ಭೀಮನಿಗೆ ಬಂಪರ್ ಸಿಕ್ಕಿದೆ. ಕೃಷ್ಣನಿಗೆ ಈ ಗೆಲುವು ಗುಡ್ ನ್ಯೂಸ್ ಎನ್ನೋಕೆ ಅಡ್ಡಿಯಿಲ್ಲ. ಗಣೇಶ್ ಮತ್ತು ವಿಜಯ್ ಇಬ್ಬರೂ ಸ್ನೇಹಿತರು. ಹೀರೋ ಆಗುವುದಕ್ಕೂ ಮುನ್ನವೇ ಫ್ರೆಂಡ್ಸ್. ಇಬ್ಬರಿಗೂ ಹೀರೋ ಆಗಿ ಬಂಪರ್ ಲಾಭ ಸಿಕ್ಕಿದ್ದು 2006ರಲ್ಲಿ. 2006 ಡಿಸೆಂಬರ್ 29ರಂದು ರಿಲೀಸ್ ಆಗಿದ್ದ ಮುಂಗಾರು ಮಳೆ ಹೊಸ ಇತಿಹಾಸವನ್ನೇ ಸೃಷ್ಟಿಸಿತು. ಚೆಲ್ಲಾಟ, ಹುಡುಗಾಟದ ಗಣೇಶ್ ಗೋಲ್ಡನ್ ಸ್ಟಾರ್ ಗಣೇಶ್ ಆದರು.
ಅದಾದ 2 ತಿಂಗಳಲ್ಲಿ ಅಂದರೆ.. 2007, ಫೆಬ್ರವರಿ 23ರಂದು ರಿಲೀಸ್ ಆದ ಸಿನಿಮಾ ದುನಿಯಾ. ಸ್ಟಂಟ್ ಮ್ಯಾನ್ ಆಗಿದ್ದ ವಿಜಯ್, ಕರಿಚಿರತೆ, ಜಂಗ್ಲಿ ಸ್ಟಾರ್ ಆದರು. ದುನಿಯಾ ವಿಜಯ್ ಆದರು. ಈಗ ಮತ್ತೊಮ್ಮೆ ಇಬ್ಬರ ಸಿನಿಮಾಗಳೂ ಬ್ಯಾಕ್ ಟು ಬ್ಯಾಕ್ ಬರುತ್ತಿವೆ. ಈ ಬಾರಿ ಮೊದಲು ಬಂದಿರೋದು ವಿಜಯ್ ಅವರ ಭೀಮ. ನಂತರ ಬರುತ್ತಿರೋದು ಗಣೇಶ್ ಅವರ ಕೃಷ್ಣಂ ಪ್ರಣಯ ಸಖಿ.
ಭೀಮ. ದುನಿಯಾ ವಿಜಯ್ ನಿರ್ದೇಶನದ 2ನೇ ಸಿನಿಮಾ. ಅವರೇ ಹೀರೋ. ಈ ಬಾರಿಯೂ ಹಸಿ ಹಸಿ ಕಥೆಯನ್ನು ಅಷ್ಟೇ ಹಸಿ ಹಸಿಯಾಗಿ ಹೇಳಿ.. ಸಂದೇಶವನ್ನೂ ಕೊಟ್ಟು ಗೆದ್ದಿದ್ದಾರೆ ವಿಜಯ್. ಇತ್ತೀಚೆಗೆ ಚಿತ್ರಮಂದಿರದಿಂದ ದೂರವೇ ಉಳಿದಿದ್ದ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತಂದ ಖ್ಯಾತಿ ವಿಜಯ್ ಅವರಿಗೆ ಸಲ್ಲಬೇಕು. ಹೀಗಾಯೇ ಈ ವರ್ಷದ ಮೊದಲ ಹಿಟ್ ಸಿನಿಮಾ ಎನ್ನಬಹುದು. ಕೃಷ್ಣನಿಗೂ ಇದು ಗುಡ್ ನ್ಯೂಸ್ ಎಂದರೆ ಆಶ್ಚರ್ಯವಿಲ್ಲ.
