ದ್ವಾರಕೀಶ್ ಮೊದಲಿಗೆ ನಿರ್ಮಾಣ ಮಾಡಿದ್ದು ಮಮತೆಯ ಬಂಧನ ಅನ್ನೋ ಚಿತ್ರವನ್ನ. ಆದರೆ.. ಆ ಚಿತ್ರಕ್ಕೆ ಇನ್ನೂ ಇಬ್ಬರು ನಿರ್ಮಾಪಕರಿದ್ದರು. ವೀರ್ ರಾಜು ಹಾಗೂ ಮಾಧವಯ್ಯ ಅನ್ನೋದು ಅವರ ಹೆಸರು. ಅದಾದ ಮೇಲೆ ದ್ವಾರಕೀಶ್ ಸ್ವತಂತ್ರವಾಗಿ ನಿರ್ಮಾಪಕರಾಗಿದ್ದು ಡಾ.ರಾಜ್ ಚಿತ್ರದ ಮೂಲಕ. ಆ ಸಿನಿಮಾದಲ್ಲಿ ಸ್ವತಃ ನಟಿಸಿದ್ದ ದ್ವಾರಕೀಶ್. ಜಯಂತಿ ಹೀರೋಯಿನ್. ಬಿಎಂ ವೆಂಕಟೇಶ್ ಎಂಬುವವರು ಹೀರೋ. ಆದರೆ.. ಸಿನಿಮಾ ಹಿಟ್ ಆಗಲಿಲ್ಲ.
ಅದಾದ ಮೇಲೆ.. ಮೇಯರ್ ಮುತ್ತಣ್ಣ. ದ್ವಾರಕೀಶ್ ಚಿತ್ರ ಬ್ಯಾನರ್ʻನ ಮೊದಲ ಸಿನಿಮಾ. ಬಂಗಾರದ ಮನುಷ್ಯ ಸಿನಿಮಾ ಕೊಟ್ಟ ಸಿದ್ದಲಿಂಗಯ್ಯ ನಿರ್ದೇಶನದ ಮೊದಲ ಸಿನಿಮಾನೂ ಹೌದು. ಆದರೆ ಆ ಸಿನಿಮಾದಿಂದಲೇ ರಾಜ್ ಮತ್ತು ದ್ವಾರಕೀಶ್ ನಡುವೆ ಮನಸ್ತಾಪ ಬೆಳೆಯಿತು. ಮೇಯರ್ ಮುತ್ತಣ್ಣ ಚಿತ್ರದಲ್ಲಿ ತಮಿಳಿನ ಎಂಜಿಆರ್ ಮಾಡುವಂತೆ ಕುಡಿದು ಹಾಡುವ ಹಾಡೊಂದನ್ನು ದ್ವಾರಕೀಶ್ ಬಯಸಿದ್ದರು. ಆದರೆ.. ಡಾ.ರಾಜ್ ಮತ್ತು ಪಾರ್ವತಮ್ಮ ಅದಕ್ಕೆ ಅವಕಾಶ ಕೊಡಲಿಲ್ಲ. ಚಿತ್ರದಲ್ಲಿ ಅಯ್ಯಯ್ಯಯ್ಯೋ ಹಳ್ಳಿ ಮುಕ್ಕ ಹಾಡು ಬರುತ್ತಲ್ಲ.. ಕುಡಿದು ಹಾಡುವ ಹಾಡಿಗೆ ರೀಪ್ಲೇಸ್ ಆದ ಹಾಡು ಅದು. ಮೇಯರ್ ಮುತ್ತಣ್ಣ ಚಿತ್ರವನ್ನು 50 ಸಾವಿರ ಲಾಭಕ್ಕೆ ಮಾರಿಬಿಟ್ಟರು ದ್ವಾರಕೀಶ್. ಆದರೆ.. ಆ ಸಿನಿಮಾ ಆಗಿನ ಕಾಲಕ್ಕೆ 10 ಲಕ್ಷದಷ್ಟು ಬಿಸಿನೆಸ್ ಮಾಡಿತು.
