ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಿ ವೈ ವಿಜಯೇಂದ್ರ ಮುಂದುವರಿಯುವುದು ಬಹುತೇಕ ಫಿಕ್ಸ್ ಆಗಿದೆ. ವಿಜಯೇಂದ್ರ ಅವರ ಸ್ಥಾನ ಬದಲಾವಣೆ ಹೋರಾಟಗಳಿಗೆ ಆಲ್ ಮೋಸ್ಟ್ ಬ್ರೇಕ್ ಬಿದ್ದಿದೆ. ಹಾಗಂತ ತಣ್ಣಗೇನೂ ಆಗಿಲ್ಲ. ಒಳಗೊಳಗೆ ತಂತ್ರ ಕುತಂತ್ರ ರಾಜತಂತ್ರಗಳು ನಡೆಯುತ್ತಲೇ ಇವೆ. ಇದರ ನಡುವೆಯೇ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಗೊಂದಲ ಆಗಸ್ಟ್ ಅಂತ್ಯದ ವೇಳೆಗೆ ಬಗೆಹರಿಯುವ ನಿರೀಕ್ಷೆಯಂತೂ ಇದೆ. ಅಂದರೆ ಇನ್ನೂ ಹೆಚ್ಚೂ ಕಡಿಮೆ ಎರಡು ತಿಂಗಳು.
ಮೂಲಗಳ ಪ್ರಕಾರ, ಪಕ್ಷದ ಜಿಲ್ಲಾಧ್ಯಕ್ಷರುಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಅಂದರೆ ಈಗ ಘೋಷಣೆಯಾಗಿರುವ ಯಾವ ಜಿಲ್ಲಾಧ್ಯಕ್ಷರನ್ನೂ ಬದಲಿಸುತ್ತಿಲ್ಲ. ವಿಶೇಷ ಅಂದರೆ 39 ಜಿಲ್ಲಾಧ್ಯಕ್ಷರ ಪೈಕಿ 35 ಮಂದಿ ವಿಜಯೇಂದ್ರ ಅವರ ಪರವಾಗಿ ನಿಲ್ಲಲಿದ್ದಾರೆ ಎಂಬ ಮಾಹಿತಿ ಇದೆ. ಹೀಗಾಗಿ ಚುನಾವಣೆ ನಡೆದರೂ ವಿಜಯೇಂದ್ರ ಅವರು ಗೆಲ್ಲುವುದು ನಿಶ್ಚಿತ. ಇದೇ ಕಾರಣಕ್ಕಾಗಿ ವಿಜಯೇಂದ್ರ ವಿರೋಧಿ ಪಾಳಯ ಪಕ್ಷಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಬದಲು ತಾತ್ವಿಕ ವಿರೋಧಕ್ಕೆ ಅಂಟಿಕೊಂಡಿದೆ.
ಅಂದರೆ ವಿಜಯೇಂದ್ರ ನೇಮಿಸಿರುವ ಬಹುತೇಕ ಜಿಲ್ಲಾಧ್ಯಕ್ಷರು ಸ್ಥಳೀಯವಾಗಿ ಉತ್ತಮ ಸಂಘಟಕರೂ ಹೌದು. ಅವರ ಸ್ಥಾನಕ್ಕೆ ತಮ್ಮ ಬಣದವರೊಬ್ಬರನ್ನು ತರೋಣ ಎಂದರೆ ರೆಬಲ್ ಟೀಂನವರಿಗೆ ಅಂತಹ ನಾಯಕರು ಸಿಕ್ಕಿಲ್ಲ. ಹೀಗಾಗಿ ತಮ್ಮ ವಿರೋಧವನ್ನು ತಾತ್ವಿಕ ಹಂತಕ್ಕೆ ನಿಲ್ಲಿಸಿ, ಮುಂದೆ ನೋಡೋಣ ಎಂಬ ಹಂತಕ್ಕೆ ಬಂದಿದ್ದಾರಂತೆ.ಇದರರ್ಥ ಅವರ ಸೈಲೆಂಟ್ ಆಗಿಲ್ಲ. ಆಗುವುದೂ ಇಲ್ಲ. ಅವರನ್ನು ನಿಭಾಯಿಸಿಕೊಂಡೇ ಹೋಗಬೇಕಾದ ಹೊಣೆ ವಿಜಯೇಂದ್ರ ಅವರ ಮೇಲಿದೆ.