‘ಭೀಮ’ ಮೊದಲ ದಿನದ ಕಲೆಕ್ಷನ್ ಮಾಸ್ ಆಗಿತ್ತು. ಮಾಸ್ ಆಡಿಯನ್ಸ್ ಥಿಯೇಟರ್ಗೆ ನುಗ್ಗಿದ್ದರು. ಮೊದಲ ದಿನ ಅಂದರೆ ಶುಕ್ರವಾರ ಸಿನಿಮಾದ ಕಲೆಕ್ಷನ್ 4.1 ಕೋಟಿ ರೂಪಾಯಿ ಎಂದು ವರದಿಯಾಗಿತ್ತು. ಇನ್ನು ಎರಡನೇ ದಿನ 3.90 ಕೋಟಿ ರೂಪಾಯಿ, ಮೂರನೇ ದಿನ ಭಾನುವಾರ 4.3 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ನಾಲ್ಕನೇ ದಿನ ಅಂದರೆ ಕಲೆಕ್ಷನ್ 1.50 ಕೋಟಿ ರೂಪಾಯಿ ಆಗಿದೆಯಂತೆ. ಇನ್ನು ಆಗಸ್ಟ್ 15ಕ್ಕೆ ರಜೆ ಇದೆ. ಆಗಸ್ಟ್ 16ಕ್ಕೆ ವರಮಹಾಲಕ್ಷ್ಮಿಹಬ್ಬ. ರಜೆಯ ದಿನಗಳಲ್ಲಿ ಕಲೆಕ್ಷನ್ ಇನ್ನಷ್ಟು ಹೆಚ್ಚಾಗಬಹುದು ಎಂಬ ನಿರೀಕ್ಷೆ ವಿತರಕರ ವಲಯದಲ್ಲಿದೆ.
ಗೋಲ್ಡನ್ ಸ್ಟಾರ್ ಅಭಿನಯದ ಕೃಷ್ಣಂ ಪ್ರಣಯ ಸಖಿ ಚಿತ್ರಕ್ಕೂ ಇದು ಗುಡ್ ನ್ಯೂಸ್ ಎನ್ನಬಹುದು. ಭೀಮ ರಕ್ತಸಿಕ್ತ ಕಥೆಯಾದರೆ, ಕೃಷ್ಣಂ ಪ್ರಣಯ ಸಖಿ ಲವ್ ರೊಮ್ಯಾಂಟಿಕ್. ವಿಜಯ್ ಚಿತ್ರಕ್ಕೆ ಮಾಸ್ ಆಡಿಯನ್ಸ್ ಹೆಚ್ಚು. ಗಣೇಶ್ ಚಿತ್ರಕ್ಕೆ ಫ್ಯಾಮಿಲಿ ಆಡಿಯನ್ಸ್ ಹೆಚ್ಚು. ವಿಜಯ್ ಮತ್ತು ಗಣೇಶ್ ಇಬ್ಬರೂ ಹೇಗೆ ಗೆಳೆಯರೋ.. ಇಬ್ಬರ ಫ್ಯಾನ್ಸ್ ಕೂಡಾ ಅಷ್ಟೇ.. ದೋಸ್ತಿಗಳು.
ಹೀಗಾಗಿಯೇ ಶ್ರೀನಿವಾಸ ರಾಜು ನಿರ್ದೇಶನದ ಕೃಷ್ಣಂ ಪ್ರಣಯ ಸಖಿ ಬಗ್ಗೆ ನಿರೀಕ್ಷೆಗಳೂ ಹೆಚ್ಚುತ್ತಿವೆ. ಈಗಾಗಲೇ ಚಿತ್ರದಲ್ಲಿ ಇದುವರೆಗೆ ರಿಲೀಸ್ ಆಗಿರುವ ಎಲ್ಲ ಹಾಡುಗಳೂ ಪ್ರೇಮ ರೋಮಾಂಚನ ಸೃಷ್ಟಿಸಿವೆ. ಹೀಗಾಗಿ.. ಚಿತ್ರರಂಗಕ್ಕೆ ಶುಭ ಕಾಲ ಬಂದೈತೆ.. ಎನ್ನೋಕೆ ಅಡ್ಡಿ ಇಲ್ಲ.
