ಕಾಂತಾರ. ಸಿನಿಮಾ ಕರಾವಳಿಯ ನೆಲದ ಮಣ್ಣಿನ ಕಥೆ. ಚಿತ್ರದಲ್ಲಿ ಬರುವ ಕಥೆ ನಡೆಯುವುದು ಕರಾವಳಿ ಪ್ರದೇಶದಲ್ಲಿ. ಪಾಡ್ದನಗಳು, ದೈವ, ಕೋಲ, ದೈವನರ್ತಕ, ಭೂತಕೋಲ.. ಇವೆಲ್ಲವೂ ಕರಾವಳಿಯದ್ದೇ. ಉತ್ತರ ಕರ್ನಾಟಕದ ಮಂದಿಗೆ ಗುಳಿಗ, ಪಂಜುರ್ಲಿ ದೈವಗಳು ಕೇಳಿ ಗೊತ್ತಿತ್ತೇ ಹೊರತು ನೋಡಿರಲಿಲ್ಲ. ಸಿನಿಮಾವನ್ನು ಕರ್ನಾಟಕದವರಷ್ಟೇ ಅಲ್ಲ, ಇಡೀ ದೇಶದ ಮಂದಿಯೇ ಒಪ್ಪಿಕೊಂಡಾಗಿದೆ. ಪ್ರಶಸ್ತಿಗಳೂ ಫಿಕ್ಸ್. ಬಂದೇ ಬರುತ್ತವೆ ಎಂಬ ನಿರೀಕ್ಷೆಯೂ ಇದೆ. ಆದರೆ ಚಿತ್ರಕ್ಕೆ ಮೊದಲ ಪ್ರಶಸ್ತಿ ಬಂದಿರೋದು ಉತ್ತರ ಕರ್ನಾಟಕದಿಂದ ಎನ್ನುವುದೇ ವಿಶೇಷ. ಜಿಡಗಾ ಸಿದ್ದರಾಮ ಶಿವಯೋಗಿಗಳ ಪುಣ್ಯಭೂಮಿ ಮುಗಳಖೋಡ ಮಠ ರಿಷಬ್ ಶೆಟ್ಟಿಯವರಿಗೆ ಸಿದ್ದಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.

ಕಲಬುರಗಿಯ ಆಳಂದ ತಾಲೂಕಿನ ಶ್ರೀಕ್ಷೇತ್ರ ಜಿಡಗಾ ಸಿದ್ಧರಾಮ ಶಿವಯೋಗಿಗಳ ಪುಣ್ಯ ಕ್ಷೇತ್ರ ಮುಗಳಖೋಡ ಮಠ. ಈ ಮಠ ಪ್ರತೀ ವರ್ಷ ಅರ್ಹರನ್ನು ಗುರುತಿಸಿ ಸಿದ್ದಶ್ರೀ ಪ್ರಶಸ್ತಿ ನೀಡುತ್ತದೆ. ರಾಷ್ಟ್ರೀಯ ಸಿದ್ಧಶ್ರೀ ಪ್ರಶಸ್ತಿಯು 1 ಲಕ್ಷ ನಗದು, ಎರಡು ತೊಲ ಚಿನ್ನ, ಸ್ಮರಣಿಕೆ ಹಾಗೂ ಪ್ರಶಸ್ತಿ ಫಲಕಗಳನ್ನು ಒಳಗೊಂಡಿವೆ. 38ನೇ ಗುರುವಂದಮಾ ಕಾರ್ಯಕ್ರಮದಲ್ಲಿ ಮಠದ ಪೂಜ್ಯ ಷಡಕ್ಷರಿ ಶಿವಯೋಗಿ ಡಾ.ಮುರುಘರಾಜೇಂದ್ರ ಸ್ವಾಮೀಜಿ ಹಾಗೂ ಮಠಾಧೀಶರು ರಿಷಬ್ ಶೆಟ್ಟಿಯವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.

