ವಿಜಯ ಸಂಕೇಶ್ವರ ಬಡತನವನ್ನೇ ಹಾಸು ಹೊದ್ದಿದ್ದವರೇನಲ್ಲ. ಅಪ್ಪನಿಗೆ ಪ್ರಿಂಟಿಂಗ್ ಪ್ರೆಸ್ ಇತ್ತು. ಹಾಗಂತ ಲಕ್ಷ ಲಕ್ಷ ಇದ್ದ ಕುಬೇರರೂ ಅಲ್ಲ. ಐವರು ಮಕ್ಕಳಲ್ಲಿ ಚೆನ್ನಾಗಿ ಓದಿದ್ದ ಕಾರಣಕ್ಕೆ ಅಪ್ಪನ ಪ್ರಿಂಟಿಂಗ್ ಪ್ರೆಸ್ಸಿನಲ್ಲಿ ಪ್ರೂಫ್ ರೀಡಿಂಗ್ ಮಾಡುತ್ತಿದ್ದ ವಿಜಯ ಸಂಕೇಶ್ವರರು ಹೊಸದೇನನ್ನೋ ಮಾಡಬೇಕು ಎಂದು ಕನಸು ಕಂಡರು. ಲೋನ್ನಲ್ಲಿ ಒಂದು ಲಾರಿ ಖರೀದಿ ಮಾಡಿದರು. ಆಗ ಅವರಿಗೆ 26 ವರ್ಷ. ಒಂದು ನಾಲ್ಕಾಯಿತು. ನಾಲ್ಕು ಹತ್ತಾಯಿತು. ಹತ್ತು ನೂರಾಯಿತು.. ಕೊನೆಗೆ ವಿಆರ್ಎಲ್ ಎಂಬ ಸಂಸ್ಥೆ ಹುಟ್ಟಿತು. ಸಾವಿರಾರು ಲಾರಿ, ನೂರಾರು ಬಸ್ಸುಗಳ ಮಾಲೀಕರಾಗಿರುವ ವಿಜಯ ಸಂಕೇಶ್ವರರ ಕನಸು ಅಲ್ಲಿಗೇ ಮುಗಿಯುವುದಿಲ್ಲ. 1983ರಲ್ಲಿ ವಿಆರೆಲ್ ಸಂಸ್ಥೆಯನ್ನು ಕಟ್ಟಿದ ವಿಜಯ ಸಂಕೇಶ್ವರರ ಈಗ ಕೇವಲ ಟ್ರಾನ್ಸ್ಪೋರ್ಟಿಂಗ್ ಸಂಸ್ಥೆಯಷ್ಟೇ ಅಲ್ಲ, ಇನ್ನೂ ವಿಸ್ತಾರವಾಗಿದೆ.

ಇದರ ನಡುವೆ ಸಂಯುಕ್ತ ಕರ್ನಾಟಕದಲ್ಲಾದ ಕೆಟ್ಟ ಅನುಭವ ವಿಜಯ ಕರ್ನಾಟಕ ಪತ್ರಿಕೆ ಆರಂಭಿಸುವುದಕ್ಕೆ ಪ್ರೇರಣೆ ನೀಡಿತು. ವಿಜಯ ಟೈಮ್ಸ್ ಎಂಬ ಇಂಗ್ಲಿಷ್ ಪತ್ರಿಕೆಯನ್ನೂ, ಉಷಾಕಿರಣ ಎಂಬ ಮತ್ತೊಂದು ಕನ್ನಡ ಪತ್ರಿಕೆಗೂ ಆರಂಭ ನೀಡಿದರು. ನಂತರ ವಿಜಯ ಕರ್ನಾಟಕ ಪತ್ರಿಕೆ ಸೇರಿದಂತೆ ಎಲ್ಲವುಗಳನ್ನೂ ಟೈಮ್ಸ್ ಆಫ್ ಇಂಡಿಯಾ ಗ್ರೂಪ್ಗೆ ಮಾರಾಟ ಮಾಡಿದರು. ಉದ್ಯಮದಲ್ಲೇ ಮುಳುಗಿ ಹೋದರು. ಅದಾದ ಕೆಲ ವರ್ಷಗಳ ನಂತರ ವಿಜಯವಾಣಿ ಪತ್ರಿಕೆ ಮತ್ತು ದಿಗ್ವಿಜಯ ನ್ಯೂಸ್ ಎಂಬ ಟಿವಿ ಚಾನೆಲ್ ಆರಂಭಿಸಿದ ಸಂಕೇಶ್ವರರು ರಾಜಕೀಯಕ್ಕೂ ಹೋಗಿ ಬಂದಿದ್ದಾರೆ.