ಕೃಷ್ಣನ ಪ್ರಣಯ ಗೀತೆ.. ರೊಮ್ಯಾಂಟಿಕ್ ಕಥೆ
ಶ್ರೀಕೃಷ್ಣನಿಗೆ ಹದಿನಾರು ಸಾವಿರ ಸಖಿಯರಂತೆ. ಆದರೆ ಅದು ಪುರಾಣ. ಈಗ ಹೊಸ ಕೃಷ್ಣ ಬಂದಿದ್ದಾನೆ. ಈತನಿಗೆ ಹದಿನಾರು ಸಾವಿರ ಅಲ್ಲ, ಹದಿನಾರರ ಅರ್ಧ 8 ಚೆಲುವೆಯರು ಜೊತೆಗಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಸಮಯದಲ್ಲಿ ಸ್ಯಾಂಡಲ್ವುಡ್ನಲ್ಲಿ ರಿಲೀಸ್ ಆಗುತ್ತಿರುವ ಕೃಷ್ಣಂ ಪ್ರಣಯ ಸಖಿ ಚಿತ್ರದಲ್ಲಿ 8 ಚೆಲುವೆಯರಿದ್ದಾರೆ.
8 ಚೆಲುವೆಯರು ಎಂದ ಕೂಡಲೇ ಚಿತ್ರದ ಕಥೆ ಏನಿರಬಹುದು ಎಂಬ ಕುತೂಹಲ ಸಹಜ. ಇದುವರೆಗೆ ಗಣೇಶ್ ಚಿತ್ರದಲ್ಲಿಒಬ್ಬರು, ಇಬ್ಬರು ಅಥವಾ ನಾಲ್ಕೈದು ಹೀರೋಯಿನ್ ಕೂಡಾ ಇದ್ದರು.
ಆದರೆ, ಈ ಬಾರಿ 8 ಜನ ಚೆಲುವೆಯರಿದ್ದಾರೆ. ಹಾಗಾದರೆ ಕಥೆ ಏನು..?
ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಕೃಷ್ಣಂ ಪ್ರಣಯ ಸಖಿ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಎನ್ನಲಾಗಿದೆ. ಕಾಡುವ ಕಥೆಯೂ ಇರಬಹುದೇ.. ಏಕೆಂದರೆ.. ಈಗಾಗಲೇ ಚಿತ್ರದ ಒಂದೊಂದು ಹಾಡು ಕೂಡಾ ಸೂಪರ್ ಹಿಟ್ ಆಗಿದೆ.
ಮೊದಲಿಗೆ ಚಂದನ್ ಶೆಟ್ಟಿ ಧ್ವನಿಯ “ಮೈ ಮ್ಯಾರೇಜ್ ಈಸ್ ಫಿಕ್ಸ್ಡ್” ಎಂದು ಮದುವೆಯ ಹಾಡು ರಿಲೀಸ್ ಆಗಿತ್ತು. ಈ ಹಾಡಿನಲ್ಲಿ ಎಂಟು ಸಖಿಯರು ಇದ್ರು. ಕೃಷ್ಣನ ನಿಜವಾದ ಲವ್ ಇರೋದು ಯಾರ ಮೇಲೆ? ಕಥೆಯ ಸಸ್ಪೆನ್ಸ್ ಇರುವುದೇ ಅಲ್ಲಿ.
ಮಾಳವಿಕ ನಾಯರ್, ಶರಣ್ಯ ಶೆಟ್ಟಿ ಸೇರಿದಂತೆ ಚಿತ್ರದಲ್ಲಿ ದೊಡ್ಡ ತಾರಾಗಣವೇ ಇದೆ. ರಂಗಾಯಣ ರಘು, ಶಶಿಕುಮಾರ್ ಕೂಡಾ ಚಿತ್ರದಲ್ಲಿದ್ದಾರೆ. ರಕ್ತಸಿಕ್ತ ಸಿನಿಮಾಗಳ ಮೂಲಕವೇ ಹೆಸರು ಮಾಡಿದ್ದ ಶ್ರೀನಿವಾಸ ರಾಜು ನಿರ್ದೇಶನದ ಚಿತ್ರ ಇದು. ಹಾಡುಗಳನ್ನು ನೋಡುತ್ತಿದ್ದರೆ, ಕೇಳುತ್ತಿದ್ದರೆ.. ರಕ್ತದ ವಾಸನೆಯಂತೂ ಇಲ್ಲ. ಫುಲ್ ರೊಮ್ಯಾಂಟಿಕ್. ಹಾಡುಗಳ ಮೂಲಕವೇ ವೆಲ್ ಕಂ ಹೇಳ್ತಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್. ಸಂಗೀತ ಅರ್ಜುನ್ ಜನ್ಯ ಅವರದ್ದು. ಚಿತ್ರಕ್ಕೆ ಪ್ರಶಾಂತ್ ಜಿ ರುದ್ರಪ್ಪ, ಪ್ರೊಡ್ಯೂಸರ್.



