ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲ್ ವಿಡಿಯೋಗಳು ಈಗ ರಾಜ್ಯಾದ್ಯಂತ ಸದ್ದು ಮಾಡ್ತಾ ಇವೆ. ವಿಡಿಯೋಗಳಲ್ಲಿ ಭಯೋತ್ಪಾದಕರೂ ಬಿಂದಾಸ್ ಆಗಿದ್ದರು. ವಿಕೃತ ಕಾಮಿ ಉಮೇಶ್ ರೆಡ್ಡಿ ವೈಭವದಿಂದ ಮೆರೆಯುತ್ತಿದ್ದರು. ರನ್ಯಾ ರಾವ್ ತಮ್ಮ ಗೆಳೆಯನ ಜೊತೆ ಆರಾಮಾಗಿಯೇ ಇದ್ದರು. ಸೆಂಟ್ರಲ್ ಜೈಲ್ ಎನ್ನುವುದು ಹೆಸರಿಗೆ ಮಾತ್ರ ಎನ್ನುವುದು ಸಾಬೀತಾಗಿತ್ತು. ಸಂಸಾರವೂ ನಡೆಯುತ್ತಿದೆಯೇನೋ.. ವಿಡಿಯೋಗಳು ಸಿಕ್ಕಿಲ್ಲ. ಆದರೆ.. ತನಿಖೆಗೆ ಇಳಿದಿರುವ ಪೊಲೀಸರು ಮೊದಲಿಗೆ ವಿಡಿಯೋಗಳನ್ನು ಮೀಡಿಯಾಗಳಿಗೆ ಕೊಟ್ಟವರ ಬೆನ್ನು ಬಿದ್ದಿದ್ದಾರೆ. ಧನ್ವೀರ್ ಮೇಲೆ ಅನುಮಾನ ಇದೆ. ಏಕೆಂದರೆ ಧನ್ವೀರ್, ದರ್ಶನ್ ಶಿಷ್ಯ.
ಸಿಸಿಬಿ ಪೊಲೀಸರು ಧನ್ವೀರ್ ಅವರನ್ನು ಏರ್ ಪೋರ್ಟಿನಲ್ಲಿಯೇ ವಿಚಾರಣೆ ಮಾಡಿದ್ದಾರೆ. ಅದಾದ ನಂತರ ಠಾಣೆಗೆ ಕರೆದುಕೊಂಡು ಹೋಗಿ ಗಂಟೆಗಟ್ಟಲೆ ವಿಚಾರಣೆ ಮಾಡಿದ್ದಾರೆ. ಮೊಬೈಲ್ ಕೂಡಾ ತೆಗೆದಿರಿಸಿಕೊಂಡಿದ್ದಾರೆ. ಪೊಲೀಸರಿಗೆ ವಿಡಿಯೋಗಳೆಲ್ಲವನ್ನೂ ಧನ್ವೀರ್ ಅವರೇ ಲೀಕ್ ಮಾಡಿದ್ದಾರೆ ಎಂಬ ಅನುಮಾನ ಇದೆ. ಒಂದು NCR ದಾಖಲಿಸಿಕೊಂಡು ವಿಚಾರಣೆ ಮಾಡ್ತಿದ್ದಾರೆ. ಆ ಡೌಟ್ ಬರೋದಕ್ಕೆ ಕಾರಣ, ದರ್ಶನ್ ಪರ ವಕೀಲರ ಜೊತೆ ಹೊರಗೆ ಓಡಾಡುತ್ತಿರುವುದು ಧನ್ವೀರ್ ಅವರೇ. ದರ್ಶನ್ ಪರ ವಕೀಲರು ಹಲವು ಬಾರಿ ಜೈಲಿನಲ್ಲಿ ಉಗ್ರರಿಗೆ, ವಿಕೃತ ಕಾಮಿ ಉಮೇಶ್ ರೆಡ್ಡಿಗೆ ಸಿಕ್ಕ ಸೌಲಭ್ಯವೂ ಸಿಗುತ್ತಿಲ್ಲ. ವಿಡಿಯೋ ಸಾಕ್ಷಿ ಇದೆ ಎಂದು ಹೇಳಿದ್ದರು.
