ಮಠ, ಎದ್ದೇಳು ಮಂಜುನಾಥ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ 52 ವರ್ಷ ವಯಸ್ಸಾಗಿತ್ತು. ಟಾಟಾ ನ್ಯೂ ಹೆವನ್ ಅಪಾರ್ಟ್ಮೆಂಟಿನಲ್ಲಿ ವಾಸವಿದ್ದರು. ಅದೇ ಅಪಾರ್ಟ್ಮೆಂಟಿನಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೊದಲ ಪತ್ನಿ ಆರತಿ ಅವರಿಗೆ ಡಿವೋರ್ಸ್ ಕೊಟ್ಟಿದ್ದ ಗುರುಪ್ರಸಾದ್, ಸುಮಿತ್ರಾ ಎಂಬುವವರನ್ನು ಮದುವೆಯಾಗಿದ್ದರು. ಒಂದು ಪುಟ್ಟ ಮಗುವೂ ಇದೆ.
ಮಠ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಚಿತ್ರರಂಗಕ್ಕೆ ಬಂದಿದ್ದು ೨೦೦೬ರಲ್ಲಿ. ಮಠ ಚಿತ್ರ ಗುರು ಅವರಿಗೆ ದೊಡ್ಡ ಮಟ್ಟದ ಹೆಸರು ತಂದುಕೊಟ್ಟಿತ್ತು. ಅದಾದ ನಂತರ ಬಂದ ಎದ್ದೇಳು ಮಂಜುನಾಥ ಚಿತ್ರವಂತೂ ಇನ್ನೂ ಒಂದು ಹಂತದ ದಾಖಲೆ ಬರೆಯಿತು. ಕಡಿಮೆ ಬಜೆಟ್ ಚಿತ್ರಗಳು, ಚುರುಕು ಮುಟ್ಟಿಸುವ ಸಂಭಾಷಣೆ ಜೊತೆಗೆ ಜಗ್ಗೇಶ್ ಅವರ ಮ್ಯಾನರಿಸಂನಿಂದಲೇ ಎರಡೂ ಚಿತ್ರಗಳು ಗೆದ್ದವು.
ಅದರೆ ಅದಾದ ನಂತರ ಜಗ್ಗೇಶ್ ಅವರಿಂದ ದೂರವಾದ ಗುರು ಪ್ರಸಾದ್, ಡಬಲ್ ಮೀನಿಂಗ್ ಸಂಭಾಷಣೆಗಳಿಗೇ ಜೋತು ಬಿದ್ದರು. ನಂತರದ ಅವರು ನಿರ್ದೇಶಿಸಿದ್ದ ಚಿತ್ರಗಳು ಕೇವಲ ೩. ಮೂರಕ್ಕೆ ಮೂರು ಚಿತ್ರಗಳೂ ಅಟ್ಟರ್ ಫ್ಲಾಪ್. ಧನಂಜಯ ಅವರ ಡೈರೆಕ್ಟರ್ ಸ್ಪೆಷಲ್, ಎರಡನೇ ಸಲ ಚಿತ್ರಗಳಲ್ಲಿ ಪೋಲಿತನವೇ ಎದ್ದು ಕಂಡಿತ್ತು. ರಂಗನಾಯಕ ಚಿತ್ರದಲ್ಲಿ ಪೋಲಿತನ ಬಿಟ್ಟರೆ ಮತ್ತೇನೂ ಇರಲಿಲ್ಲ. ಹೀಗಾಗಿ ಮಠ ಗುರುಪ್ರಸಾದ್ ತಮ್ಮ ಚಿತ್ರಗಳ ಮೇಲಿನ ಹಿಡಿತ ಕಳೆದುಕೊಂಡರು.
ಮಠ, ಎದ್ದೇಳು ಮಂಜುನಾಥ ಖ್ಯಾತಿಯಷ್ಟೇ ಇತ್ತು. ಗುರುಪ್ರಸಾದ್ ಅವರಿಗೆ, ಅದಾದ ನಂತರ ಎದುರಾಗಿದ್ದು ನಿರಂತರ ಸೋಲುಗಳು. ಡೈರೆಕ್ಟರ್ ಸ್ಪೇಷಲ್, ಎರಡನೇ ಸಲ, ರಂಗನಾಯಕ ಚಿತ್ರಗಳಲ್ಲಿ ಸತತವಾಗಿ ಸೋತಿದ್ದ ಗುರುಪ್ರಸಾದ್, ಇತ್ತೀಚೆಗೆ ರಂಗನಾಯಕ ಚಿತ್ರದ ನಂತರ ಟೀಕೆಗೂ ಗುರಿಯಾಗಿದ್ದರು.
