ನಿನ್ನಿಂದಲೇ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಹೊಂಬಾಳೆಯ ವಿಜಯ್ ಕಿರಗಂದೂರು, ಭದ್ರವಾಗಿ ನೆಲೆಯೂರುವಂತೆ ಮಾಡಿದ್ದು ರಾಜಕುಮಾರ ಚಿತ್ರ. ರಾಜಕುಮಾರ ಚಿತ್ರದ ನಂತರ ಕನ್ನಡದಲ್ಲಿ ಹೆಸರು ಮಾಡಿದ ಸಂಸ್ಥೆ ಇಂಡಿಯಾ ಲೆವೆಲ್ಲಿಗೆ ಹೋಗಿದ್ದು ಕೆಜಿಎಫ್ ಚಿತ್ರದ ನಂತರ. ಕೆಜಿಎಫ್ ತೊಡಿಸಿದ ಕಿರೀಟಕ್ಕೆ ಗರಿ ಮೂಡಿಸಿದ್ದು ಕಾಂತಾರ. 

ಕನ್ನಡದಲ್ಲಿ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಶ್ರೀಮುರಳಿ, ಜಗ್ಗೇಶ್, ದೊಡ್ಮನೆಯ ಯುವ ರಾಜಕುಮಾರ್ ನಟಿಸ್ತಿರೋದು ಇದೇ ಬ್ಯಾನರಿನಲ್ಲಿ. ಪ್ರಶಾಂತ್ ನೀಲ್, ಸಂತೋಷ್ ಆನಂದರಾಮ್, ಪವನ್ ನಿರ್ದೇಶನ ಮಾಡುತ್ತಿರೋದು ಇದೇ ಬ್ಯಾನರಿನಲ್ಲಿ. ತೆಲುಗಿನ ಪ್ರಭಾಸ್, ಜಗಪತಿ ಬಾಬು, ಮಲಯಾಳಂನ ಪೃಥ್ವಿರಾಜ್ ಸುಕುಮಾರನ್, ಫಹಾದ್ ಫಾಸಿಲ್, ತಮಿಳಿನ ಶೃತಿ ಹಾಸನ್, ಅಪರ್ಣಾ ಬಾಲಮುರಳಿ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈಗ ತಮಿಳಿನಲ್ಲಿ ಕೀರ್ತಿ ಸುರೇಶ್ ಜೊತೆಗೂ ಕೈಜೋಡಿಸಿದೆ ಹೊಂಬಾಳೆ. ಹಿಂದಿಯಲ್ಲಿ ಶಾರೂಕ್ ಖಾನ್ ಜೊತೆ ಚಿತ್ರ ನಿರ್ಮಾಣಕ್ಕೂ ಮುಂದಾಗಿದೆ ಎನ್ನುವ ಸುದ್ದಿ ಇದೆ.

ದೇಶದ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆಯಾಗಿರೋ ಹೊಂಬಾಳೆ ಫಿಲಮ್ಸ್ ಮಹಾನಟಿ ಕೀರ್ತಿ ಸುರೇಶ್ ನಟನೆಯ ರಘು ತಥಾ ಎಂಬ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ಇದು ಹೀರೋ ಬೇಸ್ ಸಿನಿಮಾ ಅಲ್ಲ. ಸ್ಟೋರಿ ಬೇಸ್ ಸಿನಿಮಾ. ಅಂದಹಾಗೆ ಈ ಚಿತ್ರಕ್ಕೆ ನಿರ್ದೇಶಕರಾಗಿರೋದು ಸುಮನ್ ಕುಮಾರ್. ಲಾಕ್ ಡೌನ್ ಸಮಯದಲ್ಲಿ ಒಟಿಟಿಯಲ್ಲಿ ದೊಡ್ಡದೊಂದು ಅಲೆಯನ್ನೇ ಎಬ್ಬಿಸಿದ್ದ ಫ್ಯಾಮಿಲಿ ಮ್ಯಾನ್ ವೆಬ್ ಸಿರೀಸ್ಗೆ ಕಥೆ-ಚಿತ್ರಕಥೆ ರಚಿಸಿದ್ದ ಸುಮನ್ ಕುಮಾರ್ ಇದೇ ಮೊದಲ ಬಾರಿಗೆ ನಿರ್ದೇಶಕರಾಗುತ್ತಿದ್ದಾರೆ.
ಇದೊಂದು ಕಾಮಿಡಿ ಡ್ರಾಮಾ ಚಿತ್ರ, ಸಮಾಜದ ವಿರುದ್ದ ಸವಾಲೆಸೆಯುವ ಒಬ್ಬ ಗಟ್ಟಿಗಿತ್ತಿ ಯುವತಿಯ ಸುತ್ತ ನಡೆಯುವ ಕಥೆ. ಸಮಾಜದ ವಿರುದ್ಧ ಹೋರಾಡುತ್ತಲೇ ಆಕೆ ತನ್ನ ಸಿದ್ಧಾಂತಗಳನ್ನು ಎತ್ತಿ ಹಿಡಿದು ಎಲ್ಲರಿಗೂ ಸ್ಫೂರ್ತಿಯಾಗುತ್ತಾಳೆ. ಆಕೆ ತನ್ನ ನೆಲ ಮತ್ತು ಜನರ ಗುರುತನ್ನು ರಕ್ಷಿಸುವ ನಿಟ್ಟಿನಲ್ಲಿ ಏನೆಲ್ಲ ಸಾಹಸಗಳನ್ನು ಮಾಡುತ್ತಾಳೆ ಎಂಬುದನ್ನು ಕಾಮಿಡಿ ರೂಪದಲ್ಲಿ ಹೇಳಲಾಗಿದೆ. ಜನ ನಗು ನಗುತ್ತಲೇ ತಮ್ಮನ್ನು ತಾವು ಆತ್ಮಾವಲೋಕನ ಮಾಡಿಕೊಳ್ಳುವಂತಹ ಕಥೆ ಚಿತ್ರದಲ್ಲಿದೆ ಎಂದು ಮಾಹಿತಿ ನೀಡಿದ್ದು ನಿರ್ಮಾಪಕ ವಿಜಯ್ ಕಿರಗಂದೂರು.

ಈ ಚಿತ್ರದಲ್ಲಿ ಕೀರ್ತಿ ಸುರೇಶ್ ಜತೆಗೆ ಎಂ.ಎಸ್. ಭಾಸ್ಕರ್, ದೇವದರ್ಶಿನಿ, ರವೀಂದ್ರ ವಿಜಯ್, ಆನಂದ್ ಸ್ವಾಮಿ, ರಾಜೇಶ್ ಬಾಲಕೃಷ್ಣನ್ ಮುಂತಾದವರು ನಟಿಸುತ್ತಿದ್ದಾರೆ.
ಜೈ ಭೀಮ್ ಖ್ಯಾತಿಯ ಸೀನ್ ರೋಲ್ಡನ್ ಸಂಗೀತ ನೀಡುತ್ತಿದ್ದು, ಯಾಮಿನಿ ಯಜ್ಞಾಮೂರ್ತಿ ಛಾಯಾಗ್ರಹಣ ಮಾಡುತ್ತಿದ್ದಾರೆ. ಈ ಚಿತ್ರ ತಮಿಳಿನಲ್ಲಿ ಮಾತ್ರವೇ ಬರಲಿದೆಯೇ.. ಎಲ್ಲ ಭಾಷೆಗಳಿಗೂ ಬರಲಿದೆಯೇ ಎಂಬುದು ಸ್ಪಷ್ಟವಾಗಿಲ್ಲ.



