ಒಂದು ಸಿನಿಮಾ ಗೆಲ್ಲಬೇಕೆಂದರೆ.. ಒಳ್ಳೆಯ ಕಥೆ.. ಚಿತ್ರಕಥೆ.. ಸಂಗೀತ.. ನಟನೆ.. ಮೇಕಿಂಗ್.. ಇಷ್ಟೇ ಇದ್ದರೆ ಸಾಲದು. ಚಿತ್ರವನ್ನು ಹೇಳಿದ ಡೇಟಿಗೆ ರಿಲೀಸ್ ಮಾಡುವ ಶಕ್ತಿಯೂ ಇರಬೇಕು. ಒಮ್ಮೊಮ್ಮೆ ರಿಲೀಸ್ ಆಗುವುದು ಲೇಟ್ ಆದರೆ.. ಪ್ರೇಕ್ಷಕ ಆ ಚಿತ್ರದ ಬಗ್ಗೆ ಆಸಕ್ತಿಯನ್ನೇ ಕಳೆದುಕೊಂಡು ಬಿಡ್ತಾನೆ. ಈಗ ಭೀಮ ಚಿತ್ರಕ್ಕಾಗುತ್ತಿರುವ ಸಂಕಟ ಮತ್ತು ಸವಾಲು ಅದೇ.
ದುನಿಯಾ ವಿಜಯ್ ಅಭಿನಯದ ಅವರೇ ನಿರ್ದೇಶಿಸಿರುವ ಭೀಮ ಚಿತ್ರದ ರಿಲೀಸ್ ತಡವಾಗುತ್ತಿರುವುದು ಯಾಕೆ..? ಪ್ರೇಕ್ಷಕರು ಈ ಪ್ರಶ್ನೆ ಕೇಳುವುದಕ್ಕೆ ಕಾರಣವೂ ಇದೆ. ಚಿತ್ರ ಅಧಿಕೃತವಾಗಿ ಶುರುವಾಗಿದ್ದು 2002ರ ಏಪ್ರಿಲ್ʻನಲ್ಲಿ. ಈಗ 2024ರ ಏಪ್ರಿಲ್ ಮುಗಿದಿದೆ. ಅಲ್ಲಿಗೆ ಬರೋಬ್ಬರಿ 2 ವರ್ಷ. ಚಿತ್ರ ಇನ್ನೂ ರಿಲೀಸ್ ಆಗಿಲ್ಲ. ಯಾವಾಗ ರಿಲೀಸ್ ಅನ್ನೋ ಬಗ್ಗೆ ನಿರ್ಮಾಪಕರಿಗೆ ಹಾಗೂ ಚಿತ್ರತಂಡಕ್ಕೆ ಕ್ಲಾರಿಟಿ ಇದ್ದಂತಿಲ್ಲ.
ನಿರ್ಮಾಪಕರು ಹೇಳ್ತೇವೆ ಹೇಳ್ತೇವೆ ಎಂದು ತಿಪ್ಪೆ ಸಾರಿಸ್ತಾ ಇದ್ರೆ, ಜೂನ್ ವೇಳೆಗೆ ಎಲೆಕ್ಷನ್ ಮುಗಿಯುತ್ತಲ್ವಾ.. ಆಮೇಲೆ ರಿಲೀಸ್ ಮಾಡ್ತೀವಿ ಅಂತಿದ್ಧಾರೆ ದುನಿಯಾ ವಿಜಯ್. ಚಿತ್ರದ ಸ್ಯಾಟಲೈವ್ ಹಕ್ಕುಗಳನ್ನು ಬಿಡುಗಡೆಗೂ ಮೊದಲೇ ಮಾರಾಟ ಮಾಡಬೇಕು ಎನ್ನುವ ಹಠಕ್ಕೆ ಬಿದ್ದರಂತೆ ನಿರ್ಮಾಪಕರು. ಹೀಗಾಗಿ ಸಿನಿಮಾ ರಿಲೀಸ್ ತಡವಾಗಿದೆ ಅನ್ನೋ ವಾದ ಕೇಳಿ ಬರುತ್ತಿದೆ. ಇನ್ನು ಎಲೆಕ್ಷನ್ ಟೈಂ ಅನ್ನೋ ಕಾರಣಕ್ಕೆ ಮುಂದೂಡಿದ್ದೇವೆ ಅಂತಿದ್ದಾರೆ ವಿಜಯ್.
ಭೀಮ ಚಿತ್ರಕ್ಕೆ ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಗೌಡ ನಿರ್ಮಾಪಕರು. ಚರಣ್ ರಾಜ್ ಸಂಗೀತ ಇದೆ. ಪಕ್ಕಾ ಆಕ್ಷನ್ ಥ್ರಿಲ್ಲರ್ ಮೂವಿ. ಹಾಗಂತ.. ಸಿನಿಮಾ ಬಗ್ಗೆ ಹೈಪ್ ಇಲ್ಲವಾ ಎಂದರೆ.. ಹಾಗೇನಿಲ್ಲ.