1069ರಲ್ಲಿ 10 ಲಕ್ಷ ಬಿಸಿನೆಸ್ ಮಾಡುವುದೆಂದರೆ.. ಈಗಿನ ಲೆಕ್ಕ ನೀವೇ ಹಾಕಿಕೊಳ್ಳಬಹುದು.


ಈ ಸಿನಿಮಾ ಹಿಟ್ ಆದರೂ.. ನಷ್ಟವಾಯಿತು ಎಂದು ಹೇಳಿಕೊಂಡಿದ್ದರಂತೆ ದ್ವಾರಕೀಶ್. ಅದೇ ಕೊನೆ.. ದ್ವಾರಕೀಶ್ ಮತ್ತು ರಾಜ್ ಮನೆತನದ ಯಾವೊಬ್ಬ ನಟನೂ ದ್ವಾರಕೀಶ್ ಜೊತೆ ಸಿನಿಮಾ ಮಾಡಲಿಲ್ಲ. 1977ರಲ್ಲಿ ಭಾಗ್ಯವಂತರು ಸಿನಿಮಾ ಮಾಡಿದ್ದ ದ್ವಾರಕೀಶ್ ಅವರಿಗೆ ಮತ್ತೆ ರಾಜ್ ಮನೆಯವರ ಕಾಲ್ ಶೀಟ್ ಸಿಕ್ಕಿದ್ದು 2019ರಲ್ಲಿ. ಅದು ದ್ವಾರಕೀಶ್ ನಿರ್ಮಾಣ ಮಾಡಿದ್ದ ಕೊನೆಯ ಚಿತ್ರವೂ ಹೌದು.
ಒನ್ಸ್ ಎಗೇನ್ ಅದು ವಿವಾದವಾಯ್ತು. ಆಯುಷ್ಮಾನ್ ಭವ ಸಿನಿಮಾ ಮಾಡಿ ಬೀದಿಗೆ ಬಿದ್ದೆ ಎಂದರು ದ್ವಾರಕೀಶ್. ದ್ವಾರಕೀಶ್ ಮೋಸದ ವ್ಯಾಪಾರದಿಂದಾಗಿಯೇ ಲಾಸ್ ಆಯ್ತು ಎಂದರು ಬೇರೆಯವರು. ಶಿವಣ್ಣ ಮಾತನಾಡಲಿಲ್ಲ.


ಆದರೆ.. ಒಂದೇ ಚಿತ್ರವನ್ನು ಹಲವಾರು ಜನರಿಗೆ ಮಾರಾಟ ಮಾಡಿದ್ದರು ದ್ವಾರಕೀಶ್. ಚಿತ್ರದ ಡಬ್ಬಿಂಗ್ ರೈಟ್ಸ್, ಸ್ಯಾಟಲೈಟ್ ರೈಟ್ಸ್ ಕೊಡುತ್ತೇನೆ ಎಂದು ಹೇಳಿ ಜಯಣ್ಣ ಅವರಿಂದ ಫೈನಾನ್ಸ್ ಪಡೆದುಕೊಂಡಿದ್ದ ದ್ವಾರಕೀಶ್, ಅತ್ತ ಜಯಣ್ಣ ಅವರಿಗೆ ಗೊತ್ತಿಲ್ಲದೆ ಚಿತ್ರದ ಡಬ್ಬಿಂಗ್ ರೈಟ್ಸ್ ಮತ್ತು ಸ್ಯಾಟಲೈಟ್ ರೈಟ್ಸ್ ಮಾರಾಟ ಮಾಡಿದ್ದರು. ಕೊನೆಗೆ ಪ್ರಚಾರವೇ ಇಲ್ಲದೆ ದಿಢೀರ್ ಎಂದು ರಿಲೀಸ್ ಆದ ಆಯುಷ್ಮಾನ್ ಭವ ಅಟ್ಟರ್ ಫ್ಲಾಪ್ ಲಿಸ್ಟಿಗೆ ಸೇರಿತ್ತು.
