ಕೊರೊನಾ ಎಲ್ಲೆಡೆ ತಣ್ಣಗಾಗಿರಬಹುದು. ಆದರೆ ಚೀನಾದಲ್ಲಿ ಮಾತ್ರ ತಾಂಡವವಾಡುತ್ತಿದೆ. ಪ್ರತಿ ದಿನವೂ ಮರಣ ಮೃದಂಗ. ಮಾಡಿದ ಪಾಪ ಸುಮ್ಮನೆ ಬಿಡುತ್ತಾ.. ಪಾಪ ಪುಣ್ಯ ಲೆಕ್ಕಾಚಾರ ಹಾಕುವ ದೇವರು ಶಿಕ್ಷೆ ಕೊಡದೇ ಇರ್ತಾನಾ.. ಉಪ್ಪಾ ತಿಂದ ಮೇಲೆ ನೀರು ಕುಡಿಯಲೇಬೇಕು.. ಕರ್ಮ ರಿಟನ್ರ್ಸ್.. ಹೀಗೆ ಯಾವುದಾದರೂ ಎನ್ನಿ. ಚೀನಾದಲ್ಲೀಗ ವೈರಸ್ಸಿನದ್ದೇ ಸಾಮ್ರಾಜ್ಯ. ಸಾವಿನದ್ದೇ ಆಧಿಪತ್ಯ. ಒಂದೊಂದು ಶವಾಗಾರಕ್ಕೆ 30ರಿಂದ 40 ಹೆಣಗಳು ಬರುತ್ತಿದ್ದ ಜಾಗದಲ್ಲಿ ದಿನಕ್ಕೆ 200 ಶವಗಳು ಬಂದರೆ ಶವ ಸುಡುವವರು ಏನು ಮಾಡಬೇಕು.. ದಿನವಿಡೀ.. 24 ಗಂಟೆ ಸುಟ್ಟರೂ.. ಹೆಣಗಳ ಸಂಖ್ಯೆ ಕರಗುತ್ತಿಲ್ಲ. ಹೀಗಂತ ವರದಿ ಮಾಡಿರುವುದು ವಾಲ್ ಸ್ಟ್ರೀಟ್ ಜನರಲ್ ಪತ್ರಿಕೆ. ಸ್ಮಶಾನದಲ್ಲಿ ಸಂಸ್ಕಾರ ಮಾಡೋಕೆ ಗಂಟೆಗಟ್ಟಲೆ ಅಲ್ಲ, ದಿನಗಟ್ಟಲೆ ಕ್ಯೂ ನಿಲ್ಲಬೇಕಾದ ಪರಿಸ್ಥಿತಿ ಇದೆ.

ಆಸ್ಪತ್ರೆಗಳು ಹೌಸ್ಫುಲ್. ಐಸಿಯುಗಳೂ ಹೌಸ್ಫುಲ್. ರೋಗಿಗಳಿಗೆ ವೆಂಟಿಲೇಟರ್ ಒದಗಿಸಲು ಸಾಧ್ಯವಾಗುತ್ತಿಲ್ಲ. ಸತ್ತ ರೋಗಿಗಳ ವೆಂಟಿಲೇಟರ್ನ್ನು ತಕ್ಷಣ ಇನ್ನೊಬ್ಬರಿಗೆ ವರ್ಗಾಯಿಸುವ ವಿಚಿತ್ರ ಪರಿಸ್ಥಿತಿ ಇದೆ. ಮಾನವೀಯತೆಯೇ ಸಾವಿಗೀಡಾಗುತ್ತಿರುವ ವಿಚಿತ್ರ ಪರಿಸ್ಥಿತಿ ಅದು. ಏನಾಗ್ತಿದೆ ಎಂದರೆ ಚೀನಾ ತುಟಿಕ್ ಪಿಟಿಕ್ ಎನ್ನುತ್ತಿಲ್ಲ. ಏಕೆಂದರೆ ಚೀನಾ ಕಳೆದ ಒಂದು ತಿಂಗಳಿಂದ ಹೆಲ್ತ್ ಬುಲೆಟಿನ್ನ್ನೇ ರಿಲೀಸ್ ಮಾಡುತ್ತಿಲ್ಲ. ಡಿ.7ರಿಂದ ವೈರಸ್ ಅಂಕಿ-ಸಂಖ್ಯೆಯ ಮಾಹಿತಿಯನ್ನೂ ನೀಡುತ್ತಿಲ್ಲ. ಎಲ್ಲವೂ ಗುಪ್ತ್ ಗುಪ್ತ್.