ಚಿತ್ರದ ಲವ್ ಯೂ ಕಣೆ.. ಹಾಗೂ ಬ್ಯಾಡ್ ಬಾಯ್ಸ್.. ಸೈಕ್.. ಹಾಡುಗಳು ಹುಚ್ಚೆಬ್ಬಿಸಿವೆ. ಚಿತ್ರದ ನಾಯಕಿಯಾಗಿ ನಟಿಸಿರುವ ಅಶ್ವಿನಿಯವರ ಲುಕ್ಕಿಗೆ ಫಿದಾ ಆಗಿ ಹೋಗಿದ್ಧಾರೆ. ದುನಿಯಾ ವಿಜಯ್ ಅವರು ಆಗಾಗ್ಗೆ ರಿಲೀಸ್ ಮಾಡಿದ ಚಿತ್ರದ ಮೇಕಿಂಗ್ ದೃಶ್ಯಗಳು ಸಂಚಲನ ಸೃಷ್ಟಿಸೋದ್ರಲ್ಲಿ ಯಶಸ್ವಿಯಾಗಿವೆ. ಇನ್ನು ವಿಜಯ್ ಅವರು ನಿರ್ದೇಶಿಸಿದ ಸಲಗ ಚಿತ್ರ ಕೂಡಾ ಯಶಸ್ವಿಯಾಗಿದೆ.
ಒಬ್ಬ ಯಶಸ್ವಿ ನಾಯಕ ಕಂ ನಿರ್ದೇಶಕನ ಎರಡನೇ ಚಿತ್ರವೇ ಈ ಪರಿ ವಿಳಂಬವಾದರೆ ಹೇಗೆ.. ಈ ಪ್ರಶ್ನೆಗೆ ಭೀಮ ಚಿತ್ರದ ರಿಲೀಸ್ ವೇಳೆ ಉತ್ತರ ಸಿಗಬಹುದೇನೋ.. ವಿಳಂಬವಾದಷ್ಟೂ.. ಆದಷ್ಟೂ.. ಚಿತ್ರದ ಬಗ್ಗೆ ಪ್ರೇಕ್ಷಕ ಆಸಕ್ತಿಯನ್ನೇ ಕಳೆದುಕೊಳ್ಳುತ್ತಾನೆ ಎನ್ನುವುದು ಗೊತ್ತಿರಲಿ.
ಎಷ್ಟೋ ಬಾರಿ ಒಳ್ಳೊಳ್ಳೆ ಸಿನಿಮಾಗಳು ಕಂಟೆಂಟ್ ಚೆನ್ನಾಗಿದ್ದರೂ.. ಫೇಲ್ ಆಗುವುದಕ್ಕೆ ನಿರ್ಮಾಪಕರೇ ಕಾರಣರಾಗಿರ್ತಾರೆ. ಹೇಳಿಕೊಂಡ ಟೈಮಿಗೆ ಸಿನಿಮಾ ಮಾಡಿ, ರಿಲೀಸ್ ಮಾಡುವುದಕ್ಕೆ ಆಗದೇ ಇದ್ದವರು ಚಿತ್ರರಂಗಕ್ಕೆ ಯಾಕಾದರೂ ಬರಬೇಕಲ್ಲವಾ..? ಕೇವಲ ಪ್ರತಿಷ್ಠೆಗೆ.. ಶೋಕಿಗೆ ಸಿನಿಮಾ ಮಾಡುವವರು ಅತ್ತ ಸಿನಿಮಾಗೆ ಬೇಕಾದ್ದನ್ನೂ ಕೊಡುವುದರಲ್ಲಿ ಎಡವುತ್ತಾರೆ. ಆಮೇಲೆ.. ಸಿನಿಮಾವನ್ನೂ ಸೋಲಿಸ್ತಾರೆ.
ಏಕೆಂದರೆ ನಿರ್ಮಾಪಕ ಕೃಷ್ಣ ಸಾರ್ಥಕ್ ಈ ಹಿಂದೆ ದ್ಯಾವ್ರೇ, ದಯವಿಟ್ಟು ಗಮನಿಸಿ, ಬೈರಾಗಿ ಚಿತ್ರಗಳನ್ನು ನಿರ್ಮಾಣ ಮಾಡಿದ್ದವರು. ಪ್ರೀಮಿಯರ್ ಪದ್ಮಿನಿ ಚಿತ್ರಕ್ಕೂ ಮೊದಲ ನಿರ್ಮಾಪಕರಾಗಿದ್ದವರು ಇದೇ ಕೃಷ್ಣ ಸಾರ್ಥಕ್. ಆಮೇಲೆ ಹಿಂದೆ ಸರಿದು ಬೇರೆಯವರು ನಿರ್ಮಾಪಕರಾದರು. ಇವುಗಳಲ್ಲಿ ದಯವಿಟ್ಟು ಗಮನಿಸಿ ಬಿಟ್ಟರೆ.. ಉಳಿದ ಸಿನಿಮಾಗಳು ಸುದ್ದಿ ಮತ್ತು ಸದ್ದು ಎರಡನ್ನೂ ಮಾಡಿವೆ. ಆದರೆ.. ಸರಿಯಾದ ಟೈಮಿಗೆ ಸರಿಯಾದ ರೀತಿಯಲ್ಲಿ ರಿಲೀಸ್ ಮಾಡದೇ ಇರುವ ಕಾರಣಕ್ಕೆ ಸೋತಿವೆ.