ದ್ವಾರಕೀಶ್ ಅವರು ರಾಜ್ ಅವರೊಂದಿಗಷ್ಟೇ ಅಲ್ಲ.. ಆಪ್ತಮಿತ್ರ ಎಂದು ಹೇಳುತ್ತಿದ್ದ ವಿಷ್ಣು ಜೊತೆಯಲ್ಲೂ ಕಿತಾಪತಿ ಮಾಡಿಕೊಂಡಿದ್ದರು. ವಿಷ್ಣು-ದ್ವಾರ್ಕಿ ನಟಿಸಿದ್ದ ಚಿತ್ರಗಳು ಹಲವಾರಿವೆ. ದ್ವಾರಕೀಶ್ ಬ್ಯಾನರಿನಲ್ಲಿ ವಿಷ್ಣು ನಟಿಸಿದ್ದ ಚಿತ್ರಗಳ ಸಂಖ್ಯೆ 15. 53ರಲ್ಲಿ 15 ಚಿತ್ರಗಳಲ್ಲಿ ವಿಷ್ಣುವರ್ಧನ್ ಇದ್ಧಾರೆ. ಹಾಗಂತ ಎಲ್ಲ ಚಿತ್ರಗಳಲ್ಲಿ ವಿಷ್ಣು ಹೀರೋ ಅಲ್ಲ.


ಕಿಟ್ಟು ಪುಟ್ಟು
ಸಿಂಗಾಪುರ್ʻನಲ್ಲಿ ರಾಜಾಕುಳ್ಳ
ಗುರು ಶಿಷ್ಯರು
ಮನೆ ಮನೆ ಕಥೆ
ಇಂದಿನ ರಾಮಾಯಣ
ನೀ ಬರೆದ ಕಾದಂಬರಿ
ಮದುವೆ ಮಾಡು ತಮಾಷೆ ನೋಡು
ಕಿಲಾಡಿಗಳು
ರಾಯರು ಬಂದರು ಮಾವನ ಮನೆಗೆ
ಆಪ್ತಮಿತ್ರ
ಇವಿಷ್ಟೂ ಚಿತ್ರಗಳಲ್ಲಿ ವಿಷ್ಣುವರ್ಧನ್ ಹೀರೋ. ಬಹುತೇಕ ಎಲ್ಲ ಚಿತ್ರಗಳಲ್ಲಿ ದ್ವಾರಕೀಶ್ ಕೂಡಾ ನಟಿಸಿದ್ದಾರೆ. ಅಷ್ಟೇ ಅಲ್ಲ..
ಪೆದ್ದ ಗೆದ್ದ ಹಾಗೂ ಪ್ರಚಂಡ ಕುಳ್ಳ ಚಿತ್ರಗಳಲ್ಲಿ ವಿಷ್ಣುವರ್ಧನ್ ಅತಿಥಿ ನಟರಾಗಿ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ಧಾರೆ. ಹೀಗಿದ್ದ ದ್ವಾರಕೀಶ್ ಮತ್ತು ವಿಷ್ಣುವರ್ಧನ್ ಅವರ ಸಂಬಂಧ ಹದಗೆಟ್ಟಿದ್ದು ಎಲ್ಲಿ ಎಂದು ನೋಡಿದರೆ.. ಉತ್ತರ ಅಹಂಕಾರ. ವಿಚಿತ್ರವೇನು ಗೊತ್ತೇ.. ಇದನ್ನು ಹಲವೆಡೆ ದ್ವಾರಕೀಶ್ ಬಹಿರಂಗವಾಗಿಯೇ ಹೇಳಿಕೊಂಡಿದ್ಧಾರೆ.
