ದಾವೂದ್ ಇಬ್ರಾಹಿಂ (Dawood ibrahim). ಕುಖ್ಯಾತ ಪಾತಕಿ. ಭೂಗತ ಲೋಕದಲ್ಲಿ ಅವನನ್ನ ದೊರೆ ಎಂದೇ ಕರೆಯುತ್ತಾರೆ. ಮುಂಬೈ ಸರಣಿ ಸ್ಫೋಟದ ರೂವಾರಿಯೇ ಈ ದಾವೂದ್. ಭಾರತಕ್ಕೆ ಮೊದಲ ಬಾರಿ ಬಾಂಬ್ ಸ್ಫೋಟದ ಭಯ ತೋರಿಸಿದವನೇ ಇವನು. ಭಾರತಕ್ಕೆ ಉಗ್ರ ಸಂಘಟನೆ, ಉಗ್ರರನ್ನು ಮೊದಲ ಬಾರಿಗೆ ಛೂ ಬಿಟ್ಟವನೂ ಇವನೇ. ಇವನೀಗ ಪಾಕಿಸ್ತಾನದಲ್ಲಿ ಸುರಕ್ಷಿತವಾಗಿದ್ದಾನೆ. ಇಂತಹ ಪಾತಕಿಯನ್ನೇಕೆ ಭಾರತ ಇನ್ನೂ ಉಸಿರಾಡುವುದಕ್ಕೆ ಬಿಟ್ಟಿದೆ ಎಂಬ ಪ್ರಶ್ನೆಗೆ, ಇಲ್ಲಿಯೇ ಇರುವ ದಾವೂದ್ ಭಂಟರು ಕಾರಣ ಎನ್ನುವುದು ರಹಸ್ಯವೇನಲ್ಲ. ದಾವೂದ್ʻಗೂ ಹಲವು ಬಾರಿ ಸ್ಕೆಚ್ ಹಾಕಲಾಗಿದ್ದರೂ, ಪ್ರತಿ ಬಾರಿಯೂ ವಿಫಲವಾಗಿದೆ. ಅಂತಹ ಒಂದು ವೈಫಲ್ಯದ ಸ್ಟೋರಿ ಇದು.
ಏಕೆಂದರೆ ಈ ಸ್ಟೋರಿ ಹೇಳಿರುವುದು ಬೇರಾರೋ ಅಲ್ಲ, ಮುಂಬೈ ಕ್ರೈಂ ಬ್ರಾಂಚಿನಲ್ಲಿ ಕೆಲಸ ಮಾಡುತ್ತಿದ್ದ ಐಪಿಎಸ್ ಆಫೀಸರ್ ಮೀರಾ ಬೊರಾವಂಕರ್ Meera borankar. ಸ್ಕೆಚ್ ಹಾಕಿದ್ದವರು ಅಜಿತ್ ದೋವಲ್ ajith doval. ಇಷ್ಟಕ್ಕೂ ಘಟನೆ ಏನಾಯ್ತಂದ್ರೆ..
ನಾವು ಮುಂಬಯಿ ಅಪರಾಧ ದಳದಲ್ಲಿ ಇದ್ದಾಗ, ಮುಂಬಯಿಯ ಅನೇಕ ಉದ್ಯಮಿಗಳಿಗೆ ಬೆದರಿಕೆ ಕರೆಗಳು ಬರುತ್ತಿದ್ದವು. ಸುಲಿಗೆಯ ಬೆದರಿಕೆ ಕರೆ ಬಂದರೆ ಉದ್ಯಮಿಗಳು ನಡುಗುತ್ತಿದ್ದರು. ಅಂತಾದ್ದೊಂದು ಫೋನ್ ಕರೆಯ ಮೂಲವನ್ನು ಪತ್ತೆ ಮಾಡಿದೆವು. ಆ ಫೋನ್ ಕೋಲ್ಕತಾದಿಂದ ಬಂದಿತ್ತು. ಆಪರೇಷನ್ನಿಗೆ ಪ್ರಾಜೆಕ್ಟ್ ಎಕ್ಸ್ ಅನ್ನೋ ಹೆಸರಿಟ್ಟೆವು. ಕರೆ ಮಾಡಿದ್ದು ಯಾರು, ಮಾಡಿಸಿದ್ದು ಯಾರು ಎಂದು ತಿಳಿಯೋದೇ ಮುಖ್ಯ ಉದ್ದೇಶವಾಗಿತ್ತು. ಆರೋಪಿ ದೆಹಲಿಗೆ ಬಂದಿದ್ದ ಕ್ಲೂ ಸಿಕ್ಕಿತ್ತು. ಫೋನ್ ಕರೆಯಲ್ಲಿದ್ದ ಇಬ್ಬರೂ ಆರೋಪಿಗಳ ಧ್ವನಿಯನ್ನು ನಾವು ಗುರುತಿಸಿದ್ದೆವು. ಒಬ್ಬ ಚೋಟಾ ರಾಜನ್ ಗ್ಯಾಂಗ್ನ ವಿಕ್ಕಿ ಮಲ್ಹೋತ್ರಾ, ಮತ್ತೊಬ್ಬ ಫರೀದ್ ತನಾಶ. ಅವರಿಬ್ಬರ ನಡುವಿನ ಮಾತುಕತೆಯಲ್ಲಿ ಇನ್ನೊಬ್ಬ ವ್ಯಕ್ತಿ ಕೂಡ ಇದ್ದರು. ಆ ವ್ಯಕ್ತಿಯನ್ನು ಇವರಿಬ್ಬರೂ ‘ಸರ್’ ಎಂದು ಕರೆಯುತ್ತಿದ್ದರು. ಆದರೆ ಅದು ಯಾರ ಧ್ವನಿ ಎಂದು ನಮಗೆ ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ಇದಾದ ಬಳಿಕ ಮುಂಬಯಿ ಕ್ರೈಂ ಬ್ರ್ಯಾಂಚ್ ತಂಡ ದಿಲ್ಲಿಗೆ ತೆರಳಿತು. ಅಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರು ನನಗೆ ಕರೆ ಮಾಡಿದ್ದರು. ಒಬ್ಬ ವ್ಯಕ್ತಿ ಜತೆ ವಿಕ್ಕಿ ಮಲ್ಹೋತ್ರಾ ಹೋಟೆಲ್ನಲ್ಲಿ ಕುಳಿತಿರುವುದಾಗಿ ಹೇಳಿದರು. ಅವರು ಹೋಟೆಲ್ನಿಂದ ಹೊರ ಬರುತ್ತಿದ್ದಂತೆ ಇಬ್ಬರನ್ನೂ ಬಂಧಿಸಬಹುದು ಎಂದು ತಿಳಿಸಿದರು. ಕಾರ್ ಪಾರ್ಕಿಂಗ್ ಜಾಗದಲ್ಲಿ ಇಬ್ಬರನ್ನೂ ಅಪರಾಧ ದಳದ ತಂಡ ಅಡ್ಡಗಟ್ಟಿತ್ತು. ಮುಂಬಯಿ ಪೊಲೀಸರನ್ನು ನೋಡುತ್ತಿದ್ದಂತೆ ತನ್ನ ಕಥೆ ಮುಗಿಯಿತು ಎಂದು ವಿಕ್ಕಿ ಮಲ್ಹೋತ್ರಾ ಭಾವಿಸಿದ ಎಂದು ಹೇಳುತ್ತಾ ಹೋಗ್ತಾರೆ ಮೀರಾ ಬೊರಾವಂಕರ್.
ಅಚ್ಚರಿಯಾಗಿದ್ದೇನೆಂದರೆ ವಿಕ್ಕಿ ಮಲ್ಹೋತ್ರಾ ಜೊತೆ ಇದ್ದವರಲ್ಲಿ ಒಬ್ಬರು ತಾವು ಗುಪ್ತಚರ ದಳದ ಮಾಜಿ ನಿರ್ದೇಶಕ ಎಂದು ಹೇಳಿಕೊಂಡರು. ವಿಕ್ಕಿ ಮಲ್ಹೋತ್ರಾನನ್ನು ಬಿಟ್ಟುಬಿಡುವಂತೆ ಅವರು ಆಗ್ರಹಿಸಿದರು. ಅಷ್ಟು ದೊಡ್ಡ ಅಧಿಕಾರಿ ಗ್ಯಾಂಗ್ಸ್ಟರ್ ಚೋಟಾ ರಾಜನ್ ಜತೆ ಇರಲು ಹೇಗೆ ಸಾಧ್ಯ ಎಂದು ಅಚ್ಚರಿಯಾಯಿತು. ಹೀಗಾಗಿ ನಾನು ಆ ವ್ಯಕ್ತಿ ಬಳಿ ಅವರ ಬ್ಯಾಚ್, ಮಹಾರಾಷ್ಟ್ರದಲ್ಲಿನ ಬ್ಯಾಚ್ಮೇಟ್ಗಳ ಬಗ್ಗೆ ಕೇಳಿದೆ. ಅವರು ನೀಡಿದ ಉತ್ತರಗಳು ಸರಿಯಾಗಿದ್ದವು. ಈ ವ್ಯಕ್ತಿ ಹಿರಿಯ ಅಧಿಕಾರಿ ಎಂದು ನನಗೆ ಮನವರಿಕೆಯಾಯಿತು. ಆದರೆ ಅವರ ಮನವಿ ಮೇರೆಗೆ ವಿಕ್ಕಿ ಮಲ್ಹೋತ್ರಾನಂತಹ ನಟೋರಿಯಸ್ ಗ್ಯಾಂಗ್ಸ್ಟರ್ನನ್ನು ಬಿಟ್ಟು ಕಳುಹಿಸಲು ನಾನು ಸಿದ್ಧಳಿರಲಿಲ್ಲ. ಹೀಗಾಗಿ ಅದು ಸಾಧ್ಯವಿಲ್ಲ ಎಂದೆ. ಆ ವ್ಯಕ್ತಿ ನಿನಗೆ ನಾನು ಪಾಠ ಕಲಿಸುತ್ತೇನೆ ಎಂದು ಹೇಳಿದರು. ಅದನ್ನು ಕೇಳಿಸಿಕೊಂಡ ಬಳಿಕ ನನ್ನಲ್ಲಿಯೂ ಕೋಪ ಉಕ್ಕಿತು. ನಿಮಗೂ ನಾನು ತಕ್ಕ ಪಾಠ ಕಲಿಸುತ್ತೇನೆ ಎಂದೆ.