ವೈರಸ್ ಮಾತ್ರ ವೊರಿಜಿನಲ್..ವ್ಯಾಕ್ಸಿನ್ ಅಲ್ಲ
ಚೀನಾದಲ್ಲೀಗ ವೈದ್ಯರೂ ಸಾಲುತ್ತಿಲ್ಲ. ಲಸಿಕೆಯೂ ಸಾಲುತ್ತಿಲ್ಲ. ಚೀನಾದವರಿಗೆ ಅವರದ್ದೇ ದೇಶದ ವ್ಯಾಕ್ಸಿನಿನ ಮೇಲೆ ನಂಬಿಕೆಯಿಲ್ಲ. ಕೊರೊನಾ ಆರ್ಭಟ ಶುರುವಾದಾಗ ನಾವೇ ಫಸ್ಟ್.. ನಮ್ಮಲ್ಲೇ ಮೊದಲು.. ಎಂದು ಎರಡು ವ್ಯಾಕ್ಸಿನ್ ಘೋಷಿಸಿತ್ತು ಚೀನಾ. ಒಂದಲ್ಲ..ಎರಡು ವ್ಯಾಕ್ಸಿನ್ ಕಂಡು ಹಿಡಿದಿತ್ತು. ಆದರೆ ತಮ್ಮದೇ ದೇಶದ ವ್ಯಾಕ್ಸಿನ್ ಬಗ್ಗೆ ಚೀನೀಯರಿಗೆ ನಂಬಿಕೆಯೇ ಬರಲಿಲ್ಲ. ಬಲವಂತದಿಂದ ಚುಚ್ಚಿದ್ದೇ ಬಂತು. ಅಂತಾರಾಷ್ಟ್ರೀಯ ಮ್ಯಾಗಜಿನ್ನುಗಳ ಪ್ರಕಾರ ವ್ಯಾಕ್ಸಿನ್ನಿನಲ್ಲಿ ಔಷಧಿಯೂ ಇರಲಿಲ್ಲ. ಎಂಥದ್ದೂ ಇರಲಿಲ್ಲ. ಗ್ಲೂಕೋಸ್ ವಾಟರ್ನ್ನೇ ವ್ಯಾಕ್ಸಿನ್ ಎಂದು ನಂಬಿಸಿ ಸೂಜಿ ಹಾಕಲಾಯ್ತು. ಚೀನಾದವರು ಎಂಥ ಭ್ರಮೆಯಲ್ಲಿದ್ದರೆಂದರೆ ಇದೊಂದು ರೋಗವೇ ಅಲ್ಲ. ನಂಬಿಕೆ ಹುಟ್ಟಿಸಿದರೆ ಸಾಕು, ಎಲ್ಲ ಸರಿ ಹೋಗುತ್ತದೆ ಎಂದು ನಂಬಿದ್ದರು. ಆದರೆ ಅವರದ್ದೇ ದೇಶದ ಜನರಿಗೆ ನಂಬಿಕೆ ಹುಟ್ಟಿಸೋಕೆ ಸೋತರು. ಪರಿಣಾಮ ಒಮಿಕ್ರೋನ್ ವೈರಸ್ನ (ಕೋವಿಡ್ 19 ರೂಪಾಂತರಿ) ನ ಬಿ.ಎ.5.2 ಹಾಗೂ ಬಿ.ಎಫ್.7 ತಳಿಯ ವೈರಸ್ ವ್ಯಾಪಕವಾಗಿ ಹರಡುತ್ತಿವೆ. ರೋಗ ಹರಡುವ ವೇಗ ಅಂದರೆ ಆರ್. ರೇಟ್ ಶೇ.50ಕ್ಕಿಂತ ಹೆಚ್ಚಿದೆ.