ಹಲವು ಬಾರಿ ವಿಷ್ಣು-ದ್ವಾರ್ಕಿ ಮಧ್ಯೆ ಜಗಳಗಳು, ಮನಸ್ತಾಪಗಳು ಬರ್ತಾ ಇದ್ವು. ಆದರೆ.. ಅಷ್ಟೇ ಬೇಗ ಸರೀನೂ ಹೋಗ್ತಿದ್ವು. ವಿಷ್ಣುವರ್ಧನ್ ಅವರನ್ನ ಡಾ.ರಾಜ್ ಅವರಿಗೆ ಎದುರಾಳಿ ಎಂಬಂತೆ ಬಿಂಬಿಸೋದ್ರಲ್ಲಿ ದ್ವಾರಕೀಶ್ ಪಾತ್ರ ದೊಡ್ಡದಾಗಿಯೇ ಇದೆ. ಚಿತ್ರರಂಗದ ಹಿರಿಯರ ಪ್ರಕಾರ ವಿಷ್ಣು-ರಾಜ್ ಮಧ್ಯೆ ದೊಡ್ಡ ಬಿರುಕು ಸೃಷ್ಟಿಸಿದ ಪ್ರಮುಖರಲ್ಲಿ ಒಬ್ಬರು ಮಿಸ್ಟರ್ ದ್ವಾರಕೀಶ್.
ವಿಷ್ಣುವರ್ಧನ್ ಅವರು ಕೆಲವರ ಜೊತೆ ಸಿನಿಮಾ ಮಾಡುವುದು ದ್ವಾರ್ಕಿಗೆ ಇಷ್ಟವಾಗ್ತಿರಲಿಲ್ಲ. ಇಂತಹವೆಲ್ಲ ವಿಷ್ಣುಗೆ ಇಷ್ಟವಾಗ್ತಾ ಇರಲಿಲ್ಲ. ಅಂತಹ ವಿಷಯಗಳಿಗೆ ಎಂಟ್ರಿ ಕೊಡುವುದಕ್ಕೆ ವಿಷ್ಣು ಯಾರಿಗೂ ಬಿಡ್ತಾ ಇರಲಿಲ್ಲ.
ಇನ್ನು ನೀ ತಂದ ಕಾಣಿಕೆ ಸಿನಿಮಾ ಮಾಡಿದ್ರಲ್ಲ.. ಆ ಸಿನಿಮಾ ವಿಷ್ಣು ಜೀವನದ ಅಟ್ಟರ್ ಫ್ಲಾಪ್ ಚಿತ್ರಗಳಲ್ಲಿ ಒಂದು. ಹಾಡುಗಳು ಇವತ್ತಿಗೂ ಕೇಳುವಂತಿವೆ. ಆದರೆ.. ಚಿತ್ರ ಸೋತು ಹೋದ ಮೇಲೆ ವಿಷ್ಣುನೇ ಸೋಲಿಗೆ ಕಾರಣ ಎಂದು ದ್ವಾರಕೀಶ್ ಅವರಿವರಲ್ಲಿ ಹೇಳಿಕೊಂಡಿದ್ದು ವಿಷ್ಣು ಅವರ ಕಣ್ಣು ಕೆಂಪಗಾಗಿಸಿತ್ತು.
ವಿಷ್ಣುವರ್ಧನ್ ಅವರದ್ದು ನೀ ತಂದ ಕಾಣಿಕೆ ಚಿತ್ರದಲ್ಲಿ ಆರಂಭದಲ್ಲಿ ಕುಡುಕನ ಪಾತ್ರ. ಎಷ್ಟರಮಟ್ಟಿಗೆ ಕುಡಿಯುತ್ತಾರೆಂದರೆ.. ನೋಡುವವರು ಪೀವೋಟ್ ಅಂಥಾ ಫೀಲ್ ಆಗುತ್ತೆ. ಆದರೆ.. ಆ ಚಿತ್ರದ ಕುಡುಕನ ಪಾತ್ರವೇ ವಿಷ್ಣುಗೆ ಇಷ್ಟ ಇರಲಿಲ್ಲ.
