ಮೊನ್ನೆ ಮೊನ್ನೆ ಮೊಬೈಲುಗಳಲ್ಲಿ ಒಂದಷ್ಟು ಹೊತ್ತು ಕಿವಿಗೆ ಡಿಸ್ಟರ್ಬ್ ಆಗುವಂತೆ ಕುಂಯ್.. ಅನ್ನೋ ಸೌಂಡ್ ಮೆಸೇಜ್ ಬಂದಿತ್ತು. ನೆನಪಿದೆ ಅಲ್ವಾ.. ಆ ಮೆಸೇಜ್ ಬಂದಾಗ ಎಷ್ಟೋ ಜನ ಗಾಬರಿಗೊಂಡಿದ್ದರು. ಮೊಬೈಲ್ ಏನೋ ಆಗಿದೆ ಅಂತಾ ಕಳವಳಗೊಂಡಿದ್ದರು. ಏಕೆಂದರೆ ಆ ಸೌಂಡ್ ಅಷ್ಟು ಕಿರಿಕಿರಿ ಮಾಡ್ತಿತ್ತು. ಆದರೆ ಅದು ಕಿರಿ ಕಿರಿ ಮೆಸೇಜ್ ಅಲ್ಲ. ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಅಲರ್ಟ್ ಮೆಸೇಜ್. ಅಂದು ಬೆಳಗ್ಗೆ 11.58ರ ಹೊತ್ತಿಗೆ ಮತ್ತು ಮಧ್ಯಾಹ್ನ 12.12ರ ಹೊತ್ತಿಗೆ ಎರಡೆರಡು ಬಾರಿ ರಾಜ್ಯದ ಬಹುತೇಕರ ಮೊಬೈಲ್ಗೆ ಬೀಪ್ ಸೌಂಡ್ ಜತೆಯಲ್ಲಿ ಎಚ್ಚರಿಕೆ ಸಂದೇಶವೊಂದು ಬಂದಿತ್ತಲ್ಲ, ಅದು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಸೆಲ್ ಬ್ರಾಡ್ ಕಾಸ್ಟಿಂಗ್ ಸಿಸ್ಟಮ್ ಮೂಲಕ ಕಳುಹಿಸಲಾದ ಮಾದರಿ ಪರೀಕ್ಷಾ ಸಂದೇಶ.
ಅಂದಹಾಗೆ ಇದು ಸೆಲ್ ಬ್ರಾಡ್ಕಾಸ್ಟ್ ಅಲರ್ಟ್ ಸಿಸ್ಟಮ್ ಮೂಲಕ ಕಳಿಸಲಾದ ಮೆಸೇಜ್. ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ನಮ್ಮ ನಾಗರಿಕರ ಅಮೂಲ್ಯವಾದ ಪ್ರಾಣವನ್ನು ಉಳಿಸಲು ತುರ್ತು ಸಂವಹನ ಅಭಿವೃದ್ಧಿಗಾಗಿ ಈ ಸೆಲ್ ಬ್ರಾಡ್ಕಾಸ್ಟ್ ಅಲರ್ಟ್ ಸಿಸ್ಟಮ್ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಭಾರತದ ನಾಗರಿಕರು ಮತ್ತು ಸಮುದಾಯಗಳ ಸುರಕ್ಷತೆಗೆ ಪ್ರತಿ ಟೆಲಿಕಾಂ ಸೇವಾ ಪೂರೈಕೆದಾರರ ಮೇಲೆ ಸೆಲ್ ಬ್ರಾಡ್ಕಾಸ್ಟ್ ಅಲರ್ಟ್ ಸಿಸ್ಟಮ್ನ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಇದು ನಮ್ಮ ಬದ್ಧತೆಯೂ ಹೌದು ಎಂದು ದೂರಸಂಪರ್ಕ ಇಲಾಖೆ ತಿಳಿಸಿದೆ.
ಏಕೆ ನಡೆಯಿತು ಪರೀಕ್ಷೆ..?