ಹೀಗಾಗಿ ವಿಡಿಯೋ ವೈರಲ್ ಮಾಡಿದವರ ಬೆನ್ನು ಹತ್ತಿರುವ ಪೊಲೀಸರು.. ಧನ್ವೀರ್ ಅವರನ್ನು ವಿಚಾರಣೆ ಮಾಡಿದ್ದಾರೆ. ವಕೀಲರನ್ನು ಮುಟ್ಟುವುದಕ್ಕೆ ಹೆದರಿದರಾ.. ಗೊತ್ತಿಲ್ಲ. ಇಷ್ಟಕ್ಕೂ ಜೈಲಿನಲ್ಲಿ ದರ್ಬಾರ್ ನಡೆಸಿರುವವರನ್ನು ವಿಚಾರಣೆ ಮಾಡಿದ್ದಾರೆಯೇ ಎಂದು ನೋಡಿದರೆ, ಉತ್ತರ ಇಲ್ಲ. ವಿಚಾರಣೆಗಾಗಿ ಒಬ್ಬ ಅಧಿಕಾರಿಯೂ ಇನ್ನೂ ಪರಪ್ಪನ ಅಗ್ರಹಾರಕ್ಕೆ ಕಾಲಿಟ್ಟಿಲ್ಲ. ಜಸ್ಟ್.. ವಿಡಿಯೋಗಳಲ್ಲಿರುವವರನ್ನು ಕರೆದು, ಇದಕ್ಕೆಲ್ಲ ಅವಕಾಶ ಕೊಟ್ಟವರು ಯಾರು.. ಯಾರಿಗೆ ಹಣ ಕೊಟ್ಟಿರಿ.. ಏನೇನು ಮಾಡಿದ್ರಿ.. ಎಂದು ಮೊದಲು ವಿಚಾರಣೆ ಮಾಡಿದ್ರೆ.. ಅರ್ಧ ಸತ್ಯ ಹೊರಬರುತ್ತಿತ್ತು.
ಆದರೆ.. ಪೊಲೀಸರ ಕಾರ್ಯವೈಖರಿ ನೋಡಿದರೆ.. ಅದೊಂದು ವಿಷಯವೇ ಅಲ್ಲ ಎಂಬಂತೆ ತೋರುತ್ತಿದೆ. ತಪ್ಪು ಮಾಡಿದವರು, ಮಾಡಿಸಿದವರು ಬಿಂದಾಸ್ ಆಗಿದ್ದರೆ, ಪೊಲೀಸರಿಗೆ ಅದನ್ನು ಮೀಡಿಯಾಗಳಿಗೆ ಹಂಚಿದವರು ಯಾರು ಎಂದು ತಿಳಿದುಕೊಳ್ಳುವ ಉತ್ಸಾಹ. ಇಷ್ಟಕ್ಕೂ ವಿಡಿಯೋ ಲೀಕ್ ಮಾಡಿದ್ದು ಧನ್ವೀರ್ ಅವರೇನಾ.. ದರ್ಶನ್ ಅವರಿಗೆ ಜೈಲಿನಲ್ಲಿ ಸೂಕ್ತ ಸವಲತ್ತು ಸಿಗ್ತಾ ಇಲ್ಲ ಎಂಬ ಕಾರಣಕ್ಕೆ ಇದೆಲ್ಲ ಮಾಡುವ ರಿಸ್ಕ್ ತೆಗೆದುಕೊಂಡ್ರಾ.. ಇದರ ಬಗ್ಗೆಯೇ ಪೊಲೀಸರು ಉತ್ಸಾಹದಿಂದ ತನಿಖೆಗೆ ಮುಂದಾಗಿದ್ದಾರೆ.
ಅತ್ತ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದವರು ಬಿಂದಾಸ್ ಆಗಿದ್ದರೆ.. ಜೈಲಿನ ಸುತ್ತ ಮುತ್ತ ಇರುವ ಸ್ಥಳೀಯರಿಗೆ ಜೈಲಾಗಿದೆ. ಸೆಂಟ್ರಲ್ ಜೈಲಿನ ಸುತ್ತಮುತ್ತಲಿನ ಜನರಿಗೆ ಸರಿಯಾಗಿ ನೆಟ್ ವರ್ಕ್ ಸಿಗಲ್ಲ. ಆಂಬುಲೆನ್ಸ್ʻಗೆ ಕರೆ ಮಾಡೋದಕ್ಕೂ ಪರದಾಡಬೇಕು. ಎಷ್ಟೋ ಬಾರಿ ಆಂಬುಲೆನ್ಸ್ ರೀಚ್ ಆಗದೆ ಸಾವುಗಳಾಗಿವೆ. ಆದರೆ.. ಜೈಲಿನಲ್ಲಿ ಮಾತ್ರ ಎಲ್ಲವೂ ಸಿಗುತ್ತದೆ. ಸ್ಥಳೀಯರ ವಾದದಲ್ಲಿ ಹುರುಳೇ ಇಲ್ಲ ಎನ್ನುತ್ತಿದ್ದವರಿಗೆ ಸಿಕ್ಕಿರುವ ಸಾಕ್ಷಿಗಳು, ವಿಡಿಯೋಗಳು ಭಯ ಹುಟ್ಟಿಸುವಂತಿವೆ. ಆದರೆ.. ವಿಡಿಯೋ ವೈರಲ್ ಆದ ನಂತರ.. ಎಲ್ಲವನ್ನೂ ಬಿಟ್ಟು ನಟ ಧನ್ವೀರ್ ಮೇಲೆ ಕೇಸ್ ಹಾಕಿ ವಿಚಾರಣೆ ನಡೆಸಲಾಗುತ್ತಿದೆ.