ವಿಷ್ಣು ಅವರಿಗೆ ತಮಗೆ ಇರುವ ಇಮೇಜ್ ಮತ್ತು ಕನ್ನಡಿಗರ ಮನಸ್ಥಿತಿಯ ಬಗ್ಗೆ ಗೊತ್ತಿತ್ತು. ಒಬ್ಬ ಕುಡುಕನ ಪಾತ್ರವನ್ನು ಕನ್ನಡಿಗರು ಒಪ್ಪಿಕೊಳ್ಳುವ ಬಗ್ಗೆ ವಿಷ್ಣು ಅವರಿಗೆ ಅನುಮಾನವಿತ್ತು. ಅದು ನಿಜವೂ ಆಯ್ತು.
ಕೊನೆಗೆ ಒತ್ತಾಯಕ್ಕೆ ಮಣಿದು ನಟಿಸಿ.. ಚಿತ್ರ ಸೋತ ಮೇಲೆ ಅದಕ್ಕೆ ವಿಷ್ಣು ಅವರನ್ನು ಹೊಣೆ ಮಾಡಿದ್ದು ಬೇಸರ ತರಿಸಿತ್ತು. 1985ರಲ್ಲಿ ನೀ ತಂದ ಕಾಣಿಕೆ ಆದ ಮೇಲೆ.. ಮತ್ತೆ ಇಬ್ಬರೂ ಒಟ್ಟಾಗಿ ಸಿನಿಮಾ ಮಾಡಿದ್ದು 1993ರಲ್ಲಿ. ಎರಡು ಚಿತ್ರಗಳ ನಡುವೆ ಬರೋಬ್ಬರಿ 8 ವರ್ಷಗಳ ಗ್ಯಾಪ್ ಇತ್ತು.
ಈ ನಡುವೆ ವಿಷ್ಣುಗೆ ಎದುರಾಗಿ ಹೀರೋಗಳನ್ನು ಹುಟ್ಟು ಹಾಕುತ್ತೇನೆ ಎಂಬ ಹಠಕ್ಕೆ ಬಿದ್ದ ದ್ವಾರಕೀಶ್ ಹೊಸ ಕಳ್ಳನಾಗಿ ಶಶಿ ಕುಮಾರ್ ಅವರನ್ನು ತಂದರು. ಹಳೆ ಕುಳ್ಳನಾಗಿ ತಾವೇ ಉಳಿದರು. ವಿನೋದ್ ರಾಜ್ ಅವರನ್ನು ಡಾನ್ಸ್ ರಾಜಾ ಡಾನ್ಸ್ ಮೂಲಕ ಹೀರೋ ಮಾಡಿದರು. ವಿಷ್ಣುಗೆ ಎದುರಾಗಿ ಹರ್ಷವರ್ಧನ್ ಎಂಬ ಹೀರೋನನ್ನು ಹುಟ್ಟಿ ಹಾಕುವ ಸಾಹಸಕ್ಕೆ ಕೈ ಹಾಕಿದರು. ಮಕ್ಕಳನ್ನು ಹೀರೋ ಮಾಡಿ ಕೈ ಸುಟ್ಟುಕೊಂಡರು. ವಿಷ್ಣುವರ್ಧನ್ ಗಮನಿಸುತ್ತಿದ್ದರಷ್ಠೇ.