ಜೊತೆಗೆ ಮೈತುಂಬಾ ಸಾಲ, ಸೋಮಾರಿತನದಿಂದ ಇದ್ದ ಗುರುಪ್ರಸಾದ್ ಅವರಿಗೆ ಕುಡಿತದ ಚಟವೂ ಅಂಟಿಕೊಂಡಿತ್ತು. ಯಾವುದಾದರೂ ಚಿತ್ರ ಒಪ್ಪಿಕೊಂಡರೆ, ಅತ್ತ ಕೆಲಸ ಶುರು ಮಾಡುತ್ತಲೇ ಇರಲಿಲ್ಲ. ನಿರ್ಮಾಪಕರು ಎಷ್ಟೋ ಜನ ಅಡ್ವಾನ್ಸ್ ಕೊಟ್ಟು ರೋಸಿ ಹೋಗಿ ಗುರು ಪ್ರಸಾದ್ ಅವರ ಹತ್ತಿರ ಹೋಗುವುದನ್ನೇ ಬಿಟ್ಟಿದ್ದರು. ಯಾವಾಗ ಯಾರೂ ಹತ್ತಿರ ಬರುತ್ತಿಲ್ಲ ಎಂದಾಯಿತೋ.. ಸಾಲಕ್ಕೆ ಕೈಚಾಚಿದರು. ವಾಪಸ್ ಕೊಡುವುದಕ್ಕೆ ದುಡಿಮೆ ಇರಲಿಲ್ಲ.
ಜೊತೆಗೆ ಅವಮಾನಗಳೂ ಎದುರಾಗಿದ್ದವು. ಶ್ರೀನಿವಾಸ್ ಗೌಡ ಎಂಬ ಉದ್ಯಮಿಯೊಬ್ಬರು ೨೫ ಲಕ್ಷ ರೂ. ಸಾಲ ಕೊಟ್ಟದ್ದರು. ಸಾಲ ವಾಪಸ್ ಮಾಡುವುದಕ್ಕೆ ಆಗಿರಲಿಲ್ಲ. ಹೀಗಾಗಿ ಗುರು ಪ್ರಸಾದ್ ವಿರುದ್ಧ ಕೋರ್ಟಿನಲ್ಲಿ ಕೇಸು ಹಾಕಿದ್ದರು. ಕಳೆದ ೨೪ನೇ ತಾರೀಕು ವಿಚಾರಣೆಯೂ ಇತ್ತು. ಆದರೆ ಮೆಡಿಕಲ್ ರಿಪೋರ್ಟ್ ಕೊಟ್ಟು, ವಿಚಾರಣೆಗೆ ಹೋಗಿರಲಿಲ್ಲ. ಗುರುಪ್ರಸಾದ್ ಅವರು ಇನ್ಸ್ಟಿಟ್ಯೂಟ್ ಆಫ್ ಸ್ಕ್ರಿಪ್ಟ್ ರೈಟಿಂಗ್ ಮತ್ತು ಡೈರೆಕ್ಷನ್ ಅನ್ನೋ ಸ್ಕೂಲ್ ಕೂಡಾ ನಡೆಸುತ್ತಿದ್ದರು.
ಇತ್ತೀಚೆಗೆ ಪುಸ್ತಕಗಳನ್ನು ಖರೀದಿಸಿ ಹಣ ಕೊಟ್ಟಿಲ್ಲ ಎಂದು ಪುಸ್ತಕ ಮಳಿಗೆಯವರೊಬ್ಬರು ಗುರು ಪ್ರಸಾದ್ ವಿರುದ್ಧ ದೂರು ಕೊಟ್ಟಿದ್ದರು. ಎಫ್ಐಆರ್ ಕೂಡಾ ದಾಖಲಾಗಿತ್ತು.
ಇವು ಬೆಳಕಿಗೆ ಬಂದ ಪ್ರಕರಣಗಳಾದರೆ, ಇನ್ನೂ ಹಲವರು ಸಾಲ ಕೊಟ್ಟು ವಾಪಸ್ ಬಾರದೆ ಇದ್ದ ಕಾರಣಕ್ಕೆ ಗುರುಪ್ರಸಾದ್ ಅವರನ್ನು ಬಾಯಿಗೆ ಬಂದಂತೆ ಬೈದು ಅವಮಾನ ಮಾಡಿದ್ದರು.