ವಿವಿಧ ಮೊಬೈಲ್ ಆಪರೇಟರ್ಗಳು ಮತ್ತು ಸೆಲ್ ಬ್ರಾಡ್ಕಾಸ್ಟ್ ಸಿಸ್ಟಮ್ಗಳ ತುರ್ತು ಎಚ್ಚರಿಕೆ ಪ್ರಸಾರದ ದಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಅಳೆಯಲು ಈ ಪರೀಕ್ಷೆಗಳನ್ನು ಕಾಲಕಾಲಕ್ಕೆ ದೇಶದಾದ್ಯಂತ ವಿವಿಧ ಪ್ರದೇಶಗಳಲ್ಲಿ ನಡೆಸಲಾಗುತ್ತದೆ. ಸೆಲ್ ಬ್ರಾಡ್ಕಾಸ್ಟ್ ಅಲರ್ಟ್ ಸಿಸ್ಟಮ್ ಅತ್ಯಾಧುನಿಕ ತಂತ್ರಜ್ಞಾನವಾಗಿದ್ದು, ಸಂದೇಶ ಸ್ವೀಕರಿಸುವವರು ನಿವಾಸಿಗಳು ಅಥವಾ ಪ್ರವಾಸಿಗರು ಎಂಬುದನ್ನು ಲೆಕ್ಕಿಸದೆ, ಗೊತ್ತುಪಡಿಸಿದ ಭೌಗೋಳಿಕ ಪ್ರದೇಶದ ಎಲ್ಲ ಮೊಬೈಲ್ ಸಾಧನಗಳಿಗೆ ವಿಪತ್ತು ನಿರ್ವಹಣೆಗಾಗಿ ನಿರ್ಣಾಯಕ ಮತ್ತು ಸಮಯ-ಸೂಕ್ಷ್ಮ ಸಂದೇಶಗಳನ್ನು ಕಳುಹಿಸಲು ಅನುಮತಿ ನೀಡುತ್ತದೆ. ಸುನಾಮಿ, ದಿಢೀರ್ ಪ್ರವಾಹ, ಭೂಕಂಪನಗಳು ಮುಂತಾದ ಗಂಭೀರ ಸ್ವರೂಪದ ಹವಾಮಾನ ಎಚ್ಚರಿಕೆ ಸಂದೇಶಗಳನ್ನು ಕಳುಹಿಸಲು ಸೆಲ್ ಬ್ರಾಡ್ಕಾಸ್ಟ್ ಅನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಎಚ್ಚರಿಕೆ ಸಂದೇಶದಲ್ಲಿ ಸಾರ್ವಜನಿಕ ಸುರಕ್ಷತಾ ಕ್ರಮಗಳು, ಸ್ಥಳಾಂತರದ ಸೂಚನೆ ಮತ್ತು ಇತರೆ ಮಹತ್ವದ ಮಾಹಿತಿಗಳು ಇರಲಿವೆ. ಎಮರ್ಜೆನ್ಸಿ ಸಂದರ್ಭದಲ್ಲಿ ಜನರ ಮೊಬೈಲ್ಗಳಿಗೆ ತುರ್ತು ಸಂದೇಶ ಬರುವಂತೆ ಮಾಡುವ ಹೊಸ ಟೆಕ್ನಾಲಜಿಯ ಪರೀಕ್ಷೆ ನಡೆಯುತ್ತಿದೆ. ಇದರ ಭಾಗವಾಗಿ ಇಂದು ಹಲವರ ಮೊಬೈಲ್ಗಳಲ್ಲಿ ಎಮರ್ಜೆನ್ಸಿ ಅಲರ್ಟ್ ಮೆಸೇಜ್ ಮತ್ತು ಬೀಪ್ ಸೌಂಡ್ ಕೇಳಲು ಕಾರಣವಾಗಿದೆ.
ಕೆಲವರಿಗೆ ಬಂದಿಲ್ಲ ಏಕೆ?
