ಗೊಂಬೆ.. ನೀರಿನಲ್ಲಿ ಮುಳುಗಿಸುತ್ತಾರೆ. ಥಟ್ಟನೆ ಮೇಲೇಳುತ್ತದೆ. ಚಿತ್ರ ವಿಚಿತ್ರ ವೇಷಭೂಷಣ.. ಡೋಲು..ತಮಟೆಗಳ ಸದ್ದು.. ಅದು ಮಾಟ ಮಂತ್ರ ಕಥೆಯಾ.. ಶಿವಣ್ಣ ಕಣ್ಣುಗಳಲ್ಲಿ ಒಂದು ನಿಗೂಢತೆಯಿದೆ. 



ಈ ಹಿಂದಿನ ಯಾವ ಚಿತ್ರದ ನೆರಳೂ ಟೀಸರ್ನಲ್ಲಿ ಕಾಣುತ್ತಿಲ್ಲ. ಆ ಚಿತ್ರದಂತಿದೆ.. ಈ ಚಿತ್ರದಂತಿದೆ ಎಂದು ಮಾತನಾಡಿಕೊಳ್ಳುತ್ತಿದ್ದವರಿಗೆ ಒಂದೇ ಮಾತಿನಲ್ಲಿ ಉತ್ತರ ಕೊಟ್ಟಿದ್ದಾರೆ ಡೈರೆಕ್ಟರ್ ಹರ್ಷ. ರಾಯಚೂರಿನಲ್ಲಿ ಚಿತ್ರದ ಟೀಸರ್ ರಿಲೀಸ್ ಆಗಿದ್ದು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಮೊದಲ ಬಾರಿಗೆ ಆಯುಧಗಳ ಝಲಕ್ ಕೊಟ್ಟಿದ್ದ ಹರ್ಷ, ನಂತರ ಗಿಲಕ್ಕೂ ಸಾಂಗ್ ಕೊಟ್ಟು ಥ್ರಿಲ್ ನೀಡಿದ್ದರು. ಈಗ ಟೀಸರ್ ಬಿಟ್ಟಿದ್ದಾರೆ.
ಹಂತ ಹಂತವಾಗಿ ಹಾಡುಗಳನ್ನು ಬಿಡುಗಡೆ ಮಾಡಲಿದ್ದಾರೆ. ಟೀಸರ್ನ್ನು ವರ್ಣಿಸುವುದಕ್ಕಿಂತ.. ಇದು ಸಂಥಿಂಗ್ ಸ್ಪೆಷಲ್ ಎಂಬ ಸುಳಿವನ್ನಂತೂ ಕೊಟ್ಟಿದೆ. ಗಾನವಿ ಲಕ್ಷ್ಮಣ್, ಉಮಾಶ್ರೀ, ಆದಿತಿ ಸಾಗರ್ ಪ್ರಧಾನ ಪಾತ್ರದಲ್ಲಿರೋ ಚಿತ್ರಕ್ಕೆ ಈಗ ಬಿಟ್ಟಿರುವ ಟೀಸರ್ ಆತ್ಮವಂತೆ. ಇವನು ಹೃದಯ ಹೇಳಿದಂತೆ ಕೇಳುವವನು. ಅವನೊಳಗೊಂದು ನಿಗೂಢ ರಹಸ್ಯ ಬಚ್ಚಿಟ್ಟುಕೊಂಡಿದೆ. ಯಾವುದಕ್ಕೂ ಹೆದರದ ಆತ ಹುಟ್ಟು, ಜೀವನ, ಸಾವುಗಳನ್ನೆಲ್ಲ ಮೀರಿ ಗುರಿಯತ್ತ ಮುನ್ನುಗ್ಗುತ್ತಾನೆ. ಇಂಥಾದ್ದೊಂದು ಕಥೆಯ ಮೇಕಿಂಗ್ ಕೂಡಾ ಅಷ್ಟೇ ಚೆನ್ನಾಗಿದೆ. ಗೀತಾ ಶಿವರಾಜ್ ಕುಮಾರ್ ಈ ಚಿತ್ರದ ಮೂಲಕ ನಿರ್ಮಾಪಕಿಯಾಗುತ್ತಿದ್ದಾರೆ.

ಆದರೆ.. ಅಭಿಮಾನಿಗಳಲ್ಲಿ ಒಂದು ಆತಂಕವೂ ಇದೆ. ಭಜರಂಗಿ 2 ಚಿತ್ರ ಚೆನ್ನಾಗಿತ್ತಾದರೂ.. ಕೊನೆಯ 20 ನಿಮಿಷ ಇಡೀ ಸಿನಿಮಾ ಹಳಿ ತಪ್ಪಿತ್ತು. ಪುನೀತ್ ನಿಧನದ ಆಘಾತದ ನಡುವೆಯೂ ಚಿತ್ರ ಚೆನ್ನಾಗಿಯೇ ಓಡಿತಾದರೂ.. ನಿರೀಕ್ಷಿತ ಮಟ್ಟ ತಲುಪಲಿಲ್ಲ. ಈಗ ವೇದ ಚಿತ್ರದ ಮೇಲೆ ಭಾರಿ ನಿರೀಕ್ಷೆಯಂತೂ ಇದೆ. ಚಿತ್ರ ಈಗಾಗಲೇ ಸ್ಯಾಟಲೈಟ್, ಒಟಿಟಿ ರೈಟ್ಸ್ಗಳಲ್ಲಿ ಲಾಭದಲ್ಲಿಯೂ ಇದೆ. ಹರ್ಷ ತಮ್ಮ ಹಳೆಯ ಚಿತ್ರಗಳಲ್ಲಿನ ತಪ್ಪುಗಳನ್ನು ಗುರುತಿಸಿ ತಿದ್ದಿಕೊಂಡಿದ್ದರೆ ವ್ಹಾವ್ ಚಿತ್ರವಾಗುವುದರಲ್ಲಿ ಸಂಶಯವೂ ಇಲ್ಲ.