ಬಿಜೆಪಿಯಲ್ಲಿದ್ದು ನಂತರ ಹೊರಬಂದು ತಮ್ಮದೇ ಪಕ್ಷ ಕಟ್ಟಿದ ಸಂಕೇಶ್ವರ, ಸೋತಿದ್ದು ರಾಜಕೀಯದಲ್ಲಿ ಮಾತ್ರ. ಈಗ ಅವರ ಮಗ ಆನಂದ ಸಂಕೇಶ್ವರ ಸಿನಿಮಾ ನಿರ್ಮಾಣ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಆ ಸಂಸ್ಥೆಯ ಮೊದಲ ಸಿನಿಮಾವೇ ವಿಜಯಾನಂದ. ಚಿತ್ರದಲ್ಲಿ ವಿಜಯ ಸಂಕೇಶ್ವರ.. ಹುಬ್ಬಳ್ಳಿಯ ಹುಡುಗ ವಿಆರ್ಎಲ್ ಎಂಬ ಸಂಸ್ಥೆ ಕಟ್ಟಿದ್ದು, ವಿಜಯ ಕರ್ನಾಟಕ, ವಿಜಯವಾಣಿ, ವಿಜಯ ಟೈಮ್ಸ್, ದಿಗ್ವಿಜಯ ಟಿವಿ ಎಂಬ ಸುದ್ದಿ ಸಂಸ್ಥೆ ಕಟ್ಟಿದ್ದು.. ಪ್ರತಿಯೊಂದು ಹೆಜ್ಜೆಯೂ ಸ್ಫೂರ್ತಿದಾಯಕವೇ. ಈ ಸ್ಫೂರ್ತಿದಾಯಕ ಸಿನಿಮಾ ಕೇವಲ ಕನ್ನಡದಲ್ಲಷ್ಟೇ ಅಲ್ಲ, ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ.

ಅನಂತನಾಗ್, ರವಿಚಂದ್ರನ್, ವಿನಯಾ ಪ್ರಸಾದ್ ನಟಿಸಿರುವ ಚಿತ್ರದಲ್ಲಿ ನಿಹಾಲ್ ವಿಜಯ ಸಂಕೇಶ್ವರ ಪಾತ್ರದಲ್ಲಿ ನಟಿಸಿದ್ದಾರೆ. ಅನಂತನಾಗ್ ಸಂಕೇಶ್ವರರ ತಂದೆಯಾಗಿ ನಟಿಸಿದ್ದರೆ, ಸಿರಿ ಪ್ರಹ್ಲಾದ್ ಸಂಕೇಶ್ವರರ ಪತ್ನಿ ಲಲಿತಾ ಪಾತ್ರದಲ್ಲಿದ್ದಾರೆ. ಭರತ್ ಬೋಪಣ್ಣ, ಅರ್ಚನಾ ಕೊಟ್ಟಿಗೆ ಮೊದಲಾದವರು ನಟಿಸಿರುವ ಚಿತ್ರಕ್ಕೆ ರಿಷಿಕಾ ಶರ್ಮಾ ನಿರ್ದೇಶಕಿ.