ಇಷ್ಟೆಲ್ಲದರ ಮಧ್ಯೆ ಪಕ್ಷಾಧ್ಯಕ್ಷ ಸ್ಥಾನದ ವಿಷಯದಲ್ಲಿ ಡಿಫರೆಂಟ್ ಕಸರತ್ತುಗಳು ನಡೆಯುತ್ತಿವೆ ಎಂಬ ಮಾಹಿತಿಗಳೂ ಇವೆ. ಪಕ್ಷಾಧ್ಯಕ್ಷ ಸ್ಥಾನಕ್ಕೆ ಕೇಂದ್ರ ಸಚಿವ ವಿ.ಸೋಮಣ್ಣ ಮತ್ತು ಮಾಜಿ ಸಚಿವ ಮುರುಗೇಶ್ ನಿರಾಣಿ ಅವರೂ ಇಚ್ಚೆ ವ್ಯಕ್ತಪಡಿಸಿದ್ದಾರಂತೆ. ಮೂಲಗಳ ಪ್ರಕಾರ, ಮುಂದಿನ ತಿಂಗಳು ಕರ್ನಾಟಕಕ್ಕೆ ಬರಲಿರುವ ಶಿವರಾಜ್ ಸಿಂಗ್ ಚೌಹಾಣ್ ಅವರು ಅಧಿಕೃತವಾಗಿ ವಿಜಯೇಂದ್ರ ಅವರನ್ನು ಅಧ್ಯಕ್ಷ ಪಟ್ಟದಲ್ಲಿ ಕೂರಿಸಿ ವಾಪಸಾಗಲಿದ್ದಾರೆ. ಆದರೆ ಆರು ತಿಂಗಳ ನಂತರ ಪಟ್ಟದಿಂದ ವಿಜಯೇಂದ್ರ ಅವರನ್ನಿಳಿಸಿ ವಿ.ಸೋಮಣ್ಣ ಅವರನ್ನು ತಂದು ಕೂರಿಸುವ ಕೆಲಸವಾಗಲಿದೆ. ಈ ಕುರಿತು ಸೋಮಣ್ಣ ಅವರಿಗೆ ಪಕ್ಷದ ವರಿಷ್ಠರು ಭರವಸೆ ನೀಡಿದ್ದು ಇನ್ನು ಆರು ತಿಂಗಳು ಸುಮ್ಮನಿರಿ ಎಂದಿದ್ದಾರಂತೆ. ಆದರೆ, ಇನ್ನು ಹೋರಾಟ ಸಾಕು ಎಂದುಕೊಂಡಿರುವ ಸೋಮಣ್ಣ, ಹುದ್ದೆಗೆ ಉತ್ಸಾಹ ತೋರಿಸುತ್ತಿಲ್ಲ. ಯಡಿಯೂರಪ್ಪ ವಿರುದ್ಧ ಹೋರಾಟ ಗೆಲ್ಲಬೇಕು, ಅಷ್ಟೆ. ತಮಗೆ ಆಸೆಯೇನೂ ಇಲ್ಲ ಎನ್ನುತ್ತಿದ್ದಾರಂತೆ.
ಇತ್ತ ಮಾಜಿ ಸಚಿವ ಮುರುಗೇಶ್ ನಿರಾಣಿ ಕೂಡಾ ಕಸರತ್ತು ನಡೆಸುತ್ತಿದ್ದು ಅವರಿಗೆ ಖುದ್ದು ಅಮಿತ್ ಶಾ ಅವರೇ ಭರವಸೆ ನೀಡಿದ್ದಾರಂತೆ. ಮುಂದಿನ ವರ್ಷದ ಶುರುವಿನಲ್ಲಿ ಕರ್ನಾಟಕ ವಿಧಾನ ಸಭೆಗೆ ಮಧ್ಯಂತರ ಚುನಾವಣೆ ನಡೆಯಲಿದೆ. ಆ ಸಂದರ್ಭದಲ್ಲಿ ನೀವೇ ಪಕ್ಷದ ರಾಜ್ಯಾಧ್ಯಕ್ಷ ರಾಗಲಿದ್ದೀರಿ ಅಂತ ಅಮಿತ್ ಶಾ ಪ್ರಾಮಿಸ್ಸು ಮಾಡಿದ್ದಾರಂತೆ.
ಒಟ್ಟಿನಲ್ಲಿ ಇನ್ನೂ 3 ವರ್ಷಗಳ ನಂತರ ನಡೆಯಲಿರುವ ಚುನಾವಣೆಯಲ್ಲಿ, ನಾವೇ ಗೆಲ್ಲುತ್ತೇವೆ, ನಮ್ಮ ಪಕ್ಷವೇ ಗೆಲ್ಲಲಿದೆ ಎಂಬ ಉತ್ಸಾಹದ ಕನಸುಗಳಲ್ಲಿ ಎಲ್ಲ ಕಸರತ್ತುಗಳೂ ನಡೆಯುತ್ತಿವೆ. ಸಂಘಟನೆ ಮಾತ್ರ ಆಗುತ್ತಿಲ್ಲ ಎಂದು ಹಿರಿಯ ನಾಯಕರು ಬೇಸರಿಸಿಕೊಂಡಿದ್ದಾರಂತೆ.