ಆದರೆ.. ಇದೇ ವಿಷ್ಣುವರ್ಧನ್.. ದ್ವಾರಕೀಶ್ ಅವರಿಂದ ದೂರ ಇದ್ದ ಸಮಯದಲ್ಲಿ ತಮ್ಮ ವೃತ್ತಿ ಜೀವನದ ಬೆಸ್ಟ್ ಚಿತ್ರಗಳನ್ನು ಕೊಟ್ಟರು. ಮುತ್ತಿನ ಹಾರ, ಸುಪ್ರಭಾತದಂತಹ ಕ್ಲಾಸಿಕ್ ಚಿತ್ರಗಳು, ಜಯಸಿಂಹ, ಜನನಾಯಕದಂತಹ ಮಾಸ್ ಹಿಟ್ ಚಿತ್ರಗಳು, ಹರಕೆಯ ಕುರಿ, ಮಿಥಿಲೆಯ ಸೀತೆಯರು ಮಾದರಿಯ ಪ್ರಯೋಗಾತ್ಮಕ ಚಿತ್ರಗಳೆಲ್ಲ ಬಂದಿದ್ದು ಇದೇ ಅವಧಿಯಲ್ಲಿ.


ಅಂತಹ ದ್ವಾರಕೀಶ್ ಅವರಿಗೆ ಮತ್ತೆ ಹಿಟ್ ಕೊಟ್ಟಿದ್ದು ಇಬ್ಬರೂ ಒಂದಾದ ಮೇಲೆ ರಾಯರು ಬಂದರು ಮಾವನ ಮನೆಗೆ ಸಿನಿಮಾದಲ್ಲಿ. ಅದಾದ ಮೇಲೆ ಇಬ್ಬರೂ ಕಿಲಾಡಿಗಳು ಚಿತ್ರದಲ್ಲಿ ನಟಿಸಿ ಮತ್ತೆ ಗೆದ್ದರಾದರೂ.. ನಡುವೆ ಮನಸ್ತಾಪ ಇನ್ನಷ್ಟು ಹೆಚ್ಚಾಯ್ತು.
ಈ ಮಧ್ಯೆ ‘ದ್ರೋಹಿ’ ಎನ್ನುವ ಟೈಟಲ್ನಲ್ಲಿ ದ್ವಾರಕೀಶ್ ಒಂದು ಸಿನಿಮಾ ಘೋಷಣೆ ಮಾಡಿದ್ದರು. ” ಇದು ರೀಮೇಕ್ ಅಲ್ಲ, ಕಾದಂಬರಿ ಅಲ್ಲ, ನನ್ನ ಜೀವನದಲ್ಲಿ ನಾ ಕಂಡದ್ದು ನಡೆದದ್ದು” ಎಂದು ಪೋಸ್ಟರ್ನಲ್ಲಿ ಹಾಕಿಸಿದ್ದರು. ವಿಷ್ಣುವರ್ಧನ್ ತೇಜೊವಧೆಗೆ ಆ ಸಿನಿಮಾ ಘೋಷಣೆ ಮಾಡಿದ್ದಾರೆ ಅನ್ನೋ ಮಾತುಗಳು ಗಾಂಧಿನಗರದಲ್ಲಿ ಕೇಳಿ ಬಂದವು.


ಒಟ್ಟಿನಲ್ಲಿ ದ್ವಾರಕೀಶ್ ಅವರನ್ನು ಚಿತ್ರರಂಗದಲ್ಲಿ ಪ್ರೊಡ್ಯೂಸರ್ ಮಾಡಿದ ಡಾ.ರಾಜ್ ಮನೆಯವರಾಗಲಿ.. ದ್ವಾರಕೀಶ್ ಅವರ ಸಾಹಸಗಳಿಗೆ ಹೆಗಲು ಕೊಟ್ಟ ವಿಷ್ಣುವರ್ಧನ್ ಅವರಾಗಲೀ.. ಅವರ ಜೊತೆಯಲ್ಲಿ ಇರಲಿಲ್ಲ.
ಇದಕ್ಕೆಲ್ಲ ಏನು ಕಾರಣ ಎಂದರೆ.. ದ್ವಾರಕೀಶ್ ಅವರ ಮಾತು. ದ್ವಾರಕೀಶ್ ಅವರ ಮಾತುಗಳೇ ಅವರಿಗೆ ಮುಳ್ಳಾಗಿ ಕಾಡಿದವು ಎನ್ನುವುದು ಸುಳ್ಳಲ್ಲ.