ಕೈಲಿ ಹೊಸ ಚಿತ್ರಗಳಿಲ್ಲ. ಜೊತೆಗೆ ಗುರುಪ್ರಸಾದ್ ತಮಗೆ ಕೊಟ್ಟ ಕೆಲಸವನ್ನು ವಿಳಂಬ ಮಾಡುತ್ತಿದ್ದರು ಎನ್ನುವ ಆರೋಪವೂ ಇತ್ತು. ಒಂದು ಕಡೆ ಕೆಲಸ ಇಲ್ಲದೆ, ಇನ್ನೊಂದು ಕಡೆ ಸಾಲ ತೀರಿಸಲು ಸಾಧ್ಯವಾಗದೆ.. ಮತ್ತೊಂದು ಕಡೆ ಅವಮಾನ ಭರಿಸಲಾಗದೆ.. ನಿರಂತರ ಹಿಂಸೆ ಅನುಭವಿಸುತ್ತಿದ್ದ ಗುರು ಪ್ರಸಾದ್, ನೇಣು ಹಾಕಿಕೊಂಡಿದ್ದಾರೆ.
ವಿಶೇಷ ಅಂದ್ರೆ ನಿನ್ನೆ ಗುರು ಪ್ರಸಾದ್ ಅವರ ಹುಟ್ಟುಹಬ್ಬವಿತ್ತು. ಹುಟ್ಟುಹಬ್ಬದ ದಿನ ಫೋನ್ ಮಾಡಿದ ಹಲವರಿಗೆ ಸ್ವಿಚ್ ಆಫ್ ಮೆಸೇಜ್ ಬಂದಿದೆ. ಸತ್ತು ಸುಮಾರು ೧೦ ದಿನಗಳೇ ಆಗಿವೆ. ಹೆಣ ವಾಸನೆ ಬರುವುದಕ್ಕೆ ಶುರುವಾಗಿದೆ.
ಆದರೆ ಆತ್ಮಹತ್ಯೆಗೆ ಇದೇ ಕಾರಣ ಎಂದು ಈಗಲೇ ಹೇಳುವುದು ಸಾಧ್ಯವಾಗುತ್ತಿಲ್ಲ. ಚಿತ್ರೋದ್ಯಮದ ಗಣ್ಯರು, ಗುರುಪ್ರಸಾದ್ ಜೊತೆ ಒಡನಾಡಿದ್ದವರೆಲ್ಲ ಇನ್ನೂ ದಿಗ್ಭ್ರಮೆಯಲ್ಲೇ ಇದ್ದಾರೆ.
ಮಠ ಗುರು ಪ್ರಸಾದ್ ಅವರ ಅಚ್ಚುಮೆಚ್ಚಿನ ನಟ ಡಾ.ರಾಜ್ ಕುಮಾರ್. ಯಾವತ್ತೋ ರಾಜ್ ಕುಮಾರ್ ತಮ್ಮ ಗಡ್ಡ ಮುಟ್ಟಿದ್ದರು ಎಂಬ ಕಾರಣಕ್ಕೆ ಗಡ್ಡವನ್ನು ಶೇವ್ ಮಾಡುವುದನ್ನೇ ಬಿಟ್ಟಿದ್ದ ಗುರು ಪ್ರಸಾದ್, ಪುನೀತ್ ರಾಜ್ ಕುಮಾರ್ ಅವರು ನಡೆಸಿಕೊಡುತ್ತಿದ್ದ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದ ಬರಹಗಾರರಾಗಿ ತೆರೆಯ ಹಿಂದೆಯೂ ಕೆಲಸ ಮಾಡಿದ್ದರು. ಹಲವು ಚಿತ್ರಗಳಲ್ಲಿ ನಟಿಸಿದ್ದರು. ಆದರೆ ನಟನೆಯೂ ಅಷ್ಟೇ, ಶಿಸ್ತು ಪಾಲನೆ ಮಾಡುತ್ತಿರಲಿಲ್ಲ ಎಂಬ ಆರೋಪಗಳೂ ಇದ್ದವು. ಒಟ್ಟಿನಲ್ಲಿ ಪ್ರತಿಭಾವಂತ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದಾರೆ.