ಸಿದ್ಧಶ್ರೀ ಪುರಸ್ಕಾರ ನನ್ನ ನಟನೆಯ ಕಾಂತಾರ ಸಿನೆಮಾಕ್ಕೆ ಸಿಗುತ್ತಿರುವ ಮೊದಲ ಪ್ರಶಸ್ತಿ. ಇದರಿಂದ ನನ್ನ ಜವಾಬ್ದಾರಿ ಹೆಚ್ಚಿದೆ. ಈ ಪ್ರಶಸ್ತಿಯನ್ನು ನನಗೆ ಪ್ರೇರಣೆ ನೀಡಿದ ಪಂಜುರ್ಲಿ ದೈವ, ಶ್ರೀ ಮಂಜುನಾಥ ಸ್ವಾಮಿ ಹಾಗೂ ಅಣ್ಣಪ್ಪಸ್ವಾಮಿ, ದೈವ ನರ್ತಕರ ಕುಟುಂಬಕ್ಕೆ ಅರ್ಪಿಸುತ್ತೇನೆ. ವಿಶೇಷವಾಗಿ ಕನ್ನಡ ನಾಡಿನ ಮೇರುನಟ ದಿ. ಡಾ.ಪುನೀತ್ ರಾಜಕುಮಾರ್ ಹಾಗೂ ಕನ್ನಡ ಜನತೆಗೆ ಅರ್ಪಿಸುತ್ತೇನೆ ಎಂದಿದ್ದಾರೆ ರಿಷಬ್ ಶೆಟ್ಟಿ.
ನಾನು ಮೊದಲು ಬಣ್ಣ ಹಚ್ಚಿದ್ದು ಯಕ್ಷಗಾನದಲ್ಲಿ. ಆ ಮೂಲಕ. ಕರ್ನಾಟಕದ ಭಾವನೆ, ನಂಬಿಕೆ ಒಳಗೊಂಡ ನಮ್ಮ ಮಣ್ಣಿನ ಕಥೆ ನಿಮಗೆಲ್ಲಾ ಇಷ್ಟವಾಗಿದ್ದು ನನಗೆ ಹೆಮ್ಮೆ ಎಂದ ರಿಷಬ್ ಶೆಟ್ಟಿ, ಕಾಂತಾರದ ಡೈಲಾಗ್ ಹೊಡೆದು ಅಭಿಮಾನಿಗಳನ್ನು ರಂಜಿಸಿದರು.
ಇದೇ ವೇಳೆ ಕಾಂತಾರದ ವಿವಾದಾತ್ಮಕ ಹಾಡು ವರಾಹರೂಪಂ ವೊರಿಜಿನಲ್ ಸಿನಿಮಾದಲ್ಲಿ ಕಾಣಿಸುವುದು ಯಾವಾಗ ಎಂಬ ಪ್ರಶ್ನೆಗೆ ವಿವಾದ ಕೋರ್ಟಿನಲ್ಲಿರುವುದರಿಂದ ಈಗ ಏನನ್ನೂ ಹೇಳುವುದಿಲ್ಲ ಎಂದು ಉತ್ತರ ಕೊಟ್ಟಿದ್ದಾರೆ. ಇದೇ ವೇಲೆ ದೈವನರ್ತಕರ, ದೈವಾರಾಧನೆಯ ರೀಲ್ಸ್ ಮಾಡುತ್ತಿರುವವರಿಗೆ ಮತ್ತೊಮ್ಮೆ ಎಚ್ಚರಿಕೆ ಕೊಟ್ಟಿದ್ದಾರೆ. ದಯವಿಟ್ಟು ಬೇಡ, ಇದು ನಮ್ಮ ಸಂಸ್ಕøತಿ ಅಲ್ಲ. ನಂಬಿಕೆಗಳಿಗೆ ಅವಮಾನ ಮಾಡಬೇಡಿ ಎಂದು ಮತ್ತೊಮ್ಮೆ ಮನವಿ ಮಾಡಿದ್ದಾರೆ ರಿಷಬ್ ಶೆಟ್ಟಿ.