ನಂಬಿಕೆ ಕಳೆದುಕೊಂಡ ವಿಶ್ವಸಂಸ್ಥೆ :
ವಿಶ್ವಸಂಸ್ಥೆಯಲ್ಲೂ ಆತಂಕ ಮೂಡಿದೆ. ಏಕೆಂದರೆ ಚೀನಾದ ವುಹಾನ್ ವೈರಸ್ಸಿನ ಮೂಲ ಎಂದು ಹಲವು ದೇಶಗಳು ವಾದ ಮಾಡಿದರೂ ವಿಶ್ವಸಂಸ್ಥೆ ಕಿವಿಗೇ ಹಾಕಿಕೊಳ್ಳಲಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಚೀನಾ ಪ್ರತಿನಿಧಿಗಳೇ ತುಂಬಿದ್ದರು. ಕೊನೆಗೆ ವಿಶ್ವಸಂಸ್ಥೆ ತಜ್ಞರು ಚೀನಾದ ವುಹಾನ್ಗೇ ಹೋಗಿ ಪರಿಶೀಲನೆ ನಡೆಸಿ ಏನೂ ಇಲ್ಲ. ಎಲ್ಲವೂ ಕ್ಲೀನು ಎಂದು ವರದಿ ಕೊಟ್ಟರು. ಆದರೆ, ಅದೇ ವುಹಾನ್ನಲ್ಲಿ ವೈರಸ್ ರಾಕ್ಷಸ ರೂಪದಲ್ಲಿ ಬೆಳೆಯಿತು. ಝೀರೋ ಕೋವಿಡ್ ಸೂತ್ರ ಅಂದ್ರೆ ನಗರ/ಪಟ್ಟಣಗಳಲ್ಲಿ ಒಬ್ಬರೇ ಒಬ್ಬರೂ ಕೂಡಾ ರೋಗವಿಲ್ಲದಂತೆ ಆಗುವವರೆಗೂ ಮನೆಯಿಂದ ಯಾರೂ ಹೊರಬರಬಾರದು ಎಂಬ ನಿರ್ಬಂಧ ವಿಧಿಸಿತು ಚೀನಾ ಸರ್ಕಾರ. ಜನ ಹೊರಗೆ ಓಡಾಡದಿದ್ದರೆ ಇಮ್ಯುನಿಟಿ ಪವರ್, ಕಮ್ಯುನಿಟಿಯಲ್ಲಿ ಬೆಳೆಯುವುದು ಹೇಗೆ? ಎಂದು ವಿಶ್ವಸಂಸ್ಥೆಯೂ ಕೇಳಲಿಲ್ಲ. ಅತ್ತ ಭಾರತದ ಮಾದರಿಯಲ್ಲಿ ಅಹಾರ ಮತ್ತಿತರ ವ್ಯವಸ್ಥೆಯನ್ನೂ ಮಾಡಲಿಲ್ಲ. ಹಸಿವಿನಿಂದ ಸಾಯಲಾರದೆ, ಸಾವಿಗೂ ಹೆದರದೆ ಚೀನಾದ ಮಿಲಿಟರಿಯ ವಿರುದ್ಧವೇ ರೊಚ್ಚಿಗೆದ್ದು ಬೀದಿಗಿಳಿದಾಗ ಸರ್ಕಾರ ತಲೆ ತಗ್ಗಿಸಲೇಬೇಕಾಯ್ತು. ಆದರೆ ಕೋವಿಡ್ ಔಷಧಿಯೂ ಇಲ್ಲದೆ, ರೋಗ ವಿಪರೀತವಾದಾಗ ಸಡಿಲಿಕೆ ಮಾಡಿ ಇನ್ನೊಂದು ಅಪಾಯಕ್ಕೆ ತನ್ನನ್ನು ತಾನೇ ಎಳೆದುಕೊಂಡಿದೆ ಚೀನಾ. ಚೀನಾದಲ್ಲೀಗ ಶೇ.60ಕ್ಕೂ ಹೆಚ್ಚು ಜನ ಕೋವಿಡ್ ಸೋಂಕಿತರು. ಹೀಗಾಗಿ ಈ ಬಾರಿ ಈ 3 ತಿಂಗಳಲ್ಲಿ 20-25 ಲಕ್ಷ ಜನ ಸತ್ತರೂ ಅಚ್ಚರಿಯಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ ತಜ್ಞರು. ವಿಶ್ವಸಂಸ್ಥೆಯ ಮಾತಿನ ಮೇಲೀಗ ನಂಬಿಕೆಯೂ ಇಲ್ಲ.