ಅಂದಹಾಗೆ ಕನ್ನಡದ..ಕರ್ನಾಟಕದ ಸಾಧಕರ ಕಥೆಗಳನ್ನು ಬೇರೆ ಭಾಷೆಯವರು ಸಿನಿಮಾ ಮಾಡುತ್ತಿದ್ದಾರೆ. ಗೆಲ್ಲುತ್ತಿದ್ದಾರೆ. ವಿಮಾನಯಾನ ಕ್ಷೇತ್ರದ ಕ್ಯಾ.ಗೋಪಿನಾಥ್ ಜೀವನ ಚರಿತ್ರೆ ಸೂರರೈಪೋಟ್ರು ಹೆಸರಿನಲ್ಲಿ ತಮಿಳಿನಲ್ಲಿ ಸಿನಿಮಾ ಆಗಿತ್ತು. ಈಗ ಹಿಂದಿಯಲ್ಲೂ ಸಿನಿಮಾ ಮಾಡುತ್ತಿದ್ದಾರೆ. ಹ್ಯೂಮನ್ ಕಂಪ್ಯೂಟರ್ ಎಂದೇ ಹೆಸರಾಗಿದ್ದ, ಎಷ್ಟೇ ಅಂಕಿ ಸಂಖ್ಯೆ ಲೆಕ್ಕಗಳನ್ನೂ ಕ್ಷಣಮಾತ್ರದಲ್ಲಿ ಬಿಡಿಸಿ ಉತ್ತರ ಹೇಳುತ್ತಿದ್ದ, ಜ್ಯೋತಿಷ್ಯದಲ್ಲೂ ಪಾರಂಗತೆಯಾಗಿದ್ದ ಶಕುಂತಲಾದೇವಿಯರ ಕಥೆ ಸಿನಿಮಾ ಆಗಿದ್ದು ಹಿಂದಿಯಲ್ಲಿ. ಮುಂಬೈ ಅಟ್ಯಾಕ್ ದಾಳಿಯಲ್ಲಿ ಪಾಕ್ ಉಗ್ರರ ವಿರುದ್ಧ ಹೋರಾಡಿ ಹುತಾತ್ಮರಾದ ವೀರ ಯೋಧ ಹುತಾತ್ಮ ಸಂದೀಪ್ ಉನ್ನಿಕೃಷ್ಣನ್ ಸಿನಿಮಾ ಮಾಡಿದ್ದು ತೆಲುಗಿನಲ್ಲಿ. ಕನ್ನಡದಲ್ಲಿ ಅಲ್ಲ. ಬೆಂಗಳೂರಿನ ಇಸ್ರೋದಲ್ಲೇ ಸೃಷ್ಟಿಯಾದ, ಜಗತ್ತನ್ನೇ ನಿಬ್ಬೆರಗಾಗಿಸಿದ ಮಂಗಳಯಾನದ ಯಶಸ್ಸಿನ ಅದ್ಭುತ ಕಥೆ ಕೂಡಾ ಸಿನಿಮಾ ಆಗಿದ್ದು ಹಿಂದಿಯಲ್ಲಿಯೇ.. ಕನ್ನಡದಲ್ಲಿ ಅಲ್ಲ.
ಈಗ ವಿಜಯ ಸಂಕೇಶ್ವರರ ಬಯೋಪಿಕ್ ಕನ್ನಡದಲ್ಲಿ ಸಿನಿಮಾ ಆಗಿದೆ. ಅವರ ಜೀವನದ ಇಡೀ ಚರಿತ್ರೆಯನ್ನು ಹೇಳಲಾಗದಿದ್ದರೂ ಪ್ರಮುಖ ಘಟನೆಗಳನ್ನಂತೂ ನೋಡಬಹುದು. ಒಬ್ಬ ಪ್ರಿಂಟಿಂಗ್ ಪ್ರೆಸ್ ಮಾಲೀಕರ ಮಗ ಇಂಡಿಯಾದ ಟಾಪ್ ಇಂಡಸ್ಟ್ರಿಯೊಂದರ ಮಾಲೀಕನಾಗಿದ್ದು, ಸಂಸದನಾಗಿದ್ದು, ಪತ್ರಕರ್ತನೂ ಆಗಿದ್ದು ಹೇಗೆ ಎಂಬುದೇ ಸ್ಫೂರ್ತಿದಾಯಕ ಕಥೆ.



