ಹಾವು.. ಆಮೆ.. ಮೊಸಳೆಮರಿ.. ಊಸರವಳ್ಳಿ.. ಮುಂತಾದ ಪ್ರಾಣಿಗಳನ್ನು ಜನ ಅದೃಷ್ಟಕ್ಕೆಂದೋ.. ಹುಚ್ಚುತನಕ್ಕೆಂದೋ.. ಕ್ರೇಜ್`ಗೆಂದೋ.. ಸಾಕುತ್ತಾರೆ. ಮಾಟ ಮಂತ್ರ ಮಾಡುವವರಿಗೂ ಈ ಪ್ರಾಣಿಗಳಲ್ಲಿ ಕೆಲವು ಬೇಕು. ಅಂತಹ 234 ಪ್ರಾಣಿಗಳನ್ನು ಕಳ್ಳಮಾರ್ಗದಲ್ಲಿ ತರುತ್ತಿದ್ದವನು ಏರ್ಪೋರ್ಟಿನಲ್ಲಿ ಸಿಕ್ಕುಬಿದ್ದಿದ್ದಾನೆ.
ಅಪರೂಪದ ಕೆಲ ವನ್ಯಜೀವಿಗಳು, ಜಲಚರಗಳು ಹಾಗೂ ಸರಿಸೃಪಗಳನ್ನು ಟ್ರಾಲಿ ಬ್ಯಾಗ್ನಲ್ಲಿ ಬಚ್ಚಿಟ್ಟು ಕಳ್ಳ ಸಾಗಣೆ ಮಾಡುತ್ತಿದ್ದ ಪ್ರಯಾಣಿಕನೊಬ್ಬನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಎರಡು ಟ್ರಾಲಿ ಬ್ಯಾಗ್ಗಳಲ್ಲಿ ತರಲಾಗಿದ್ದ ಹೆಬ್ಬಾವು ಮರಿ, ಊಸರವಳ್ಳಿ, ಮೊಸಳೆ ಮರಿ, ಆಮೆಗಳು, ಮರಿ ಕಾಂಗರೂ ಸೇರಿದಂತೆ 234 ವನ್ಯಜೀವಿಗಳನ್ನು ರಕ್ಷಿಸಿದ್ದಾರೆ. ಸೋಮವಾರ ರಾತ್ರಿ 10.30ಕ್ಕೆ ಬ್ಯಾಂಕಾಕ್ನಿಂದ ಎಫ್.ಡಿ-137 ಸಂಖ್ಯೆ ವಿಮಾನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದೆ.
ಈ ವೇಳೆ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ನಿರ್ಗಮನ ದ್ವಾರದ ಬಳಿ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ಮಾಡುವಾಗ, ಪ್ರಯಾಣಿಕನೊಬ್ಬ ಅನುಮಾನಾಸ್ಪದವಾಗಿ ವರ್ತಿಸಿದ್ದಾನೆ. ಆತನನ್ನು ವಶಕ್ಕೆ ಪಡೆದು ಆತನ ಟ್ರಾಲಿ ಬ್ಯಾಗ್ ಪರಿಶೀಲಿಸಿದಾಗ ವನ್ಯಜೀವಿಗಳನ್ನು ಕಳ್ಳ ಸಾಗಣೆ ಮಾಡುತ್ತಿರುವುದು ಕಂಡು ಬಂದಿದೆ. ಇದೇ ವಿಮಾನದಲ್ಲಿ ವಾರಸುದಾರರು ಇಲ್ಲದ ಮತ್ತೊಂದು ಟ್ರಾಲಿ ಬ್ಯಾಗ್ ಪತ್ತೆಯಾಗಿದ್ದು, ಅದರಲ್ಲಿಯೂ ವನ್ಯಜೀವಿಗಳು ಇರುವುದು ಕಂಡು ಬಂದಿದೆ. ಈ ಸಂಬಂಧ ವನ್ಯಜೀವಿಗಳ ಕಳ್ಳ ಸಾಗಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿರುವ ಕಸ್ಟಮ್ಸ್ ಅಧಿಕಾರಿಗಳು, ತನಿಖೆ ಮುಂದುವರೆಸಿದ್ದಾರೆ.



