ಕಿಚ್ಚ ಸುದೀಪ್ (Kichcha Sudeep) ಅವರಿಗೆ ಮೊದಲ ಮುನ್ನಡೆ ಸಿಕ್ಕಿದೆ. ಅದೂ ಕೋರ್ಟಿನಲ್ಲಿ. ಸಂಧಾನದ ಪ್ರಯತ್ನಗಳೆಲ್ಲ ವಿಫಲವಾದ ನಂತರ ಕೋರ್ಟಿನಲ್ಲಿ ಮೊದಲ ಗೆಲುವು ಕಂಡಿದ್ದಾರೆ ಕಿಚ್ಚ ಸುದೀಪ್. ನಿರ್ಮಾಪಕರಾದ ಎನ್.ಎಂ.ಸುರೇಶ್ (NM Suresh) ಮತ್ತು ಎಂ.ಎನ್.ಕುಮಾರ್ (MN Kumar) ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡುವ ಮೊದಲ ಪ್ರಯತ್ನದಲ್ಲಿ ಗೆದ್ದಿದ್ದಾರೆ.
ಸಿನಿಮಾದಲ್ಲಿ ನಟಿಸುವುದಾಗಿ ಹೇಳಿ ಏಳೆಂಟು ವರ್ಷಗಳ ಹಿಂದೆ ನಟ ಸುದೀಪ್ (Kichcha Sudeep) ತಮ್ಮಿಂದ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದು ಸಿನಿಮಾಕ್ಕೆ ಡೇಟ್ ನೀಡಿಲ್ಲ. ಕೋಟ್ಯಂತರ ರೂಪಾಯಿ ಹಣವನ್ನು ಸುದೀಪ್ (Kichcha Sudeep) ಕೊಡಬೇಕಿದೆ ಎಂದು ಆರೋಪಿಸಿದ್ದರು ನಿರ್ಮಾಪಕ ಕುಮಾರ್. ನಿರ್ಮಾಪಕ ಸುರೇಶ್ ಸಹ ಅವರೊಟ್ಟಿಗಿದ್ದರು. ಏಳೆಂಟು ವರ್ಷಗಳ ಹಿಂದೆಯೇ ಸುದೀಪ್ಗೆ ತಾವು 45 ಲಕ್ಷ ಹಣ ನೀಡಿದ್ದಾಗಿ ಹೇಳಿದ್ದರು. ಬೇರೆ ಸಿನಿಮಾಗಳ ನಿರ್ಮಾಣ ಮಾಡಲು ಸಹ ಸುದೀಪ್ ಅಡ್ಡಿ ಆಗಿದ್ದರು ಎಂದು ಸಹ ನಿರ್ಮಾಪಕ ಕುಮಾರ್ ಆರೋಪ ಮಾಡಿದ್ದರು. ಅದಾದ ಮೇಲೆ ವಿವಾದದ ಇತ್ಯರ್ಥಕ್ಕೆ ರವಿಚಂದ್ರನ್ (Ravichandran) ಬಂದರು. ರವಿಚಂದ್ರನ್ (Ravichandran) ಅವರ ಮನೆಯಲ್ಲಿ ಒಂದೆರಡು ದಿನ ಸಂಧಾನ ನಡೆಯಿತಾದರೂ, ಫಲಪ್ರದವಾಗಲಿಲ್ಲ.
ಅದಕ್ಕೂ ಮೊದಲೇ ಕೋರ್ಟಿಗೆ ಹೋಗಿದ್ದ ಸುದೀಪ್ (Kichcha Sudeep) ಅವರಿಗೆ ಈಗ ಮೊದಲ ಮುನ್ನಡೆ ಸಿಕ್ಕಿದೆ. ಇದೀಗ ನ್ಯಾಯಾಲಯವು ನಿರ್ಮಾಪಕರಿಗೆ ಸಮನ್ಸ್ ನೀಡಿದೆ. ಬೆಂಗಳೂರಿನ 13ನೇ ಎಸಿಎಂಎಂ ಕೋರ್ಟ್ ನಿರ್ಮಾಪಕರಾದ ಎಂಎನ್ ಕುಮಾರ್ ಹಾಗೂ ಸುರೇಶ್ ಅವರುಗಳಿಗೆ ಸಮನ್ಸ್ ಜಾರಿ ಮಾಡಿ, ಕ್ರಿಮಿನಲ್ ಮಾನನಷ್ಟ ಮೊಕದ್ದಮೆ (Criminal Defamation case) ದಾಖಲಿಸಲು ಆದೇಶಿಸಿದೆ. ಪ್ರಕರಣ ಕುರಿತಾಗಿ ಆಗಸ್ಟ್ 10ರಂದು ಸುದೀಪ್ ಅವರಿಂದ ಸ್ವಯಂ ಹೇಳಿಕೆಯನ್ನು ದಾಖಲು ಮಾಡಿದ್ದರು. ಹೇಳಿಕೆ ದಾಖಲು ಮಾಡಿಕೊಂಡಿದ್ದ ನ್ಯಾಯಾಧೀಶ ವೆಂಕಣ್ಣ ಬಸಪ್ಪ ಹೊಸಮನಿ, ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಲು ಸೂಚಿಸಿದ್ದು ಆಗಸ್ಟ್ 26ರ ಒಳಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.