ಕೆಲ ಬಳಕೆದಾರರಿಗೆ ಮಾತ್ರ ಈ ಮೆಸೇಜ್ ಬಂದಿದ್ದು, ಇದು ನೀವುಯ ಬಳಸುವ ಸಿಮ್ ಮೇಲೆ ಸಂಬಂಧಿಸಿರುತ್ತದೆ. ಏರ್ಟೆಲ್, ಜಿಯೋ, ವೊಡಫೋನ್ ಈ ಬಳಕೆದಾರರಿಗೆ ಪ್ರತ್ಯೇಕ ಸಮಯದಲ್ಲಿ ಮೆಸೇಜ್ ಬಂದಿವೆ. ಅಲರ್ಟ್ ಮೆಸೇಜ್ ಸುಮಾರು 30 ನಿಮಿಷ ಕಾಲಘಟ್ಟದಲ್ಲಿ ಇತ್ತು. ಆ ಅವಧಿಯಲ್ಲಿ ನಿಮ್ಮ ಮೊಬೈಲ್ ಸ್ವಿಚ್ ಆಫ್ ಆಗಿದ್ದರೆ ನಿಮಗೆ ಮೆಸೇಜ್ ಬಂದಿರುವುದಿಲ್ಲ. ಇನ್ನು ಮೊಬೈಲ್ ಸೆಟ್ಟಿಂಗ್ ಸಮಸ್ಯೆಯಾಗಿರಬಹುದು. ಇನ್ನು ಕೆಲವೊಮ್ಮೆ ಆ ನಗರಕ್ಕೆ ಸಂಬಂಧಪಟ್ಟಂತೆ ಮೆಸೇಜ್ ಬಂದಿರಬಹುದು. ಇನ್ನು ನಿಮ್ಮ ಮೊಬೈಲ್ ಏರೋಪ್ಲೇನ್ ಮೋಡ್ನಲ್ಲಿದ್ದರೂ ಅಲರ್ಟ್ ಮೆಸೇಜ್ ಬರುವುದಿಲ್ಲ. ಈ ಮೆಸೇಜ್ನ ಅವಧಿ 30 ನಿಮಿಷದವರೆಗೆ ಇರುತ್ತದೆ. ಅವಧಿ ಮೀರಿದ ನಂತರ ನಿಮ್ಮ ಮೊಬೈಲ್ ಆನ್ ಆದ್ರೆ ನಾರ್ಮಲ್ ಮೆಸೇಜ್ ತರ ಈ ಮೆಸೇಜ್ ಬರುವುದಿಲ್ಲ. ಇನ್ನು ನಿಮ್ಮ ಫೋನ್ನ ಸೆಟ್ಟಿಂಗ್ಸ್ನಲ್ಲಿ ಎಮರ್ಜೆನ್ಸಿ ಅಲರ್ಟ್ ಸಿಸ್ಟಮ್ ಅಥವಾ ಈ ಮೆಸೇಜ್ಗೆ ಸಂಬಂಧಪಟ್ಟ ಸೆಟ್ಟಿಂಗ್ಸ್ಗಳು ಆಫ್ ಆಗಿರಬಹುದು. ಇದು ಆನ್ ಆಗಿದ್ರೆ ಮಾತ್ರ ಮೆಸೇಜ್ ಬರಬಹುದು.
ಭಯ ಬೇಡ. ಇದು ಕೇವಲ ಪರೀಕ್ಷೆ ಅಷ್ಟೆ. ಇದುವರೆಗೆ ಇಂತಾದ್ದೊಂದು ಸಿಸ್ಟಂ ಇರಲಿಲ್ಲ. ಹೀಗಾಗಿ ಈ ರೀತಿಯ ಒಂದು ವ್ಯವಸ್ಥೆಯನ್ನು ದೇಶಾದ್ಯಂತ ರೂಪಿಸುವ ಅತ್ಯಾಧುನಿಕ ವ್ಯವಸ್ಥೆ ಇದಾಗಿದೆ. ಬಹುತೇಕ ಎಲ್ಲ ದೇಶಗಳಲ್ಲೂ ಇಂತಹ ಸಿಸ್ಟಂ ಇದೆ. ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಈ ಬಾರಿ ರೂಪಿಸಲಾಗುತ್ತಿದೆ.



