. ರಮ್ಯ ಅವರನ್ನು ಅಸ್ತ್ರವಾಗಿ ಬಳಸಿಕೊಂಡರಾ? ರಾಜಕೀಯದಲ್ಲಿ ಗಾಸಿಪ್ ಕೂಡಾ ಸುಖಾಸುಮ್ಮನೆ ಸೃಷ್ಟಿಯಾಗಲ್ಲ. ಅದರಲ್ಲೂ ಎಲೆಕ್ಷನ್ ಹೊತ್ತಿನಲ್ಲಿ.