ನಿಂಬೆ ಹಣ್ಣಿನಲ್ಲಿ ಸಿ ವಿಟಮಿನ್ ಇದೆ. ಇದನ್ನು ಹೆಚ್ಚು ಹೆಚ್ಚು ಬಳಸಿದರೆ ಕೋವಿಡ್ನಿಂದ ರಕ್ಷಣೆ ಪಡೆದುಕೊಳ್ಳಬಹುದು ಎಂಬ ನಂಬಿಕೆ ಚೀನೀಯರಲ್ಲಿ ಮೂಡಿದೆ. ಹೀಗಾಗಿ ಚೀನಾದ ಬೀಜಿಂಗ್, ಪೀಕಿಂಗ್, ಶಾಂಗೈ, ವುಹಾನ್ ಸೇರಿದಂತೆ ಹಲವು ನಗರಗಳಲ್ಲಿ ನಿಂಬೆ ಹಣ್ಣಿಗೆ ಬೆಲೆ ದಿಢೀರ್ ಏರಿಕೆ ಕಂಡಿದೆ. ಸಖತ್ ಡಿಮ್ಯಾಂಡ್ ಪರಿಣಾಮ 4 ಯುವಾನ್ (ಸುಮಾರು 45 ರೂ.)ಗಳಷ್ಟಿರುತ್ತಿದ್ದ ನಿಂಬೆ ಹಣ್ಣಿನ ಬೆಲೆ 12 ಯುವಾನ್ (ಸುಮಾರು 145 ರೂ.)ಗೆ ಏರಿಕೆಯಾಗಿದೆ. 4 ಪಟ್ಟು ಏರಿಕೆ ಕಂಡಿದ್ದರೂ ಜನ ನಿಂಬೆ ಹಣ್ಣು ಖರೀದಿ ಮಾಡುತ್ತಿದ್ದಾರೆ. ಶಾಂಘೈ ಮಾರ್ಕೆಟ್ನಲ್ಲಿ ಸಾಮಾನ್ಯವಾಗಿ ವಾರಕ್ಕೆ 5-6 ಟನ್ ಮಾರಾಟವಾಗುತ್ತಿದ್ದ ನಿಂಬೆ ಹಣ್ಣು 12 ಟನ್ ಮಾರಾಟವಾಗುತ್ತಿದೆ. ಕಿತ್ತಳೆ, ಯೆಲ್ಲೋ ಪೀಚ್ ಹಣ್ಣುಗಳಿಗೂ ಡಿಮ್ಯಾಂಡ್ ಹೆಚ್ಚಿದೆ.
ಭಾರತದ ಸ್ಥಿತಿ ಏನು?
ಭಾರತದಲ್ಲಿ ಕೋವಿಡ್ ರೋಗಿಗಳ ಸಂಖ್ಯೆ 32 ತಿಂಗಳ ಕನಿಷ್ಠ ಇದೆ. ಇಡೀ ದೇಶದಲ್ಲಿ ಕೊರೊನಾ ರೋಗಿಗಳ ಸಂಖ್ಯೆ ಕೇವಲ 1103. ಡಿ.12ರಿಂದ ಡಿ.18ನೇ ತಾರೀಕಿನವೆಗಿನ ಒಂದು ವಾರದ ಕೋವಿಡ್ ಸಾವಿನ ಪ್ರಮಾಣ 12. ಈ ವಾರದಲ್ಲಿ 3 ದಿನ ಇಡೀ ದೇಶದಾದ್ಯಂತ ಒಂದೇ ಒಂದು ಕೋವಿಡ್ ಸಾವು ಸಂಭವಿಸಿಲ್ಲ. ಆದರೆ ಅಮೆರಿಕದ ಪರಿಸ್ಥಿತಿ ಈ ರೀತಿ ಇಲ್ಲ. ಚೀನಾ ಮತ್ತೊಮ್ಮೆ ಜಗತ್ತಿಗೆ ಮರಣ ಶಾಸನ ಬರೆಯಲಿದೆಯಾ ಅನ್ನೋ ಆತಂಕವೂ ಇದೆ. ಈಗಿನ್ನೂ ಚೇತರಿಸಿಕೊಂಡು ಉಸಿರಾಡುತ್ತಿರುವವರ ಬದುಕು ನರಕವಾಗದಿರಲಿ.