ಆಮೇಲೆ ಮಾತಿಗೆ ಮಾತು ಬೆಳೆಯಿತು. ಅವರು ದೆಹಲಿ ಪೊಲೀಸರನ್ನು ಕರೆಯಿಸಿದ್ರು. ಆದರೆ ಅಷ್ಟು ಹೊತ್ತಿಗೆ ಸುದ್ದಿ ಮೀಡಿಯಾಗಳಲ್ಲಿ ಪ್ರಸಾರವಾಗಿತ್ತು. ಅದಾದ ಬಳಿಕ ನಾನು ಪಾಠ ಕಲಿತೆ ಎಂದಿರುವ ಮೀರಾ, ದಾವೂದ್ ಇಬ್ರಾಹಿಂ ಸ್ಕೆಚ್ ವಿಫಲವಾಗಿದ್ದಕ್ಕೆ ಕಾರಣ, ಮುಂಬೈ ಪೊಲೀಸರಲ್ಲಿಯೇ ಇರುವ ದಾವೂದ್ ಬಂಟರಲ್ಲ, ಅಧಿಕಾರಿಗಳ ನಡುವಿನ ಕಮ್ಯುನಿಕೇಷನ್ ಪ್ರಾಬ್ಲಂ ಎಂದಿದ್ದಾರೆ. ಏಕೆಂದರೆ ಇಂಟೆಲಿಜೆನ್ಸ್ ರಿಪೋರ್ಟಿನಲ್ಲಿ ದಾವೂದ್ ಬೆಂಬಲಿಗ ಅಧಿಕಾರಿಗಳಿಂದಲೇ ಪ್ಲಾನ್ ಫೇಲ್ ಆಯ್ತು ಎಂದಿದ್ಯಂತೆ.
ಭೂಗತ ಪಾತಕಿ ದಾವೂದ್ ಇಬ್ರಾಹಿಂ ದುಬೈನಲ್ಲಿ ಇರುವಾಗಲೇ ಆತನ ಕಥೆ ಮುಗಿಸಲು ದೊಡ್ಡ ಯೋಜನೆ ರೂಪಿಸಲಾಗಿತ್ತು. ಆದರೆ ಇದು ಗುಪ್ತಚರ ಸಂಸ್ಥೆಯ ಇತಿಹಾಸದಲ್ಲಿಯೇ ದೊಡ್ಡ ವೈಫಲ್ಯವಾಗಿ ಕುಖ್ಯಾತಿ ಗಳಿಸಿತು. ಇದಕ್ಕೆ ಕಾರಣವಾಗಿದ್ದು ಮೀರಾ ಅವರ ಕಾರ್ಯಾಚರಣೆ. ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರ ಇದ್ದ ಸಂದರ್ಭದಲ್ಲಿ ದಾವೂದ್ನನ್ನು ಹತ್ಯೆ ಮಾಡಿಸಲು ಅಜಿತ್ ದೋವಲ್ ತಯಾರಿ ನಡೆಸಿದ್ದರು. ಆದರೆ ಮುಂಬಯಿ ಪೊಲೀಸ್ ಇಲಾಖೆ ಒಳಗಿನ ದಾವೂದ್ ನಿಷ್ಠರು ಇದನ್ನು ಹಾಳುಗೆಡವಿದರು ಎಂದು ಆರೋಪಿಸಲಾಗಿತ್ತು. ಇದರಲ್ಲಿ ಮುಂಬಯಿ ಪೊಲೀಸರನ್ನು ದೂರುವುದು ತಪ್ಪು. ಇದು ಸಮನ್ವಯದ ಕೊರತೆಯ ವಿಚಾರ ಎಂದು ಮೀರಾ ಹೇಳಿದ್ದಾರೆ.



